
ಪುಸ್ತಕ ಮೂಲತಃ ಇಪ್ಪತ್ತನೆಯ ಶತಮಾನದ ಬೆಂಗಳೂರಿನ ಬಗ್ಗೆ ತನ್ನ ಆಸಕ್ತಿಯನ್ನು ಕೇಂದ್ರೀಕರಿಸಿಟ್ಟಿದ್ದರೂ, ಭೂತ, ವರ್ತಮಾನ ಮತ್ತು ಭವಿಷ್ಯಗಳಿಂದ ತಪ್ಪಿಸುಕೊಂಡು ಬರುವುದು ಕಷ್ಟವೇ. ಅತ್ಯಂತ ಶೀಘ್ರಗತಿಯಲ್ಲಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾದ, ಒಂದು ಯೋಜನಾಕೇಂದ್ರಿತವಾಗಿ ಬೆಳೆಯಬೇಕೆಂದು ಆಶಿಸಿದ ನಗರವಾಗಿದ್ದರಿಂದ, ಹಾಗೂ, ಅನೇಕ ವರ್ಷಗಳಿಂದಲೂ ವಿವಿಧ ಹಿನ್ನೆಲೆಯ ಜನರಿಂದ ಕೂಡಿರುವ ಬೆಂಗಳೂರು ಎಸೆಯುವ ಸವಾಲುಗಳೂ ವೈವಿಧ್ಯತೆಯಿಂದ ಕೂಡಿರುತ್ತದೆ. ಜಾನಕೀ ನಾಯರ್ ಈ ನಗರವನ್ನ ಬ್ಯಾಂಗಲೂರ್-ಬೆಂಗಳೂರು ಗಳ ನಡುವಿರುವ ಅಂತರವನ್ನು ವಿಶ್ಲೇಶಿಸುತ್ತಾ ಪ್ರಾರಂಭ ಮಾಡುತ್ತಾರೆ. ನಗರದ ಹಳೆಯ ಭಾಗ ಸ್ಥಳೀಯರಿಂದ ತುಂಬಿದ್ದು ಅದು ಬೆಂಗಳೂರು ಆದರೆ, ಹೊರಗಿನವರು ಮುಖ್ಯವಾಗಿ ಆಗಿನ ಸೈನ್ಯಕ್ಕೆ ಸಂಬಂಧಿಸಿದವರು ವಾಸ್ತವ್ಯ ಹೂಡಿದ್ದ ಕಂಟೋನ್ಮೆಂಟ್ ಭಾಗವನ್ನು ಬ್ಯಾಂಗಳೂರ್ ಎಂದೂ ನಾಯರ್ ಕರೆಯುತ್ತಾರೆ. ಹೈದರಾಬದು, ಅಹಮದಾಬಾರು, ದೆಹಲಿಗಳಂತೆ ಬೆಂಗಳೂರಿಗೆ ಕೋಟೆಯಾಚೆಗಿನ ಗೋಡೆಯಂತರವಿರುವ [walled, old city] ಹಳೇ ಭಾಗವಿಲ್ಲ. ಬೆಂಗಳೂರಿನ ಎರಡೂ ಭಾಗಗಳು ಸಮಾನಾಂತರವಾಗಿ ಬೆಳೆಯುತ್ತಿದ್ದವು. ಹೀಗಾಗಿಯೇ ಜಾನಕೀ ನಾಯರ್ "ನಾಲ್ಕೂವರೆ ಶತಮಾನಗಳಿಗೂ ಮಿಂಚಿ ಅಸ್ತಿತ್ವದಲ್ಲಿರುವ ಈ ಜನವಾಸ್ತವ್ಯಕ್ಕೆ ಕಾಲಾಂತರದಿಂದ ಬಂದ, ಹೆಮ್ಮೆಯಿಂದ ಹೇಳಿಕೊಳ್ಳುವ ಸ್ಥಾವರಗಳು ಅಷ್ಟಾಗಿ ಕಾಣಸಿಗುವುದಿಲ್ಲ" ಅನ್ನುವ ಮಾತಿನಲ್ಲಿ ಅರ್ಥವಿದೆ. ದೆಹಲಿಯ ಕುತ್ಬ್ ಮಿನಾರ್, ಹೈದರಾಬಾದಿನ ಚಾರ್ಮಿನಾರ್ನಂತೆ ಹಳೆಯ ಸ್ಥಾವರಗಳು ಬೆಂಗಳೂರಿನ ಅಸ್ತಿತ್ವವನ್ನು ಒತ್ತಿ ಹೇಳುವುದಿಲ್ಲ. ಬದಲಿಗೆ ಈ ಊರಿನ ಅಸ್ತಿತ್ವಕ್ಕೆ ನಿಶಾನೆಗಳಾಗಿ ನಿಲ್ಲುವ ಇಮಾರತುಗಳು -

ಅದೇನೇ ಇರಲಿ, ಜಾನಕೀ ನಾಯರ್ ಕಂಟೋನ್ಮೆಂಟ್ ಮತ್ತು ಪೇಟೆಯ ನಡುವಿನಲ್ಲಿರುವ ಸಾಂಸ್ಕೃತಿಕ ಅಂತರವನ್ನು ಚೆನ್ನಾಗಿಯೇ ಗ್ರಹಿಸಿದ್ದಾರೆ. ಪೇಟೆಯಲ್ಲಿ ತುಸು ಮಡಿವಂತಿಕೆ ಹೆಚ್ಚು, ಸ್ಥಳೀಯ ರಿವಾಜುಗಳೂ ಹೆಚ್ಚು. ಕಂಟೋನ್ಮೆಂಟ್ ಭಾಗ ಹೊರಗಿನಿಂದ ಬಂದವರಿಂದ ತುಂಬಿದೆ. ಹೆಚ್ಚಿನಂಶ ಬ್ರಿಟಿಷರು, ಆದರೆ ಅವರ ಜೊತೆಜೊತೆಯಲಿ ದೇಶದ ಇತರೆ ಭಾಗಗಳಿಂದ ಬಂದಿರುವ ಬಹುಸಂಸ್ಕೃತಿಯ ಜನರು. ಪೇಟೆಯ ಭಾಗದಲ್ಲಿ ಹೆಚ್ಚಿನಂಶ ಕನ್ನಡದವರು [ಕೆಲ ತೆಲುಗರನ್ನೂಳಗೊಂಡು] ವಾಸವಿದ್ದರೆ, ಕಂಟೋನ್ಮೆಂಟ್ ಭಾಗದಲ್ಲಿ ಕನ್ನಡ ಕಾಣುವುದು ವಿರಳ. ಇದು ಇಂದಿನ ಮಾತಲ್ಲ, ಬದಲಿಗೆ ಇಪ್ಪತ್ತನೆಯ ಶತಮಾನದುದ್ದಕ್ಕೂ ಕಂಡಿರುವ ಅಂಶ. ಹೀಗಾಗಿಯೇ ಆಕೆ ಹೇಳುತ್ತಾರೆ:
"ಪೇಟೆಯಲ್ಲಿ ದೇಶದ ಇತರೆ ಭಾಗಗಳಿಂದ ಭಿನ್ನ ಭಾಷೆ ನುಡಿಗಟ್ಟನ್ನು ಪ್ರತಿನಿಧಿಸುವ ಜನ ಬಂದು ವಾಸ್ತವ್ಯ ಹೂಡಿದರಾದರೂ ಅಲ್ಲಿನ ಸಂಸ್ಕೃತಿ ಕನ್ನಡಮಯವಾಗಿತ್ತು. ಹೆಚ್ಚೆಂದರೆ ಒಂದಷ್ಟು ಉರ್ದುವನ್ನು ಚಿಮುಕಿಸಿದಹಾಗಿತ್ತು ಅಷ್ಟೇ. ಆದರೆ ಕಂಟೋನ್ಮೆಂಟ್ ಭಾಗದಲ್ಲಿ ಹೊಸದಾಗಿ ಉಂಟಾದ ನೌಕರಿ ಮತ್ತು ವ್ಯಾಪಾರದ ಅವಕಾಶಗಳ ಲಾಭ ಪಡೆಯಲು ಮದರಾಸು ಪ್ರೆಸಿಡೆನ್ಸಿಯ ಅನೇಕ ಭಾಗಗಳಿಂದ ಬಂದ ಜನ ತಮ್ಮ ವಾಸ್ತವ್ಯ ಹೂಡಿದ್ದರು. ಇದಕ್ಕೆ ಇಂಗ್ಲೀಷು ಬೃಹದಾಕಾರವಾಗಿ ನಿಂತಿದ್ದು ಆಡಳಿತ ಭಾಷೆಯಾಗಿದ್ದದ್ದೇ ಕಾರಣವಿರಬಹುದು. ಹೀಗಾಗಿ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಬಂದ ತಮಿಳರು ಮತ್ತು ಇತರೆ ಭಾಷಿಕರು ತಮ್ಮ ಮನೆಯ ಹಾಗೂ ಸಂಸ್ಕೃತಿಕ ವಿಷಯಗಳಿಗೆ ತಮ್ಮ ಮಾತೃಭಾಷೆಯನ್ನೇ ಉಳಿಸಿಕೊಂಡರು. ಜೊತೆಗೆ ಉರ್ದು ಮತ್ತು ತೆಲುಗಿನ ವಿಸ್ತೃತ ಬಳಕೆಯೂ ನಮಗೆ ಕಾಣಸಿಗುತ್ತಿತ್ತು. ಆದರೂ ನಾಡಿನ ಭಾಷೆ ಕನ್ನಡ ಕಂಟೋನ್ಮೆಂಟ್ ಪ್ರಾಂತದಲ್ಲಿ ಕಂಡದ್ದು ಕಡಿಮೆ. ಇದಕ್ಕೆ ಇನ್ನೂ ಒಂದು ಕಾರಣವೆಂದರೆ ಅಲ್ಲಿನ ಕೂಲಿವರ್ಗದವರೂ ಹಳೇ ಮೈಸೂರಿನ ಪ್ರಾಂತದಾಚೆಯಿಂದ ಬಂದವರೇ ಅಗಿದ್ದದ್ದು."

