Sunday, February 4, 2018

ಕಥೆ-ತಂತ್ರದ ನಡುವಿನ ಹದ.

ಫಕೀರ ಎನ್ನುವ ಅಂಕಿನನಾಮದಲ್ಲಿ ಬರೆಯುವ ಶ್ರೀಧರ ಬನವಾಸಿಯವರು ನನ್ನನ್ನು ತಮ್ಮ ಕಾದಂಬರಿಗೆ ಮುನ್ನುಡಿಯನ್ನು ಬರೆದುಕೊಡಬೇಕೆಂದು ಹೇಳಿದಾಗ ನಾನು ಸಂತೋಷದಿಂದ ಒಪ್ಪಿದೆ. ಬನವಾಸಿಯವರು ತಮ್ಮ ಹಿಂದಿನ ಕಥಾಸಂಕಲನಗಳಾದ ಅಮ್ಮನ ಆಟೋಗ್ರಾಫ್, ದೇವರ ಜೋಳಿಗೆ ಮತ್ತು ಬ್ರಿಟಿಷ್ ಬಂಗ್ಲೆಯ ಪ್ರತಿಗಳನ್ನು ನನಗೆ ಅವುಗಳು ಪ್ರಕಟವಾದ ತಕ್ಷಣವೇ ಕಳುಹಿಸಿದ್ದರು. ಹೀಗೆ ಯುವ ಲೇಖಕರು ತಮ್ಮ ಪುಸ್ತಕಗಳನ್ನು ಕಳುಹಿಸುತ್ತಿರುತ್ತಾರೆ ಹಾಗೂ ಕೂದಲು ನರೆಯುತ್ತಿರುವ ತಮ್ಮ ಹಿರಿಯ ಜನಾಂಗದವರಿಂದ ಒಂದು ರೀತಿಯ ಪ್ರೋತ್ಸಾಹದ-ವಿಮರ್ಶೆಯ-ಮೆಚ್ಚುಗೆಯ ಪ್ರತಿಕ್ರಿಯೆಯನ್ನು ನಿರೀಕ್ಷಿಸುತ್ತಾರೆ. ಅದು ಸಹಜವೇ. ಬರವಣಿಗೆಯನ್ನು ಕೈಗೊಂಡ ಹೊಸತರಲ್ಲಿ ಈ ಪ್ರಕ್ರಿಯೆಗೆ ಯುವ ಲೇಖಕರಾಗಿ ನಾನು ನನ್ನ ಓರಗೆಯವರೂ ಒಡ್ಡಿಕೊಂಡದ್ದು ನೆನಪಿಗೆ ಬರುತ್ತದೆ. ಹೀಗಾಗಿ ಯುವ-ಹೊಸದಾಗಿ ಬರೆವಣಿಗೆಯನ್ನು ಕೈಹಿಡಿದ ಬರಹಗಾರರಲ್ಲಿ ನಾವುಗಳು ನಮ್ಮ ಗತಕಾಲವನ್ನೂ, ಯೌವನವನ್ನೂ ಕಾಣುತ್ತೇವೆ. ಅದೇ ಕಾಲಕ್ಕೆ ನಮ್ಮ ಕಾಲದ-ಸಮಯದ-ಕಾಯಕದ ಒತ್ತಡಗಳಲ್ಲಿ ಹಲವೊಮ್ಮೆ ಬಂದ ಪುಸ್ತಕಗಳನ್ನು ಓದಿ, ಅದನ್ನು ಕಳುಹಿಸಿಕೊಡುವ ತೊಂದರೆಯನ್ನು ಕೈಗೊಂಡ ಲೇಖಕರಿಗೆ ಒಂದೆರಡು ಸಾಲು ಪತ್ರವನ್ನೂ ಬರೆಯದಿರುವ ಅಪರಾಧವನ್ನು ನಾವು ಸದಾ ಮಾಡುತ್ತಲೇ ಇರುತ್ತವೆ. ಬರೆಯಬಾರದೆಂದಲ್ಲ – ಆದರೆ ಹೇಗೂ ಇಂದು-ನಾಳೆಯೆಂದು ಆ ಓದನ್ನು ಮುಂದುವರೆಸಿ ಹತಾಶೆಯಿಂದ ಸುಮ್ಮನಾಗಿಬಿಡುತ್ತೇವೆ. ನಾವು ಅರಗಿಸಿಕೊಳ್ಳುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಪ್ರತಿಭೆಗಳು ಅರಳುತ್ತಿರುವುದೇ ಇದಕ್ಕೆ ಕಾರಣ.

ಈ ಹಿನ್ನೆಲೆಯಲ್ಲಿ ಬನವಾಸಿಯವರು ಮುನ್ನುಡಿಯನ್ನು ಕೇಳಿದಾಗ ನಾನು ಕೂಡಲೇ ಒಪ್ಪಿದ್ದರಲ್ಲಿ, ಅವರ ಪುಸ್ತಕಗಳನ್ನು ಓದುವ ಒತ್ತಡವನ್ನು ನಾನು ನನ್ನ ಮೇಲೆ ಹೇರಿಕೊಂಡೆ. ಅಲ್ಲದೇ, ಅದಕ್ಕೊಂದು ನಿಗದಿತ ಸಮಯದ ಪರಿಧಿಯನ್ನೂ ಹಾಕಿಕೊಂಡೆ. ಹೀಗೆ ಒತ್ತಡ ಬಿದ್ದಾಗ ಸಮಯ ತಾನಾಗಿಯೇ ಕೂಡಿಬರುತ್ತದೆ. ಆದ್ಯತೆಗಳು ಬದಲಾಗುತ್ತವೆ. ಹಾಗೂ ಓದದೇ ಉಳಿದ ಪುಸ್ತಕಗಳ ಯಾದಿಯಲ್ಲಿ ಇವರ ಪುಸ್ತಕಕ್ಕೆ ಅಗ್ರಸ್ಥಾನ ಉಂಟಾಗುತ್ತದೆ. ಹೀಗೆ ನಾನು ಕಳೆದ ಹಲವು ದಿನಗಳಲ್ಲಿ ಬನವಾಸಿಯವರ ಪುಸ್ತಕಗಳ ಸಹವಾಸಿಯಾಗಿದ್ದೆ. ಒಂದು ರೀತಿಯಲ್ಲಿ ಈ ಮುನ್ನುಡಿ ಬನವಾಸಿಯವರನ್ನು ನಿಮಿತ್ತವಾಗಿಟ್ಟುಕೊಂಡು ಹೊಸದಾಗಿ ಬರೆಯುತ್ತಿರುವವರ ತುಮುಲಗಳನ್ನು ಕಾಣುವ ಪ್ರಯತ್ನವೆನ್ನಬೇಕು. ಬನವಾಸಿಯವರೂ ಈ ಮುನ್ನುಡಿಯನ್ನು ತಮ್ಮ ಈ ಪುಸ್ತಕಕ್ಕೆ ಸೀಮಿತವಾದ ಟಿಪ್ಪಣಿಯೆಂದು ನೋಡದೆ, ಯುವಲೇಖಕರ ಬರಹದ ಆಯ್ಕೆ-ತುಮುಲಗಳಿಗೆ ಬೇರು ಕಾದಂಬರಿಯ ಚೌಕಟ್ಟನ್ನುಪಯೋಗಿಸಿ, ಒಟ್ಟಾರೆ ಪ್ರತಿಕ್ರಿಯಿಸುತ್ತಿರುವ ಪ್ರಕ್ರಿಯೆ ಎಂದು ನೋಡುತ್ತಾರೆಂದು ಎಣಿಸಿದ್ದೇನೆ.

ಒಬ್ಬ ಕಥೆಗಾರನ ಮೊದಲ ಪುಸ್ತಕ ಬಂದಾಗ ಸಾಮಾನ್ಯವಾಗಿ ಪ್ರೋತ್ಸಾಹದ ಮಾತುಗಳನ್ನಾಡುತ್ತಾ ಹಿರಿಯರು, ಈ ಯುವಕರ ಬೆಳವಣಿಗೆಯನ್ನು ಕೌತುಕದಿಂದ ಕಾಣಬೇಕಾಗಿದೆ, ಇವರು ಕಥಾ ಜಗತ್ತಿನಲ್ಲಿ ಭರವಸೆ ಹುಟ್ಟಿಸುವ ಬರಹಗಾರರು ಎಂಬಂತಹ ಮಾತುಗಳನ್ನು ಹೇಳುವುದು ವಾಡಿಕೆ. ಆದರೆ ಗೆಳೆಯ ಜಯಂತ ಕಾಯ್ಕಿಣಿ ಅನೇಕ ಬಾರಿ ಹೇಳಿರುವಂತೆ, ಬೆಳವಣಿಗೆಯನ್ನು ಕೌತುಕದಿಂದ ಕಾಣಬೇಕಾಗಿದೆ ಎಂದು ಹೇಳಿದ ಹಿರಿಯ ವಿಮರ್ಶಕರು ಯುವ ಲೇಖಕನ ಎರಡನೇ ಪುಸ್ತಕ ಬರುವ ವೇಳೆಗೆ ತಾವೇ ನಾಪತ್ತೆಯಾಗಿಬಿಡುತ್ತಾರೆ. ಈ ಮಾತು ನನ್ನಿಂದಲೂ ಹಿಂದೆ ಆಗಿರಬಹುದು. ಆದರೆ ಬರಹಗಾರನ ನಾಲ್ಕನೇ ಪುಸ್ತಕ ಬಂದಾಗ ಆಶೀರ್ವಚನ ಮತ್ತು ಭರವಸೆಯ ಮಾತುಗಳನ್ನು ಬದಿಗಿಟ್ಟು ತುಸು ಗಂಭೀರವಾದ ಮೌಲ್ಯಮಾಪನವನ್ನು ಮಾಡುವ ಸಮಯ ಉಂಟಾಗಿದೆ ಎನ್ನಬಹುದು. ಬನವಾಸಿಯವರ ಕಾದಂಬರಿಯನ್ನು ಈ ಹಿನ್ನೆಲೆಯಲ್ಲಿ ಅವರ ಇತರ ಕೃತಿಗಳೊಂದಿಗೆ ಓದಿದ್ದೇನೆ ಹಾಗೂ ಆ ನೆಲೆಯಲ್ಲಿಯೇ ಈ ಮುನ್ನುಡಿಯನ್ನು ಬರೆಯುತ್ತಿದ್ದೇನೆ.

ಕಥೆಗಾರನೊಬ್ಬನ ಬೆಳವಣಿಗೆಯನ್ನು ನೋಡುವುದು ಹೇಗೆ, ಒಟ್ಟಾರೆ ಬರವಣಿಗೆಯ ಮೌಲ್ಯಮಾಪನ ಮಾಡುವುದು ಹೇಗೆ ಎನ್ನುವ ಪ್ರಶ್ನೆಯನ್ನು ಹಿಡಿದು ನಾವು ಪ್ರಾರಂಭಿಸೋಣ. ಪ್ರಾರಂಭದ ಬರವಣಿಗೆಯಲ್ಲಿ ಯುವಲೇಖಕರು ಒಂದು ರೀತಿಯ ಭಾವನಾತ್ಮಕ ನೆಲೆಯಲ್ಲಿ, ಸಂಕೀರ್ಣತೆಯನ್ನು ತೊರೆದು ಕಥನಕಾರ್ಯವನ್ನು ಕೈಗೊಳ್ಳುವುದು ಸಹಜವಾದದ್ದು.

ಈ ಭಾವನಾತ್ಮಕ ನೆಲೆಯಲ್ಲಿಯೇ ಬನವಾಸಿಯವರು ತಮ್ಮ ಅಂಕಿತ ನಾಮವನ್ನು ಫಕೀರ ಎಂದಿರಿಸಿಕೊಂಡಿದ್ದಾರೆ ಎಂದು ನಂಬುತ್ತೇನೆ. ಫಕೀರ ಎನ್ನುವ ಅಂಕಿತ ನಾಮದಲ್ಲಿಯೇ ಒಂದು ಸಂದೇಶವನ್ನು ಈ ಯುವ ಬರಹಗಾರರು ಸೂಚಿಸುತ್ತಿರಬಹುದು. ಆದರೆ ಅಂಕಿತನಾಮ ಇಟ್ಟುಕೊಂಡವರು ಒಂದಿಷ್ಟು ಅನಾಮಧೇಯತೆಯನ್ನು ಪಡೆಯಲು ಪ್ರಯತ್ನಿಸುತ್ತಾರೆ ಎನ್ನುವುದು ನನ್ನ ನಂಬಿಕೆ. ಆದರೆ ಬನವಾಸಿಯವರ ವಿಷಯದಲ್ಲಿ ಹಾಗಾಗಿಲ್ಲ. ಅವರ ಮೂಲ ಹೆಸರೂ ಈ ಅಂಕಿತನಾಮದೊಂದಿಗೆ ಬೆಸೆದುಬಂದಿದೆಯಾದ್ದರಿಂದ ಉರ್ದುವಿನ ಕವಿಗಳಹಾಗೆ ಅದು ಅವರ ಹೆಸರಿನ ಭಾಗವೇ ಆಗಿದೆ. ಆದರೆ ಬನವಾಸಿಯವರು ಬರೆಯುವ ಸಾಹಿತ್ಯಕ್ಕೂ ಆ ಹೆಸರು ಸ್ಫುರಿಸಬಹುದಾದ ಸೂಚ್ಯಕ್ಕೂ ಹೆಚ್ಚಿನ ಸಂಬಂಧ ಕಾಣಿಸುತ್ತಿಲ್ಲ. ಈ ಘಟ್ಟದಲ್ಲಿ ಅವರು ಫಕೀರ ಎನ್ನುವ ಅಂಕಿತ ನಾಮವನ್ನು ಯಾಕೆ ಮತ್ತು ಎಷ್ಟುಕಾಲ ಹೊತ್ತು ನಡೆಯುತ್ತಾರೆ ಎನ್ನುವುದು ಕುತೂಹಲದ ವಿಷಯವೇ. ಹಿಂದೆ ನಳಿನಿ ದೇಶಪಾಂಡೆ ಎನ್ನುವ ಹೆಸರೂ ಅಥವಾ ಲಂಕೇಶರು ಬಳಸುತ್ತಿದ್ದ ನೀಲು ಹೆಸರನ್ನು ಉಪಯೋಗಿಸುವುದರಲ್ಲಿ ತಮಗೆ ಖ್ಯಾತಿ ತಂದಿರುವ ಸಾಹಿತ್ಯ ಪ್ರಕಾರಕ್ಕಿಂತ ಭಿನ್ನವಾದ ಒಂದು ನಿರ್ದಿಷ್ಟ ಕಾರಣಕ್ಕೆ ಆ ಅಂಕಿತನಾಮಗಳು ಉಪಯೋಗವಾಗುತ್ತಿತ್ತೆನ್ನುವುದನ್ನು ಗಮನಿಸಬೇಕು. ಅದೇ ಮಾಸ್ತಿಯವರು ಮೊದಲಿಗೆ ಶ್ರೀನಿವಾಸ ಎನ್ನುವ ಅಂಕಿತನಾಮ ಇಟ್ಟುಕೊಂಡರೂ, ಕಡೆಕಡೆಗೆ ತಮ್ಮ ಪೂರ್ಣ ಹೆಸರನ್ನು ಉಪಯೋಗಿಸಿಯೇ ಕಥೆಗಳನ್ನು ಬರೆಯುತ್ತಿದ್ದರು. ಬನವಾಸಿಯವರ ಈ ಅಂಕಿನಾಮಕ್ಕಿಲ್ಲದ ಅನಾಮಧೇಯತೆಯು ಏನನ್ನು ಸೂಚಿಸಹೊರಟಿದೆ ಎನ್ನುವುದು ಗಹನವಾಗಿಯೇ ಇದೆ. ಹಳೆಯ ಅಭ್ಯಾಸದಿಂದ ಇದು ಮುಂದುವರೆಯುತ್ತಿರಬಹುದಾದರೂ, ಅದನ್ನು ಮುಂದುವರೆಸುವುದರಲ್ಲಿ ನನಗೆ ಹೆಚ್ಚಿನ ಅರ್ಥ ಕಾಣಿಸುತ್ತಿಲ್ಲ.

ಕಥೆಗಾರರಾಗಿ ನಾವೆಲ್ಲರೂ ಒಂದು ಭಾವನಾತ್ಮಕ ನೆಲೆಯಲ್ಲಿ ಪ್ರಾರಂಭಿಸುತ್ತೇನೆ. ಮುಂದೆ ಜೀವನಾನುಭವ ಹೆಚ್ಚಾದಂತೆ, ಓದು ಹೆಚ್ಚಾದಂತೆ, ಕಥನ ಕ್ರಿಯೆಯು ಕೈಗೆ ದಕ್ಕುತ್ತಿರುವಂತೆ ಕಥೆಗಳೂ ಹೆಚ್ಚು ಸಶಕ್ತವಾಗುತ್ತಾ ಮುಂದುವರೆಯುವುದಲ್ಲದೇ, ಓದುಗರಿಗೆ ಅನೇಕ ಆಯಾಮಗಳನ್ನು ಬಿಡಿಸಿಡುವ ಕಲಾಕೃತಿಗಳಾಗುತ್ತವೆ. ಇದು ಕಥೆಗಾರನ ತಂತ್ರ ಮತ್ತು ಅನುಭವವು ಮಾಗುತ್ತಿರುವ ಲಕ್ಷಣ. ಹೀಗಾಗಿ ಬರಹಗಾರನ ಭರವಸೆ, ಸೃಜನಶೀಲತೆಯ ಪ್ರದರ್ಶನದ ಮಾಪನದಲ್ಲಿ ಮೊದಲ ಪುಸ್ತಕಕ್ಕಿಂತ ಭಿನ್ನವಾದದನ್ನು, ಗಹನವಾದದ್ದನ್ನು ಮುಂದಿನ ಬರವಣಿಗೆಗೆ ನೀಡಬೇಕಾಗುತ್ತದೆ. ಬೇರು ಕಾದಂಬರಿಯನ್ನು ಈ ದೃಷ್ಟಿಯಿಂದ ನಾನು ಕಾಣುತ್ತಿದ್ದೇನೆ. ಹಾಗೂ ಅದಕ್ಕೆ ಬನವಾಸಿಯವರ ಹಿಂದಿನ ಪುಸ್ತಕಗಳಿಗೆ ಇರಿಸಿರುವ ಮಾಪನಕ್ಕೆ ಭಿನ್ನವಾದ ಮಾಪನವನ್ನಿಡಬೇಕೆಂದು ನಾನು ನಂಬುತ್ತೇನೆ.

