ಕಳೆದ ವರ್ಷ ಜೇಮ್ಸ್ ಲೇನ್ ಬರೆದ "Shivaji: Hindu King in Islamic India” ಎಂಬ ಪುಸ್ತಕದಲ್ಲಿ ಭಂಡಾರ್ಕರ್ ಅಧ್ಯಯನ ಸಂಸ್ಥೆಯ ಶ್ರೀಕಾಂತ್ ಬಹೂಳ್ಕರ್ ಎಂಬ ಸಂಶೂಧಕರಿಗೆ ಧನ್ಯವಾದ ಹೇಳಿದ್ದೇ ಸಾಕೆಂಬಂತೆ ಇಡೀ ಸಂಸ್ಠೆಯನ್ನೇ ಸಾಂಭಾಜಿ ಬ್ರಿಗೇಡಿನವರು ಇಟ್ಟಾಡಿಬಿಟ್ಟಿದ್ದರು. ಆದ್ದರಿಂದಲೇ ಗುಹಾ ಹೇಳುತ್ತಾರೆ: “Students and professors alike would choose to write on 'The Dissolution of the Princely Order' rather than on 'Vallabhbhai Patel and the Dissolution of the Princely Order'. ಹೀಗಾಗಿ ಗುಹಾ ಹೇಳುವುದು ಜೀವನ ಚರಿತ್ರೆ ಬರೆಯುವುದು - ಅದಕ್ಕಿಂತ ಹೆಚ್ಚಾಗಿ ಅದನ್ನು ಪ್ರಕಟಿಸುವುದು ಪ್ರಪಂಚದ ಈ ಭಾಗದಲ್ಲಿ ಬಹಳ ಕಷ್ಟದ ಹಾಗೂ ಅಪಾಯದಿಂದ ಕೂಡಿದ ವಿಷಯ. ಹಾಗೆ - ಅಪರೂಪವಾಗಿ ಆತ್ಮಚರಿತ್ರೆ ಬರೆಯುವ ಸಾಹಸ ಮಾಡಿದವರೂ ಎಷ್ಟೋಬಾರಿ ಕತ್ತಿಯ ಮೇಲಿನ ನಡಿಗೆಯಂತೆ - ಯಾರನ್ನೂ ನೋಯಿಸದೆ, ಹಾವೂ ಸಾಯದೆ ಕೋಲೂ ಮುರಿಯದೇ ಮುಂದುವರಯುವ ಕಾರ್ಯ ಮಾಡಬೇಕು. ಇದೂ ಸಾಲದೆಂಬಂತೆ ಆಡುವುದೊಂದು ಅದರ ಅರ್ಥವೇ ಇನ್ನೊಂದೆಂದು ಜೀವನ ನಡೆಸುವ ನಮ್ಮ ಪರಿಸರದಲ್ಲಿ ನಂಬಲರ್ಹವಾದಂತೆ ಬರೆಯುವುದು ಕಷ್ಟದ ಮಾತೇ. ಹಾಗೆ ಬರೆದಾಗಲೂ ಎಲ್ಲ ಚೆನ್ನುಚೆನ್ನಾಗಿ ಮುದ್ದುಮುದ್ದಾಗಿ ಬರೆದು ಮುಗಿಸುತ್ತೇವೆ. ಹಿಂದೆ ತಿರುಮಲೇಶ ಗಾಂಧಿಯ ಆತ್ಮಕಥೆಯನ್ನು ಹಿನ್ನೆಲೆಯಾಗಿಟ್ಟುಕೊಂಡು "Autobiography's Truth: The Story of Gandhi's Experiments” ಎಂಬ ಅತ್ಯುತ್ತಮ ಪ್ರಬಂಧವನ್ನ ಭಾಷಾಶಾಸ್ತ್ರದ ದೃಷ್ಟಿಯಿಂದ ಇಂಗ್ಲೀಷಿನಲ್ಲಿ ಬರೆದಿದ್ದು ನನಗೆ ನೆನಪು.
ನಾನು ಇಷ್ಟೆಲ್ಲಾ ಪೀಠಿಕೆ ಹಾಕುವುದಕ್ಕೆ ಕಾರಣ ಇತ್ತೀಚೆಗೆ ಓದಿದ ಎರಡು ಪುಸ್ತಕಗಳು. ಮೊದಲನೆಯದು ಟಿ.ಜೆ.ಎಸ್. ಜಾರ್ಜ್ ಬರದ ಎಂ.ಎಸ್. ಸುಬ್ಬುಲಕ್ಷ್ಮಿಯವರ ಜೀವನ ಚರಿತ್ರೆ "MS: A Life in Music”. ಇನ್ನೊಂದು ಮಲ್ಲಿಕಾರ್ಜುನ ಮನ್ಸೂರರ ೧೯೮೪ರಲ್ಲಿ ಪ್ರಕಟಗೊಂಡಿದ್ದ "ನನ್ನ ಜೀವನ ರಸಯಾತ್ರೆ"ಯ ಇಂಗ್ಲಿಷ್ ಅನುವಾದ 2005ರಲ್ಲಿ ಪ್ರಕಟಗೊಂಡ "Rasa Yatra: My Journey in Music”. ಈ ಎರಡೂ ಪುಸ್ತಕಗಳನ್ನು ಓದಿದಾಗ ಜೀವನಚರಿತ್ರೆಯ ಮಿತಿಗಳು ಸ್ಪಷ್ಟವಾಗಿ ಕಂಡುಬರುತ್ತವೆ. ಆದರೂ ಎರಡೂ ಪುಸ್ತಕಗಳು ತಮ್ಮದೇ ವಿಶಿಷ್ಟ ರೀತಿಯಲ್ಲಿ ಓದುಗನನ್ನು ಸೆಳೆಯುತ್ತವೆ.