ಆದರೆ ಹಳೆಯ ಪೇಟೆಗೂ, ಆಂಗ್ಲರಿದ್ದ ನಗರಕ್ಕೂ ನಡುವೆ ಭಾಗರೇಖೆ ಇದ್ದು ಅದು ಊರನ್ನು ಇಬ್ಭಾಗಿಸುತ್ತಿತ್ತೆಂದು ಜಾನಕೀ ವಾದಿಸುತ್ತಾರೆ. ಇಲ್ಲಿನ ಪೇಟೆಯ ಭಾಗದಿಂದ ನಗರದತ್ತ ಹೋಗುವುದೆಂದರೆ ಸಾಮಾಜಿಕ ಕಟ್ಟಳೆಗಳಿಂದ ಮುಕ್ತಿ ಪಡೆಯುವುದೆಂಬಂತಹ ಭಾವನೆಯಿತ್ತು. ಇಲ್ಲಿಂದ ಅಲ್ಲಿಗೆ ಹೋಗಿ ಮಿಲಿಟ್ರಿ ಹೊಟೇಲಿನಲ್ಲಿ ಮಾಂಸ ಮದ್ಯದ ರುಚಿ ನೋಡುವುದೋ, ಒಲ್ಲದ ಸಿನೇಮಾ ನೋಡುವುದೋ, ಅಥವಾ ಕಾಫಿ-ಟೀ ಕ್ಲಬ್ಬುಗಳಿಗೆ ಹೋಗುವುದೋ ಈ ಭಾಗರೇಖೆಯನ್ನು ದಾಟುವ ಪ್ರಕ್ರಿಯೆಯ ಪ್ರತೀಕವಾಗಿತ್ತು. ಪೇಟೆಯೆಂದರೆ ಸ್ವಲ್ಪ ಸ್ಥಳೀಯ ಸಂಸ್ಕೃತಿ ಮತ್ತು ಮಡಿವಂತಿಕೆಯ ಪ್ರತೀಕವಾಗಿತ್ತು. ಆದರೆ ಜಾನಕೀ ಡಿವಿಜಿಯವರನ್ನು ಉದ್ಧರಿಸುತ್ತಾ ಒಂದು ಗಮ್ಮತ್ತಿನ ವಿಷಯವನ್ನು ಹೇಳುತ್ತಾರೆ. ಪೇಟೆಯ ಭಾಗದಲ್ಲಿ ಹಿಂದೆ ಹೋಟೇಲುಗಳಲ್ಲಿ ತಿನ್ನುವುದು ಒಂದು ರೀತಿಯಿಂದ ನಿಷಿದ್ಧವಿತ್ತು. ಆದರೆ ಈ ನಿಷೇಧ ಬಹುಬೇಗನೇ ಮಾಯವಾದದ್ದು ಯಾಕೆ ಗೊತ್ತಾ? ಊರಿನಲ್ಲಿ ಪ್ಲೇಗಿನ ಮಹಾಮಾರಿ ಬಂದಾಗ ಬಹಳಷ್ಟು ಜನ ತಮ್ಮ ಮನೆಯ ಹೆಂಗಸರನ್ನೂ ಮಕ್ಕಳನ್ನೂ ಇಲ್ಲಿಂದ ದೂರ

೧೯೪೯ರಲ್ಲಿ ಪೇಟೆ ಮತ್ತು ಕಂಟೋನ್ಮೆಂಟ್ ಭಾಗಗಳ ನಗರಪಾಲಿಕೆಗಳು ಒಂದೇ ಮಹಾನಗರಪಾಲಿಕೆಯಾಗಿ ಎರಡೂ ಭಾಗಗಳ ನಡುವಿನ ಅಂತರವನ್ನು ಆಡಳಿತಾತ್ಮಕವಾಗಿಯಾದರೂ ಒಂದು ಬೆಸುಗೆ ಬಿತ್ತು. ಬೆಂಗಳೂರಿನ ಬೆಳವಣಿಗೆಯಲ್ಲಿ ತದನಂತರ ಬಂದ ಮುಖ್ಯಘಟ್ಟವೆಂದರೆ ಸರಕಾರಿ ಉದ್ದಿಮೆಗಳ ಉದ್ಭ್ಹವ. ಇವೆಲ್ಲವೂ ಹೆಚ್ಚಿನಂಶ ಕೇಂದ್ರಸರಕಾರದ ಉದ್ದಿಮೆಗಳಾಗಿದ್ದುವು. ಈ ಉದ್ದಿಮೆಗಳ ಎರಡು ಲಕ್ಷಣಗಳು ನಮಗೆ ಮುಖ್ಯವಾಗಿ ಕಾಣಿಸುತ್ತವೆ: ಒಂದು ಇವು ಮುಂಬಯಿ ಅಹಮದಾಬಾದಿನ ಬಟ್ಟೆ ಗಿರಣಿಗಳಂತೆ ಹೊಗೆಯುಗುಳುವ ಉದ್ದಿಮೆಗಳಾಗಿರಲಿಲ್ಲ. ಎರಡು: ಈ ಉದ್ದಿಮೆಗಳು ಹೆಚ್ಚಿನಂಶ ಬೌದ್ಧಿಕ ಶಕ್ತಿಯನ್ನು ಆಧಾರವಾಗಿಟ್ಟುಕೊಂಡು ಕಟ್ಟಿದವಾಗಿದ್ದವು. ಎಚ್ಎಂಟಿ ಸಂಸ್ಥೆ ಟ್ರಾಕ್ಟರುಗಳಿಂದ ಹಿಡಿದು ಕೈಗಡಿಯಾರಗಳವರೆಗೆ ಏನೇನನ್ನೋ ತಯಾರು ಮಾಡಿದರೂ ಹೆಸರುವಾಸಿಯಾದದ್ದು ತಮ್ಮ ಕೈಗಡಿಯಾರಗಳಿಂದ. ಎಪ್ಪತ್ತರ ದಶಕದಲ್ಲಿ ಎಚ್.ಎಂ.ಟಿ ಕೈಗಡಿಯಾರ ಹೊಂದಿರುವುದು ಬಜಾಜ್ ಚೇತಕ್ ಸ್ಕೂಟರ್ ಇಟ್ಟಿರುವಷ್ಟೇ ಪ್ರತಿಷ್ಠೆಯ ಸಂಕೇತವಾಗಿತ್ತು. ಸರಕಾರೀ ಉದ್ದಿಮೆಗಳಾದ ಐಟಿಐ, ಬಿಇಎಲ್, ಬಿಎಚ್ಇಎಲ್ ನಮ್ಮ ಮನಸ್ಸಿನಲ್ಲಿದ್ದ ಸಾಧಾರಣ ಫ್ಯಾಕ್ಟರಿ ಅಥವಾ ಗಿರಣಿಯಾಗಿರಲಿಲ್ಲ. ಬಹುಶಃ ಇದೇ ಊರಿನಲ್ಲಿದ್ದ ಟಾಟಾ ಇನ್ಸ್ಟಿಟ್ಯೂಟ್ನಿಂದಾಗಿ ಸಂಶೋಧನಾ ಕೇಂದ್ರಕ್ಕೂ ಈ ಸಂಸ್ಥೆಗಳಿಗೂ ಒಂದು ಕೊಂಡಿಯಿದ್ದಿರಬಹುದೇ? ಹಾಗೆ ನೋಡಿದರೆ ಬೆಂಗಳೂರಿನ ಐಐಎಂ