ಬನವಾಸಿಯವರು ಒಳ್ಳೆಯ ಬರಹಗಾರರು. ಅವರಿಗೆ ಕಥೆಯನ್ನು ಹೆಣೆಯುವ ಸಾಮರ್ಥ್ಯವಿದೆ. ಆಸಕ್ತಿಕರ ಕಥಾವಸ್ತುಗಳಿವೆ. ಅವರ ವಿಚಾರಧಾರೆ, ಮತ್ತು ನಿಲುವುಗಳು ಆಧುನಿಕವಾಗಿವೆ. ಯಾವ ಸಮಸ್ಯೆಗಳನ್ನು-ವಿಚಾರಗಳನ್ನು ಕಥನಕ್ಕೆ ಒಡ್ಡಬೇಕು-ಒಡ್ಡಬಹುದು ಅನ್ನುವುದರ ಬಗ್ಗೆ ಒಳ್ಳೆಯ ಪರಿಜ್ಞಾನವಿದೆ. ಅದಕ್ಕೆ ತಕ್ಕುದಾದ ಭಾಷೆಯೂ ಅವರಿಗೆ ದಕ್ಕಿದೆ. ವಿವರಗಳನ್ನು ನೋಡುವ ಸೂಕ್ಷ್ಮಗ್ರಾಹಿ ಕಣ್ಣುಗಳಿವೆ. ಮೂರು ಕಥಾಸಂಕಲನಗಳ ನಂತರ ಅವರು ಒಂದು ಕಾದಂಬರಿಯನ್ನು ಬರೆಯುವ ಸಾಹಸ ಮಾಡಿದ್ದಾರೆ. ಅದನ್ನೂ ಸಮರ್ಥವಾಗಿ ಬರೆದಿದ್ದಾರೆ. ಕಾದಂಬರಿಗಿರಬೇಕಾದ ವಿಶಾಲ ಕ್ಯಾನ್ವಾಸನ್ನೂ, ಅದರ ಮೇಲೆ ಚಿತ್ರಿಸಬೇಕೆಂದಿರುವ ವಿಚಾರವೂ ಅವರ ಮನಸ್ಸಿನಲ್ಲಿ ಸ್ಪಷ್ಟವಾಗಿದೆ. ಹೀಗಾಗಿಯೇ ಈ ಕಾದಂಬರಿಯು ಒಂದು ರೀತಿಯ ನಿರೀಕ್ಷಿತ ತಂತ್ರದಲ್ಲಿ ಬರೆಯಿಸಿಕೊಳ್ಳುತ್ತಾ ಹೋಗುತ್ತದೆ.

ಅವರ ಬ್ರಿಟಿಷ್ ಬಂಗ್ಲೆ, ಕೊಪ್ಪಿವಾಡನ ಹೋಟೆಲು, ಮತ್ತು ಕಣ್ಣು ಕತ್ತೆಲೆಯ ಭಯ ಕಥೆಗಳು ಬನವಾಸಿಯಲ್ಲಿರುವ ಉತ್ತಮ ಕಥೆಗಾರಿಕೆಯ ಉದಾಹರಣೆಗಳಾಗಿವೆ. ಕಥಾವಸ್ತುವಿಗೂ, ಕಥನತಂತ್ರಕ್ಕೂ ಇರಬೇಕಾದ ಸಮನ್ವಯವನ್ನು ಈ ರೀತಿಯ ಕಥೆಗಳು ತೋರಿಸಿಕೊಡುತ್ತವೆ. ಈ ಕಥೆಗಳು ಅವರ ಪ್ರತಿಭೆಯ ಸಾಧ್ಯತೆಗಳನ್ನು ಸೂಚಿಸುತ್ತವೆ. ಅವರ ಬ್ರಿಟಿಷ್ ಬಂಗ್ಲೆ ಸಂಕಲನದ ಎರಡು ಪತ್ರಗಳು ಎನ್ನುವ ಕಥೆ ತಮ್ಮ ಸಾಂಪ್ರದಾಯಿಕ ಕಥನದ ಅಚ್ಚಿನಿಂದ ಭಿನ್ನವಾಗಿ ನಿಲ್ಲುವ ಕಥೆ. ಆದರೆ ಅದು ಒಂದು ಅದ್ಭುತ ಕಥೆಯಾಗದೇ ಉಳಿದುಬಿಡುತ್ತದೆ. ಹೀಗೆ ತಮ್ಮ ಕಥನದಲ್ಲಿ ಸಾಧ್ಯತೆಗಳಿದ್ದೂ ಅದನ್ನು ಸಾಧಿಸಲಾಗದ್ದಕ್ಕೆ ಈ ಕಥೆಯ ಕಟ್ಟುವಿಕೆಯಲ್ಲಿ ಬೇಕಿರುವಷ್ಟು ಸಮನ್ವಯ ಕಾಣದಿರುವುದೇ ಆಗಿದೆ. ಎರಡು ಪತ್ರಗಳು ಕಥೆಯಲ್ಲಿರುವುದು ಇಬ್ಬರ ಆಂತರಿಕ ತುಮುಲಗಳು. ಆ ತುಮುಲಗಳನ್ನು ಪದರಪದರವಾಗಿ ಬಿಡಿಸಿನೋಡಲು ಕೆಲವು ವಿವರಗಳು ಬೇಕು. ಆದರೆ ಕೆಲವು ವಿವರಗಳು ಕಥೆಗೆ ಪೂರಕವಾಗದೇ ಇದ್ದುಬಿಡುತ್ತವೆ. ಆ ಕಥೆಯಲ್ಲಿನ ಶ್ರೀವೈಷ್ಣವ ಸಂಪ್ರದಾಯದ ವಿವರಗಳು ಹೀಗೆ ಕಥೆಗೆ ಪೂರಕವಾಗದೇ ನಿಲ್ಲುವ ವಿವರಗಳಾಗಿವೆ.

ಬನವಾಸಿಯವರು ಬಹುಮಟ್ಟಿಗೆ ಸಾಂಪ್ರದಾಯಿಕ ಕಥನ ತಂತ್ರವನ್ನುಪಯೋಗಿಸುತ್ತಾರೆ. ಇದು ಭಾಷೆಯ-ತಂತ್ರದ ಏರುಪೇರಿಲ್ಲದೇ ನೇರವಾಗಿ ಕಥೆಯನ್ನು ಹೇಳುವ ಮಾರ್ಗದ್ದಾಗಿದೆ. ಒಮ್ಮೊಮ್ಮೆ ಅವರು ಹೇಳಹೊರಟ ಆಧುನಿಕ ಮತ್ತು ಪ್ರಗತಿಶೀಲ ವಿಚಾರಗಳಿಗೂ ಈ ಕಥನ ತಂತ್ರಕ್ಕೂ ಕಥನಕ್ಕೂ ಬೇಕಾದಷ್ಟು ಸಮನ್ವಯತೆಯಿಲ್ಲದ್ದರಿಂದ ಅದು ಏರಬಹುದಾದ ಎತ್ತರವನ್ನು ಕ್ರಮಿಸದೇ ಉಳಿದುಬಿಡುತ್ತದೆ. ಅವರು ಕಥನ ತಂತ್ರದಲ್ಲಿ ಪ್ರಯೋಗಗಳನ್ನು ಮಾಡಿದ್ದಾರಾದರೂ ಅದರಲ್ಲಿ ಆಗಾಗ ಮಾತ್ರ ಸಾಫಲ್ಯತೆಯನ್ನು ಕಾಣುತ್ತಾರೆ. ಹಾಗೆಯೇ ಅವರು ತಮಗೆ ದಕ್ಕದ ಭಿನ್ನ ಅನುಭವಗಳ ವಿವರಗಳನ್ನು ತರಲು ಪ್ರಯತ್ನಿಸಿದಾಗ (ಸಾಬರ ಹುಡುಗಿ, ಆಲ್ಬರ್ಟ್ ಪಿಂಟೋ, ಕನಕಾಂಬರಿಯರು) ಅಷ್ಟು ಯಶಸ್ವಿಯಾಗದಿರುವುದನ್ನು ನಾವು ಕಾಣಬಹುದು.

ಈ ಹಿನ್ನೆಲೆಯಲ್ಲಿ ನಾವು ಅವರ ಹೊಸ ಕಾದಂಬರಿ ಬೇರುಗಮನಿಸಿದಾಗ ನಮಗೆ ಕಾಣಸಿಗುವುದು ಅವರ ಬರಹಗಳಲ್ಲಿ ಉಂಟಾಗುತ್ತಿರುವ ಒಂದು ವಿಚಿತ್ರ ಏಕತಾನತೆ. ನಮ್ಮದೇ ವಸ್ತು, ಶೈಲಿಗಳನ್ನು ನಾವು ಮುರಿಯುತ್ತಾ ಮರುನಿರ್ಮಿಸುತ್ತಾ, ಅನ್ವೇಷಣೆಯ ಮಾರ್ಗದಲ್ಲಿ ಹೋಗದಿದ್ದಾಗ ಆಗಬಹುದಾದ ಪರಿಣಾಮವೇ ಈ ಏಕತಾನತೆ. ಈ ರೀತಿಯ ಏಕತಾನತೆಯನ್ನು ಕೆಲ ವಿಮರ್ಶಕರು ಸ್ವಾಗತಿಸಬಹುದು. ಏಕೆಂದರೆ ಆ ಏಕತಾನತೆಯನ್ನು ಕಂಡಕೂಡಲೇ ಒಂದು ಹಣೆಪಟ್ಟಿಯನ್ನು ಹಚ್ಚಿ ಕೈ ತೊಳೆದುಕೊಂಡುಬಿಡಬಹುದು. ಓದುಗರಿಗೂ, ವಿಮರ್ಶಕರಿಗೂ ಸವಾಲೆಸೆಯುವ, ಪ್ರತಿಯೊಂದು ಸಂಗೀತ ಕಛೇರಿಯಲ್ಲೂ, ಅದೇ ಹಾಡನ್ನು ಹಾಡಿದರೂ ಅದಕ್ಕಾಗಿ ಮತ್ತದೇ ಜನರನ್ನು ಒಂದುಗೂಡಿಸಿ ದಂಗುಬಡಿಸುವ ಕಲಾಕಾರನ ಹಾಗೆ ಒಂದು ರೀತಿಯ ಸವಾಲನ್ನು ಬರಹಗಾರರೂ ಎದುರಿಸಬೇಕಾಗುತ್ತದೆ. ಕವಿತಾಲೋಕದಲ್ಲಿ ರಾಮಾನುಜನ್, ಶಿವಪ್ರಕಾಶ್ ಎಚ್.ಎಸ್. ವೆಂಕಟೇಶಮೂರ್ತಿ, ತಿರುಮಲೇಶ್, ಕಥನದಲ್ಲಿ ಕಾಯ್ಕಿಣಿ, ವಿವೇಕ ಶಾನಭಾಗರಂಥಹ ಬರಹಗಾರರು ಹೊಸ ರೀತಿಯಿಂದ, ಹೊಸ ವಸ್ತುಗಳನ್ನು ಕಟ್ಟುವ ಕೆಲಸವನ್ನು ಮಾಡಿದ್ದಾರೆ. ಈ ದಿಗ್ಗಜರು ನಮಗೊಂದು ಮಾನದಂಡವಾಗಿ ನಿಲ್ಲುತ್ತಾರೆ.

ಕಾದಂಬರಿಯು ಬರೆಯಿಸಿಕೊಂಡು ಹೋಗುವುದಕ್ಕೂ ಕಾದಂಬರಿಯನ್ನು ಕಟ್ಟುವುದಕ್ಕೂ ಇರುವ ಸೂಕ್ಷ್ಮ ವ್ಯತ್ಯಾಸವನ್ನು ನಾವು ಕಾಣಬೇಕು. ಕಾದಂಬರಿಗೆ ಒಬ್ಬ ಲೇಖಕ ತನ್ನನ್ನೇ ಒಡ್ಡಿಕೊಳ್ಳಬೇಕೋ, ಅಥವಾ ತನ್ನ ಬರಹದ ಪ್ರತಿಭೆಯಿಂದ ಕಾದಂಬರಿಯನ್ನು ಒಂದು ವಿಶಿಷ್ಟ ಹದಕ್ಕೆ ತರಬೇಕೋ ಎನ್ನುವ ಪ್ರಶ್ನೆ ನಮ್ಮನ್ನು ಕಾಡಬೇಕು. ಕಾದಂಬರಿ ಅಥವಾ ಕಥನಕ್ಕೆ ಲೇಖಕ ತನ್ನನ್ನು ಒಡ್ಡಿಕೊಂಡಾಗ ಒಂದು ರೀತಿಯ ಜಡತ್ವ ಬರುತ್ತದೆ. ಆದರೆ ಅದನ್ನು ಹದ ಮಾಡುತ್ತೇನೆಂದು ಹೊರಟಾಗ ನವ್ಯತೆ ಮತ್ತು ಭಿನ್ನತೆಗಳು ಹೊರಬರುವ ಸಾಧ್ಯತೆಯಿದೆ. ಬನವಾಸಿಯವರನ್ನು ಓದಿದಾಗ – ಅವರ ಪ್ರಗತಿಯನ್ನು ನೋಡಿದಾಗ ಅವರಿಗೆ ದಕ್ಕಿರುವ ಕಥನತಂತ್ರದ ಅಚ್ಚಿನಲ್ಲಿ ಕಥೆಗಳನ್ನು ಎರಕಹೊಯ್ದು ತೃಪ್ತರಾಗುತ್ತಿದ್ದಾರೆಯೇ ಹೊರತು ಅದಕ್ಕೊಂದು ಹದವನ್ನು ತರಲು ವಿಶೇಷ ಪ್ರಯತ್ನವನ್ನು ಮಾಡುತ್ತಿಲ್ಲ, ಕಥೆಗಳನ್ನು – ಅದು ಕಾದಂಬರಿಯೇ ಆಗಿರಬಹುದು – ಹೊಸದಾಗಿ ಒಂದು ಹೊಸ ಶಿಲ್ಪಕಲಾಕೃತಿಯಂತೆ ಕೆತ್ತಿ ರೂಪಿಸುವ ಸವಾಲನ್ನು ಅವರು ಸ್ವೀಕರಿಸಿಲ್ಲ ಎನ್ನಿಸುತ್ತದೆ.

ಒಬ್ಬ ಸಮರ್ಥ ಬರಹಗಾರನು ವಸ್ತುವಿನ ಭಿನ್ನತೆಯನ್ನು ಶೋಧಿಸಿದಷ್ಟು ತೀವ್ರತೆಯಿಂದ ತಂತ್ರದ ವೈವಿಧ್ಯವನ್ನೂ ಕಂಡುಕೊಳ್ಳುತ್ತಾನೆ ಎಂದು ನಾನು ನಂಬಿದ್ದೇನೆ. ಅಷ್ಟೇ ಅಲ್ಲ, ಒಂದೊಂದು ಕಥನಕ್ಕೂ ಅದಕ್ಕೆ ಸಮರ್ಪಕವಾದ ಕಥನತಂತ್ರವನ್ನು ಆಯಬೇಕಾಗುತ್ತದೆ. ಈ ನಿಟ್ಟಿನಲ್ಲಿ ನೋಡಿದಾಗ ಬನವಾಸಿಯವರ ಪ್ರತಿಭೆಯ ಸಂಭಾವ್ಯತೆಯ ಅಷ್ಟೂ ಆಯಾಮಗಳನ್ನು ಅವರು ಪರಿಶೋಧಿಸುವ ಕೆಲಸ ಮಾಡದೇ, ಅಲ್ಪತೃಪ್ತರಾಗುತ್ತಿದ್ದಾರೇನೋ ಅನ್ನಿಸುತ್ತದೆ. ಇದು ಕೇವಲ ಬನವಾಸಿಯವರಿಗೆ ಅನ್ವಯವಾಗುವ ಟಿಪ್ಪಣಿಯಲ್ಲ. ಬದಲಿಗೆ ಯುವ ಬರಹಗಾರರು ಕಂಡುಕೊಳ್ಳಬೇಕಾದ ಒಂದೇ ಪುಸ್ತಕಕ್ಕೆ ದಕ್ಕುವ ತುರ್ತಿನ ಮೆಚ್ಚುಗೆ ಮತ್ತು ತಮ್ಮ ಒಟ್ಟಾರೆ ಸಾಹಿತ್ಯಯಾತ್ರೆಯ ಮಹತ್ವದ ಅವಲೋಕನದ ನಡುವಿನ ದ್ವಂದ್ವವಾಗುತ್ತದೆ. ನಾನು ನಿನ್ನ ಬರಹವನ್ನು ಓದಿದ್ದೇನೆ ಎಂದು ಸೂಚಿಸುತ್ತಾ ಒತ್ತುವ ಲೈಕ್ ಗುಂಡಿಯನ್ನು ಮೆಚ್ಚುಗೆ ಎಂದು ಪರಿಭಾವಿಸಿದರೆ – ಈ ಲೈಕು ಅನ್ಲೈಕುಗಳ ಬೈನರಿಯ ನಡುವೆ ನಷ್ಟವಾಗುತ್ತಿರುವ ಚರ್ಚೆಯ ಸಂಕೀರ್ಣತೆಯನ್ನು ಕಳೆದುಕೊಂಡಂತಾಗುತ್ತದೆ. ಅದು ಬಹಳ ದೊಡ್ಡ ನಷ್ಟವೇ ಸರಿ.

ಈ ವಿಷಯವನ್ನು ಮತ್ತು ಎಚ್ಚರವನ್ನು ಕೇಶವ ಮಳಗಿ ಅವರ ದೇವರ ಜೋಳಿಗೆ ಪುಸ್ತಕದ ಮುನ್ನುಡಿಯಲ್ಲಿ ನೀಡುತ್ತಾರೆ. ಕಥಾವಸ್ತುವನ್ನು ಹುಡುಕಿಕೊಂಡು ಹೋಗುವ ಮತ್ತು ಕಥೆ ಕಟ್ಟುವ ವಿಧಾನ ಬಲ್ಲ ಫಕಿರರಂಥ ತರುಣ ಬರಹಗಾರರು ಗಮನಿಸಬೇಕಾದ ಕೆಲವು ಅಂಶಗಳಿವೆ.......... ಕಥೆಗಾರನ ಮಾಗಿದ ಜೀವನಾನುಭವ, ತೆರೆದ ಮನಸ್ಸು, ಕರುಣೆ, ಎಚ್ಚರವಾಗಿರುವ ಒಳ ಕಣ್ಣು ಕಥೆಯನ್ನು ಮೇಲೆತ್ತಬಲ್ಲವು. ಕಥೆಯನ್ನು ನಡೆಸುವ ಸಲುಗೆ ಮಾತ್ರ ಕಥೆಗಾರನಿಗಿರುತ್ತದೆ. ಕಾಣ್ಕೆ ಕಥೆಯೊಳಗಿನಿಂದಲೇ ಕೃಪೆಯಂತೆ ಒದಗಿಬರುತ್ತದೆ......ಅತಿ ವಿವರಣೆ, ಮಧ್ಯೆ ಮಧ್ಯೆ ಕಥೆಯನ್ನು ಉಪ ಪ್ರಸಂಗಗಳ ಮೂಲಕ ಬೆಳೆಸುವುದು ಓದು ಮತ್ತು ಕಥೆಯ ಯಶಸ್ಸಿಗೆ ತೊಡಕಾಗಬಲ್ಲದು.