ಮೊದಲಿಗೆ ಎಂ.ಎಸ್.ಸುಬ್ಬುಲಕ್ಷ್ಮಿಯವರ ಜೀವನ ಚರಿತ್ರೆಯನ್ನ ನೋಡೋಣ. ಇದು ಆತ್ಮಚರಿತ್ರೆ ಅಲ್ಲವಾದ್ದರಿಂದ, ಇದರಲ್ಲಿ ನೆನಪಿನ ಪಾತ್ರಕ್ಕೆ ಮಹತ್ವವಿಲ್ಲ. ಬೇರೊಬ್ಬರ ಜೀವನದ ಬಗ್ಗೆ ಬರೆಯಬೇಕಾದರೆ ಬಹಳಷ್ಟು ಸಂಶೋಧನೆ

ಕಡೆಗೂ ಜಾರ್ಜ್ ತಮ್ಮ ಸಂಶೋಧನೆಯನ್ನ ಕೈ ಬಿಡದೇ ಮುಂದುವರೆಸಿದ್ದರ ಫಲವಾಗಿಎಂ.ಎಸ್.ಸುಬ್ಬುಲಕ್ಷ್ಮಿಯವರ ಜೀವನ ಚರಿತ್ರೆ ನಮ್ಮ ಕೈಯಲ್ಲಿದೆ. ಸರಳ ಶೈಲಿಯಲ್ಲಿ ಬರೆದಿರುವ ಈ ಜೀವನಚರಿತ್ರೆ ನಮಗೆ ಸುಬ್ಬುಲಕ್ಷ್ಮಿಯವರ ವ್ಯಕ್ತಿತ್ವದ ಬಗೆಗೆ ಅನೇಕ ಒಳನೋಟಗಳನ್ನು ಒದಗಿಸಿಕೊಡುತ್ತದೆ. ನಮಗೆಲ್ಲ ತಿಳಿಯದ ಎಷ್ಟೋ ಪುಟ್ಟ ಪುಟ್ಟ ವಿವರಗಳು ಈ ಪುಸ್ತಕದಲ್ಲಿದೆ. ಸುಬ್ಬುಲಕ್ಷ್ಮಿಯವರ ಜೀವನ ಎಷ್ಟು ಸಾಂಪ್ರದಾಯಿಕವಾಗಿ ನಮಗೆ ಕಾಣಿಸುತ್ತದೋ, ಅಷ್ಟೇ ಕುತೂಹಲ ಮತ್ತು ರೋಮಾಂಚನದಿಂದ ಕೂಡಿತ್ತು. ಸುಬ್ಬುಲಕ್ಷ್ಮಿಯವರ ಪೂರ್ಣ ಹೆಸರು ಮದುರೈ ಶಣ್ಮುಗವಡಿವು ಸುಬ್ಬುಲಕ್ಷ್ಮಿ - ಊರ ಹೆಸರಿನ ಜೊತೆ ತಾಯಿಯ ಹೆಸರನ್ನು ಸಹಜವಾಗಿ ಜೋಡಿಸಿಕೊಂಡಿರುವುದನ್ನು ನಾವು ಗಮನಿಸಿಬೇಕು. ಅವರ ಜೀವನದ ಮೊದಲ ಘಟ್ಟದ ಕೆಲವು ವಿವರಗಳನ್ನು ಓದಿದಾಗ - ಈಗ ಸ್ತ್ರೀವಾದಿಗಳೆನ್ನಿಸಿ ಕೊಳ್ಳುವವರು ಮಾಡಬಹುದಾದುದ್ದನ್ನು ಆಕೆ ಅರವತ್ತು-ಎಪ್ಪತ್ತು ವರ್ಷಗಳ ಹಿಂದೆಯೇ ಮಾಡಿಬಿಟ್ಟಿದ್ದರು ಎಂಬುದು ನಮ್ಮ ಮನಸ್ಸಿಗೆ ತಟ್ಟುತ್ತದೆ.
ಸುಬ್ಬುಲಕ್ಷ್ಮಿಯವರು "ಮನೋರಂಜನೆ ಒದಗಿಸುವ ದೇವಸ್ಥಾನದಲ್ಲಿ ಹಾಡುವ" ಮನೆಯಲ್ಲಿ ಹುಟ್ಟಿದ್ದರಾದ್ದರಿಂದ ಆಕೆಗೆ ಬಹುಶಃ ತಂದೆಯ ಹೆಸರು ಇಟ್ಟುಕೊಳ್ಳುವ ಅವಕಾಶವಾಗಲೀ, ಅವಶ್ಯಕತೆಯಾಗಲೀ ಒದಗಿಬರಲಿಲ್ಲವೆನ್ನಿಸುತ್ತದೆ. ಷಣ್ಮುಗವಡಿವುವಿನ ಹೆಸರಿನ ಜೊತೆ ಪುಷ್ಪವನಂ ಐಯ್ಯರ್ ಹಾಗೂ ಸುಬ್ರಮಣಿಯ ಐಯ್ಯರ್ ಇಬ್ಬರ ಹೆಸರುಗಳು ಚಾಲ್ತಿಯಲ್ಲಿದ್ದರೂ,ಸುಬ್ಬುಲಕ್ಷ್ಮಿಯವರು ಮಾತ್ರ ತಾವು ಸುಬ್ರಮಣಿಯ ಐಯ್ಯರ್ ಸಂತಾನವೆಂದು ಹೇಳಿಕೊಂಡಿದ್ದರಂತೆ. ಇದನ್ನು ನಾವೆಲ್ಲರೂ ಒಪ್ಪಿ ಸುಮ್ಮನಿರಬೇಕು ಎಂಬುದು ಜಾರ್ಜ್ ಅಭಿಪ್ರಾಯ. ಕೆಲ ಉತ್ಸಾಹಿಗಳು ಎಂ.ಎಸ್. ಹೆಸರನ್ನು ಮದುರೈ ಸುಬ್ರಮಣಿಯ ಐಯ್ಯರ್ ಸುಬ್ಬುಲಕ್ಷ್ಮಿ ಎಂದು ಬದಲಾಯಿಸಲು ನೋಡಿದರೂ ಸುಬ್ಬುಲಕ್ಷ್ಮಿಯವರು ಮಾತ್ರ ತಮ್ಮ ತಾಯಿಯ ಹೆಸರನ್ನೇ ಖಾಯಂ ಆಗಿ ತಮ್ಮ ಹೆಸರಿನೊಂದಿಗೆ ಜೋಡಿಸಿಕೊಂಡೇ ಮುಂದುವರೆದರು.