ಈ ಸರಕಾರಿ ಉದ್ದಿಮೆಗಳು ತಮ್ಮ ವ್ಯಾಪಾರ ಮಾಡುವುದಲ್ಲದೇ ಉದ್ಯೋಗಾವಕಾಶಗಳನ್ನೂ ಕಲ್ಪಿಸಬೇಕೆನ್ನುವ ಉದ್ದೇಶವನ್ನೂ ಅವುಗಳ ಮೇಲೆ ಹೇರಲಾಗಿತ್ತು. ಹೆಚ್ಚಿನಂಶ ಉದ್ದಿಮೆಗಳು ಕೇಂದ್ರಸರಕಾರದ ಉದ್ದಿಮೆಗಳಾಗಿದ್ದುದರಿಂದಲೇನೋ ಉದ್ಯೋಗಾವಕಾಶವನ್ನು ಕಲ್ಪಿಸುವಾಗ ಸ್ಥಳೀಯರಿಗಲ್ಲದೇ ವಿಭಿನ್ನ ಹಿನ್ನೆಲೆಯ ಜನರಿಗೆ ಕೆಲಸ ನೀಡಿದವು ಅನ್ನಿಸುತ್ತದೆ. ಹೀಗಾಗಿ ಈ ಸಂಸ್ಥೆಗಳು ನಗರದ ಬಹುಸಂಸ್ಕೃತಿಯ ಭಿನ್ನತೆಯನ್ನು ಪೋಷಿಸಿದವು. ಈ ಎಲ್ಲ ಸಂಸ್ಥೆಗಳು ರಾಜ್ಯದ ಉದ್ದಿಮೆಗಳಾಗಿದ್ದರೆ "ಮಣ್ಣಿನ ಮಕ್ಕಳಿಗೆ" ಉದ್ಯೋಗಾವಕಾಶ ಕಲ್ಪಿಸಬೇಕೆಂಬ ತುರ್ತು ಹೆಚ್ಚಾಗಿರುತ್ತಿತ್ತೇನೋ. ಈ ಅಂಶವನ್ನು ಜಾನಕೀನಾಯರ್ "ಪ್ರಾಂತೀಯ ಬೂರ್ಜ್ವಾ ಹೆಚ್ಚಾಗಿ ಕಾಣಿಸುತ್ತಿರಲಿಲ್ಲ" ಎಂದು ಗುರುತಿಸುತ್ತಾರೆ. ನಾಯರ್ ಮತ್ತೊಂದು ಆಸಕ್ತಿಕರ ವಿಷಯವನ್ನೂ ಪ್ರಸ್ತುತ ಪಡಿಸುತ್ತಾರೆ. ತಿವಾರಿ ಮತ್ತು ಪ್ರಕಾಶ ರಾವ್ ಅವರ ಅಧ್ಯಯನವನ್ನು ಆಧಾರವಾಗಿಟ್ಟುಕೊಂಡು ಆಕೆ ಹೇಳುವುದೇನೆಂದರೆ - ಹೊಗಿಯುಗುಳುವ ಗಿರಣಿಗಳ ಮೇಲೆ ಆಧಾರಿತವಾದ ಕೈಗಾರೀಕರಣವನ್ನು ದಾಟಿ ನೆಗೆದ ಉದ್ದಿಮೆಗಳನ್ನು ಸ್ಥಾಪಿಸಿದ್ದರಿಂದ ನಗರದಲ್ಲಿ ಕಾರ್ಮಿಕ ಸಂಘಗಳ ಸಂಸ್ಕೃತಿ ಗಟ್ಟಿಯಾಗಿ ಬೆಳೆಯಲಿಲ್ಲವೇನೋ ಅನ್ನುತ್ತಾರೆ. ಹೊಸ ಬೌದ್ಧಿಕ ಸಂಸ್ಥೆಗಳ ಹೆಚ್ಚಿನಂಶ ಕಾರ್ಮಿಕರನ್ನು ಬಡವರ್ಗವೆಂದು ವರ್ಗೀಕರಿಸುವುದಕ್ಕಿಂತ ಮಧ್ಯಮ ವರ್ಗವೆಂದೇ ಅನ್ನಬಹುದಾಗಿತ್ತಾದ್ದರಿಂದ ಅವರಿಗೆ ಬಹುಶಃ ಮುಂಬಯಿನ ಬಟ್ಟೆಗಿರಣಿಗಳ ಕಾರ್ಮಿಕರಿಗಿಂತ ಹೆಚ್ಚಾದ ಸವಲತ್ತುಗಳೇ ಬಹುಶಃ ಇದ್ದುವೇನೋ. ಹೀಗಾಗಿ ಬೆಂಗಳೂರಿನ ಬೆಳವಣಿಗೆ ಒಂದು: ಬೌದ್ಧಿಕತೆಯ ಮೇಲೆ ಆಧಾರವಾಗಿದ್ದ ಉದ್ದಿಮೆಗಳನ್ನು ಸಂಭಾಳಿಸುವ ಶಕ್ತಿ ಮತ್ತು ಎರಡು: ಹೊರಗಿನವರನ್ನು ಸುಲಭವಾಗಿ ನಮ್ಮ ನಡುವೆ ಸೇರಿಸಿಕೊಳ್ಳುವ ಪ್ರಕ್ರಿಯೆಯಿಂದ ಪ್ರೇರಿತವಾಗಿದೆಯೇ? ಹೀಗಾಗಿ ಬಹುರಾಷ್ಟ್ರೀಯ ಸಂಸ್ಥೆಗಳು ಉತ್ಸಾಹದಿಂದ ಬೆಂಗಳೂರನ್ನು ತಮ್ಮ ಮನೆ ಮಾಡಿಕೊಳ್ಳಲು ಉತ್ಸಾಹ ತೋರಿದರೇ ಅನ್ನುವುದು ಆಸಕ್ತಿಯ ವಿಚಾರಕೊಂಡಿಗಳು.