ಬೇರು ಕಾದಂಬರಿಯಲ್ಲಿ ಮೂರು ಭಿನ್ನ ಕಥೆಗಳ ಎಳೆಗಳಿವೆ. ಅವುಗಳಲ್ಲಿ ಎರಡು ಮುಖ್ಯ ಧಾರೆಗಳಾದರೆ, ಮತ್ತೊಂದು ಉಪಧಾರೆ ಎನ್ನಬಹುದು. ಕುಂತಮ್ಮ-ಸಂಧ್ಯಾ ಸುತ್ತ ಒಂದು ಕಥೆ ಹುಟ್ಟಿದರೆ, ಈರಮ್ಮ ಭರಮಪ್ಪನದು ಮತ್ತೊಂದು. ಮೂರನೆಯ ಉಪಧಾರೆ ಬಾಬುರಾವ್ ನಚಿಕೇತನ ಕಥೆ. ಈ ಮೂರೂ ಕಥೆಗಳನ್ನು ಬನವಾಸಿಯವರು ತಮ್ಮ ಕಥನದ ಅಚ್ಚಿನಲ್ಲಿ ಎರಕ ಹೊಯ್ಯುತ್ತಾರೆಯೇ ಹೊರತು ಹೊಸ ಅಚ್ಚನ್ನು ತಯಾರಿಸುವುದಿಲ್ಲ. ಹೀಗಾಗಿ ಅವು ಮೂರು ಭಿನ್ನ ಕಥೆಗಳಾಗಿ ನಿಲ್ಲುತ್ತವೆ. ಅ ಕಥೆಗಳಿಗೆ ಒಂದು ನಿರ್ದಿಷ್ಟ ಚೌಕಟ್ಟಿದೆ. ಒಂದು ಬದಿಯಲ್ಲಿ ಪ್ರಾರಂಭವಾಗಿ ಆರೋಹಣಾವರೋಹಣಗಳ ನಂತರ ನಿಲ್ಲುತ್ತದೆ. ಹೀಗಾಗಿ ಅವು ಕಥೆಗಳಾಗಿ ಉಳಿಯುತ್ತವೆಯೇ ಹೊರತು ಕಾದಂಬರಿಯ ಫಾರ್ಮಾಟಿಗೆ ಅಳವಡಿಸುವಲ್ಲಿ ಲೇಖರು ಹೆಚ್ಚಿನ ಸಾಫಲ್ಯತೆಯನ್ನು ಪಡೆಯುವುದಿಲ್ಲ.

ಈ ಎರಡೂವರೆ ಕಥೆಗಳು ನಡೆಯುವುದು ಕರುಣಾಶ್ರಯ ಎನ್ನುವ ಒಂದು ಆಸ್ಪತ್ರೆಯಲ್ಲಿ. ಎರಡೂ ಕಥೆಗಳಲ್ಲಿ (ಎಲ್ಲ ಸೂಕ್ಷ್ಮ ವಿವರಗಳನ್ನು ಮೀರಿದಾಗ) ಕಾಣುವುದು ಚಿಕಿತ್ಸೆಗೆ ಬೇಕಾದ ಹಣದ ಪ್ರಶ್ನೆ. ಒಂದಕ್ಕೆ ದೇಣಿಗೆಯ ಸುಲಭ ಉತ್ತರ ಸಿಗುತ್ತದೆ. ಮತ್ತೊಂದಕ್ಕೆ ದೇಹ ಮಾರಿಕೊಳ್ಳಬೇಕಾದ ಕಷ್ಟದ ಆಯ್ಕೆಯೇ ಉಳಿಯುತ್ತದೆ. ಈ ಎರಡೂ ಪ್ರಕ್ರಿಯೆಗಳು ಒಂದೇ ಆಸ್ಪತ್ರೆಯ ಎರಡು ಭಾಗದಲ್ಲಿ ಆಗುತ್ತಿದೆ. ಆದರೆ ಈರವ್ವನಿಗೆ ಯಾರೂ ದೇಣಿಗೆ, ಎನ್.ಜಿ.ಓಗಳ ಆಯ್ಕೆಯ ಬಗ್ಗೆ ತಿಳುವಳಿಕೆಯನ್ನು ನೀಡುವುದೇ ಇಲ್ಲ. ಇಲ್ಲಿಯೇ ಲೇಖಕರು ಕಾದಂಬರಿಯ ವಿಸ್ತಾರವಾದ ಫಾರ್ಮಾಟನ್ನು ದಕ್ಕಿಸಿಕೊಳ್ಳುವುದರಲ್ಲಿ ಸೋಲುತ್ತಾರೆ. ಇನ್ನೂರು ಪುಟಗಳಷ್ಟು ದೀರ್ಘವಾಗಿ ಬರೆಯುವ ಸಾಧ್ಯತೆಯಿರುವಾಗ ಅಷ್ಟೂ ಸಂಕೀರ್ಣತೆಯನ್ನು ಅಳವಡಿಸುವ ಸಾಧ್ಯತೆ ಇದ್ದೇ ಇದೆಯಾದರೂ ಅದರ ಸಾಧ್ಯತೆಗಳನ್ನು ಅವಸರದಲ್ಲಿ ಬಿಟ್ಟುಕೊಟ್ಟುಬಿಟ್ಟಿದ್ದಾರೆ ಅನ್ನಿಸುತ್ತದೆ.

ಹಾಗೆ ನೋಡಿದರೆ ಬನವಾಸಿಯವರ ಕಥಾವಸ್ತುವನ ಆಯ್ಕೆ ನಿಜಕ್ಕೂ ಮೆಚ್ಚುವಂತಹದ್ದೇ. ಈ ಕಾದಂಬರಿಯಲ್ಲಿಯೇ ಪ್ರಾಸ್ತಾವಿಕವಾಗಿ – ಅಸ್ಪತ್ರೆಗೆ ಈ ಇಬ್ಬರು ವ್ಯಕ್ತಿಗಳು ಚಿಕಿತ್ಸೆಗಾಗಿ ಬರುವುದಕ್ಕೆ ಕಾರಣ – ಎಂಡೋಸಲ್ಫಾನ್ ಪ್ರಭಾವದಿಂದ ಕಾಲಿಗೆ ಆಗಿರುವ ನ್ಯೂನತೆ ಒಂದಾದರೆ, ಭರಮಪ್ಪನ ವಿಷಯದಲ್ಲಿ ಬಿಟಿ ಹತ್ತಿ ಬೆಳೆಯುವ – ರೈತರ ಪ್ರತಿಭಟನೆಯ ಬ್ಯಾಕ್ ಸ್ಟೋರಿ ಇದೆ. ಎರಡೂ ಶಕ್ತವಾದ ಕಥೆಗಳೇ. ಎರಡೂ ವಿಸ್ತಾರವಾದ ಕ್ಯಾನ್ವಾಸಿನ, ಮಹತ್ವದ ಸಮಾಜಾಭಿಮುಖವಾದ ಕಥೆಗಳು. ಆದರೆ ಅವು ಕೇವಲ ಪ್ರಾಸಂಗಿಕವಾಗಿ ಉಳಿದುಬಿಡುತ್ತವೆ.

ಬನವಾಸಿಯವರ ಈ ಕಥನದಲ್ಲಿ ಖಳನಾಯಕರಾಗಿ ನಮಗೆ ಯಾರೂ ಕಾಣುವುದಿಲ್ಲ. ಅದರಲ್ಲಿ ನಮಗೆ ಏನೂ ತಕರಾರು ಇರಬಾರದು. ಯಾಕೆಂದರೆ ನಮ್ಮೆಲ್ಲರಲ್ಲೂ ಒಳ್ಳೆಯ ಮತ್ತು ಕೆಟ್ಟ ಅಂಶಗಳು ಅಡಕವಾಗಿರುತ್ತವೆ. ಆದರೆ ಬನವಾಸಿಯವರು ಒಂದೇ ಸಮಯದಲ್ಲಿ ಜನರ ಒಳ್ಳೆಯತನ-ಕ್ಷುಲ್ಲಕತೆಯನ್ನು ನೋಡುವ ಬದಲಿಗೆ, ಒಂದು ಕಾಲಘಟ್ಟದಲ್ಲಿ ಕೆಲವರು ಕೆಟ್ಟವರಾಗಿ ಕಂಡು, ಇದ್ದಕ್ಕಿದ್ದ ಹಾಗೆ ಒಳ್ಳೆಯವರಾಗಿ ಪರಿವರ್ತಿತರಾಗುತ್ತಾರೆ. ಈ ಪರಿವರ್ತನೆಯಲ್ಲಿ ಕೆಟ್ಟವರು ಒಳ್ಳೆಯವರಾಗುವ ಪ್ರಕ್ರಿಯೆಗಿಂತ, ಅದೇ ವ್ಯಕ್ತಿಯನ್ನು ನೋಡುವ ದೃಕ್ಪಥದ ಬದಲಾವಣೆಯಿಂದಾಗಿ ಚಿತ್ರಣ ಭಿನ್ನವಾಗುತ್ತದೆ. ಇದೂ ಒಂದು ಆಸಕ್ತಿಕರ ತಂತ್ರವಾದರೂ, ಈ ದೃಕ್ಪಥದ ಬದಲಾವಣೆಗೆ ಬಲವಾದ ಸಂದರ್ಭವನ್ನು ಒದಗಿಸುವಲ್ಲಿ ಬನವಾಸಿಯವರು ಅಷ್ಟು ಶಕ್ತರಾಗಿಲ್ಲ. ಉದಾಹರಣೆಗೆ ರಾಮಸ್ವಾಮಿ ಎನ್ನುವ ಪಾತ್ರಕ್ಕಿರಬಹುದಾದ ಸಾಧ್ಯತೆಗಳು ಈ ಕಾಲಘಟ್ಟದ ಬೈನರಿಯಲ್ಲಿ ನಲುಗುತ್ತದೆಯೇ ಹೊರತು ತನ್ನೆಲ್ಲಾ ಸಂಕೀರ್ಣತೆಯನ್ನು ಓದುಗರ ಮುಂದೆ ತೆರೆದಡುವುದಿಲ್ಲ. ಹೀಗಾಗಿಯೇ ಕಥೆಯಲ್ಲಿ ಬರುವ ಆಸ್ಪತ್ರೆಯಲ್ಲಿನ ಜನರ ಒಳ್ಳೆಯತನದಲ್ಲಿ ಈ ಕಾದಂಬರಿ ನಲುಗುತ್ತದೆ.

ಹಾಗೆ ನೋಡಿದರೆ ಕಾದಂಬರಿಯ ಈರಮ್ಮನ ಪಾತ್ರ ಬಹಳ ಮುಖ್ಯವಾದ ಪಾತ್ರವಾಗಬಹುದಿತ್ತು. ಆಕೆಗೆ ಹಣದ ಅವಶ್ಯಕತೆ ಒಂದೆಡೆಯಿದೆ, ದೈಹಿಕ ಸುಖದ ಅವಶ್ಯಕತೆಯೂ ಇದೆ. ಪಕ್ಕದಲ್ಲಿ ಚಿಕಿತ್ಸೆಗಾಗಿ ಗಂಡ ಅಸಹಾಯಕನಾಗಿ ಆಸ್ಪತ್ರೆಯಲ್ಲಿ ಮಲಗಿದ್ದಾನೆ.... ಈ ಹಿನ್ನಲೆಯಲ್ಲಿ ಈರಮ್ಮನ ಮನಸ್ಸಿನಲ್ಲಾಗಬಹುದಾದ ತುಮುಲಗಳು ಆಯ್ಕೆಯ ಸಾಧ್ಯತೆಗಳು ಅದರಲ್ಲಿನ ಸಂಕೀರ್ಣತೆಯ ಸಾಧ್ಯತೆಗಳು ಅಪರಿಮಿತ. ಆದರೆ ಬನವಾಸಿಯವರು ಅದನ್ನು ಒಂದು ಮಟ್ಟದಲ್ಲಿ ಸಮರ್ಥಿಸಿ ಬಿಟ್ಟುಬಿಡುತ್ತಾರೆ. ಅದನ್ನೊಂದು ಸಮಸ್ಯೆಯಾಗಿ ಬಳೆಸುವ ಸಾಧ್ಯತೆಯನ್ನು ಇನ್ನಷ್ಟು ಶಕ್ತವಾಗಿ ಉಪಯೋಗಿಸಿಕೊಳ್ಳಬಹುದಿತ್ತು ಅನ್ನಿಸುತ್ತದೆ. ಬದಲಿಗೆ ಈ ವಿಷಯ ಬೆಳೆದು ತಾರಕ್ಕಕೇರಬೇಕಾದದ್ದು ಸಮಜಾಯಿಷಿಯಲ್ಲಿ ಮತ್ತು ಒಂದು ರೀತಿಯ ಒಣ ಒಪ್ಪಂದದಲ್ಲಿ ಮುಕ್ತಾಯಗೊಳ್ಳುತ್ತದೆ. ಅನೇಕ ಪದರಗಳಿರಬಹುದಾದ ಸಮಸ್ಯೆಗೆ ಅವರು ಸರಳವಾಗಿ ಒಂದು ತೆರೆಯನ್ನು ಎಳೆದು ಬಿಡುತ್ತಾರೆ.

ಹಿಂದೆ ಚರ್ಚಿಸಿದ ಎರಡು ಪತ್ರಗಳು ಕಥೆಯಲ್ಲಿ ಬರುವ ಶ್ರೀವೈಷ್ಣವ ಸಂಪ್ರದಾಯದ ವಿವರಗಳ ಡಿಸ್ಟ್ರಾಕ್ಟಿವ್ ಅಂಶಗಳ ರೀತಿಯ ಅಂಶಗಳು ಈ ಕಾದಂಬರಿಯಲ್ಲಿಯೂ ಇವೆ. ಪ್ರಾಸ್ತಾವಿಕವಾಗಿ ಬರುವ ಒಂದು ಪಾತ್ರ ಫ್ಲಾರೆನ್ಸ್ ನೈಟಿಂಗೇಲ್. ಇದು ಸಾಮಾನ್ಯವಾದ ಹೆಸರಲ್ಲ. ಈ ಹೆಸರಿನಲ್ಲಿ ಯುದ್ದಕಾಲದ ಶುಶ್ರೂಶೆಗೂ, ನರ್ಸಿಂಗಿಗೂ ಸಂಬಂಧಿಸಿದ ಒಂದು ಪ್ರತೀಕವೇ ಅಡಕವಾಗಿದೆ. ಆದರೆ ಈ ಕಾದಂಬರಿಯು ಆಸ್ಪತ್ರೆಯ ಸಂದರ್ಭದಲ್ಲಿ ರಚಿಸಿದ್ದರೂ, ಆ ಪಾತ್ರಕ್ಕೂ ಅದು ಸ್ಫುರಿಸಬಹುದಾದ ಅರ್ಥಕ್ಕೂ ಯಾವುದೇ ತಾಳೆಬೀಳದೇ ಆ ಹೆಸರನ್ನು ಇಲ್ಲಿಗೆ ತಂದದ್ದು ಯಾಕೆ ಅನ್ನುವ ಪ್ರಶ್ನೆಯ ಕೊಕ್ಕೆಯನ್ನು ಹಾಕಿ ಬನವಾಸಿಯವರು ಓದುಗನಿಗೆ ತುಮುಲವನ್ನುಂಟುಮಾಡುತ್ತಾರೆ. ಇಂಥ ಅಂಶಗಳು ಓದುಗರ ಚಿತ್ತವಿಕ್ಷೇಪಕ್ಕೆ ಕಾರಣವಾಗುತ್ತದೆ. ಇದರ ಬಗ್ಗೆ ಅವರು ತುಸು ಎಚ್ಚರ ವಹಿಸಬೇಕಾಗಿದೆ.

ಬೇರು ಕಾದಂಬರಿಯನಂತರ ಬನವಾಸಿಯವರು ತಮ್ಮ ಮುಂದಿನ ಕಥಾಯಾತ್ರೆಯನ್ನು ಭಿನ್ನವಾಗಿ ಕೈಗೊಳ್ಳಲಿ ಎಂದು ನಾನು ಆಶಿಸುತ್ತೇನೆ. ಬೇರು ಒಂದು ಸಮರ್ಥವಾದ ಬರವಣಿಗೆಯ ಫಲವಾಗಿದೆ. ಆದರಿದು ಇನ್ನೂ ಮಹತ್ವಾಕಾಂಕ್ಷೆಯ ಕಾದಂಬರಿಯಾಗಬಹುದಿತ್ತು. ಬನವಾಸಿಯವರು ಕಥೆ-ತಂತ್ರದ ಸಮನ್ವಯದಬಗ್ಗೆ ಅಭ್ಯಾಸ ಮಾಡಿದರೆ ಕನ್ನಡದ ಮುಖ್ಯ ಲೇಖಕರಾಗುವುದರ ಎಲ್ಲ ಸಾಧ್ಯತೆಗಳೂ ಇವೆ ಅಂತ ನನಗನ್ನಿಸುತ್ತದೆ. ಇದು ಕೇವಲ ಬನವಾಸಿಯವರಿಗೆ ಮಾತ್ರ ಅನ್ವಯಿಸುವ ಮಾತಲ್ಲ, ಬದಲಿಗೆ ಹೊಸದಾಗಿ ಬರೆಯಲು ಪ್ರಾರಂಭಿಸಿದ ಎಲ್ಲ ಯುವ ಬರಹಗಾರರೂ ತಮ್ಮ ಮೊದಲ ಪುಸ್ತಕ ಬಂದನಂತರ ಯೋಚಿಸಿ ಮೈಗೂಡಿಸಿಕೊಳ್ಳಬೇಕಾದ ವಿಚಾರ. ಬನವಾಸಿಯವರ ಮುಂದಿನ ಕೃತಿಗಳು ಈ ಹದವನ್ನು ಸಾಧಿಸುತ್ತವೆ ಎನ್ನುವ ಆಶಾವಾದ ನನಗಿದೆ. ಅವರಿಗೆ ಒಳ್ಳೆಯದಾಗಲಿ.

ಎಂ.ಎಸ್.ಶ್ರೀರಾಮ್
ಬೆಂಗಳೂರು. 22 ಡಿಸೆಂಬರ್ 2017.