ತಮ್ಮ ದೇವದಾಸಿ ಪರಂಪರೆಯನ್ನು ಮುಂದುವರೆಸುತ್ತಾ ಸುಬ್ಬುಲಕ್ಷ್ಮಿಯವರನ್ನು ರಾಮನಾಥಪುರಂನ ರಾಜಾ ಸಂಸಾರಕ್ಕೆ ದೇಣಿಗೆಯಾಗಿ ಕೊಡಬೇಕೆಂದು ಷಣ್ಮುಗವಡಿವು ನಿರ್ಧರಿಸಿದಾಗ ಸುಬ್ಬುಲಕ್ಷ್ಮಿಯವರು "ಬೇಡ, ಇದು ಆಗುವುದಿಲ್ಲ" ಎಂದಷ್ಟೇ ಸ್ಪಷ್ಟವಾಗಿ ಹೇಳಿ ಸುಮ್ಮನಾದರಂತೆ. ಕಿರುಚಿದ್ದಿಲ್ಲ, ಕೂಗಿದ್ದಿಲ್ಲ, ರಾದ್ಧಾಂತ ಮಾಡಿದ್ದಿಲ್ಲ - ಕೇವಲ "ನನ್ನ ಸಂಗೀತ ಕಲಿಕೆ ಮುಂದುವರೆಯಬೇಕು" ಎಂದಷ್ಟೇ ಹೇಳಿದರಂತೆ. ಆಗ ಆ ಮದುವೆ ನಡೆಯಲಿಲ್ಲ. ಸುಬ್ಬುಲಕ್ಷ್ಮಿಯವರ ಸಂಗೀತ ಸಾಧನೆ ಮುಂದುವರೆಯುತ್ತಿದ್ದು,ಕುಂಭಕೋಣ ಮಹಾಮಹಂನಲ್ಲಿ, ಕಡೆಗೆ ಮದರಾಸು ಮ್ಯುಸಿಕ್ ಅಕಾದಮಿಯಲ್ಲಿ ಕಛೇರಿ ಕೊಟ್ಟ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಗಳಿಸಿದಾಗ್ಯೂ ತಾಯಿಗೆ ಮನಸ್ಸಿನಲ್ಲಿದ್ದದ್ದು ಮಗಳ ಮದುವೆಯ ಯೋಚನೆ ಮಾತ್ರ. ಹೀಗಾಗಿ ಮಗಳನ್ನು ಶ್ರೀಮಂತ ಚೆಟ್ಟಿಯಾರ್ ಒಬ್ಬರಿಗೆ ಮದುವೆ ಮಾಡಿಸಿ ಕೊಡಬೇಕೆಂದು ಆಕೆ ನಿರ್ಧರಿಸಿದ್ದಲ್ಲದೇ ಇದನ್ನು ಒಪ್ಪಲೇಬೇಕೆಂದು ಸುಬ್ಬುಲಕ್ಷ್ಮಿಯವರಿಗೆ ನಿರ್ದೇಶಿಸಿದರಂತೆ. ಸುಬ್ಬುಲಕ್ಷ್ಮಿಯವರು ಯಾರ ಸಲಹೆಯನ್ನೂ (ಸಲಹೆ ಕೊಡಲು ಆಕೆಗೆ ಗುರುವಾಗಲೀ, ಗೆಳೆಯರಾಗಲೀ ಇರಲಿಲ್ಲ) ಕೇಳದೆ ನೇರವಾಗಿ ಮದರಾಸಿಗೆ ಬಂದು ಸದಾಶಿವಂ ಅವರ ಮನೆಯಲ್ಲಿ ಶರಣು ಕೇಳಿದರು. ಅಲ್ಲಿಂದ ಮುಂದಕ್ಕೆ ಅವರ ಜೀವನ ಸದಾಶಿವಂ ನೆರೆಳಿನಲ್ಲೇ ಮುಂದುವರೆಯಿತು. ಇಷ್ಟೆಲ್ಲಾ ಧೈರ್ಯತೋರಿ ಬಂಡಾಯವೆದ್ದು ಬಂದ ಎಂ.ಎಸ್. “ದೇವದಾಸಿಯ ಭೂತಕಾಲದಿಂದ, ತಮಿಳು ಬ್ರಾಹ್ಮಣ ಗೃಹಿಣಿಯ ಅನೂಹ್ಯ ಪರಿವರ್ತನೆಯನ್ನು ತಮ್ಮ ಜೀವನಕಾಲದಲ್ಲಿ ಅದ್ಭುತವಾಗಿ ಸಾಧಿಸಿಬಿಟ್ಟರು" ಎಂದು ಗಿರೀಶ್ ಕಾರ್ನಾಡ್ ಒಂದೆಡೆ ಹೇಳಿದ್ದಾರೆ.
ಇಲ್ಲಿಂದ ಮುಂದಕ್ಕೆ ಜಾರ್ಜ್ ಸುಬ್ಬುಲಕ್ಷ್ಮಿಯವರ ಜೀವನದ ಎರಡು ಘಟ್ಟಗಳನ್ನು ಚಿತ್ರಿಸುತ್ತಾರೆ - ಒಂದು ಸದಾಶಿವಂರನ್ನು ಮದುವೆಯಾಗುವ ತನಕ ಅವರ ಜೊತೆಯಲ್ಲೇ ಇದ್ದುಬಿಟ್ಟ ಕ್ರಾಂತಿಕಾರಿ ನಿಲುವು ಹಾಗೂ ತಮ್ಮ ತಾಯಿಗೆ ಒಪ್ಪಿಗೆಯಾಗದ ಕೆಲಸವಾದ ಸಿನೇಮಾದಲ್ಲಿ ನಟನೆ. ಎರಡನೆಯದು ಸಿನೆಮಾಕ್ಕೆ ವಿದಾಯ ಹೇಳಿ ಸಂಪೂರ್ಣ ಹಾಡುಗಾರಿಕೆಯತ್ತ ಗಮನ ಹರಿಸಿ ಅನಂತ ಸಾಧನೆಗಳನ್ನು ಕೈಗೂಡಿಸಿಕೊಂಡ ಜೀವನದ ತರುವಾಯ ಭಾಗ. ಮೊದಲ ಭಾಗದಲ್ಲಿ ಸುಬ್ಬುಲಕ್ಷ್ಮಿಯವರು ಕ್ರಾಂತಿಕಾರಿಯಾಗಿ ತಮಗಿಷ್ಟವಾದದ್ದನ್ನು ಮಾತ್ರ ಮಾಡುವ ರೆಬೆಲ್ ಥರ ಕಂಡರೂ, ಕಡೆಗೆ ಗಂಡ ಸದಾಶಿವಂ ಹೇಳಿದಂತೆ, ಆತ ನಿರ್ದೇಶಿಸಿದಂತೆ ಒಪ್ಪಿ ನಡೆದ ಜೀವನ ನಮಗೆ ಕಾಣಿಸುತ್ತದೆ. ಮದುವೆಯ ನಂತರ ಎಷ್ಟು ಅದ್ಭುತವಾಗಿ ತಮಿಳು ಬ್ರಾಹ್ಮಣ ಗೃಹಿಣಿಯ ಪಾತ್ರಕ್ಕೆ ತಮ್ಮನ್ನು ಒಗ್ಗಿಸಿಕೊಂಡರೆಂಬುದನ್ನು ಜಾರ್ಜ್ ಸಮರ್ಥವಾಗಿ ಬರೆಯುತ್ತಾರೆ.
ವಯಸ್ಸಿನಲ್ಲಿ ಹದಿನಾಲ್ಕು ವರ್ಷ ಹಿರಿಯರಾದ ಸದಾಶಿವಂ ಜೊತೆಗೆ ಆತನ ಮೊದಲ ಪತ್ನಿಯ ನಿಧನದ ಸ್ವಲ್ಪಕಾಲದ ಬಳಿಕವೇ ಮದುವೆಯಾದನಂತರ ಸುಬ್ಬುಲಕ್ಷ್ಮಿಯವರ ಜೀವನದಲ್ಲಿ ಒಂದು ಥರದ ಸ್ಥಿರತೆ ಬರುತ್ತದೆ. ಬಹುಶಃ ತಮ್ಮ ಸಂಗೀತದ ಅಭಿವ್ಯಕ್ತಿಗೆ ಸರಿಯಾದ ಮಾಧ್ಯಮ ಒದಗಿಸಿಕೊಡುವುದರಲ್ಲಿ ಸದಾಶಿವಂ ನಿರತರಾಗಿದ್ದರಿಂದಲೇ ಸುಬ್ಬುಲಕ್ಷ್ಮಿಯವರು ಆತನಿಗೆ ಒಗ್ಗಿ, ತಗ್ಗಿ, ಬಗ್ಗಿ ನಡೆದರೇನೋ. ಹಾಗೆ ನೋಡಿದರೆ ಸದಾಶಿವಂ ಆಕೆಯ ವೃತ್ತಿಜೀವನವನ್ನು ರೂಪಿಸಿದ ರೀತಿಯಲ್ಲಿ ಬೇರೆ ಯಾರೂ ರೂಪಿಸಲು ಸಾಧ್ಯವಿರವಿಲ್ಲಿಲ್ಲವೇನೋ.
ಹೆಚ್ಚಿನಂಶ ಎಲ್ಲ ಕಛೇರಿಗಳಲ್ಲೂ ಸುಬ್ಬುಲಕ್ಷ್ಮಿಯವರ ಜೊತೆಗೆ ಹಾಡಿದ ಖಾಯಂ ಸಾಥಿ ರಾಧಾ - ಈಕೆ ಸದಾಶಿವಂರ ಮೊದಲ ಪತ್ನಿಯಿಂದ ಹುಟ್ಟಿದ ಮಗಳು. ಸುಬ್ಬುಲಕ್ಷ್ಮಿಯವರಿಗೆ ಸ್ವಂತ ಸಂತಾನವಿಲ್ಲ. ಆದರೆ ರಾಧಾ ಆಕೆಯ ಸ್ವಂತ ಮಗಳಲ್ಲ ಎಂದು ನಂಬುವುದೇ ಕಷ್ಟವಾಗುವಂತೆ ಅವರಿಬ್ಬರೂ ಸಂಗೀತವನ್ನು ಜೊತೆಯಾಗಿ ಸಾಧಿಸಿದರು.