ಈ ಸರಕಾರಿ ಉದ್ದಿಮೆಗಳು ನಗರದ ಸುತ್ತಲೂ ಸ್ಥಾಪಿಸಲ್ಪಟ್ಟವು. ಎಲ್ಲ ಸಂಸ್ಥೆಗಳೂ ತಮ್ಮದೇ ಬಸ್ಸುಗಳನ್ನು ನಗರಾದ್ಯಂತ ಓಡಿಸುತ್ತಿದ್ದುವು. ಹೀಗಾಗಿ ಅಲ್ಲಿನ ನೌಕರಿಯಲ್ಲಿದ್ದವರಿಗೆ ಫ್ಯಾಕ್ಟರಿಯ ಬಳಿ ಮನೆ ಮಾಡುವ ತುರ್ತಿರಲಿಲ್ಲ. ಪೀಣ್ಯ ಇಂಡಸ್ಟ್ರಿಯಲ್ ಎಸ್ಟೇಟ್ ಮತ್ತು ರಾಜಾಜಿನಗರ ಇಂಡಸ್ಟ್ರಿಯಲ್ ಎಸ್ಟೇಟ್ನಂತಹ ಕೆಲವೇ ಜಾಗಗಳನ್ನ ಉದ್ದಿಮೆಗಳಿಗಾಗಿ ಮೀಸಲಿಡಲಾಗಿತ್ತು. ಬಹಳ ಕಾಲದವರೆಗೆ ಜಯನಗರ, ಕೆ.ಆರ್.ರಸ್ತೆಯಲ್ಲಿರುವಂತೆ ಬೆಂಗಳೂರಿಗೆ ತನ್ನದೇ ಛಾಪಿನ ಖಾಲೀ ಜಾಗಗಳು ಇದ್ದುವು. ಮನೆಯ ಬಳಿ ಒಂದು ಉದ್ಯಾನ ದಕ್ಷಿಣ ಬೆಂಗಳೂರಿನಲ್ಲಂತೂ ಇತ್ತು. ಈಗೀಗ ಈ ಜಾಗಗಳು ನಿಧಾನವಾಗಿ ಆಕ್ರಮಣಕ್ಕೊಳಗಾಗಿ, ಸಾರ್ವಜನಿಕ ಜಾಗದಲ್ಲಿರಬೇಕಾದ ಈ ಖಾಲೀ ಜಾಗಗಳು ಖಾಸಗೀ ವಲಯದಲ್ಲಿ ಏರ್ಪಾಟು ಮಾಡುಗ ತುರ್ತು ಉಂಟಾಗುತ್ತಿದೆ. ಈ ಬಗ್ಗೆ ನಾಯರ್ ಪುಸ್ತಕದಲ್ಲಿ ನಂತರದ ಭಾಗದಲ್ಲಿ ಚರ್ಚಿಸುತ್ತಾರೆ. ಅದಕ್ಕೆ ಮೊದಲು ತಿಂಡಿ ತೀರ್ಥದ ಮಾತು ಸ್ವಲ್ಪ ಮುಂದುವರೆಯಲಿ.


ಸಾರ್ವಜನಿಕ ಸ್ಥಳಗಳನ್ನು ನಗರ ಅಳವಡಿಸಿಕೊಂಡಿರುವರೀತಿಯ ಬಗ್ಗೆಯೂ ನಾಯರ್ ಚರ್ಚಿಸುತ್ತಾರೆ. ಹಾಗೆ ನೋಡಿದರೆ ಬೆಂಗಳೂರಿನಲ್ಲಿ ಸಾರ್ವಜನಿಕ ಜಾಗಗಳಲ್ಲಿ ಉದ್ಭವವಾಗಿರುವ ದೇವಸ್ಥಾನಗಳ ಸಂಖ್ಯೆ ಅಪಾರ. ನಾನು ಸಣ್ಣವನಿದ್ದಾಗ ನೆಟ್ಟಕಲ್ಲಪ್ಪ ವೃತ್ತ ಒಂದು ಪುಟ್ಟ ಆಟದ ಮೈದಾನವಾಗಿತ್ತು.

ಸಮಯ ಕಳೆದಂತೆ ಭಕ್ತಿ-ನಂಬಿಕೆಗಳಷ್ಟೇ ಅಲ್ಲದೇ ವಾಣಿಜ್ಯದ ತುರ್ತುಗಳೂ ಸಾರ್ವಜನಿಕ ಸ್ಥಳಗಳನ್ನು ಆಕ್ರಮಿಸಿಬಿಡುತ್ತವೆ. ಪರಿಸರದಲ್ಲಿನ ಸಮತೋಲನ ಮತ್ತು ಜನಹಿತಕ್ಕೆ ಬೇಕಾದ ಸೇವೆಗಳನ್ನೂ ಖಸಗೀ ಕ್ಷೇತ್ರಕ್ಕೆ ತಳ್ಳಲಾಗುತ್ತದೆ. ಬೆಂಗಳೂರಿನ ಅನೇಕ ಕೆರೆಗಳು ಅದೃಶ್ಯವಾಗಿ ಅಲ್ಲಿ ಕಾನ್ಕ್ರೀಟ್ ಸ್ಥಾವರಗಳು ಬೆಳೆದು ನಿಂತುಬಿಟ್ಟಿವೆ. ಒಟ್ಟಾರೆ ನೀರಿನ ಅಭಾವ ಕಾಣಿಸುತ್ತಿದೆ. ಶುದ್ಧವಾದ ಗಾಳಿ ಸೇವಿಸುವುದೂ ಒಂದು ಸಮಸ್ಯೆಯೇ. ಹೀಗಿರುವಾಗ ಸರಕಾರಗಳು ಅತಿಕ್ರಮಣಗಳನ್ನು ತಡೆಯುವುದು ಬಿಟ್ಟು ಈ ಸಾರ್ವಜನಿಕ ಸಮಸ್ಯೆಗಳಿಗೆ ಖಾಸಗೀ ವಲಯದಲ್ಲಿ ಪರಿಹಾರಗಳನ್ನು ಹುಡುಕುತ್ತಿವೆ. ಖಾಸಗೀ ಪರಿಹಾರಗಳೇನು? ಪ್ರತಿ ಮನೆಯಲ್ಲೂ ನೀರಿಗಾಗಿ ಒಂದು ಸಂಪನ್ನು ನಿರ್ಮಿಸುವುದು, ಅದರಿಂದ ನೀರೆಳೆಯಲು ವಿದ್ಯುತ್ತು ಹೀರುವ ಒಂದು ಪಂಪನ್ನು ಹಾಕುವುದು, ಮನೆಯ ಆವರಣದಲ್ಲಿಯೇ ಒಂದು ಬೋರ್ವೆಲ್ ಕೊರೆಯುವುದು ಅದಕ್ಕೂ ಒಂದು ವಿದ್ಯುತ್ ಹೀರುವ ಪಂಪನ್ನು ಹಾಕುವುದು. ಈ ಎಲ್ಲದರ ನಡುವೆ ಹೊಸ ಇಮಾರತುಗಳು ಬಂದಾಗ ಅಲ್ಲಿ ಬಿಡಲೇಬೇಕಾದ ಖಾಲಿ ಜಾಗ, ಅಲ್ಲಿರಬೇಕಾದ ಮಳೆ ನೀರಿನ ಸಂಗ್ರಹದ ಪದ್ಧತಿಗಳ ಬಗ್ಗೆ ಸರಕಾರ ನಿಯಮಗಳನ್ನು ಮಾಡಿ ತನ್ನ ಜವಾಬ್ದಾರಿಯನ್ನು ನಿಭಾಯಿಸಿಬಿಟ್ಟಂತೆ ಧನ್ಯವಾಗಿ ಕೂತುಬಿಡುತ್ತದೆ! ಈ ರೀತಿಯ ನಿಯಮಗಳನ್ನು ಮಾಡುವುದರಲ್ಲಿ ತಪ್ಪೇನೂ ಇಲ್ಲ.. ಆದರೆ ಇವೆಲ್ಲಾ ಅನೇಕ ಸರಕಾರಗಳು ಪೇರಿಸಿಟ್ಟ ತಪ್ಪುಗಳಿಗೆ ಕಟ್ಟುತ್ತಿರುವ ಖಾಸಗೀ ಬೆಲೆಯಲ್ಲವೇ? ಕೆರೆಗಳ ಮೇಲಿನ ಖಾಸಗೀ ಮತ್ತು ಸರಕಾರೀ ಅತಿಕ್ರಮಣವನ್ನು ತಡೆದು ಅದಕ್ಕೂ ಮಿಂಚಿ ಈ ನಿಯಮಗಳನ್ನು ಹೇರಿದ್ದರೆ ಆಗೆ ಸರಕಾರವನ್ನು ಒಂದು ಜವಾಬ್ದಾರಿಯುತ ಸರಕಾರ ಎಂದು ಕರೆಯಬಹುದಿತ್ತೇನೋ. ಇದೇ ರೀತಿಯಾದ ಮತ್ತೊಂದು ಅನಾವಶ್ಯಕ ಹೂಡಿಕೆಯನ್ನು ಇನ್ವರ್ಟರ್ ಮತ್ತು ಬ್ಯಾಟರಿಯ ರೂಪದಲ್ಲಿ ನಾವು ಪ್ರತಿ ಮನೆಯಲ್ಲೂ ನೋಡುತ್ತೇವೆ. ಯಾಕೆಂದರೆ ವಿದ್ಯುತ್ತು ಯಾವಾಗ ಕತ್ತಲಿನಲ್ಲಿ ಅಡಗಲು ನಿರ್ಧರಿಸುತ್ತದೋ ನಮಗೆ ತಿಳಿಯದು. ಅಹಮದಾಬಾದಿನಲ್ಲಿ ನಾನು ಆರು ವರ್ಷಕ್ಕೂ ಹೆಚ್ಚು ಕಾಲಕಳೆದರೂ ಮನೆಯಲ್ಲಿ ಇನ್ವರ್ಟರ್ ಹಾಕುವ ತುರ್ತು ನನಗೆ ಕಂಡಿರಲಿಲ್ಲ. ಕಾರಣ: ಅಲ್ಲಿ ಮನೆಯಲ್ಲಿ ವಿದ್ಯುತ್ತು ಹೋಗಿದ್ದು ಸರಾಸರಿ ವರ್ಷಕ್ಕೆ ಒಮ್ಮೆ ಮಾತ್ರ!
ಪುಸ್ತಕದಲ್ಲಿ ನಾಯರ್ ಬೆಂಗಳೂರಿನ ಒಟ್ಟಾರೆ ಸೌಂದರ್ಯ ಪ್ರಜ್ಞೆಯ ಬಗ್ಗೆ ಚರ್ಚಿಸುತ್ತಾರೆ. ನಗರಕ್ಕೆ ಒಂದು ಐಡೆಂಟಿಟಿಯನ್ನು ಕೊಡಬಹುದಾದ ವಿಷಯವೇನಾದರೂ ಇದೆಯೇ? ಒಂದೇ ಸಾಮಾನ್ಯ ಸೂತ್ರದಿಂದ ನಗರವನ್ನು ಜೋಡಿಸುವ ಯಾವ ಅಂಶವೂ ನಮಗೆ ಕಾಣುವುದಿಲ್ಲ.


ಪುಸ್ತಕದಲ್ಲಿನ ಎರಡು ಭಿನ್ನ ಅಧ್ಯಾಯಗಳಲ್ಲಿ ಬೆಂಗಳೂರಿನ ಚಳವಳಿಗಳು ಮತ್ತು ಭಾಷಾ ರಾಷ್ಟ್ರೀಯತೆಯ ಬಗ್ಗೆ ನಾಯರ್ ಚರ್ಚಿಸುತ್ತಾರೆ. ಕನ್ನಡ ರಾಷ್ಟ್ರೀಯತೆಯ ಬಗೆಗೂ ಅವರ ವಿಚಾರಗಳು ಇದರಲ್ಲಿ ಇವೆ. ನನ್ನಂರಹ ಓದುಗನಿಗೆ ಇದರಿಂದ ಆದದ್ದು ಏನೆಂದರೆ ಎಷ್ಟೋ ವಿಚಾರಗಳಿಗೆ ಮೇಲ್ಮೈಯಲ್ಲಿರುವ ಕೊಂಡಿಗಳಿಗಿಂತ ಭಿನ್ನವಾದ ಸಂಬಂಧಗಳ ಕಾಣ್ಕೆ. ಆಕೆಯ ಸಂಶೊಧನೆಯಿಂದ ಇಂಥ ಕೊಂಡಿಗಳನ್ನು ಆಕೆಯೇ ನಿರೂಪಿಸಿದರೂ ನನ್ನಂತಹ ಓದುಗನಿಗೆ ಪಟ ಹಾರಿಸಲು ಒಂದೆರಡು ವಿಷಯಗಳನ್ನು ಬಿಟ್ಟುಕೊಟ್ಟಿದ್ದಾರೆ. ಆಕೆ ತುರ್ತು ಪರಿಸ್ಥಿತಿಯ ನಂತರ "ಸಮುದಾಯ" ದಿಂದ ಬೆಂಗಳೂರಿನ ಜನಪರ ವಿಚಾರಧಾರೆಯ ಮೇಲಿನ ಪ್ರಭಾವದ ಬಗ್ಗೆ ಆಕೆ ವಿಸ್ತಾರವಾಗಿ ಚರ್ಚಿಸುತ್ತಾರೆ. ತುರ್ತು ಪರಿಸ್ಥಿತಿಯ ಕಾಲದಲ್ಲಿ ಎಡ ಮತ್ತು ಬಲ ಪಂಥೀಯರ ಮೇಲೆ ದಬ್ಬಾಳಿಕೆ ನಡಿದಿತ್ತಾದರೂ, ಆ ದಬಾಳಿಕೆಯನ್ನು ಅತ್ಯಂತ ಸೃಜನಶೀಲವಾಗಿ ಎದುರಿಸಿದವರು ಎಡ ಪಂಥೀಯರು. ಸಮುದಾಯದ ಫಲವಾಗಿ ಕನ್ನಡ ರಂಗಕ್ಷೇತ್ರಕ್ಕೆ ಪುನಶ್ಚೇತನ ಬಂದಿದ್ದಲ್ಲದೇ ಅನೇಕ ಸೃಜನಶೀಲ ಕಲಾವಿದರು ಬೆಳಕಿಗೆ ಬರಲು ಸಾಧ್ಯವಾಯಿತು. ಈ ಕಲಾವಿದರು ಸಂಸ್ಕೃತಿಯನ್ನು ಆಂದೋಲನ ಮತ್ತು ವಿಚಾರಧಾರೆಯನ್ನು ಹಬ್ಬುವ ಮಾಧ್ಯಮವನ್ನಾಗಿ ಬಳಸಿದರು. ಕನ್ನಡ ರಾಷ್ಟ್ರೀಯತೆಯ ಮೂಲಸೆಲೆ ಇಲ್ಲಿಂದ ಪ್ರಾರಂಭವಾಗುವ ಸಾಧ್ಯತೆ ಇತ್ತಾದರೂ ಅದು ಹಾಗಾಗಲಿಲ್ಲ.