   

ಗೋಪಾಲಕೃಷ್ಣ ಕುಂಟಿನಿಯ ಕಥೆಗಳಿಗೆ ಮುನ್ನುಡಿ


ಹೊಸದಾಗಿ ಬರುತ್ತಿರುವ ಕೃತಿಯನ್ನು ಸ್ವಾಗತಿಸುವಾಗ ಅದಕ್ಕೊಂದು ಹಿನ್ನೆಲೆ – ಯಾವ ಪರಂಪರೆಗೆ ಕಥೆಗಳು ಸೇರುತ್ತವೆ, ಹಾಗೂ ಕಥನ ಜಗತ್ತನ್ನು ಇದು ಹೇಗೆ ಪ್ರವೇಶಿಸುತ್ತದೆ ಎಂದು ಗಮನಿಸುವುದು ಮುಖ್ಯವಾಗುತ್ತದೆ. ಒಂದು ರೀತಿಯಲ್ಲಿ ಕಥೆಗಾರನ ಹಿನ್ನೆಲೆ, ನಿಲುವುಗಳು, ಓದು, ಅಭಿರುಚಿಗಳ ಪರಿಚಯವನ್ನೂ ಕಥೆಗಳ ಮೂಲಕ ಕಂಡುಕೊಳ್ಳುವುದು, ಆ ಒಲವುಗಳ ಬಗ್ಗೆ ಟಿಪ್ಪಣಿ ಮಾಡುವುದಕ್ಕೂ ಸಾಧ್ಯ. ಅನೇಕರು ಕೈಗೆ ದಕ್ಕದ ಕಥೆಗಳನ್ನು ಬರೆದು ಅದನ್ನು ಓದುಗ ವಿಸ್ತರಿಸಲು ಅದರ ಪದರಗಳನ್ನು ಬಿಡಿಸುತ್ತಾ ಹೋಗಲು ಪಂಥಾಹ್ವಾನ ನೀಡುವುದನ್ನೂ ನಾವು ಕಂಡಿದ್ದೇವೆ. ಕಥೆ ಎಂದರೇನು ಎನ್ನುವ ಮೂಲಭೂತ ಪ್ರಶ್ನೆಯನ್ನೂ ಕೆಲ ಕಥೆಗಾರರು ತಮ್ಮ ಓದುಗರತ್ತ ಎಸೆಯುವ ಕಥೆಗಾರರು ಕಥನ ತಂತ್ರವೂ ಇದೆ. ಈ ಎಲ್ಲ ಹಿನ್ನೆಲೆಯಲ್ಲಿ ನಾವು ಕುಂಟಿನಿಯವರ ಪುಸ್ತಕವನ್ನು ಪ್ರೀತಿಯಿಂದ ಸ್ವಾಗತಿಸಬೇಕಾಗಿದೆ.

ಹಾಗೆ ನೋಡಿದರೆ ಗೋಪಾಲಕೃಷ್ಣ ಕುಂಟಿನಿಯವರ ಕಥೆಗಳನ್ನು ಪರಿಚಯಿಸುವುದು ಸರಳವಾದ ಕೆಲಸವೇನೂ ಅಲ್ಲ. ಮುಂಬಯಿಯ ಒಂದು ಹೋಟೇಲಿನ ರಿಸೆಪ್ಷನ್ ಏರಿಯಾದಲ್ಲಿ 30 ಅಡಿ ಅಗಲದ ಒಂದು ಚಿತ್ರಕಲೆಯಿದೆ. ಮುಂಬಿಯಲ್ಲಿ ನಡೆದ ಭಯೋತ್ಪಾದಕರ ಕಾರ್ಯಾಚರಣೆಯಾದಾಗಲೂ ಆ ಚಿತ್ರಕ್ಕೆ ಯಾವುದೇ ಧಕ್ಕೆ ಆಗಲಿಲ್ಲ. ಅದರ ಕಲಾವಿದರು ಎಂ.ಎಫ್.ಹುಸೇನ್ ಆ ಹೋಟೇಲನ್ನು ಪ್ರವೇಶಿಸಿ ಚೆಕಿನ್ ಮಾಡುವಾಗ ಎಂದೂ ಇಡೀ ಚಿತ್ರ ನಮಗೆ ಕಾಣುವುದೇ ಇಲ್ಲ. ಯಾವ ಭಾಗದಲ್ಲಿ ನಿಂತು ನೋಡುತ್ತೀರೋ ಆ ಭಾಗ ವಿವರವಾಗಿ ಕಾಣುತ್ತದೆ. ಆದರೆ ಆ ವಿವರವಿರುವುದು ಒಂದು ದೊಡ್ಡ ಕ್ಯಾನ್ವಾಸಿನ ಭಾಗವಾಗಿ. ಆ ಕ್ಯಾನ್ವಾಸು ಕಾಣಬೇಕಾದರೆ ಮೂವತ್ತು ಅಡಿ ದೂರ ನಿಂತು ನೋಡಬೇಕು. ಹಾಗೆ ನೋಡಿದಾಗ ಕಾಣುವ ಚಿತ್ರವೇ ಬೇರೆ. ಅಲ್ಲಿ ವಿವರಗಳು ಕಾಣುವುದೇ ಇಲ್ಲ. ಕ್ಲೋಸಪ್ ಕೊಡುವ ಕಥೆ, ವಿವರ, ಒಳನೋಟಗಳು ಒಂದಾದರೆ, ಲಾಂಗ್ ಷಾಟ್ ಕೊಡುವ ವಿಹಂಗಮ ದೃಕ್ಪಥವೇ ಮತ್ತೊಂದು. ಈ ಎರಡನ್ನೂ ಗಿಟ್ಟಿಸಿಕೊಳ್ಳುವುದು ಸುಲಭದ ಕೆಲಸವಲ್ಲ. ಆದರೆ ಗಿಟ್ಟಿಸಿಕೊಳ್ಳಲು ಮಾಡುವ ಯತ್ನಮಾತ್ರ ನಿಜಕ್ಕೂ ಚೇತೋಹಾರಿಯಾದದ್ದು. ನಮ್ಮನ್ನು ಆಲೋಚನೆಯ ಓರೆಗೆ ಹಚ್ಚುವ ಯಾವುದೇ ಕೃತಿಯನ್ನು ನಾವು ತೆರೆದ ಮನಸ್ಸಿನಿಂದ, ಪ್ರೀತಿಪೂರ್ವಕವಾಗಿ ಸ್ವಾಗತಿಸಬೇಕು.
ಸಾಮಾನ್ಯವಾಗಿ ಪುಸ್ತಕವನ್ನು ಪರಿಚಯಿಸುವಾಗ ಅದರ ಭೌತಿಕತೆಯನ್ನು ಮತ್ತು ಕಥೆ, ಕಥನ ಧೋರಣೆಯ ಸಾರಾಂಶವನ್ನು ಹೇಳುವುದು ವಾಡಿಕೆ – ಈ ಪುಸ್ತಕದಲ್ಲಿ 30 ಕಥೆಗಳಿವೆ, ಆ ಕಥೆಗಳನ್ನು ಸಂಕ್ಷಿಪ್ತವಾಗಿ ವಿವರಿಸಬೇಕೆಂದರೆ ಅವು ನಗರದ ತಲ್ಲಣಗಳನ್ನು ಪ್ರತಿಪಾದಿಸುತ್ತವೆ, ಅಥವಾ ಶೋಷಿತ ವರ್ಗದ ತುಮುಲಗಳ ಚಿತ್ರಣ ನೀಡುತ್ತದೆ, ಗ್ರಾಮ್ಯ ನಗರಗಳ ಆತಂಕವನ್ನು ಬಿಂಬಿಸುತ್ತದೆ ..... ಹೀಗೆ ಬರೆಯುವುದು ವಾಡಿಕೆ. ಆದರೆ ಕುಂಟಿನಿಯವರ ಕಥೆಗಳನ್ನು ಹಾಗೆ ಓದುವ ಪ್ರಯಾಸ ಮಾಡಲೇ ಬಾರದು. ಕಥೆಯ ಸಾರಾಂಶವನ್ನು ಹುಡುಕಲೇ ಬಾರದು. ಹಾಗೂ ಕಥೆ ಓದಿ ಮುಗಿಯಿತು – ಈ ಪುಸ್ತಕವನ್ನು ಓದಿ ಮುಗಿಸಿದೆ ಎಂದು ಹೇಳಲೇ ಬಾರದು. ಯಾಕಂದರೆ ಅಲ್ಲಿ ಕಥೆಗಳೇ ಇಲ್ಲ! ಅಲ್ಲಿರುವುದು ಅನೇಕ ಸಣ್ಣ ವಿಚಾರಗಳ ವಿವರವಾದ ನೋಟ.... ಆ ವಿವರಗಳಲ್ಲಿ ಒಂದು ಅರ್ಥ ಸ್ಫುರಿಸುತ್ತದೆ. ಆ ವಿವರಗಳಿಂದ ದೂರ ಹೋದಾಗ ಬೇರೆಯದೇ ಒಂದು ವಿಹಂಗಮ ದೃಶ್ಯ ಮತ್ತು ದೊಡ್ಡ ದೃಶ್ಯ ಕಾಣಿಸುತ್ತದೆ. ಅಂದರೆ ಕುಂಟಿನಿಯವರು ನಮಗೆ 30 ಕಥೆಗಳನ್ನು ನೀಡಿದ್ದಾರೆಂದು ಅವರು ತಿಳಿದಿದ್ದಾರೆ. ಅಲ್ಲಿರುವ ನಿರರ್ಗಳ ಕಥನವನ್ನು ಅವರು ಮುರಿದಿರುವ ರೀತಿಯಿಂದಾಗಿ ಅಲ್ಲಿ 30 ಕಥೆಗಳಿವೆ. ಆದರೆ ಅದರಲ್ಲಿ ನಾವು ಬೇಕಿದ್ದರೆ 20 ಕಥೆಗಳನ್ನೇ ಓದಬಹುದು, ಅಥವಾ ಮುರಿದು 40 ಕಥೆಗಳನ್ನೂ ಆಗಿಸಬಹುದು. ಅದು ಓದುಗರ ಪ್ರೀತಿಗೆ, ಓದುವ ಶೈಲಿಗೆ ಬಿಟ್ಟದ್ದು.

ಈ ಕಥೆಗಳ ಶೈಲಿ ಕನ್ನಡಕ್ಕೆ ಹೊಸತು. ಇದು ವಿಶಿಷ್ಟವಾದದ್ದು. ಒಂದು ಕಥೆಗೆ ಸಾಮಾನ್ಯವಾಗಿ ಅದರ ಸಂದರ್ಭವನ್ನು ದಿಗ್ಬಂಧನದಲ್ಲಿಡುವ ಕೆಲವು ಗಡಿಗಳಿರುತ್ತವೆ. ಆ ಗಡಿಗಳು ಕಾಲಕ್ಕೆ ಸಂಬಂಧಪಟ್ಟವು, ಸಮಯ-ಸಂದರ್ಭಕ್ಕೆ ಸಂಬಂಧಪಟ್ಟವು, ಭೌಗೋಳಿಕ ವಿವರಗಳಿಗೆ ಸಂಬಂಧಪಟ್ಟವು, ಒಂದು ಸಾಮಾಜಿಕ ಪರಿಸರಕ್ಕೆ ಸಂಬಂಧಪಟ್ಟವು ಆಗಿರುತ್ತದೆ. ಸಾಮಾನ್ಯವಾಗಿ ಒಂದು ಕಥೆಯನ್ನು ಕಟ್ಟುವಾಗ ಆ ಸಂದರ್ಭದ ಚೌಕಟ್ಟು ಹಾಕಿ ಬರೆಯುವುದೇ ಕಥೆಗಾರರಿಗೆ ಅನುಕೂಲವಾದ ತಂತ್ರ. ಮುಂಬಯಿ ನಗರೀಕರಣದ ಒಂದು ಸಹಜ ಭಿತ್ತಿಯಾಗುತ್ತದೆ. ಪಾತ್ರದ ಹೆಸರುಗಳು ಒಂದು ರೀತಿಯ ಸಾಮಾಜಿಕ ಚೌಕಟ್ಟನ್ನು ಬಿಟ್ಟುಕೊಡುತ್ತದೆ. ಹೊರವಿವರಗಳು ಒಂದು ಕಾಲಘಟ್ಟವನ್ನು ತೆರೆಯುತ್ತವೆ. ಟ್ರಂಕಾಲ್ ಹಚ್ಚಿದೆ ಎನ್ನುವುದು ಒಂದು ಕಾಲಘಟ್ಟವಾದರೆ ವಾಟ್ಸಾಪ್ ಮಾಡಿದೆ ಎನ್ನುವುದು ಮತ್ತೊಂದು ಕಾಲಘಟ್ಟವಾಗುತ್ತದೆ. ಆದರೆ ಕುಂಟಿನಿ ಕಾಲಾತೀತವಾಗಿ, ಜಾತ್ಯಾತೀತವಾಗಿ ತಮ್ಮ ಕಥೆಗಳನ್ನು ಹೆಣೆಯುತ್ತಾರೆ. ಆ ಕಥೆಗಳಿಗೆ ಸಹಜ ಚಲನೆಯಿಲ್ಲ. ಚದುರಿದ ಚಿತ್ರಗಳನ್ನು ಸಾಲಾಗಿ ನೋಡುವ ಮೂಲಕ ಓದುಗರೇ ಚಲನೆಯನ್ನು ಸೃಷ್ಟಿಮಾಡಿಕೊಳ್ಳಬೇಕಾಗುತ್ತದೆ. ಅಂದರೆ ಇದು ಪ್ಯಾಸಿವ್ ಓದಿಗೆ ದಕ್ಕುವ ಕಥೆಗಳಲ್ಲ. ಇದು ಕುಂಟಿನಿ ಹೇಳುವ ನಾವು ಕೇಳುವ ಕತೆಗಳಲ್ಲ. ಕುಂಟಿನಿ ತಮಗನ್ನಿನಿಸದ ಹಾಗೆ ಕಥೆಯನ್ನು ಹೇಳುತ್ತಾರೆ. ಅವರು ಹೇಳುವುದು ಕಥೆಯೇ ಅಲ್ಲದಿರಬಹುದು. ನಾವು ಓದಿಕೊಳ್ಳುವಾಗ ಅದನ್ನು ನಮ್ಮ ಅನುಕೂಲದಂತೆ ಪುನರ್ನಿರ್ಮಿಸಿಕೊಳ್ಳಬೇಕು.

ವಿವರಗಳಿವೆ, ಆದರೆ ವಿವರಗಳಿಲ್ಲ. ಕಥೆಗಾರ ಇದ್ದಾನೆ, ಕಥೆಗಾರ ನಾಪತ್ತೆಯಾಗುತ್ತಾನೆ, ಮತ್ತೆ ಪ್ರತ್ಯಕ್ಷನಾಗುತ್ತಾನೆ. ವಾಕ್ಯಗಳಿವೆ, ಅವು ವಾಕ್ಯಗಳಂತೆ ಕಾಣುವುದಿಲ್ಲ. ಎಲ್ಲೆಲ್ಲೂ ಒಂದು ರೀತಿಯ ಅಪೂರ್ಣತೆಯಿದೆ. ಒಂದು ಅದ್ಭುತ ಇಮಾರತನ್ನು ಕಟ್ಟುವಾಗ ಅನೇಕ ದೃಷ್ಟಿಗೊಂಬೆಗಳನ್ನು ಕುಂಟಿನಿ ಕೂಡ್ರಿಸುತ್ತಾರೆ. ಅದರೆ ಅಲ್ಲಿ ಆ ದೃಷ್ಟಿಬೊಂಬೆಗಳನ್ನು ಸುಮ್ಮನೆ ಸ್ಥಾಪಿಸುವುದಿಲ್ಲ. ಬದಲಿಗೆ ಆ ಬೊಂಬೆಗಳಿಗೂ ಒಂದು ಕಥೆಯಿದೆ ಎನ್ನುತ್ತಾರೆ. ಒಮ್ಮೊಮ್ಮೆ ಆ ಕಥೆಯನ್ನು ಹೇಳುತ್ತಾರೆ, ಒಮ್ಮೊಮ್ಮೆ ಓದಗನಿಗೇ ಬಿಟ್ಟುಬಿಡುತ್ತಾರೆ. ಆಗಾಗ ಒಂದು ಸವಾಲನ್ನೂ ಎಸೆಯುತ್ತಾರೆ – ತಾಕತ್ತಿದ್ದರೆ ಈ ಕಥೆಯನ್ನು ನೀನೇ ಮುಂದುವರೆಸಿಕೋ – ನೀನೇ ಮುಗಿಸು ಎಂದು ಬಿಟ್ಟೇಬಿಡುತ್ತಾರೆ. ಆ ಕಥೆಯನ್ನು ಮುಗಿಸುವ ಯತ್ನ ಮಾಡುವಷ್ಟರಲ್ಲಿಯೇ ಮತ್ತೊಂದೇನೋ ಸುರುವಾಗಿರುತ್ತೆ. ಪಾತ್ರಗಳು ಬರುತ್ತವೆ, ಒಮ್ಮೊಮ್ಮೆ ಮರುಕಳಿಸುತ್ತವೆ. ಇಪ್ಪತ್ತು ಪುಟಗಳಹಿಂದೆ ಬಿಟ್ಟ ಪಾತ್ರ ಮಾತ್ರೆ ಪ್ರತ್ಯಕ್ಷವಾಗಿ ತನ್ನನ್ನು ತಾನೇ ವಿಸ್ತರಿಸಿಕೊಳ್ಳುತ್ತದೆ.... ಹೀಗಾಗಿಯೇ ಇದನ್ನು ಕಥಾ ಸಂಕಲನ ಎಂದು ಕರೆಯಲು ನನಗೆ ಅಳುಕು.