ಪುಸ್ತಕದ ಕೊನೆಯ ಭಾಗದಲ್ಲಿ ಜಾರ್ಜ್ ಸುಬ್ಬುಲಕ್ಷ್ಮಿಯವರಿಗೆ ಜಿ.ಎನ್.ಬಾಲಸುಬ್ರಹ್ಮಣ್ಯಂ ಬಗ್ಗೆ ಇದ್ದಿರಬಹುದಾದ ಭಾವನೆಗಳ ವಿಷಯವನ್ನು ಚರ್ಚಿಸುತ್ತಾರೆ. ಮದರಾಸಿಗೆ ಬಂದು ಸಿನೇಮಾದಲ್ಲಿ ಕೆಲಸ ಮಾಡುತ್ತಾ ಸದಾಶಿವಂ ಅವರ ಸುಪರ್ದಿಯಲ್ಲಿರುತ್ತಿದ್ದಾಗಲೇ ಸುಬ್ಬುಲಕ್ಷ್ಮಿ ತಮ್ಮ ಸಹನಟ ಹಾಗೂ ಸಂಗೀತಗಾರ ಜಿ.ಎನ್.ಬಿ ಗೆ ಬರೆದರೆನ್ನಲಾದ ಕೆಲ ಪ್ರೇಮ ಪತ್ರಗಳ ಮೂಲಕ ಆಕೆಯ ಆಗಿನ ಮನಸ್ಥಿತಿಯನ್ನು ಅರಿಯಬಹುದು. ಆದರೆ ಜಿ.ಎನ್.ಬಿ ಬಹುಶಃ ಈ ಪತ್ರಗಳಿಗೆ ಉತ್ತರ ಬರೆಯಲಿಲ್ಲ ಮತ್ತು ಇದನ್ನು ಪ್ರೋತ್ಸಾಹಿಸಲಿಲ್ಲ.ಸದಾಶಿವಂರನ್ನು ಮದುವೆಯಾದನಂತರ ಸುಬ್ಬುಲಕ್ಷ್ಮಿಯವರ ಜೀವನದಲ್ಲಿ ಒಂದು ಸ್ಥಿರತೆ ಬಂದಂತೆ ಕಾಣಿಸುತ್ತದೆ.
ಎಲ್ಲವೂ ತಮಗೆ ವಿರುದ್ಧವಾಗಿದ್ದ ಕಾಲದಲ್ಲಿ, ಬ್ರಾಹ್ಮಣರಿಗೇ ಅದರಲ್ಲೂ ಗಂಡಸರಿಗೇ ಮೀಸಲಾಗಿದ್ದ ಮೈಲಾಪೂರ್ ನ "ಸಭಾ"ಸಂಗೀತಕೋಟೆಗೆ ಲಗ್ಗೆಯಿಟ್ಟು ಗೆದ್ದು ಸಾಧಿಸಹೊರಟದ್ದನ್ನೆಲ್ಲಾ ಸಾಧಿಸಿ ಕಡೆಗೆ ತಾನೇನೂ ಬಂಡಾಯವೆದ್ದೇ ಇಲ್ಲವೆಂಬಂತೆ ಸಹಜವಾಗಿ ಜೀವನವನ್ನ ಕಳೆದುಬಿಟ್ಟ ಸುಬ್ಬುಲಕ್ಷ್ಮಿಯವರ ಬಗ್ಗೆ ಇಂಥಹ ಉತ್ತಮ ಪುಸ್ತಕ ಬಂದಿರುವುದಕ್ಕೆ ನಾವು ಸ್ವಾಗತ ಕೋರೋಣ. ಅದೃಷ್ಟವಶಾತ್ ಜಾರ್ಜ್ ತಮ್ಮ ಕೆಲಸವನ್ನು ಮಧ್ಯಕ್ಕೇ ಕೈಬಿಡದೇ ಮುಂದುವರೆಸಿದ್ದರಿಂದ ಈ ಉತ್ತಮ ಪುಸ್ತಕ ನಮ್ಮ ಕೈ ಸೇರಿದೆ. ಪಾಶ್ಚಾತ್ಯರಂತೆ ನಾವುಗಳೂ ಕಾಗದ ಪತ್ರಗಳ ಬಗ್ಗೆ, ನೆನಪುಗಳ ಬಗ್ಗೆ ಇನ್ನೂ ಹೆಚ್ಚು ಜಾಗರೂಕರಾಗಿದ್ದರೆ, ಈ ಉತ್ತಮ ಪುಸ್ತಕ ಇನ್ನೆಷ್ಟು ಶ್ರೀಮಂತವಾಗುತ್ತಿತ್ತು ಎಂಬುದನ್ನು ಊಹಿಸಲು ಕಷ್ಟ.