ಇದಕ್ಕೆ ಕಾರಣಗಳು ಹಲವಿರಬಹುದು. ಎಡಪಂಥೀಯರು ಹೆಚ್ಚಾಗಿ ಪ್ರತಿನಿಧಿಸಿದ್ದು ಉದ್ದಿಮೆಗಳ ಕಾರ್ಮಿಕವರ್ಗವನ್ನು. ಅವರು ಸಂವಹನಕ್ಕೆ ಉಪಯೋಗಿಸಿದ ಮಾಧ್ಯಮ ಕನ್ನಡ. ಹೀಗಾಗಿ ಒಂದು ಭಾಷೆಯಾಧಾರಿತವಾದ ಅಸ್ತಿತ್ವವನ್ನು ಅವರು ನಿರ್ಮಿಸುವ ಸಾಧ್ಯತೆಗಳನ್ನು ಅವರು ತೆರೆದಿಟ್ಟರು. ಆದರೆ ಹಾಗಾಗಲಿಲ್ಲ ಅಂತ ನಾಯರ್ ವಾದಿಸುತ್ತಾರೆ. ಆಕೆಯ ಮಾತುಗಳು ಇಂತಿವೆ: "ಎಲ್ಲವನ್ನೂ ಒಳಗೊಂಡು ಚಟುವಟಿಕೆಗಳಿಂದ ಜೀವಂತವಾಗಿದ್ದ ಈ ಆಂದೋಲನ ೧೯೮೦ರ ವೇಳೆಗೆ ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಂಡು ಬಿಟ್ಟಿತು. ಆ ವೇಳೆಗೆ ಪ್ರಜಾಸತ್ತಾತ್ಮಕ ಕೋರಿಕೆಗಳನ್ನು ವ್ಯಕ್ತಪಡಿಸುವುದಕ್ಕೆ ಭಾಷೆಯ ಮಾಧ್ಯಮ ತನ್ನ ಮೂಲಭೂತ ಸ್ಥಾನವನ್ನ ಕಳೆದುಕೊಂಡುಬಿಟ್ಟಿತ್ತು.." ಹೀಗಾಗಿ ಕನ್ನಡ ಭಾಷೆಯ ಆಧಾರವಾಗಿ ಒಂದು ಅಸ್ತಿತ್ವ ರೂಪುಗೊಂಡದ್ದು ೧೯೮೨ರ ಗೋಕಾಕ್ ಚಳವಳಿಯ ನಂತರ ಎಂದು ಆಕೆ ವಾದಿಸುತ್ತಾರೆ. ಈ ವಾದವನ್ನು ಮಂಡಿಸುವಾಗ ನಾಯರ್ಗೆ ಕಾಣದ ಕೊಂಡಿ ಎಂದರೆ, ರಂಗಭೂಮಿಯಲ್ಲಿ, ಸಾಹಿತ್ಯದಲ್ಲಿ ಸಕ್ರಿಯರಾಗಿದ್ದ ಜನರೇ ಗೋಕಾಕ್ ಚಳವಳಿಯಲ್ಲೂ ಸಕ್ರಿಯತೆಯನ್ನು ತೋರಿಸಿದ್ದರು. ವಿದ್ಯೆಯಲ್ಲಿ ಭಾಷೆಯ ಮಾಧ್ಯಮದ ವಿಚಾರದಿಂದಾಗಿ ಗೋಕಾಕ್ ಚಳವಳಿ ವಿಭಿನ್ನ ವಿಚಾರಧಾರೆಯ ಅನೇಕರನ್ನು ಒಗ್ಗೂಡಿಸಿತ್ತು. ಆದರೆ ರಂಗಕರ್ಮಿಗಳೂ, ಸಾಹಿತಿಗಳೂ ಗೋಕಾಕ್ ಚಳವಳಿಯ ಮೆಟ್ಟಿಲಲ್ಲಿಯೇ ನಿಂತುಬಿಟ್ಟರು. ಕನ್ನಡ ಶಕ್ತಿ ಕೇಂದ್ರದ ಮೂಲಕ ಚಿದಾನಂದ ಮೂರ್ತಿಯಂಥವರು ಈ ಚಳವಳಿಯನ್ನ ಜೀವಂತವಾಗಿಟ್ಟಿದ್ದಲ್ಲದೇ ಅದನ್ನು ಮುಂದಿನ ಹಂತಕ್ಕೆ ಒಯ್ದರು. ವಿದ್ಯೆಯಲ್ಲಿ ಕನ್ನಡಕ್ಕೆ ಮೂಲಭೂತ ಸ್ಥಾನವನ್ನು ಕಾಯ್ದಿರಿಸುವುದಲ್ಲದೇ ಅವರುಗಳು ಕನ್ನಡಿಗರಿಗೆ ಆರ್ಥಿಕ, ಉದ್ಯೋಗಾವಕಾಶದ ಜಾಗದಲ್ಲೂ ತಮ್ಮ ಹಕ್ಕುಗಳು ದೊರೆಯಬೇಕೆಂಬ ಬೇಡಿಕೆಯ ಬೆನ್ನೇರಿ ಹೋದರು. ಉದ್ದಿಮೆಗಳಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶಕ್ಕೆ ಮೀಸಲಾತಿಯಿರಬೇಕೆಂಬ ಮಾತನ್ನು ಹೇಳಿದ ಮಹಿಷಿ ಆಯೋಗ ಈ ನಿಲುವನ್ನು ಮತ್ತಷ್ಟು ಬಲಪಡಿಸಿತು.
ಕನ್ನಡಕ್ಕೆ ಪ್ರಾಮುಖ್ಯತೆ ನೀಡಬೇಕೆಂಬ ಬೇಡಿಕೆ ಮತ್ತು ಆಂದೋಲನಗಳನ್ನು ಮೊದಲಿಗೆ ಕನ್ನಡ ಶಕ್ತಿ ಕೇಂದ್ರ, ಆನಂತರ ಕನ್ನಡ ರಕ್ಷಣಾ ವೇದಿಕೆ ಕೈಗೊಳ್ಳುತ್ತಿರುವಾಗಲೇ [ಭಾಷೆಯಾಧಾರದ ಮೇಲಲ್ಲದೇ, ತನ್ನ ಬಹು ಸಂಸ್ಕೃತೀ ಸೆಲೆಯನ್ನು ಉಳಿಸಿಕೊಳ್ಳುತ್ತಲೇ] ಬೆಂಗಳೂರನ್ನು ಇನ್ನೂ ಉತ್ತಮನಗರವನ್ನಾಗಿ ಮಾಡುವು ಬಗ್ಗೆ ಬೇರೆಯೇ ಪ್ರಯತ್ನಗಳು ನಡೆದಿದ್ದವು. ಈ ವಿರೋಧಾಭಾಸವೆನ್ನಿಸಬಹುದಾದಂತಹ ವಿಚಾರವನ್ನ ಆಗಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಘಟಿಸಿದ ಬೆಂಗಳೂರು ಅಜೆಂಡಾ ಟಾಸ್ಕ್ ಫೋರ್ಸ್ನ [ಬಿಎಟಿಎಫ್] ರೂಪುರೇಶೆಯಲ್ಲಿ ನಾವು ನೋಡಬಹುದು.