ಒಂದು ತಕರಾರು. ಈ ಶೈಲಿ ಓದುಗರೊಂದಿಗೆ ಸಂಭಾಷಣೆ ನಡೆಸಲು ಸಾಧ್ಯವಾಗುವ ಶೈಲಿಯಲ್ಲ. ಆದರೆ ಕುಂಟಿನಿಯವರು ಅದನ್ನು ಪರಿಗಣಿಸದೇ ಆಗಾಗ ಓದುಗರೊಂದಿಗೆ ಒಂದು ಒಮ್ಮುಖ ಸಂಭಾಷಣೆಯನ್ನು ನಡೆಸಲು ಪ್ರಯತ್ನಿಸುತ್ತಾರೆ. ಓದುತ್ತಿರುವ ನೀವೇ ಒಬ್ಬ ಓದುಗರೆಂದು ನೀವು ಭಾವಿಸಿ ಕಥೆಯನ್ನು ನಿಮ್ಮ ಮನಸ್ಸಿನಲ್ಲಿ ಪುನರ್ನಿರ್ಮಿಸಿಕೊಳ್ಳುತ್ತಿದ್ದರೆ, ಅತ್ತ ಕಥೆಯಲ್ಲಿಯೂ ಒಬ್ಬ ಓದುಗ ಒಂದು ಪಾತ್ರವಾಗಿ ಇದ್ದಾನೆ (ಇದ್ದಾಳೆ). ಆ ಓದುಗ(ಳಿ)ನಿಗೆ ಕಥೆಗಾರ ಆಗಾಗ ಹೋಗು ಈ ಕಥೆಯನ್ನು ನೀನೇ ಕಟ್ಟಿಕೋ ಎಂದು ಬಿಟ್ಟುಬಿಡುವುದೂ ಉಂಟು. ಒಮ್ಮೊಮ್ಮೆ ಓದುಗ(ಳೊಂ)ನೊಂದಿಗೆ ಏಕಮುಖ ಸಂಭಾಷಣೆಯೂ ಉಂಟು. ಇಲ್ಲಿ ಓದುಗ ಎಂದು ಕರೆದುಕೊಳ್ಳುವ ಒಂದು ಪಾತ್ರ ನಿಮ್ಮ ಓದಿಗೆ ಅಡ್ಡಿಮಾಡುತ್ತಾ ತಲೆಯೆತ್ತುತ್ತಿರುತ್ತದೆ. ಆದರೆ ಕಥೆಗಳ ಗಾಢತೆಯಿಂದಾಗಿ ಈ ಕಿರಿಕಿರಿಗಳನ್ನು ತಡೆದುಕೊಳ್ಳಬಹುದು.

ಪುಟ್ಟ ಪುಟ್ಟ ವಾಕ್ಯಗಳು. ಮೊದಲಿಗೆ ಪುಟ್ಟ ಪುಟ್ಟ ಕಥೆಗಳೂ ಇವೆಯಾದರೂ, ಕಡೆಯ ಕೆಲವು ಕಥೆಗಳು ಅಷ್ಟೇನು ಪುಟ್ಟದಾಗಿಲ್ಲ. ಅಂದರೆ ಅದೇ ಪಾತ್ರ, ಮತ್ತು ಘಟನೆಗಳೊಂದಿಗೆ ಕುಂಟಿನಿ ಹೆಚ್ಚು ಕಾಲ ಕಳೆಯುತ್ತಿದ್ದಾರೆಂದು ಅರ್ಥ. ಪುಟ್ಟ ವಿವರವಾದ ದೃಶ್ಯಗಳು. ಈ ಎಲ್ಲ ದೃಶ್ಯಗಳನ್ನು ನೋಡಿದಾಗ ಒಂದು ವಿಹಂಗಮ ಪ್ರಪಂಚ. ಅಲ್ಲಿ ರಾಜರೂ ಇದ್ದಾರೆ, ಶ್ರೀಸಾಮಾನ್ಯರೂ ಇದ್ದಾರೆ. ದೊಡ್ಡ ತಾತ್ವಿಕ ಸಮಸ್ಯೆಗಳಿವೆ, ಪುಟ್ಟ ದೈನಂದಿನ ಕಿರಿಕಿರಿಗಳೂ ಇವೆ. ಸಂಬಂಧಗಳ ತಳಮಳವಿದೆ, ಹಾಗೂ ಅನೇಕ ಪ್ರಶ್ನೆಗಳಿವೆ. ಇವುಗಳ ಅನುಸಂಧಾನವೇ ಓದುಗನ ಕರ್ತವ್ಯ. ಇಲ್ಲಿ ಓದುಗ ಪ್ಯಾಸಿವ್ ಆಗಿ ಇರಲು ಸಾಧ್ಯವಿಲ್ಲ. ಈ ಕಥೆಗಳನ್ನು ಒಬ್ಬರು ಮತ್ತೊಬ್ಬರಿಗೆ ಜೋರಾಗಿ ಓದಿ ಹೇಳುವುದಕ್ಕೂ ಮಾಡಿದ್ದಲ್ಲ. ಇವು ಖಾಸಗೀ ಓದಿಗೆ. ಖಾಸಗೀ ಮರು ಓದಿಗೆ. ಬೇಕಾದಲ್ಲಿ ತುಂಡರಿಸುವುದಕ್ಕೆ, ಬೇಕಾದಲ್ಲಿ ಲಂಬಿಸುವುದಕ್ಕೆ ಹಾಕಿಕೊಟ್ಟಿರುವ ಆಕರ ರೂಪವಷ್ಟೇ. ಈ ಕಥೆಗಳನ್ನು ಓದುತ್ತಾ ನಾನು ಬರಹಗಾರನಾಗಿದ್ದೇನೆ. ನನ್ನ ಅಂತರಂಗದಲ್ಲಿದ್ದ ಅನೇಕ ವಿಚಾರಗಳನ್ನು, ತತ್ವ ಸಿದ್ಧಾಂತಗಳನ್ನೂ, ದ್ವಂದ್ವಗಳನ್ನು ಈ ಕಥೆಯ ಸಂದರ್ಭದಲ್ಲಿ ಹೊರಗೆಳೆದು ತಂದು ನನ್ನದೇ ಕಥೆಗಳನ್ನು ಕಟ್ಟಿಕೊಂಡಿದ್ದೇನೆ. ಕಟ್ಟಿದ್ದನ್ನು ಮುಂದಿನ ಕಥೆ ಓದುತ್ತಾ ಛಿದ್ರ ಗೊಳಿಸಿದ್ದೇನೆ. ಕುಂಟಿನಿ ಅದಕ್ಕೆ ಒಂದು ಚೌಕಟ್ಟನ್ನೂ ಸಂದರ್ಭವನ್ನು ಒದಗಿಸಿಕೊಟ್ಟಿದ್ದಾರೆ.

ನಿಮ್ಮಲ್ಲಿನ ಕಥೆಗಾರನನ್ನು ಜಗೃತಗೊಳಿಸುವ ಈ ಶೈಲಿ, ಕಥನ ತಂತ್ರ ಹೊಸತು. ಭಿನ್ನವಾದದ್ದು. ಆದರೆ ಇದು ಈ ಪುಸ್ತಕಕ್ಕೇ ಸೀಮಿತವಾಗಲಿ. ಇದೇ ಶೈಲಿ ಮುಂದುವರೆದರೆ ಒಂದು ಏಕತಾನತೆ ಬರಬಹುದಾದ ಸಾಧ್ಯತೆಯಿದೆ. ಈ ಕಥೆಗಳು ನಮ್ಮನ್ನು ಆವರಿಸುವುದೇ ಅದರ ಹೊಸತನ ಮತ್ತು ವಿಭಿನ್ನತೆಯಿಂದಾಗಿ. ಆದರೆ ಈ ಶೈಲಿಯನ್ನು ಕುಂಟಿನಿಯವರನ್ನೊಳಗೊಂಡು ಯಾರಾದರೂ ಮುಂದುವರೆಸಿದರೆ, ಅದೇ ವಿಭಿನ್ನತೆ – ಏಕತಾನತೆಗೆ ಜಾರುವ ಅಪಾಯವಿದೆ. ಕುಂಟಿನಿಯರು ಈ ಕಥೆಗಳ ಮೂಲಕ, ಈ ಕಥನ ತಂತ್ರದ ಮೂಲಕ ಒಂದು ಅದ್ಭುತ ಜಾದೂವನ್ನು ಸೃಷ್ಟಿ ಮಾಡಿದ್ದಾರೆ. ಆದರೆ ಈ ಜಾದೂ ಮುಂದುವರೆಸಿದರೆ ಎಡವುವ ಸಾಧ್ಯತೆ ತುಂಬಾ ಇದೆ. ಹೀಗಾಗಿಯೇ, ಮುಂದೆ ಕುಂಟುನಿಯವರು ಕಥೆಗಳನ್ನು ಬರೆಯುವಾಗ ಈ ಶೈಲಿಯ ಭಂದನದಿಂದ ಮುಕ್ತರಾಗುವ ಅವಶ್ಯಕತೆ ತೀರಾ ಹೆಚ್ಚಾಗಿ ಇದೆ.
ಒಂದು ಭಾನುವಾರ ಮುಂಜಾನೆ ಬೇಗ ಏಳಿ. ಒಂದು ದೊಡ್ಡ ಕಪ್ಪಿನಲ್ಲಿ ಬಿಸಿಬಿಸಿ ಕಾಫಿ ತಯಾರಿಸಿ. ಸುತ್ತಮುತ್ತಲಿನ ಎಲ್ಲ ಶಬ್ದವನ್ನೂ ನಂದಿಸಿ. ಬಾಗಿಲು ಹಾಕಿಕೊಂಡು ಚಿಲಕ ಜಡಿಯಿರಿ. ಈ ಪುಸ್ತಕಗ ಪುಟಗಳನ್ನು ತೆರೆಯಿರಿ, ಓದಿ. ಮತ್ತೆ ಓದಿದ್ದನ್ನೇ ಓದಬೇಕೆನ್ನಿಸಿದರೆ ಮತ್ತೆ ತಿರುವಿಹಾಕಿ. ಹೊಸ ಅರ್ಥ ಸ್ಫುರಿಸಬಹುದು. ಈ ಪುಸ್ತಕವನ್ನು ಎಷ್ಟು ಹೊತ್ತು ಕೈಯಲ್ಲಿ ಹಿಡಿಯುವ ತಾಕತ್ತದೆಯೋ ಅಷ್ಟೂ ಹೊತ್ತು ಹಿಡಿದು ಕುಳಿತುಕೊಳ್ಳಿ. ನಿಮಗೆ ಓದಿನ ಒಂದು ಭಿನ್ನ ಅನುಭವ ಬರುತ್ತದೆ. ಆಗ ನೀವು ನಿಮ್ಮಲ್ಲೇ ಮಾತಾಡಿಕೊಳ್ಳುತ್ತಿರುತ್ತೀರಿ. ಕಥೆಗೆ ನಿಮ್ಮದೇ ಆಯಾಮಗಳನ್ನು ಸೇರಿಸಿಕೊಳ್ಳುತ್ತೀರಿ, ಹಾಗೂ ಅಂತ್ಯವನ್ನು ಭಿನ್ನವಾಗಿ ನೋಡುತ್ತೀರಿ, ಅಥವಾ ಮತ್ತೆ ಬೇರೊಂದೇ ರೀತಿಯಲ್ಲಿ ನಿಮ್ಮ ಕಥೆಗಳನ್ನು ಕಟ್ಟಿಕೊಳ್ಳುತ್ತೀರಿ.
ಕುಂಟಿನಿಯವರು ತಮ್ಮ ಕಥೆಗಳನ್ನು ಹೇಳುತ್ತಿಲ್ಲ. ನಿಮಗೆ ನಿಮ್ಮ ಕಥೆಯನ್ನು ನಿರ್ಮಿಸಿಕೊಳ್ಳಲು ಒಂದು ವೇದಿಕೆಯನ್ನೊದಗಿಸಿಕೊಡುತ್ತೀದ್ದಾರೆ ಅಷ್ಟೇ.

ತಾಜಾತನದಿಂದ ಕೂಡಿರುವ ಈ ಘನವಾದ ಕಥೆಗಳನ್ನು ನಾನು ತುಂಬುಹೃದಯದಿಂದ ಕಥಾಲೋಕಕ್ಕೆ ಸ್ವಾಗತಿಸುತ್ತಿದ್ದೇನೆ. ಕುಂಟಿನಿಯವರ ಈ ವಿಶಾಲ ಮನಸ್ಸನ್ನೂ ಸ್ವಾಗತಿಸುತ್ತಿದ್ದೇನೆ.



   

   

Sunday, July 5, 2015

ಕನಸುಗಾರನ ಏಳು ಬೀಳು: ಮುನ್ನುಡಿ


ಈ ಪುಸ್ತಕಕ್ಕೆ ಮುನ್ನುಡಿ ಬರೆಯುವ ಸಮಯಕ್ಕೆ ತಮ್ಮ ಅಸ್ತಿತ್ವವನ್ನು ನಿರ್ದೇಶಿಸಿದ ಯುಬಿ ಸ್ಪಿರಿಟ್ಸ್ ಕಂಪನಿಯ ನಿರ್ವಹಣಾ ಮಂಡಲಿಯಿಂದ ವಿಜಯ್ ಮಲ್ಯರನ್ನು ಹೊರಹಾಕಬೇಕೆಂಬ ಕೋರಿಕೆ ಬಂದಿದೆ. ಅದು ಸಫಲವಾದರೆ ಈ ಪುಸ್ತಕದ ಶೀರ್ಷಿಕೆ ಸೂಚಿಸುವಂತೆ ಸೊಗಸುಗಾರನ ಏಳೂ, ಬೀಳೂ ಎರಡೂ ಒಂದು ರೀತಿಯಲ್ಲಿ ಸಂಪೂರ್ಣಗೊಂಡಂತಾಗುತ್ತದೆ. ಆದರೂ ವಿಜಯ್ ಮಲ್ಯರನ್ನು ನಾವು ಯಾವುದೇ ರೀತಿಯಲ್ಲಿ ಕಡೆಗಣಿಸುವಂತಿಲ್ಲ. ಅವರು ಯಾವ ರೂಪದಲ್ಲಿ ಹೇಗೆ ವ್ಯಾಪಾರಕ್ಕೆ ವಾಪಸ್ಸಾಗುತ್ತಾರೋ ತಿಳಿಯದಾದರೂ ಈಗ್ಯೆ ಒಂದು ಮಹತ್ವದ ಅಧ್ಯಾಯ ಮುಗಿದಂತೆ ಎಂದೇ ಪರಿಗಣಿಸಬಹುದು. ಇಲ್ಲಿಯವರೆಗೂ ಮಲ್ಯರು ಅನೇಕ ವ್ಯಾಪಾರಗಳನ್ನು ನಿರ್ವಹಿಸಿದ್ದಾರೆ, ಕೆಲವು ವ್ಯಾಪಾರಗಳಲ್ಲಿ ಯಶಸ್ಸೂ ದೊರೆತಿದೆ, ಕೆಲವು ವ್ಯಾಪಾರಗಳಿಂದ ಅವರು ಯಶಸ್ವಿಯಾಗಿ ಹೊರಬಿದ್ದಿದ್ದಾರೆ. ಆದರೆ ಹಿಂದೆಂದೂ ಅವರ ಮೂಲ ವ್ಯಾಪಾರವಾದ ಮದ್ಯದ ಧಂಧೆಯಲ್ಲಿ ಅವರು ಸೋಲನುಭವಿಸಿರಲಿಲ್ಲ. ಅವರ ಯಾವುದೇ ವ್ಯಾಪಾರವೂ ಹಣದ ರಾಶಿಯನ್ನು ಪೂರೈಸುತ್ತಿದ್ದ ಮದ್ಯದ ವ್ಯಾಪಾರವನ್ನು ಸ್ವಾಹಾ ಮಾಡುವಷ್ಟು ಕೆಟ್ಟದಾಗಿಯೂ ಬೇರೆ ವ್ಯಾಪಾರಗಳನ್ನು ಅವರು ನಿರ್ವಹಿಸಿಲಿಲ್ಲ. ಆದರೆ ಈಗ ಮಲ್ಯರಿಗೆ ಅವನತಿಯ ಕಾಲ ಬಂದಂತಿದೆ.

ದೊಡ್ಡ ಉದ್ದಿಮೆದಾರರ ಖಾಸಗೀ ಬದುಕಿನ ಬಗ್ಗೆ ಒಂದು ಕುತೂಹಲವಿದ್ದೇ ಇರುತ್ತದೆ. ಅದರಲ್ಲೂ ಶ್ರೀಮಂತರ ಯಾದಿಗೆ ಸೇರಿದವರು ತಮ್ಮ ಶ್ರೀಮಂತಿಕೆಯನ್ನು ಹೇಗೆ ಬಳಸುತ್ತಾರೆಂಬ ಬಗ್ಗೆ ಕಥೆಗಳೂ ಊಹಾಪೋಹಗಳೂ ಇರುವುದು ಸಹಜವೇ. ನಾರಾಯಣ ಮೂರ್ತಿ, ಅಜೀಂ ಪ್ರೇಂಜಿಗಳು ಸರಳ ಬದುಕಿಗೆ ಹೆಸರಾದವರು. ಅಂಬಾನಿ ಅದಾನಿಯರಿಗೆ ಖಾಸಗೀ ಬದುಕೆಂಬುದೇ ಇಲ್ಲವೆಂಬಂತೆ ಅವರು ಎಚ್ಚರವಿರುವ ಅಷ್ಟೂ ತಾಸು ವ್ಯಾಪಾರದಲ್ಲಿಯೇ ಮುಳುಗಿರುತ್ತಾರೆ. ಕೆಲವರಿಗೆ ತಮ್ಮ ಖಾಸಗೀ ಆಸಕ್ತಿಗಳಿರುತ್ತವೆ. ವಿಜಯಪತ್ ಸಿಂಘಾನಿಯಾಗೆ ಒಂಟಿಯಾಗಿ ವಿಮಾನ ಹಾರಿಸುವ ಹುಚ್ಚು - ರಿಚರ್ಡ್ ಬ್ರಾನ್ಸನ್ ಗೆ ಸಾಹಸ ಕ್ರೀಡೆಗಳಲ್ಲಿ ಆಸಕ್ತಿ. ಆಧ್ಯಾತ್ಮ, ಗಾಲ್ಫ್, ಸಂಗೀತ, ನಾಟಕ, ಸಿನೇಮಾ, ಹೀಗೆ ವ್ಯಾಪಾರದಲ್ಲಿರುವ ಶ್ರೀಮಂತರ ಆಸಕ್ತಿಗಳೂ ವಿಭಿನ್ನ. ಈ ಹೊರಗಿನ ಆಸಕ್ತಿಗಳು ವ್ಯಾಪಾರಕ್ಕೆ ಧಕ್ಕೆ ತರದಂತೆ ನೋಡಿಕೊಳ್ಳವ ಜಾಗ್ರತೆಯನ್ನು ಸಾಮಾನ್ಯವಾಗಿ ವ್ಯಾಪಾರಿಗಳು ಕೈಗೊಳ್ಳುತ್ತಾರೆ. ಆದರೆ ತಮ್ಮ ಖಾಸಗೀ ಬದುಕಿನ ಶೈಲಿಯನ್ನು ವ್ಯಾಪಾರಕ್ಕೆ ಅಳವಡಿಸಿದಾಗ ಏನು ತೊಂದರೆಯಾಗಬಹುದು ಎನ್ನುವುದೇ ವಿಜಯ ಮಲ್ಯರ ಬದುಕಿನ ಪಾಠ ಎನ್ನಿಸುತ್ತದೆ. ಹೀಗಾಗಿಯೇ ಅವರು ತಮ್ಮ ವಿಮಾನಯಾನ ಸಂಸ್ಥೆಯನ್ನು ಒಬ್ಬ ಗ್ರಾಹಕನ ದೃಷ್ಟಿಯಿಂದ ನೋಡಿದರೇ ವಿನಃ ಅದರ ಲಾಭನಷ್ಟಗಳೇನೆಂದು ನಿಷ್ಠುರವಾಗಿ ನೋಡುವ ವ್ಯಾಪಾರಿ ದೃಷ್ಟಿಯಿಂದ ನೋಡಲಿಲ್ಲವೇನೋ. ಅದರಿಂದಾಗಿ, ತಮ್ಮ ಐಷಾರಾಮವನ್ನು ವ್ಯಾಪಾರದಲ್ಲಿ ಅಳವಡಿಸಲು ಹೋಗಿ ಮಲ್ಯರು ಸೋತಿರಬಹುದು.