ಮಲ್ಲಿಕಾರ್ಜುನ ಮನ್ಸೂರ ಅವರ ರಸಯಾತ್ರೆ ಬರೇ ನೆನಪಿನ ಆಧಾರದಲ್ಲೇ ಬರೆದಿರುವ ಆತ್ಮಕಥೆ. ಆತ್ಮಕಥೆಯಾದ್ದರಿಂದ ತಮ್ಮ ಬಗ್ಗೆಯೇ ಬರೆಯುತ್ತಿರುವುದರಿಂದ ಸಂಶೋಧನೆ ನಡೆಸುವ ಅಗತ್ಯ ಲೇಖಕರಿಗೆ ಸಾಮಾನ್ಯವಾಗಿ ಕಂಡುಬರುವುದಿಲ್ಲ. ಹೀಗಾಗಿ ಬೇರೊಬ್ಬರ ಜೀವನದ ಬಗ್ಗೆ ಬರೆಯುವಾಗ ಆಚರಿಸುವ ಶಿಸ್ತು ಹಾಗೂ ಎಚ್ಚರ ಬಹುಶಃ ಆತ್ಮಚರಿತ್ರೆಯಲ್ಲಿ ಕಾಣಸಿಗುವುದಿಲ್ಲವೇನೋ. ಇದಲ್ಲದೇ, ಬೇರೊಬ್ಬರ ಜೀವನಚರಿತ್ರೆಯನ್ನು ಬರೆಯುವ ಕಾಯಕವನ್ನು ಕೈಗೊಳ್ಳುವವರು ವೃತ್ತಿಯಿಂದಲೋ ಪ್ರವೃತ್ತಿಯಿದಲೋ ಸ್ವತಃ ಲೇಖಕರಾಗಿತ್ತಾರಾದ್ದರಿಂದ ಬರವಣಿಗೆಯ ಲಯ, ಕಟ್ಟುಪಾಡು ಇರುತ್ತದೆ.ಆತ್ಮಚರಿತ್ರೆಯನ್ನು ಬರೆಯುವವರು ಲೇಖಕರೇ ಆಗಿರಬೇಕೆಂದಾಗಲೀ, ಆ ಮನೊಧರ್ಮದವರಾಗಿರಬೇಕೆಂದಾಗಲೀ ಆಶಿಸುವುದು ಸರಿಯಲ್ಲ. ಹೀಗಾಗಿ ಆತ್ಮಚರಿತ್ರೆಗಳನ್ನು ಓದುವಾಗ ತುಸು ಅಸಮಾಧಾನವಾಗುವುದು ಸಹಜವೇ ಏನೋ. ಪಾಶ್ಚಾತ್ಯ ಲೋಕದವರು ಆತ್ಮಚರಿತ್ರೆ ಬರೆಯುವುದಕ್ಕೂ ವೃತ್ತಿಗತ ಲೇಖಕರ ಸಹಾಯ ಪಡೆಯುವುದನ್ನು ನಾವು ಕಂಡಿದ್ದೇವೆ. ಬಹುಶಃ ಕನ್ನಡದ ಸಂದರ್ಭದಲ್ಲಿ ಈ ಪ್ರಯೋಗವಾಗಿಲ್ಲವೇನೋ.

ರಸಯಾತ್ರೆಯನ್ನ ಇಂಗ್ಲೀಷಿನಲ್ಲಿ ಮಲ್ಲಿಕಾರ್ಜುನ ಮನ್ಸೂರರ ಮಗ ರಾಜಶೇಖರ ಮನ್ಸೂರ್ ಅನುವಾದಿಸಿದ್ದಾರೆ. ಅನುವಾದವನ್ನು ಓದಿದ್ದರ ಒಂದು ಅನುಕೂಲವೆಂದರೆ ಭಾಷಾಂತರಿಸುವಾಗ, ರಾಜಶೇಖರ ಮನ್ಸೂರ್ ಅನೇಕ ಅಡಿಟಿಪ್ಪಣಿಗಳನ್ನು ಕೊಟ್ಟು ಮೂಲದಲ್ಲಿದ್ದ ಕೆಲವು ಲೋಪದೋಷಗಳನ್ನು ಸರಿಪಡಿಸುವ ಪ್ರಯತ್ನ ಮಾಡಿದ್ದಾರೆ. ಸುಬ್ಬುಲಕ್ಷ್ಮಿಯವರ ಜೀವನಕ್ಕೂ ಮನ್ಸೂರರ ಜೀವನಕ್ಕೂ ಇರುವ ಸಾಮಾನ್ಯ ಅಂಶವೆಂದರೆ - ಇಬ್ಬರೂ ಸಂಗೀತದ ಸಾಧನೆಯಲ್ಲಿ ತಮ್ಮನ್ನು ಎಷ್ಟು ಆಳವಾಗಿ ತೊಡಗಿಸಿಕೊಂಡಿದ್ದು - ಅದನ್ನೇ ಉಸಿರಾಗಿ ಜೀವಿಸುತ್ತಿದ್ದ ರೀತಿ. ಇದೊಂದನ್ನು ಬಿಟ್ಟರೆ ಇಬ್ಬರ ಜೀವನಗಳೂ ಎಷ್ಟು ಭಿನ್ನ ಎನ್ನಿಸುತ್ತದೆ. ಮನ್ಸೂರರಿಗೆ ತಮ್ಮ ಸಂಗೀತ ಜೀವನವನ್ನು ಸಂಭಾಳಿಸುವ ಸಹಯಾತ್ರಿಯಿರಲಿಲ್ಲ ಎಂಬುದು ಅವರ ಆತ್ಮಕಥೆಯಲ್ಲಿ ಸ್ಪಷ್ಟವಾಗಿ ಕಂಡುಬರುತ್ತದೆ. ಹೌದು, ಅಲ್ಲಲ್ಲಿ ಅವರು ತಮ್ಮ ಪತ್ನಿ, ಸಂಸಾರವನ್ನು ನೆನೆಪು ಮಾಡಿಕೊಳ್ಳುತ್ತಾರೆ, ಹಿನ್ನೆಲೆಯಲ್ಲಿ ತಮ್ಮ ಪರಿವಾರದಿಂದ ಬಂದ ಸಹಕಾರವನ್ನು ಗುರುತಿಸುತ್ತಾರಾದರೂ ಅದು ಬಹಳ ಮಹತ್ವದ ಪಾತ್ರವಹಿಸಿತೆಂಬ ಭಾವನೆ ನಮಗೆ ಇದನ್ನು ಓದಿದಾಗ ಅನ್ನಿಸುವುದಿಲ್ಲ.