ನಾವು ಬೆಂಗಳೂರಿನಿಂದ ನಮ್ಮ ದೃಷ್ಟಿ ಸರಿಸಿದಂತೆ ಕನ್ನಡ ಭಾಷೆಗೆ ಸಮೀಪವಾಗುತ್ತಾ ಹೋಗುತ್ತೇವೆ. ಹೀಗಾಗಿ ನಮಗೆ ಕಾಣಿಸುವ ಈ ವಿಭೇದ ಕರ್ನಾಟಕದ ಇತರ ಭಾಗಗಳಿಗೂ ಬೆಂಗಳೂರಿಗೂ ಇರುವ ಅಂತರವಷ್ಟೇ ಅಲ್ಲದೇ ಕನ್ನಡಿಗರಿಗೂ ಇತರರಿಗೂ ಇರುವ ಅಂತರದಲ್ಲೂ ಅಡಕವಾಗಿದೆ. ಆದರೆ ನಾವು ಬೆಂಗಳೂರಿನಿಂದ ರಾಜ್ಯದ ಮಿಕ್ಕ ಭಾಗಗಳತ್ತ ಹೋದಾಗ, ಕನ್ನಡಿಗ-ಹೊರನಾಡಿಗ ಅನ್ನುವ ಅಂತರ ದೊಡ್ಡ ವಿಷಯವಾಗಿ ಕಾಣುವುದಿಲ್ಲ. ಹೀಗಾಗಿ ಕಾಲಾಂತರದಲ್ಲಿ ನಾವು ಬೆಂಗಳೂರಿನಲ್ಲಿ ಹೆಚ್ಚೆಚ್ಚು ಕನ್ನಡ ರಾಷ್ಟ್ರೀಯತೆಯ ಧ್ವನಿಯನ್ನು ಗಟ್ಟಿಯಾಗಿ ಕೇಳಲಿದ್ದೇವೆ. ಆರ್ಥಿಕ ಅವಕಾಶಗಳು ಹೆಚ್ಚಾದಂತೆ ಬಡವ-ಬಲ್ಲಿದರ ನಡುವಿನ ಅಂತರವೂ ಹೆಚ್ಚಾಗಿ ಜನ ಇಬ್ಬದಿಯಲ್ಲಿ ಧೃವೀಕರಿಸುವುದು ಸಹಜವಾಗುತ್ತದೆ. ಕನ್ನಡಿಗರಿಗೆ ಈ ಆರ್ಥಿಕ ಅವಕಾಶಗಳು ದೊರಕುವವಾದರೂ, ಹಾಗೆ ಅದನ್ನು ಪಡೆದುಕೊಂಡವರು ಹೊರಗಿನವರ ನಡುವೆ ತಮ್ಮ ಕನ್ನಡದ ಅಸ್ತಿತ್ವವನ್ನು ಕಳೆದುಕೊಂಡುಬಿಡುತ್ತಾರೆ. ಆದರೆ ಆ ಅವಕಾಶಗಳ ಸವಲತ್ತಿಲ್ಲದವರು ಮಾತ್ರ ಕನ್ನಡದವರೇ ಆಗುವುದರಿಂದ ಭಾಷೆ ಐಡೆಂಟಿಟಿಯೇ ಅವರ ಎಲ್ಲ ಚಡಪಡಿಕೆಗಳ ಸಂವಹನ ಮಾಧ್ಯಮವಾಗುತ್ತದೆ ಎಂದು ನಾನು ಹಿಂದೆ ಬರೆದಿದ್ದೆ.
ಕನ್ನಡ ರಾಷ್ಟ್ರೀಯತೆಯ ಬಗ್ಗೆ ಚರ್ಚಿಸುತ್ತಾ ಆಕೆ ಡಿ.ಆರ್.ನಾಗರಾಜ್ ಅವರ ಬರಹಗಳನ್ನು ನೆನಪು ಮಾಡಿಕೊಳ್ಳುತ್ತಾರೆ. ಡಿ.ಆರ್. ಪ್ರಕಾರ ಕನ್ನಡ ರಾಷ್ಟ್ರೀಯತೆಯ ಹುಡುಕಾಟದಲ್ಲಿ ಎರಡು ಭಿನ್ನ ಸೆಲೆಗಳಿದ್ದುವು. ಒಂದು ಆಲೂರು ವೆಂಕಟರಾಯರ ಮಾದರಿಯದ್ದು. ಅದನ್ನು ಧಾರ್ಮಿಕ ರಾಷ್ಟ್ರೀಯತೆ ಎಂದು ಆಕೆ ಕರೆಯುತ್ತಾರೆ. ಆ ಸೆಲೆಯಲ್ಲಿ ವೆಂಕಟರಾಯರು ಎಲ್ಲ ಭಾಷೆಗಳನ್ನು ಒಳಗೊಳ್ಳುತ್ತಲೇ ಕನ್ನಡಕ್ಕೆ ಪ್ರಾಮುಖ್ಯತೆ ಇರಬೇಕೆಂದು ವಾದ ಮಾಡುತ್ತಾರಂತೆ. ಎರಡನೆಯ ಸೆಲೆ ಚಿದಾನಂದಮೂರ್ತಿ ಮತ್ತು ಕನ್ನಡ ಶಕ್ತಿಕೇಂದ್ರದ ವೈಖರಿಯಿಂದ ಬಂದದ್ದು. ಇದನ್ನು ಬೆದರಿಸುವ ರಾಷ್ಟ್ರೀಯತೆ [fear centred nationalism] ಎಂದು ಅವರು ಕರೆಯುತ್ತಾರೆ. ಬೆಂಗಳೂರು ಭಿನ್ನ ಭಾಷೆಯನ್ನಾಡುವ ವಿವಿಧ ಹಿನ್ನೆಲೆಯ ಜನರನ್ನು ಬಹಳ ಹಿಂದಿನಿಂದಲೇ ಒಳಗೊಳ್ಳುತ್ತಾ ಬೆಳೆದಿದೆ. ಇದರಲ್ಲಿ ನಾಲ್ಕು ಬೃಹತ್ ಸರಕಾರಿ ಉದ್ದಿಮೆಗಳಲ್ಲಿದ್ದ ಕನ್ನಡೆತರ ಕಾರ್ಮಿಕರೂ ಸೇರಿದ್ದಾರೆ. ನಾಯರ್ ಪ್ರಕಾರ ಬೆಂಗಳೂರಿಗೆ ಆಗಿರುವ ಒಳವಲಸೆ ಹೆಚ್ಚಿನಂಶ ಪ್ರೆಸಿಡನ್ಸಿ ಪ್ರದೇಶಗಳಿಂದಾಗಿದೆಯೇ ಹೊರತು ವಿಶಾಲ ಕರ್ನಾಟಕದ ಗ್ರಾಮೀಣ ಭಾಗಗಳಿಂದಲ್ಲ. ಆದರೆ ಬೆಂಗಳೂರು ವಿಶಾಲ ಕರ್ನಾಟಕದ ರಾಜಧಾನಿಯಾದ್ದರಿಂದ ಭಾಷೆಯ ವಿಷಯಕ್ಕೆ ಬಂದಾಗ ಅದು ಒಂದು ನಾಜೂಕು ವಿಷಯವಾಗುತ್ತದೆ. ಒಟ್ಟಾರೆ ಇದು ಇರುವ ಸ್ಥಳಗಳನ್ನು-ಅವಕಾಶಗಳನ್ನು ಆಕ್ರಮಿಲಿಕೊಳ್ಳುವ, ಅದನ್ನು ಇತರರಿಂದ ಪಡೆಯುವ ಪ್ರಕ್ರಿಯೆಗೆ ಸಂಬಂಧಿಸಿದ್ದಾಗಿದೆ.