ನಾನು ವಿದ್ಯಾರ್ಥಿಯಾಗಿದ್ದಾಗ ನಮ್ಮ ಸಂಸ್ಥೆಗೆ ಮಲ್ಯರನ್ನು ಕರೆಯಿಸಲಾಗಿತ್ತು. ಅವರು ವೃತ್ತಿಪರ ಯುವಕರು ಪಾಲಿಸಬೇಕಾದ ಮೌಲ್ಯಗಳು  ಎನ್ನುವ ವಿಷಯದ ಬಗ್ಗೆ ಮಾತನಾಡಬೇಕಿತ್ತು. ಮಲ್ಯರು ತಮ್ಮ ಬೆಂಜ್ ಕಾರಲ್ಲಿ ಬಂದರು. ತಮ್ಮ ವಿಶಿಷ್ಯ ಶೋಕಿಯ ಶೈಲಿಯಲ್ಲಿ ಹಸಿರು ಬಣ್ಣದ ಟೈ, ಬೂದು ಬಣ್ಣದ ಸೂಟು ಧರಿಸಿದ್ದರು. ಕೋಟಿನ ಒಳಜೇಬಿನಿಂದ ತಾವು ಬರೆದು ತಂದಿದ್ದ ಭಾಷಣವನ್ನು ನಿರರ್ಗಳವಾಗಿ ಓದಿದರು. ವಿದ್ಯಾರ್ಥಿಗಳು ಪಾಲಿಸಬೇಕಾದ ಮೌಲ್ಯಗಳ ಬಗ್ಗೆ ಹೇಳಿದರು. ಅವರು ಆಗಷ್ಟೇ ಬರ್ಜರ್ ಜೆನ್ಸನ್ ನಿಕಲ್ಸನ್ ಕಂಪನಿಯನ್ನು ಖರೀದಿಸಿದ್ದರು. ಕೊಂಡುಕೊಳ್ಳಲಿರುವ ಕಂಪನಿಯ ಆಸ್ತಿಯನ್ನೇ ಅಡ ಇಟ್ಟು ಅದರ ಮೇಲೆ ಸಾಲಪಡೆದು ಸ್ವಾಮ್ಯ ಪಡೆಯಬಹುದಾದ ಲಿವರೇಜ್ಢ್ ಬೈ ಔಟ್ ಎನ್ನುವ ಕ್ಲಿಷ್ಟ ಪದ್ದತಿಯ ಬಗ್ಗೆ ನಮಗೆ ಸರಳವಾಗಿ ವಿವರಿಸಿದರು. ಕಡೆಗೂ ಮಾತು ಮುಗಿದು ಪ್ರಶ್ನೋತ್ತರದ ವೇಳೆಯಲ್ಲಿ ಮಲ್ಯರು ಆಗ್ಗೆ ಕಣ್ಣು ಹಾಕಿದ್ದರೆನ್ನಲಾದ ಐಡಿಯಲ್ ಜಾವಾ ಕಂಪನಿಯ ಬಗ್ಗೆ ಪ್ರಶ್ನೆ ಉದ್ಭವವಾಯಿತು. ಅದಕ್ಕೆ ಆತ ನಾನು ನನ್ನ ವೃತ್ತಿಯನ್ನು ಪ್ರಾರಂಭಿಸಿದಾಗ ನಮ್ಮಪ್ಪ ನನ್ನನ್ನು ಮಾರಾಟದ ಕೆಲಸಕ್ಕೆ ಹಾಕಿದ್ದರು. ಓಡಾಡಲು ಗಾಡಿ ಬೇಕೆಂದು ನಾನು ಕೇಳಿದ್ದಕ್ಕೆ ಒಂದು ಜಾವಾ ಬೈಕ್ ಕೊಡಿಸಿದ್ದರು. ಆ ಬೈಕ್ ಬಗ್ಗೆ ನನಗೆ ತುಂಬಾ ಪ್ರೀತಿಯಿತ್ತು. ಈಗ ಆ ಕಂಪನಿ ತೊಂದರೆಯಲ್ಲಿದೆ ಎಂದು ತಿಳಿದು ಬಂದಿದೆ. ಹಳೆಯ ನೆನಪಿಗೊಸ್ಕರ ಅದನ್ನು ಖರೀದಿಸಲೂ ಬಹುದು ಎಂದು ಉತ್ತರಿಸಿದ್ದರು. ಅವರು ಆ ಉತ್ತರವನ್ನು ಲಘುವಾಗಿ ನೀಡಿದ್ದರಾದರೂ, ಅವರ ವ್ಯಾಪಾರದ ವೈಖರಿ ಹಾಗೇ ಇತ್ತೆಂದು ಈ ಪುಸ್ತಕ ಓದಿದಾಗ ನಮಗೆ ಮನವರಿಕೆಯಾಗುತ್ತದೆ. ಒಬ್ಬ ವಿದ್ಯಾರ್ಥಿ ಮಲ್ಯರ ಕಾರುಗಳು, ಕುದರೆಗಳು ಮತ್ತು ಬೈಕಿನ ಪ್ರೀತಿಯ ಬಗ್ಗೆ ಮಾತಾಡಲಿಲ್ಲವಲ್ಲ ಎಂದು ಕೇಳಿದ. ಅದಕ್ಕೆ ಯುವ ವಿದ್ಯಾರ್ಥಿಗಳು ಪಾಲಿಸಬೇಕಾದ ಮೌಲ್ಯಗಳು ಅವು ಅಲ್ಲವಾದ್ದರಿಂದ ಆ ಬಗ್ಗೆ ಮಾತಾಡಲಿಲ್ಲ. ನಾನು ಭಾಷಣವನ್ನು ತಯಾರು ಮಾಡಿ ತಂದದ್ದೂ ಅದೇ ಕಾರಣವಾಗಿ. ನೀವು ಪಾಲಿಸಬೇಕಾದ ಮೌಲ್ಯಗಳ ಬಗ್ಗೆ ನಾನು ಯೋಚಿಸಬೇಕಾಯಿತು, ಅವು ನಾನು ಪಾಲಿಸವ ಮೌಲ್ಯಗಳಲ್ಲ..ಎಂದೂ ಒಂದು ಚಟಾಕಿ ಹಾರಿಸಿದ್ದರು.

ಮಲ್ಯರು ವಿವರಿಸುತ್ತಿದ್ದ ಲಿವರೇಜ್ಡ್ ಬೈ ಔಟ್ ಪದ್ಧತಿಯೇ, ಅವರ ಜೀವನಶೈಲಿಯಲ್ಲಿಯೂ ಇತ್ತು. ಹೀಗಾಗಿಯೇ ಇಂದಿನ ಐಷಾರಾಮವು ಕಾಣಿಸುತ್ತು ಹಾಗೂ ನಾಳಿನ ಬಗೆಗಿನ ಚಿಂತೆಯು ಕಾಣುತ್ತಿರಲಿಲ್ಲ. ಮದ್ಯದ ವ್ಯಾಪಾರದಲ್ಲಿ ಬರುತ್ತಿದ್ದ ಅತೀ ಹೆಚ್ಚಿನ ಲಾಭದಿಂದಾಗಿ ಅವರ ಇತರ ವ್ಯಾಪಾರದಲ್ಲಿನ ಗೆಲುವು ಸೋಲುಗಳ ಪರಾಮರ್ಶೆಯೂ ಸಮರ್ಪಕವಾಗಿ ನಡೆಯಲಿಲ್ಲ. ಕಡೆಗೂ ಅವರು ಮಣ್ಣುಮುಕ್ಕಲು ಒಂದು ವಿಮಾನಯಾನ ಸಂಸ್ಥೆಯೇ ಬೇಕಾಯಿತು. ಅತೀ ಕಡಿಮೆ ಲಾಭಾಂಶವಿರುವ, ದುಡ್ಡನ್ನು ನೀರಿನಂತೆ ನುಂಗುವ ವ್ಯಾಪಾರವಾದ ವಿಮಾನಯಾನದ ವ್ಯಾಪಾರದಲ್ಲಿ ಕೈ ಸುಟ್ಟುಕೊಂಡದ್ದು ಮತ್ತದರ ಫಲವಾಗಿ ತಮ್ಮ ಮದ್ಯದ ವ್ಯಾಪಾರವನ್ನೂ ಕಳೆದುಕೊಳ್ಳುವ ಪರಿಸ್ಥಿತಿ ಮುಟ್ಟಿದ್ದು ಈಗ ಸರ್ವವಿದಿತ.

ಕಿಂಗ್-ಫಿಶರ್ ಏರ್ಲೈನ್ಸ್ ಒಂದು ರೀತಿಯಲ್ಲಿ ಮಲ್ಯರ ಜೀವನವನ್ನು ಫಾಸ್ಟ್ ಫಾರ್ವಡ್ ಮಾಡಿ ನೋಡಿದಂತಿತ್ತು. ಅತ್ಯಂತ ಯಶಸ್ವೀ ಸಂಸ್ಥೆಯಾಗಿ, ಅತ್ಯಂತ ಐಷಾರಾಮಿ ಪದ್ಧತಿಗಳನ್ನು ಅನುಸರಿಸುತ್ತಿದ್ದ ಸಂಸ್ಥೆಯಾಗಿ, ಇದ್ದ ಎಲ್ಲ ವಿಮಾನಯಾನ ಸಂಸ್ಥೆಗಳಿಗೂ ನಿದ್ದೆಗೆಡಿಸಿ, ಪ್ರಯಾಣಿಕರಿಗೆ ಪ್ರೀತಿಯ-ಐಷಾರಾಮದ ವಿಮಾನಯಾನ ಒದಗಿಸುವ ಸಂಸ್ಥೆ ಏನೂ ಇಲ್ಲವಾಗಿ ನಾಶನವಾಗಿಹೋಯಿತು. ಗ್ರಾಹಕರನ್ನು ಮಹಾರಾಜರಂತೆ ನೋಡಿಕೊಳ್ಳುವ, ಆದರೆ ಅವರಿಂದ ಅದಕ್ಕೆ ತಕ್ಕ ಬೆಲೆಯನ್ನು ಪಡೆಯಲಾರದ, ವಿಪರೀತ ಹೆಚ್ಚಿನ ಸಿಬ್ಬಂದಿ ಹೊಂದಿದ್ದ ಈ ಸಂಸ್ಥೆ ಭೂಮಿಗಿಳಿಯದೇ ಆಕಾಶದಲ್ಲೇ ತೇಲಾಡುತ್ತಿತ್ತು. ಆದರೆ ಆ ಸಂಸ್ಥೆ ಕುಸಿದಾಗ ಮಲ್ಯ ಕಟ್ಟಿದ್ದ ಸಾಮ್ರಾಜ್ಯವನ್ನು ಮುಳುಗಿಸಿಯೇ ಹೋಯಿತು.


ಇಂಥ ಜೀವನ ಶೈಲಿಯ – ವ್ಯಾಪಾರಿಯ ಕಥೆಯನ್ನು ಕೆ ಗಿರಿಪ್ರಕಾಶ್ ಅವರು ಪುಸ್ತಕರೂಪಕ್ಕೆ ಇಳಿಸಿದ್ದಾರೆ. ಈ ಪುಸ್ತಕದ ಒಂದೊಂದು ಅಧ್ಯಾಯದಲ್ಲೂ ಮಲ್ಯರ ಒಂದೊಂದು ವ್ಯಾಪಾರದ ಏಳು ಬೀಳಿನ ಬಗ್ಗೆ ಅವರು ಚರ್ಚಿಸಿದ್ದಾರೆ. ಮಲ್ಯರ ವ್ಯಕ್ತಿತ್ವ, ಚಾಣಾಕ್ಷತನ, ವ್ಯಾಪಾರೀ ಧೋರಣೆ, ಐಷಾರಾಮ, ಎಲ್ಲ ವಿವರಗಳನ್ನೂ ಗಿರಿಪ್ರಕಾಶ್ ಅಧ್ಯಯನ ಮಾಡಿ ಸುಲಭವಾಗಿ ದಕ್ಕುವಂತೆ ಓದುಗರಿಗೆ ಉಣಬಡಿಸಿದ್ದಾರೆ. ಮಲ್ಯರ ಜೀವನದಲ್ಲಿ ಅನೇಕ ರೋಚಕ ಘಟನೆಗಳು ನಡೆದಿದ್ದರೂ ಗಿರಿಪ್ರಕಾಶ್ ರೋಚಕತೆಗೆ ಮಣಿದಿಲ್ಲ. ಲಕ್ಷ್ಮೀ ಮಿತ್ತಲ್ ಬಗ್ಗೆ ಬಂದಿರುವ ಕೋಲ್ಡ್ ಸ್ಟೀಲ್, ಸುಬ್ರತೋ ರಾಯ್ ಬಗ್ಗೆ ಬಂದಿರುವ ಸಹಾರಾ – ದ ಅನ್ ಟೋಲ್ಡ್ ಸ್ಟೋರಿಯಂತಹ ಪುಸ್ತಕಗಳಿಗೆ ಹೋಲಿಸಿದರೆ ಈ ಪುಸ್ತಕ ಡ್ರಾಮಾದಿಂದ ಮುಕ್ತವಾಗಿದೆ. ಆ ಎರಡೂ ಪುಸ್ತಕಗಳು, ಹಾಗೂ ಈ ರೀತಿಯ ವ್ಯಾಪಾರಿಗಳ ಜೀವನಶೈಲಿಯ ಬಗೆಗೆ ಬಂದಿರುವ ಅನೇಕ ಪುಸ್ತಕಗಳ ನಿರೂಪಣೆಯಲ್ಲಿ ಒಂದು ಪತ್ತೇದಾರಿ ಕಾದಂಬಿರಿಯ ಶೈಲಿಯನ್ನು ಅನುಸರಿಸುವ ಗೋಜಿಗೆ ಗಿರಿಪ್ರಕಾಶ್ ಹೋಗಿಲ್ಲ. ಆದರೂ ಆ ಶೈಲಿ ಕೆಲ ಭಾಗಗಳಲ್ಲಿ ಕಾಣಿಸಿಕೊಳ್ಳುತ್ತದೆ.

ಮಲ್ಯರ ಬಾಲ್ಯ, ಅವರ ತಂದೆಯೊಂದಿಗಿನ ಸಂಬಂಧ, ಅವರ ಧೋರಣೆಯನ್ನು ಗ್ರಹಿಸುತ್ತ ಪ್ರಾರಂಭವಾಗುವ ಪುಸ್ತಕ, ಒಂದು ಜೀವನ ಚರಿತ್ರೆಯಂತೆ ಓದಿಸಿಕೊಳ್ಳಬಹುದಿತ್ತು. ಆದರೆ ಇದು ಬಿಡಿಬಿಡಿ ಕಥೆಗಳ ಕಥಾಸಂಕಲನವಿದ್ದಂತಿದೆ. ಇದಕ್ಕೆ ಗಿರಿಪ್ರಕಾಶ್ ಅನುಸರಿಸಿರುವ ಶೈಲಿಯೇ ಕಾರಣವಾಗಿದೆ. ಪ್ರತಿ ಅಧ್ಯಾಯದಲ್ಲಿ ಮಲ್ಯರ ಒಂದು ವ್ಯಾಪಾರದ ಬಗ್ಗೆ ಗಿರಿಪ್ರಕಾಶ್ ಚರ್ಚಿಸುತ್ತಾರೆ. ಆದರೆ ಆ ವ್ಯಾಪಾರಕ್ಕೂ, ಮಲ್ಯರ ಇತರ ವ್ಯಾಪಾರಗಳಿಗೂ, ಮಲ್ಯರ ಒಟ್ಟಾರೆ ವ್ಯಾಪಾರಿ ದೃಷ್ಟಿಗೂ ಕೊಂಡಿಗಳನ್ನು ಅವರು ಹಾಕಲು ಪ್ರಯತ್ನಸುವುದಿಲ್ಲ. ಹೀಗಾಗಿ  ನಮಗೆ ಮಲ್ಯರ ಒಟ್ಟಾರೆ ವ್ಯಾಪಾರಿ ಸಾಮ್ರಾಜ್ಯದ ಬಗ್ಗೆ ಒಂದು ವಿಹಂಗಮ ನೋಟ ಸಿಗುವುದಿಲ್ಲ. ಆ ಕೊಂಡಿಗಳು ಇದ್ದಿದ್ದರೆ ಪುಸ್ತಕ ಇನ್ನೂ ಸರಳವಾಗಿ ಓದಿಸಿಕೊಂಡು ಹೋಗುವುದಲ್ಲದೇ ಹೆಚ್ಚು ಉಪಯುಕ್ತವಾಗೂ ಇರುತ್ತಿತ್ತು.

ಈ ಪುಸ್ತಕವನ್ನು ಗೆಳೆಯರಾದ ಬಿಎಸ್ ಜಯಪ್ರಕಾಶ ನಾರಾಯಣ ಕನ್ನಡಕ್ಕೆ ತಂದಿದ್ದಾರೆ. ಅನುವಾದಕರಾಗಿ ಅವರು ಕನ್ನಡೀಕರಿಸುತ್ತಿರುವ ಭಿನ್ನ ಪುಸ್ತಕಗಳು ನಮಗೆ ಮುಖ್ಯವೂ ಅವಶ್ಯಕವೂ ಆಗಿವೆ. ಬೇರೆಬೇರೆ ಮೂಲಗಳಿಂದ ಬರಬಹುದಾದ ಅನುಭವಗಳನ್ನು ನಮ್ಮ ಭಾಷೆಯಲ್ಲಿಯೇ ಸರಳವಾಗಿ ಓದಲು ಸಾಧ್ಯವಾದರೆ ನಮಗೆ ಓದಿನ ಆಯ್ಕೆಯೂ ಹೆಚ್ಚುತ್ತದೆ, ವಿಷಯ ವೈವಿಧ್ಯವೂ ದೊರೆಯುತ್ತದೆ. ವಿಜಯ್ ಮಲ್ಯ ಒಂದು ರೀತಿಯಿಂದ ಬೆಂಗಳೂರಿಗರು, ಕನ್ನಡಿಗರು ಎನ್ನುವ ಕಾರಣಕ್ಕಾಗಿ ಈ ಪುಸ್ತಕದ ಮಹತ್ವ ತುಸು ಹೆಚ್ಚಾಗುತ್ತಾದರೂ, ಒಬ್ಬ ವ್ಯಾಪಾರಿಯ ಜೀವನ, ಮನೋಧರ್ಮ, ವ್ಯಾಪಾರೀ ಯೋಜನೆಗಳನ್ನು ಅರಿಯಲು ಈ ಪುಸ್ತಕ ಅನುವು ಮಾಡಿಕೊಟ್ಟದೆ. ಜೆಪಿ ಭಿನ್ನ ಭಾಷೆಯನ್ನೇ ಉಪಯೋಗಿಸುವ ವ್ಯಾಪಾರೀ ಜಗತ್ತನ್ನು ತಮ್ಮ ಸರಳ ಮತ್ತು ಆಪ್ಯಾಯಮಾನವಾದ ಶೈಲಿಯಲ್ಲಿ ಕನ್ನಡೀಕರಿಸಿದ್ದಾರೆ.