ಸುಬ್ಬುಲಕ್ಷ್ಮಿಯವರ ಜೀವನವನ್ನ ಒಂದು ಧಾರೆಯಂತೆ ಜಾರ್ಜ್ ಚಿತ್ರಿಸಿದ್ದಾರೆ. ಅದಕ್ಕೆ ಕರ್ನಾಟಕ ಸಂಗೀತದ ಒಂದು ಚೌಕಟ್ಟನ್ನು ಒದಗಿಸಿದ್ದರೆ. ಮನ್ಸೂರರ ಜೀವನ ಘಟನಾವಳಿಯ ಸಾಲೆಂಬಂತೆ ನಮ್ಮ ಮುಂದೆ ನಿಲ್ಲುತ್ತದೆ. ಮನ್ಸೂರರ

ಮನ್ಸೂರರು ತಮ್ಮ ಪರಿವಾರವನ್ನು ವಿವರಿಸುವಾಗ ಮಗ ರಾಜಶೇಖರ ಮನ್ಸೂರ್ ಜೊತೆಗಿನ ತಮ್ಮ ದಿನನಿತ್ಯದ ಲೇಣ್ ದೇಣ್ ನಲ್ಲಿ ಬಿಕ್ಕಟ್ಟಿದ್ದುದನ್ನು ಸೂಚ್ಯವಾಗಿ ಹೇಳುತ್ತಾರೆ - ಒಮ್ಮೆ ರಾಜಶೇಖರ ಮನೆಯಿಂದ ಓಡಿಹೋದ ಘಟನೆ, ಮತ್ತು ತಮ್ಮ ಜಾತಿಯವರಲ್ಲದ ಹುಡುಗಿಯೊಂದಿಗಿನ ಪ್ರೇಮ ವಿವಾಹ ಎರಡೂ ಘಟನೆಗಳನ್ನು ಹೆಚ್ಚು ಚರ್ಚಿಸದೇ ಸುಮ್ಮನೆ ಓದುಗರ ಧ್ಯಾನವನ್ನಾಕರ್ಷಿಸಿಬಿಡುತ್ತಾರೆ. ರಾಜಶೇಖರ ಕೂಡಾ ತಮ್ಮ ಅಡಿಟಿಪ್ಪಣಿಯಲ್ಲಿ ಇದರ ಬಗ್ಗೆ ಹೆಚ್ಚಿನ ಉಲ್ಲೇಖ ಮಾಡುವುದಿಲ್ಲ – ಆದರೂ ಅವರಿಬ್ಬರ ನಡುವಿನ ಸಂಬಂಧದ ಕೆಲ ಪದರಗಳನ್ನು ಬಿಡಿಸಿ ನೋಡಿದ್ದರೆ ಕಲಾಕಾರರ ಮನಸ್ಸಿನೊಳಕ್ಕೆ ಒಂದು ಒಳನೋಟ ಓದುಗರಿಗೆ ದೊರೆಯುತ್ತಿತ್ತೇನೋ.
ಈ ಪುಸ್ತಕದಲ್ಲಿ (ಒಂದಕ್ಕೊಂದು ಸಂಬಂಧವಿಲ್ಲದ) ಮೂರು ವಿಷಯಗಳು ನನ್ನ ಗಮನವನ್ನು ಸೆಳೆದವು:
- ಯಾವುದೇ ಭಾರತೀಯ ಸಾಧಕರ ಬಗ್ಗೆ ಚರ್ಚಿಸುವಾಗ ಏನಿಲ್ಲವೆಂದರೂ ಅವರುಗಳು ಕೈಗೊಂಡ ವಿದೇಶ ಯಾತ್ರೆಯ ಅನುಭವದ ಗಮ್ಮತ್ತನ್ನು ಬರೆಯಲು ಸಾಮಾನ್ಯವಾಗಿ ಯಾರೂ ಮರೆಯುವುದಿಲ್ಲ. ಆದರೆ ಮನ್ಸೂರರ ಪುಸ್ತಕದಲ್ಲಿ ಈಗ ಪಾಕಿಸ್ತಾನದಲ್ಲಿರುವ ಸಿಂಧ್ ಶಿಕಾರಪುರ್ ಗೆ ೧೯೩೫-೩೬ರಲ್ಲಿ ಹೋದ ಒಂದು ಪ್ರಸಂಗವನ್ನು ಬಿಟ್ಟರೆ ಬೇರಾವ ಮಾತೂ ಬರುವುದಿಲ್ಲ. ಹಾಗಾದರೆ ಅವರು ವಿದೇಶದಲ್ಲಿ ಹಾಡಲೇ ಇಲ್ಲವೇ? ಇದರಿಂದ ಅವರ ಪ್ರತಿಭೆಗೇನೂ ಕುಂದು ಬರುವುದಿಲ್ಲವಾಗಲೀ, ಮನ್ಸೂರರು ಅದನ್ನು ಮಹತ್ವದ ಸಂಗತಿಯೆಂದು ಭಾವಿಸಲಿಲ್ಲವಾದ್ದರಿಂದ ಆ ಬಗ್ಗೆ ಬರೆಯಲಿಲ್ಲವೋ ಅಥವಾ ನಿಜಕ್ಕೂ ವಿದೇಶಯಾತ್ರೆ ಕೈಗೊಳ್ಳಲಿಲ್ಲವೋ ಎಂಬುದು ಕುತೂಹಲದ ವಿಷಯ.