ಕಾಲಾಂತರದಲ್ಲಿ ಮೂಲತಃ ಭಾಷೆಗೆ ಸಂಬಂಧವಿಲ್ಲದ ವಿಷಯಗಳೂ ಭಾಷಾದೋಲನದ ಮೂಲಕವೇ ವ್ಯಕ್ತವಾಗುವುದನ್ನು ನಾವು ಕಾಣುತ್ತೇವೆ. ಗೋಕಾಕ್ ಚಳವಳಿಗೆ - ಕನ್ನಡ ಹೋರಾಟಗಾರರಿಂದ ಹಿಡಿದು ಬುದ್ಧಿಜೀವಿಗಳ ವರೆಗೆ - ಎಲ್ಲ ವಲಯಗಳಿಂದಲೂ ಬೆಂಬಲ ದೊರೆತಿತ್ತು. ಆದರೆ ಆ ಆಂದೋಲನವೇ ಹೋರಾಟದ-ಬೆದರಿಕೆಯ ಕನ್ನಡ ರಾಷ್ಟ್ರೀಯತೆಯ ಬೀಜವನ್ನೂ ಬಿತ್ತಿತ್ತೆನ್ನಿಸುತ್ತದೆ. ಇದೇ ಮೂಲಸೆಲೆ ನಂತರ ಚರ್ಚುಗಳಲ್ಲಿ ಕನ್ನಡದ ಬಳಕೆಯತ್ತ ಹರಿಯಿತು, ಮತ್ತು ಕಾವೇರಿ ನೀರಿನ ಬಗ್ಗೆಯೂ, ದೂರದರ್ಶನದಲ್ಲಿನ ಉರ್ದು ವಾರ್ತಾ ಪ್ರಸಾರದ ಬಗ್ಗೆಯೂ ಹಬ್ಬಿತು. ಕಾವೇರಿ ನೀರು ಭಾಷೆಗಿಂತ ಹೆಚ್ಚಾಗಿ ಒಂದು ಭೌಗೋಳಿಕ ವಿಷಯವಾದರೂ ಅದು ಭಾಷೆಯ ಮೂಲಕವೇ ತನ್ನ ಅಭಿವ್ಯಕ್ತಿಯನ್ನು ಕಂಡುಕೊಂಡಿತು. ತಿರುವಳ್ಳುವರ್ ಪ್ರತಿಮೆಯ ಸ್ಥಾಪನೆಯ ಬಗ್ಗೆಯೂ ಅನೇಕ ವರ್ಷಗಳಿಂದ ಚರ್ಚೆ ನಡೆದಿದ್ದು ಅದು ತಮಿಳುನಾಡು-ಕರ್ನಾಟಕ ಸರಕಾರಗಳ ನಡುವಿನ ಲೇಣ್-ದೇಣ್ ವಿಷಯವಾಗಿಬಿಟ್ಟಿದೆ! ತಮಾಷೆಯೆಂದರೆ ದಂತಚೋರ ವೀರಪ್ಪನ್ ಕೂಡಾ ಇದನ್ನು ರಾಜ್ಕುಮಾರ್ ಅಪಹರಣದೆ ವೇಳೆಯಲ್ಲಿ, ಒಂದು ಬೇಡಿಕೆಯಾಗಿ ಮಂಡಿಸಿದ್ದು! ಆ ಅಪಹರಣದ ಕಾಲದಲ್ಲಿ ದೊಡ್ಡ ಭಾಷಾಧಾರಿತ ಗಲಭೆಯಾಗಲಿಲ್ಲವಾದರೂ, ಆಗಿನ ಭಾವನೆಗಳು ಕನ್ನಡ ಮತ್ತು ತಮಿಳು ಭಾಷೆಗಳ ನಡುವಿನ ಅಂತರವನ್ನು ಹಿಗ್ಗಿಸುವ ಕಾರ್ಯ ಮಾಡಿತು.
ಮಾಹಿತಿ ತಂತ್ರಜ್ಞಾನದ ಆಧಾರಿತವಾಗಿ ಉದ್ಭವವಾಗುತ್ತಿರುವ ಆರ್ಥಿಕ ಅವಕಾಶಗಳು ಭಾಷೆ-ಜಾತಿಗ

ಪುಸ್ತಕದಂತ್ಯದಲ್ಲಿ ಈ ಇಡೀ ನಗರದ ಇಪ್ಪತ್ತನೆಯ ಶತಮಾನದ ಚರಿತ್ರೆಯನ್ನು ಒಂದು ಸ್ತ್ರೀವಾದಿ ದೃಷ್ಟಿಕೋನದಿಂದ ನಾಯರ್ ನೋಡುತ್ತಾರೆ. ಅದಕ್ಕೆ ಅವರು ನಗರದ ಕೈನೆಟಿಕೀಕರಣ ಎಂಬಂತಹ ನಾಮಕರಣವನ್ನೂ ಮಾಡಿದ್ದಾರೆ. ಮಿಸ್.ವರ್ಲ್ಡ್ ಸ್ಪರ್ಧೆಯ ಸಮಯದಲ್ಲಿ ಆದ ಸ್ತ್ರೀವಾದಿ ಆಂದೋಲನವನ್ನು ಅವರು ಅದ್ಭುತವಾಗಿ ವಿಶ್ಲೇಶಿಸುತ್ತಾರೆ. ಈ ಬಗ್ಗೆ ಹೆಚ್ಚು ಚರ್ಚಿಸಲು ನನಗೆ ಅರ್ಹತೆಯಿಲ್ಲವೆನ್ನಿಸಿ ಅದನ್ನು ಇಲ್ಲಿಗೇ ಬಿಡುತ್ತಿದ್ದೇನೆ.
ಈ ಅದ್ಭುತ ಪುಸ್ತಕವನ್ನು ನಾಯರ್ ಬಿಎಟಿಎಫ್ನ ಪಾತ್ರದ ರೂಪುರೇಷೆಯ, ಖಾಸಗೀ-ಸಾರ್ವಜನಿಕ


ಅನೇಕ ವರ್ಷಗಳ ನಂತರ ಬೆಂಗಳೂರಿನಲ್ಲಿ ವಾಸವಾಗಿರಲು ವಾಪಸ್ಸಾಗಿರುವ ನನಗೆ, ಈ ಎಲ್ಲ ಅನಾಹುತದ ನಡುವೆ ಈಗಲೂ ಲಾಲ್ಬಾಗ್ನಲ್ಲಿ ಬೆಳಗಿನ ವಾಯುವಿಹಾರ ಮಾಡಲು ಸಾಧ್ಯವಿದೆ, ಉಪಹಾರ ದರ್ಶಿನಿಯಲ್ಲಿ ದುಬಾರಿಯಲ್ಲದ ತಿಂಡಿ ತಿನ್ನಬಹುದಾಗಿದೆ, ವಿದ್ಯಾರ್ಥಿ ಭವನಕ್ಕೆ ಆಗಾಗ ಭೇಟಿ ನೀಡುವ ಸಾಧ್ಯತೆಯಿದೆ, ಹಾಗೂ ತುಂಬಾ ಬೆವರು ಸುರಿಸದೇ [ಆದರೆ ಸಮಯ ಹಾಳುಮಾಡಿ] ನನ್ನ ಕೆಲಸಕ್ಕೆ ಹೋಗಲು ಸಾಧ್ಯವಾಗುತ್ತದೆ. ೪೦ ಡಿಗ್ರಿಗಳಿಗಿಂತ ಹೆಚ್ಚಿನ ಉಷ್ಣಾಂಶ ತಲುಪುವ ಮಳೆಯಾಗದ ಅಹಮದಾಬಾದಿಗಿಂತ ಇದು ವಾಸಿ. ಇಂದಿಗೂ ಬೆಂಗಳೂರು ಸುಂದರವಾಗಿದೆ, ಹಾಗೂ ಅದನ್ನು ಹಾಗೇ ಉಳಿಸಿಕೊಳ್ಳಬಹುದೆಂಬ ಆಸೆಯನ್ನಿಟ್ಟುಕೊಳ್ಳುವುದು ಅಸಮಂಜಸವಾಗಲಾರದು. ಇಷ್ಟಲ್ಲಾ ಸುದೀರ್ಘವಾಗಿ ಬರೆದ ನಂತರ ನನ್ನದೊಂದೇ ಮನವಿ. ಸ್ವಲ್ಪ ಬನ್ನೇರುಘಟ್ಟ ರಸ್ತೆಯಲ್ಲಿ ಬೆಳಿಗ್ಗೆ ಒಂಭತ್ತು ಘಂಟೆಗೆ ವಾಹನಗಳು ಮುಂದಕ್ಕೆ ಚಲಿಸುವಂತಹ ಏರ್ಪಾಟನ್ನು ಯಾರಾದರೂ ಮಾಡಲು ಸಾಧ್ಯವೇ??
No comments:
Post a Comment