ವಿಜಯ್ ಮಲ್ಯರು ತಮ್ಮ ಬದುಕಿನ ಶೈಲಿಯಿಂದಾಗಿ ತುಸು ಹೆಚ್ಚೇ ಸುದ್ದಿಯಲ್ಲಿರುತ್ತಾರೆ. ಹೀಗಾಗಿ ಅವರ ಬಗ್ಗೆ ಬರೆಯುವಾಗ ಅದನ್ನು ಒಂದು ಗಾಸಿಪ್ ಕಾಲಂನಂತೆ, ಪೇಜ್ 3 ವರದಿಯಂತೆ ಬರೆಯುವ ಅಪಾಯವಿದ್ದೇ ಇದೆ. ಆದರೆ ಆ ದಿಕ್ಕಿಗೆ ಹೋಗದೇ, ಅವರ ವ್ಯಪಾರದ ಬಗ್ಗೆ ವಸ್ತುನಿಷ್ಠವಾಗಿ ಬರೆದಿರುವ ಗಿರಿಪ್ರಕಾಶ್ ಅವರನ್ನೂ, ಸಮರ್ಥವಾಗಿ ಅನುವಾದಿಸಿರುವ ಜೆಪಿ ಅವರನ್ನು ಅಭಿನಂದಿಸುತ್ತೇನೆ. ಕನ್ನಡ ಭಾಷೆಯಲ್ಲಿನ ಓದಿನ ವೈವಿಧ್ಯಕ್ಕೆ ಈ ಪುಸ್ತಕದ ಕೊಡುಗೆ ಮುಖ್ಯವಾದದ್ದು ಮತ್ತು ಮಹತ್ವದ್ದು ಎಂದು ಭಾವಿಸಿದ್ದೇನೆ.



Tuesday, December 17, 2013

ರಶೀದ್: ಕವಿತೆಗಳು ನೆಪಮಾತ್ರ

ಅಬ್ದುಲ್ ರಶೀದ್ ಎಂದರೆ ನಮಗೆಲ್ಲಾ ಏನೇನೋ. ಶ್ರೀನಿವಾಸರಾಜು ಮೇಷ್ಟ್ರು ತಮ್ಮ ಮೌನದ ನಡವೆ ಹೆಮ್ಮೆಯಿಂದ ಎತ್ತುತ್ತಿದ್ದ ಹೆಸರು, ಕಿ.ರಂ.ಗೆ ಪುಳಕವುಂಟುಮಾಡುವಂತಹ ಕವಿತೆಗಳನ್ನೂ, ಬರವಣಿಗೆಯನ್ನೂ ಬರೆಯುತ್ತಿದ್ದ ಹೆಸರು, ಭಾಷೆಯನ್ನು ತನ್ನ ಸುಪರ್ದಿನಲ್ಲಿಟ್ಟು ಪದಜೋಡಣೆಯಿಂದಲೇ ಒಂದು ಅದ್ಭತ ದೃಶ್ಯವನ್ನು ನಮ್ಮ ಮುಂದಿಡಬಹುದಾದ ಒಂದು ಪ್ರತಿಭೆ. ಅಷ್ಟೇ ಅಲ್ಲ – ರಶೀದ್ ಎಂದರೆ ಜನರ ಬಗೆಗಿನ ನಿರಂತರ ಕುತೂಹಲ: ಅದು ಅವರ ಪಯಣಗಳ ಕಾಲುಚಕ್ರ. ಹಳ್ಳಿರೇಡಿಯೋ ಮೂಲಕ ಕಂಡ ಬುಡಕಟ್ಟು ಜನಾಂಗದವರ ಜೀವನಚಿತ್ರ. ಲಡಾಕಿನಲ್ಲಿ, ಶೀಲಾಂಗಿನಲ್ಲಿ, ಮೇಘಾಲಯದಲ್ಲಿ ಸಿರಿಯಾದಲ್ಲಿ ಕಂಡುಬಂದ ಜನ. ಕೆಲವು ಕವಿತೆಯ ರೂಪದಲ್ಲಿ, ಕೆಲವು ಅಂಕಣರೂಪದಲ್ಲಿ, ಮತ್ತು ಕೆಲವು ಕೇವಲ ಅವರ ಕ್ಯಾಮರಾದಿಂದ ಬಂದ ದೃಶ್ಯಗಳು.

ಆಕಾಶವಾಣಿಯಂತಹ ಶ್ರಾವ್ಯ ಮಾಧ್ಯಮಗಲ್ಲಿ ಈವರೆಗೆ ದುಡಿಯುತ್ತಿದ್ದರೂ, ಅಲ್ಲಿಯ ಶ್ರವಣದ ಮೂಲಕವೇ ನಮಗೆ ದೃಶ್ಯವನ್ನು ಒದಗಿಸಿದ ಒಬ್ಬ ಮಹಾ ಪ್ರತಿಭಾವಂತ. ನಾವು ರಶೀದರ ಸೃಜನಶೀಲ ಪಯಣದಲ್ಲಿ ಅವರ ಗ್ರಾಹಕರು. ಗ್ರಾಹಕ ಅನ್ನುವ ಪದವನ್ನು ಕನ್ಸ್ಯೂಮರ್ ಅನ್ನುವ ಪರಿಮಿತಿಯಿಂತ ನೋಡದೇ, ವಿಸ್ತಾರವಾದ ಅರ್ಥದಲ್ಲಿ ಸಾಹಿತ್ಯ-ಬರವಣಿಗೆಯ ಅಕ್ಷರಗುಚ್ಛ-ಛಾಯಾಚಿತ್ರಗಳು-ಕಿವಿಯ ಮೇಲೆ ಬಿದ್ದ ಆಕಾಶವಾಣಿಯ ತರಂಗಗಳು-ಪದಗಳ ಜೋಡಣೆಯ ಅರ್ಥವಿನ್ಯಾಸವಲ್ಲದೇ ಅದರ ಸುತ್ತಿರುವ ದೃಶ್ಯವಿನ್ಯಾಸ ಇವುಗಳನ್ನೆಲ್ಲಾ ಗ್ರಹಿಸುವವರೆಂದು ನಾವು ಅರ್ಥೈಸಿದಾಗ ಗ್ರಾಹಕನಿಗೊಂದು ವಿಸ್ತಾರವಾದ ಕ್ಯಾನ್ವಾಸ್ ಸಿಗುತ್ತದೆ. ರಶೀದರು ತಮ್ಮ ಗ್ರಾಹಕರ ಒಂದು ಇಂದ್ರಿಯವನ್ನಾಕ್ರಮಿಸುತ್ತಾರೆಂದರೆ ಅದು ನೋಟಕ್ಕೆ ಸಂಬಂಧಿಸಿದ್ದು. ಯಾವುದನ್ನೂ ಕಣ್ಣಿಗೆ ಕಟ್ಟುವುದು ಅವರ ಸೃಜನಶೀಲ ಪಯಣದ ಮುಖ್ಯ ವ್ಯಸನವಾಗಿದೆ ಎಂದು ನನಗನ್ನಿಸುತ್ತದೆ. ಹೀಗಾಗಿಯೇ ರಶೀದರು ಬಳಸುವ ಪದಪುಂಜದಲ್ಲಿ ಗ್ರಾಹಕ ಪದಕ್ಕಿರುವ ಕನ್ಸ್ಯೂಮರ್ ಅನ್ನುವದಕ್ಕಿಂದ ಹಿರಿದಾದ ಅರ್ಥವಿಸ್ತರಣೆ ನಮಗೆ ಕಾಣಿಸುತ್ತಾ, ಅದು ಎಳೆಎಳೆಯಾಗಿ ಬಿಡಿಸಿಕೊಳ್ಳುತ್ತಾ ಬೆರಗುಗೊಳಿಸುತ್ತಾ ಹೋಗುತ್ತದೆ.

ಉದಾಹರಣೆಗೆ ಕೆಂಡಸಂಪಿಗೆಯನ್ನೇ ತೆಗೊಳ್ಳೋಣ. ಕನ್ನಡ ಜಾಲತಾಣಕ್ಕೆ ಒಂದು ಹೊಸ ಎಸ್ತಟಿಕ್ಸನ್ನ ಆ ಪ್ರಯೋಗ
ಒದಗಿಸಿಕೊಟ್ಟಿತ್ತು. ಹೊಸ ಎಸ್ತಟಿಕ್ಸ್ ನಮಗೆ ಜಾಲತಾಣ ಕಾಣುವ ರೀತಿಯಲ್ಲಿ, ಆದರಲ್ಲಿ ಬರುತ್ತಿದ್ದ ಭಿನ್ನ ರೀತಿಯ ಬರವಣಿಗೆಗಳಲ್ಲಿ, ಅದು ಪರಿಚಯಿಸಿದ ಹೊಸ ಪ್ರತಿಭೆಗಳಲ್ಲಿ, ಇದ್ದ ಸಿದ್ಧ ಬರಹಗಾರರ ಮೂಲಕ ಕಾಣಿಸಿದ ಹೊಸ ಬರವಣಿಗೆಗಳಲ್ಲಿ. ಆದರೆ ರಶೀದರ ಸೃಜನಶೀಲತೆಯ ಹಿಂದೆ ಒಂದು ತುಂಟ ಮನಸ್ಸೂ ಇದೆ. ಆ ತುಂಟತನವೇ ಅವರ ಬರವಣಿಗೆಯ ಗಾಂಭೀರ್ಯವನ್ನೂ ವಿಸ್ತರಿಸುತ್ತದೆ. ಆ ತುಂಟ ಮನಸ್ಸು ಎರಡು ರೀತಿಯಲ್ಲಿ ಕೆಲಸ ಮಾಡುತ್ತದೆ.

ಖಾಸಗಿಯಾಗಿ ಅವರ ತುಂಟತನ ಗೆಳೆಯರಾದ ನಮಗೆ ಕಾಣಿಸುತ್ತಿತ್ತಾದರೂ ಸಾರ್ವಜನಿಕವಾಗಿ ಆ ತುಂಟತನ ಕಂಡದ್ದು ಕೆಂಡಸಂಪಿಗೆಯ ಎಟಿಕೆಟ್ಟಿನಲ್ಲಿ. ಕೆಂಡಸಂಪಿಗೆಯ ಹೂರಣ, ಓರಣಕ್ಕೆ ಗಾಂಭೀರ್ಯವನ್ನೂ ಎಸ್ತಟಿಕ್ಸನ್ನೂ ತಂದ ರಶೀದ್ ಆ ಗಾಂಭೀರ್ಯವನ್ನು ಕೆಳಗೆ ಎಗ್ಗಿಲ್ಲದೇ ಬರುತ್ತಿದ್ದ ಜನರ ಪ್ರತಿಕ್ರಿಯೆಗಳಿಗೆ ಕತ್ತರಿ ಹಾಕದೇ ದೊಡ್ಡ ದೊಡ್ಡ ಲೇಖಕರ ಗರ್ವಭಂಗ ಮಾಡಿದರು. ಅಲ್ಲಿ ಅವರ ಎಸ್ತಟಿಕ್ಸು ಗೆರೆಯ ಮೇಲಕ್ಕೆ ಸೀಮಿತವಾಗಿತ್ತು. ಲೇಖನ ಮುಗಿದ ಗೆರೆಯಡಿಯಲ್ಲಿ ನಮಗೆ ಕಂಡದ್ದು ನಿರರ್ಗಳ-ನಿರ್ಭಿಡೆ. ಆಗಾಗ ಪ್ರತಿಕ್ರಿಯೆಗಳನ್ನು ತಡೆಹಿಡಿವ ಪ್ರಯೋಗವನ್ನು ಮಾಡಿದರೂ ಅವರೊಳಗಿನ ತುಂಟ ಹೀಗೆ ಉದ್ದೀಪನಗೊಳ್ಳುತ್ತಲೇ ಇದ್ದ.

ರಶೀದರ ತುಂಟತನ ಸೃಜನಶೀಲರೂಪ ಪಡೆದದ್ದೇ ಭಿನ್ನರೀತಿಯಲ್ಲಿ. ಅವರ ಈ ತನಕದ ಕವಿತೆಗಳ ಪುಸ್ತಕ – ನರಕದ ಕೆನ್ನಾಲಿಗೆಯಂತ ನಿನ್ನ ಬೆನ್ನಹುರಿಯನ್ನು ಅವರು ಅರ್ಪಿಸಿರುವುದು ನಕ್ಷತ್ರ ಮತ್ತು ಇತರ ದುಷ್ಟದೇವತೆಗಳಿಗೆಅದೇ ನಕ್ಷತ್ರಳೇ ಇವರಿಗೆ ಬೆನ್ನುಡಿಯನ್ನೂ ಬರೆದಿದ್ದಾಳೆ. ಆದರೆ ನಕ್ಷತ್ರ ಯಾರು ಎನ್ನುವ ಕುತೂಹಲವನ್ನು ರಶೀದ್ ಉಳಿಸಿಕೊಳ್ಳುವುದಲ್ಲದೇ ಬೆಳೆಸುತ್ತಲೂ ಹೋಗುತ್ತಾರೆ. ತಮ್ಮ ಪ್ರಸ್ತಾವನೆಯ ಮಾತುಗಳಲ್ಲಿಯೂ ನಕ್ಷತ್ರಳ ಹೆಸರು ಬರುತ್ತದೆ. ಜೊತೆಗೆ ತಾನೇ ನಕ್ಷತ್ರಳಲ್ಲ ಎನ್ನುವ ವಾದವನ್ನೂ ರಶೀದ್ ಮಾಡುತ್ತಾರೆ. ಅದರ ಸತ್ಯಾಸತ್ಯತೆ ಕಂಡುಕೊಳ್ಳಬೇಕಾದ್ದು ನಮ್ಮ ಕೆಲಸವಲ್ಲ. ಅದರ ಅವಶ್ಯಕತೆಯೂ ಇಲ್ಲ. ಯಾಕೆಂದರೆ ಲಂಕೇಶ್ ಪತ್ರಿಕೆಯಲ್ಲಿ ಮಿಂಚುತ್ತಿದ್ದ ನೀಲು, ನಿಮ್ಮಿಗಳ್ಯಾರೆಂದು ಕಾಲಾನುಕ್ರಮೇಣ ನಮಗೆ ತಿಳಿದು ಬಂತು. ಹಾಗೆಯೇ ಒಂದಿಲ್ಲೊಂದು ದಿನ ನಕ್ಷತ್ರಳ (ಅಥವಾ ನಕ್ಷತ್ರನ) ಗುಟ್ಟೂ ರಟ್ಟಾಗಬಹುದು. ರಟ್ಟಾಗದಿದ್ದರೂ ಪರವಾಗಿಲ್ಲ. ಆದರೆ ನಕ್ಷತ್ರಳ ನೆಪದಲ್ಲಿ  ಅವರ ಸೃಜನಶೀಲ ತುಂಟತನದ ಚರ್ಚೆಯನ್ನು ಮಾಡುವುದು ಅವಶ್ಯಕ. ಅದನ್ನು ಭಟ್ಟರಲ್ಲಿಗೆ ತಂದಿಡೋಣ.

ರಶೀದರ ಕವಿತೆಗಳ ಪುಸ್ತಕ ಬಿಡುಗಡೆಯ ಸಮಯಕ್ಕೆ ಮಾತನಾಡಿದ ನಾನು ಅವರ ಮೂಲ ಹಸ್ತಪ್ರತಿಯಿಂದ ನನಗೆ ತುಂಬಾ ಹಿಡಿಸಿದ ಒಂದು ಕವಿತೆಯನ್ನು ಹೆಕ್ಕಿದ್ದೆ. ಅದರ ಹೆಸರು ಚೆಲುವೆ ಹೆಂಡತಿಗೆ ಬರೆದ ಕವಿತೆಆದರೆ ಛಾಪಾಗಿದ್ದ ಪುಸ್ತಕವನ್ನು ನಾನು ಕೈಯಲ್ಲಿ ಹಿಡಿದಾಗ ನನಗೆ  ಚೆಲುವೆ ಹೆಂಡತಿಯ ಮಂದೆ ಭಟ್ಟರುಬಂದು ನಿಂತದ್ದು ಕಾಣಿಸಿತು. ಆ ಬಗ್ಗೆ ನಾನು ಪ್ರಸ್ತಾಪಿಸಿ, ಇದ್ದಕ್ಕಿದ್ದಹಾಗೆ ರಶೀದರೇ ಬರೆದಿದ್ದ ಚೆಲುವೆ ಹಂಡತಿಯನ್ನು ಭಟ್ಟರ ಪಾಲಾಗಿಸಿದ್ದು ಏಕೆನ್ನುವ ಅನುಮಾನವನ್ನು ಸಹಜವಾಗಿ ಸಭೆಯ ಮುಂದಿಟ್ಟೆ. ಅದಕ್ಕೆ ರಶೀದರ ಸಮಜಾಯಿಷಿಯಲ್ಲಿಯೇ ಅವರ ತಂಟತನ ಕಂಡುಬಂತು. ಇದು ತಾನು ಕೆಂಡಸಂಪಿಗೆಯಲ್ಲಿ ಮಹಾಲಿಂಗೇಶ್ವರ ಭಟ್ ಎಂಬ ಹೆಸರಿನಲ್ಲಿ ಬರೆದ ಕವಿತೆಯಾದ್ದರಿಂದ ಭಟ್ಟರ ಹೆಸರನ್ನು ಕವಿತೆಯ ಮೊದಲಿಗೇ ಜೊಡಿಸಿದ್ದೆಂದು ಅಬ್ದುಲ್ ರಶೀದ್ ಭಟ್ ಹೇಳಿದರು! ಆ ಕವಿತೆಯನ್ನು ಇನ್ನೊಮ್ಮೆ ಆಸ್ವಾದಿಸೋಣ:

ಚೆಲುವೆ ಹೆಂಡತಿಗೆ ಒಂದು ಕವಿತೆ
ನಿನ್ನ ನೆನೆದೊಡೆ ಎನಗೆಂಥ ಮಂದಹಾಸ.
ಎಂಥ ಕಣ್ಣೀರು, ನಾಟಕದಂತಹ ರೊಚ್ಚೆ ಅಳು!