- ಸಂಗೀತವೇ ಅವರ ಉಸಿರಾಗಿತ್ತೆನ್ನುವುದಕ್ಕೆ ಮತ್ತೊಂದು ಉದಾಹರಣೆ ರಾಜಶೇಖರ ಮನ್ಸೂರ್ ಬರೆದಿರುವ ಅಧ್ಯಾಯದಲ್ಲಿ ನಮಗೆ ಸಿಗುತ್ತದೆ - ಇದು ಮಲ್ಲಿಕಾರ್ಜುನ ಮನ್ಸೂರ್ ತಮ್ಮ ಆತ್ಮಕಥೆಯನ್ನು ನಿಲ್ಲಿಸಿದಾಗಿನಿಂದ ಅವರು ಅಸುನೀಗಿದ ಕಾಲದವರೆಗಿನ ಅವರ ಜೀವನದ ಕೆಲವು ಚಿತ್ರಗಳನ್ನು ಕೊಡುವ ಭಾಗ. ಈ ಭಾಗದಲ್ಲಿ ಮನ್ಸೂರರಿಗೆ ಮೂತ್ರಪಿಂಡದ ತೊಂದರೆಯುಂಟಾಗಿ ಡಯಾಲಿಸಿಸ್ ನಡೆಯುತ್ತಿರುವ ಸಮಯದಲ್ಲಿ ರಾಗ ಭೈರವದಲ್ಲಿ ಒಂದು ಬಂದಿಶ್ ಹಾಡಲು ರಾಜಶೇಖರರನ್ನು ಕೇಳುತ್ತಾರೆ! ಡಾಕ್ಟರ್ ತಲ್ವಲ್ ಕರ್ ಅವರ ಅನುಮತಿಯೊಂದಿಗೆ ಡಯಾಲಿಸಿಸ್ ವಾರ್ಡಿನಲ್ಲೇ ಓಂದು ಮಿನಿ ಕಛೇರಿ ನಡೆಯುತ್ತದೆ. ಇಂಥ ವಿವರಗಳು ಬೇರೊಬ್ಬರು ಬರದ ಜೀವನ ಚರಿತ್ರೆಯಲ್ಲಿ ಬರುತ್ತವೇ ಹೊರತು, ಮನ್ಸೂರರ ಆತ್ಮಕಥೆಯಲ್ಲಿ ಖಂಡಿತವಾಗಿ ಬಂದಿರಲಿಕ್ಕೆ ಸಾಧ್ಯವಿರಲಿಲ್ಲ.
- ಪುಸ್ತಕದ ಅತಿ ಸಣ್ಣ ಅಧ್ಯಾಯವೆಂದರೆ - ಅವರಿಗೆ ಸಂದ ಗೌರವ, ಬಂದ ಪ್ರಶಸ್ತಿಗಳ ಬಗೆಗಿನದು. ಆ ಅಧ್ಯಾಯದ ಅಂತ್ಯದಲ್ಲಿ ರಾಜಶೇಖರರ ಟಿಪ್ಪಣಿ ಇಂತಿದೆ: “ನನ್ನ ತಂದೆ ಎಂದಿಗೂ ಪ್ರಶಸ್ತಿಗಳ ಬೆನ್ನು ಹತ್ತಿ ಹೂದವರಲ್ಲ. ಎಷ್ಟೋ ಬಾರಿ ತಮಗೆ ಬಂದ ಪ್ರಶಸ್ತಿಯನ್ನು ಗೇಲಿ ಮಾಡಿ ಸುತ್ತಮುತ್ತಲಿದ್ದ ಯಾರಿಗಾದರೂ ಅದನ್ನ ಕೊಟ್ಟುಬಿಡುತ್ತಿದ್ದರು. ಇದರ ಚಾರಿತ್ರಿಕ ಮಹತ್ವದ ಅರಿವು ಅವರಿಗಿಲ್ಲವಾದ್ದರಿಂದ ನಮಗೆ ಅವರ ಜೀವನದ ಸಾಧನೆಗಳ ಸರಿಯಾದ ದಾಖಲೆಯನ್ನಿಡಲು ಸಾಧ್ಯವೇ ಆಗಿಲ್ಲ.
ಈ ವಿಷಯದಲ್ಲಿ ರಾಮ್ ಗುಹಾ ಹೇಳಿದ್ದು ಮಹತ್ವದ ಮಾತೆನ್ನಿಸುತ್ತದೆ: “south asians are careless about keeping letters, records and historical memorabilia in general” ಹೀಗಾಗಿ ಮಹತ್ವದ ಜೀವನಗಳು ಸರಿಯಾಗಿ ದಾಖಲಾಗದೇ ಬರೇ ತೋಂಡಿ ಸಂಪ್ರದಾಯದಲ್ಲಿದ್ದುಬಿಡುತ್ತವೆ.
ಇದರ ಇಂಗ್ಲೀಷ್ ಆವೃತ್ತಿಯನ್ನು Writer's BlogK ನಲ್ಲಿ ಕಾಣಬಹುದು.
ಶ್ರೀರಾಮ್
No comments:
Post a Comment