ಈಗಷ್ಟೆ ಅಡಿಕೆಯ ಪಾತಿಗೆ ನೀರೆರೆದು,
ಆಳು ಮಕ್ಕಳಿಗಿಷ್ಟು ಅಶ್ಲೀಲವಾಗಿ ಜರೆದು,
ಅಳುವ ಮಗುವ ತುಟಿಗೊಂದಿಷ್ಟು ಮೊಲೆಯ ತೊಟ್ಟನು
ತುರುಕಿ ಅದಕೂ ಬೈದು, ಉಣ್ಣಿ ಕಚ್ಚಿದ ಮೊಣಗಂಟನ್ನು 
ತುರಿಸುತ್ತಾ ಬಂದವಳೆ. ‘ಕಂಡೆಯಾ ಎನ್ನ ಹೆಂಗಸ್ತನ’ ಅಂದವಳೆ!
ನಿನ್ನ ನೆನೆದೊಡೆ ಎನಗೆಂಥ ಮಂದಹಾಸ.

ಆಹಾ ಎಷ್ಟು ನಯ, ವಿನಯ, ಕೊಂಕು, 
ಶೇಲೆ, ಹಣೆಯ ಕುಂಕುಮ, ಕರಿಮಣಿ,
ಕಾಲ ಉಂಗುರ ಈಗ ತಾನೇ ಹಸೆಯಿಂದೆದ್ದು 
ಬಂದ ನಾಚುಗೆ, ಕೊರಳಲ್ಲಿ ಬೆವರ ಸಾಲೆ
ನಿನ್ನ ಕೊಂಡಾಟವ ಇಂದು ಮುಂಜಾವ ಕಂಡಿಲ್ಲವೇನೇ
ಬೆಳಕು ಹರಿವಷ್ಟೂ ಹೊತ್ತು ಜರೆದು, ಉಗುರಿಂದ ಸಿಗಿದು,
ಇದು ಆ ಕ್ಷತವೆಂದು ಇದು ಈ ಕ್ಷತವೆಂದು
ಎದೆಯಲ್ಲಿ ನೂರು ಅರೆ ಚಂದ್ರಗಳ ಎಳೆದು
ಮೇಲೆ ಬಂದು ಮಥಿಸಿ ಕೊಟ್ಟಿಗೆಗೆ ಸಗಣಿ ಬಾಚಲು ಹೋದವಳು
ನೀನಲ್ಲವೇನೇ. ನಿನ್ನ ನೆನೆದೊಡೆ ಎನಗೆಂಥ ಮಂದಹಾಸ.

-ಮಹಾಲಿಂಗೇಶ್ವರ ಭಟ್

ಹೀಗಾಗಿಯೇ ಈ ಮಹಾಲಿಂಗೇಶ್ವರ ಭಟ್ ಅವರ ಹಿನ್ನೆಲೆಯಲ್ಲಿ ನಾವು ನಕ್ಷತ್ರಳನ್ನು ಅನುಮಾನದಿಂದ ನೋಡಬೇಕಾಗುತ್ತದೆ. ರಶೀದರ ನಡುವಯಸ್ಕ ಹೃದಯಕ್ಕೆ ನಾನಾ ರೀತಿಯಲ್ಲಿ ಘಾತವುಂಟುಮಾಡಿ ಅದರಿಂದಲೇ ಕವಿತೆಯನ್ನು ಹೊರಡಿಸುವ – ಈಬದಿಯಂದಾಬದಿಗೆ ಆಬದಿಯಿಂದೀಬದಿಗೆ ಕವಿತೆಗಳನ್ನು ಬರೆಯಿಸುವ ಜುಗಲ್ ಬಂದಿಯನ್ನು ಸ್ವಾಗತಿಸುತ್ತಲೇ ನಮ್ಮ ಅನುಮಾನವನ್ನು ಹಿಂದಕ್ಕಟ್ಟಬೇಕಾಗುತ್ತದೆ. ಅದು ಅಂತಿರಲಿ – ಈ ಮಹಾಲಿಂಗೇಶ್ವರ ಭಟ್ ಕವಿತೆಯಲ್ಲಿರುವ ಎರಡು ಭಾಗಗಳಲ್ಲಿನ ವೈರುಧ್ಯತೆಯನ್ನು ನೋಡಿ. ಮೊದಲನೆಯದ್ದು ದೈನಿಕವನ್ನೇ ಕವಿತೆಯನ್ನಾಗಿಸಿರುವ ಪರಿ. ಅಲ್ಲಿ ಹೆಂಡತಿ ಆಳು ಮಕ್ಕಳಿಗಿಷ್ಟು ಅಶ್ಲೀಲವಾಗಿ ಜರೆದು ಅಳುವ ಮಗುವಿನ ತುಟಿಗೊಂದಿಷ್ಟು ಮೊಲೆಯ ತೊಟ್ಟನು ತುರುಕುತ್ತಾಳೆ. ಅ ವಾಸ್ತವವನ್ನು ಶಿಷ್ಟವಾಗಿ ಕವಿತೆಯಲ್ಲಿ ಬಣ್ಣಿಸುವ ಪರಿ ಎರಡನೆಯ ಭಾಗದಲ್ಲಿ ನಮಗೆ ಕಾಣಿಸುತ್ತದೆ. ಇದನ್ನು ಓದಿದಾಗ ತಿರುಮಲೇಶರ ಒಂದು ಪದ್ಯದ ಸಾಲುಗಳು ಸಹಜವಾಗಿಯೇ ನೆನಪಾಗುತ್ತದೆ. ಪರಕಾಯ ಪ್ರವೇಶ ಎಂಬ ಕವಿತೆಯ ಸಾಲುಗಳು ಹೀಗಿವೆ:

...... ಅಶ್ವಿನಿಗೆ ಮಾತ್ರ
 ಕುಂಡೆಯಲ್ಲೊಂದು ಕುರುವಾದ್ದರಿಂದ
ಒಂದು ಥರ ಲಾಸ್ಯದಲ್ಲಿ ನಡೆಯುತ್ತಾಳೆ
ಒಂದು ಥರ ಆಲಸ್ಯದಲ್ಲಿ ಕುಳಿತುಕೊಳ್ಳತ್ತಾಳೆ
ಪ್ರೇಕ್ಷಕರು ದಂಗಾಗಿದ್ದಾರೆ! ಇಂಥ ಮಾದಕ
ಭಂಗಿಯನ್ನು ಅವರು ಇದುತನಕ
ನೋಡಿಯೇ ಇಲ್ಲ!.......

ರಶೀದ್ ಕವಿಯಾಗಿ, ಲೇಖಕನಾಗಿ ಬೆಳೆಯುವುದಿಲ್ಲ. ಇಂಥ ದೈತ್ಯ ಪ್ರತಿಭೆಯುಳ್ಳ ಯುವಕರು ಎಂದೂ ಮುದಿಯಾಗುವುದಿಲ್ಲ. ಜಯಂತ ಕಾಯ್ಕಿಣಿಯಾಗಲೀ ಅಬ್ದುಲ್ ರಶೀದ್ ಆಗಲೀ ತಮ್ಮ ಸಹಜ ಪ್ರತಿಭೆಯನ್ನು ವಿಸ್ತರಿಸಿಕೊಳ್ಳುತ್ತಾ ಹೋಗುತ್ತಾರೆ. ಹೀಗಾಗಿಯೇ ಮೊದಲ ಸಂಕಲನದಲ್ಲಿರುವ ಕವಿತೆಯ ಬೆರಗು ಇತ್ತೀಚಿನ ಕವಿತೆಯಲ್ಲೂ ಕಾಣಬಹುದು. ನಡುವಯಸ್ಸಿನಲ್ಲಿ ಬರೆದ ಕವಿತೆಯ ಗಾಂಭೀರ್ಯ ಮತ್ತು ಪ್ರಬುದ್ಧತೆ ಟೀನೇಜ್ ಕವಿತೆಗಳಲ್ಲೂ ಕಾಣಿಸುತ್ತದೆ. ಅಂದರೆ ಬಹುಬೇಗನೆ ಜೀವನದ ಕಾಣ್ಕೆಯ ಪ್ರಬುದ್ಧತೆ ಇದ್ದಾಗ್ಯೂ ಅದಮ್ಯ ಕುತೂಹಲ ಮತ್ತು ಜೀವನಪ್ರೀತಿ ಈ ಲೇಖಕರನ್ನು ಸದಾ ತಾಜಾತನದಲ್ಲಿಟ್ಟಿರುತ್ತವೆ.

ಇದಕ್ಕೆ ಉದಾಹರಣೆಯಾಗಿ ಎರಡು ಪದ್ಯಗಳ ಕೆಲವು ಸಾಲುಗಳನ್ನು ಕೊಡುತ್ತೇನೆ. ಮೊದಲನೆಯದು ತಮ್ಮ ಮೊದಲ ಕವಿತೆಯಾದ ನನ್ನ ಪಾಡಿಗೆ ನಾನು ಕವಿತೆಯದ್ದು:
ನನ್ನ ಪಾಡಿಗೆ ನಾನು ನನ್ನ ಪಾಡಿಗೆ ಹೋಗಿ
ನನ್ನ ಉಮ್ಮನ ಮುಂದೆ ಅತ್ತುಬಿಡುವೆ
ಅತ್ತು ಅತ್ತೂ ಅವಳ ಅಲಿಕತ್ತ ತೂತಕ್ಕೆ
ಕೈಯಿಕ್ಕಿ ಎಳೆದೆಳೆದು ನಕ್ಕು ಬರುವೆ.


ಈ ಕೆಳಗಿರುವ ಸಾಲುಗಳು ಶ್ರೀನಿವಾಸರಾಜು ಮೇಷ್ಟರಿಗೆ ನಮಸ್ಕಾರ ಕವಿತೆಯದ್ದು:
ಸುಮ್ಮನೆ ಮೇಷ್ಟರ ಕಾಲಬಳಿ ಕುಳಿತು ಅಥವಾ ಅವರ ಕೈತುತ್ತಿನಂತಹ
ವಾತ್ಸಲ್ಯ ಉಂಡು ಯಾಕೆ ಬೆನ್ನುತಡವಿಸಿಕೊಂಡು ಬರಲಾಗುತ್ತಿಲ್ಲ

ಈ ಎರಡೂ ಕವಿತೆಯ ಸಾಲುಗಳ ನಡುವೆ ಅನೇಕ ವರ್ಷಗಳ ಸಮಯ ಕಳೆದಿದೆ. ಆದರೆ ಆ ಸಾಲುಗಳನ್ನು ಬರೆದಿರುವ ಹುಡುಗನ ಮುಗ್ಧತೆ ಮುಂದುವರೆದಿದೆ. ಅವರ ಮೊದಲ ಸಂಕಲನಕ್ಕೆ ಮುನ್ನುಡಿ ಬರೆದ ಕಿ.ರಂ 1992ರಲ್ಲಿ ಬರೆದದ್ದು ಈ ಸಾಲುಗಳು:

ಈ ಸಂಕಲನದ ಕವಿತೆಗಳಲ್ಲಿ ಮೇಲಿಂದ ಮೇಲೆ ಮುಗ್ಧ ಹುಡುಗನೊಬ್ಬ ಕಾಣಿಸುತ್ತಾನೆ. ಆ ಹುಡುಗ ಇಲ್ಲಿನ ಕವಿತೆಗಳ ಕೇಂದ್ರ. ಅವನು ಒಳಗೊಳ್ಳುವ ಅನೇಕ ಸಂಬಂಧಗಳು ಈ ಕವಿತೆಗಳ ಮುಖ್ಯ ಆವರಣ. ಈ ಆವರಣದಲ್ಲಿ ಹುಡುಗ ಅತ್ಯಂತ ಸಾಚಾ ಆದ ತನ್ನ ಆಲೋಚನೆಗಳಿಗೆ, ಅನುಭವಗಳಿಗೆ ಎದುರಾಗುತ್ತಾನೆ. ಮುಗ್ಧತೆ ಅನುಭವಗಳನ್ನು, ಅದರ ಸೂಕ್ಷ್ಮತೆಗಳನ್ನು ಗಾಢವಾಗಿ ಒಳಗೊಳ್ಳಲು ತಕ್ಕ ಒಂದು ಅವಸ್ಥೆ ಎಂಬುದು ಆ ಹುಡುಗನ ಮೂಲಕ ತಿಳಿಯುತ್ತದೆ. ಮುಗ್ಧ ಅನುಭವ ಒಂದು ತಾತ್ವಿಕವಾದ ಸೆಲೆಯನ್ನು ಕಟ್ಟಿಕೊಡುವಷ್ಟು ಸೂಕ್ಷ್ಮತೆಯನ್ನು ಪಡೆದುಕೊಂಡಿರುವುದು ಇಲ್ಲಿನ ವಿಶಿಷ್ಟತೆ.

ಆ ಮಾತುಗಳು ಇಂದಿಗೂ ವರ್ತಿಸುತ್ತವೆ. ಹುಡುಗ ಹುಡುಗಿಗೆ ನಿವೇದಿಸಿಕೊಳ್ಳುತ್ತಿರುವಂತೆಯೇ ಬೆಳೆದು ಬಂದಿರುವ ರಶೀದರ ಕಾವ್ಯಮಾರ್ಗದಲ್ಲಿ ಆ ಮುಗ್ಧತೆಯೂ ಇದೆ, ಬೆರಗೂ ಇದೆ, ಅದು ಕಾಣಿಸುವ ಪ್ರಬುದ್ಧತೆಯೂ ಇದೆ. ಹೀಗಾಗಿಯೇ ಆತ ಮೋಹಿತನಾಗಿಯೇ ಉಳಿದು ಹಾಗೆಯೇ ಬೆಳೆದುಬಿಡುತ್ತಾನೆ.
ಅವರ ಈ ತನಕದ ಕವಿತೆಗಳಲ್ಲಿ ಇದುವರೆಗೆ ಬರೆದ ಎಲ್ಲ ಕವಿತೆಗಳೂ ಇಲ್ಲಿಲ್ಲ….. ಕೆಲವನ್ನು ನಾನೇ ನುಂಗಿ ನೀರು ಕುಡಿದಿರುವೆಎನ್ನುತ್ತಾರೆ. ಮೊದಲ ಸಂಕಲನದಲ್ಲಿ ಇರುವ, ಅವರೀಗ ನುಂಗಿರುವ ಒಂದು ಕವಿತೆಯನ್ನು ಇಲ್ಲಿ ಉಲ್ಲೇಖಿಸುತ್ತೇನೆ. ಇದನ್ನು ಯಾಕೆ ನುಂಗಿದರೆಂದು ನನಗಿನ್ನೂ ಅರ್ಥವಾಗುತ್ತಿಲ್ಲ.

ಮಳೆ

ಇಂದು ಎನಗೆ ಇಂಥ ಸುಖವು ಬಂತೆ ಎಲ್ಲಿಂದ!
ಪರಮಾತ್ಮನಿಂದ, ಮಣ್ಣಿನಿಂದ ಮಳೆ ಹಾತೆ ನಿನ್ನಿಂದ
ಹಾತೆ ಬಂದರೂ ಮಳೆಯ ಸುಳಿವೇ ಇಲ್ಲ ಯಾಕಣ್ಣಾ?
ತಂಗಿ ಎನಗೆ ಇಂಥ ಸುಖವು ಬಂತೆ ಎಲ್ಲಿಂದ?

ತಂಗಿ, ತಂಗಿ, ನಿನ್ನ ಮೋಹಕೆ ಮಳೆಯು ಸುರಿದಿಲ್ಲ
ಅಲ್ಲಿ ಬಂದಂಥ ಮಳೆಯು ಇಲ್ಲಿ ಬಂದಿಲ್ಲ
ಅವಳು ಬಂದಳು ಅವಳೂರಿನಿಂದ ಮಳೆಯ ಊರಿಂದ ತಂಗಿ
ಮಳೆಯ ಹನಿಗಳು ಸೋಕುತಿಹವು ಮುಡಿಯ ಮೇಲಿಂದ.

ಮುಡಿಯೆ ಮುಡಿಯೆ ಮುಗಿಲು ಮಿಂಚೇ
ಗುಡುಗು ಮೇಲಿಂದ, ಬಿದಿರುಮಳೆಗೆ ಸಿಡಿಲು
ಮಿಂಚೆ ಅವಳ ಊರಿಂದ ತಂಗಿ,
ಬಿದಿರು ಹೂವು ಚುಕ್ಕೆ ಹಾಗೆ ಎತ್ತಿ ಮುಡಿಯಿಂದ
ಮಳೆಯ ಹಾಗೆ ಮುಡಿಯ ಅಲುಗಿಸು
ಎದೆಯ ಮೇಲೆಲ್ಲಾ.

ಅಣ್ಣ ಅಣ್ಣ ಹಾತೆ ಬಂದರೂ ಮಳೆಯ ಸುಳಿವಿಲ್ಲ
ತಂಗಿ ತಂಗಿ ಅವಳು ಬಂದಳು ಮಳೆಯ ಊರಿಂದ
ಇಲ್ಲಿ ಬಂದಂಥ ಮಳೆಯು ಎಲ್ಲು ಬಂದಿಲ್ಲ
ಬಿದಿರು ಮಳೆಯ ಹೂವು ಮಳೆಯು ಒದ್ದೆ ಮೈಯೆಲ್ಲಾ
ಹನಿಯು ಹನಿಯು ಒದ್ದೆ ಹುಡುಗಿ ಸುರಿವನಗೆಯೆಲ್ಲಾ

ಹೀಗೆ ಮಳೆಯನ್ನೇ ನುಂಗಿದ ನೀರುಕುಡಿದ ರಶೀದರ ವಿರಳ ಕವಿತೆಗಳು ನಮಗೆ ಪುಸ್ತಕರೂಪದಲ್ಲಿ ಈಗ ಸಿಗುತ್ತಿದೆ. ರಶೀದರ ತುಂಟತನವಲ್ಲದ, ತುಂಟತನವಿಲ್ಲದ ಈ ಬರವಣಿಗೆಯನ್ನು ನಾವು ಸಂಭ್ರಮಿಸಬೇಕು. ಅಷ್ಟೇ. ಆ ಅಪ್ಪಟ ಸಂಭ್ರಮಕ್ಕೆ ಆಹ್ವಾನಪತ್ರಿಕೆ ಈ ಲೇಖನ.