Saturday, August 11, 2012

2012ರಲ್ಲಿ ಪ್ರಸ್ತುತವಾಗಿರುವ ಶ್ರೀಕಾಂತರ ಕಥೆಗಳು

ಈ 2012ನೇ ಸಂವತ್ಸರದಲ್ಲಿ ಶ್ರೀಕಾಂತರ ಇಡಿಯ ಸಾಹಿತ್ಯವನ್ನು ಓದಿ, ಅದನ್ನು ಅರ್ಥೈಸಿ ಅದಕ್ಕೊಂದು ಚಾರಿತ್ರಿಕ ಮಹತ್ವವನ್ನೂ, ಸಂದರ್ಭವನ್ನೂ ಸೃಷ್ಟಿಸುವುದು ಸುಲಭವಾದ ಕೆಲಸವಲ್ಲ. ನಾನು ಈ ಹಿಂದೆ ಶ್ರೀಕಾಂತರ ಕಥೆಗಳನ್ನು ಓದಿಯೇ ಇರಲಿಲ್ಲ. ಈ ಮಾತು ಆಧುನಿಕ ಸಾಹಿತ್ಯದ ಚರಿತ್ರೆಯಲ್ಲಿ ಇರಬಹುದಾದ ಒಂದು ಕಂದರವನ್ನು ಪ್ರಾತಿನಿಧಿಕವಾಗಿ ಸೂಚಿಸುತ್ತದೆ. ನವ್ಯರ ಕಾಲದಲ್ಲಿ ಬಂದ ಮುಖ್ಯ ಲೇಖಕರಾದ ಆದರೆ ವಿರಳವಾಗಿ ಬರೆದ ರಾಜಲಕ್ಷ್ಮೀ ರಾವ್, ಕಾಮರೂಪಿ, ಗಿರಿ, ಖಾಸನೀಸ, ಕಥೆಗಾರ ಗಿರಡ್ಡಿ, ಕನ್ನಡದಲ್ಲಿ ಸೀಮಿತವಾಗಿ ಬರೆದ ರಾಮಾನುಜನ್ ಇಂಥ ದಿಗ್ಗಜರ ಯಾದಿಗೆ ಶ್ರೀಕಾಂತರೂ ಸೇರುತ್ತಾರೆ. ವಿರಳವಾಗಿ ಬರೆದದ್ದರಿಂದಲೇ ಒಂದು ರೀತಿಯ ಮರವೆಗೆ ಬಲಿಯಾಗುವುದೂ ಸಹಜ. ವಿಪುಲವಾಗಿ ಬರೆಯುವವರ ಹೊಸ ಕೃತಿಯ ಜೊತೆಜೊತೆಗೇ ಅವರುಗಳ ಹಳೆಯ ಕೃತಿಗಳ ಮರುಮೌಲ್ಯಮಾಪನವಾಗುತ್ತದೆ. ಹೀಗಾಗಿ ಅದು ಸಾಮೂಹಿಕ ನೆನಪಿಗೆ ಒಡ್ಡಿಕೊಳ್ಳುತ್ತದೆ. ಕನ್ನಡದಲ್ಲಿ ವಿರಳವಾಗಿ ಬರೆದೂ ಸಾಮೂಹಿಕ ಪ್ರಜ್ಞೆಯಲ್ಲಿ ಜೀವಂತವಾಗಿರುವವರು ದೇವನೂರ ಮಹಾದೇವ ಮಾತ್ರವೇನೋ. ಇಂಗ್ಲೀಷಿನಲ್ಲಿ ತಕ್ಷಣಕ್ಕೆ ನೆನಪಾಗುವ ಹೆಸರು ಟು ಕಿಲ್ ಎ ಮಾಕಿಂಗ್ ಬರ್ಡ್ ಬರೆದ ಹಾರ್ಪರ್ ಲೀ.

ಶ್ರೀಕಾಂತರ ಕಥನ ತಂತ್ರವನ್ನು ಇಂಥ ಚಾರಿತ್ರಿಕ ಸಂದರ್ಭದಲ್ಲಿ ನಾವು ಪರೀಕ್ಷಿಸಬೇಕಾಗಿದೆ. ಅವರ ಸಾಹಿತ್ಯವನ್ನು ಅವಲೋಕಿಸುವಾಗ ನನಗೆ ತಟ್ಟೆಂದು ಹೊಳೆಯುವುದು ಕನ್ನಡ ಸಾಹಿತ್ಯಕ್ಕೆ ವಿಶೇಷವಾದ ಆದರೆ ಅನವಶ್ಯಕವಾದ ಲೇಖಕನ ಜಾತಿ, ರಾಜಕೀಯ ಒಲವುಗಳ ಆಧಾರದ ಓರೆಗಲ್ಲಿನ ಮೇಲೆ ಸಾಹಿತ್ಯದ ಕೃಷಿಯನ್ನು ಉಜ್ಜಿ ನೋಡುವ ಪರಂಪರೆ. ಬ್ರಾಹ್ಮಣವಾದಿ-ದಲಿತ, ಎಡಪಂಥೀಯ-ಬಲಪಂಥೀಯ, ಈ ರೀತಿಯ ದೃಷ್ಟಕೋನದಿಂದ ಮಾಡುವ ಮೌಲ್ಯಮಾಪನದಿಂದಾಗಿ ಕೃತಿಗಳಿಗಿರಬಹುದಾದ ಮೂಲ ಸೃಜನಶೀಲ ಗುಣಗಳನ್ನು ಗುರುತಿಸುವುದರಲ್ಲಿ ನಾವು ವಿಫಲರಾಗುತ್ತೇವೆಯೇ ಎಂದು ನನಗೆ ಆಗಾಗ ಅನ್ನಿಸುತ್ತದೆ.

ಶ್ರೀಕಾಂತರ ಸಾಹಿತ್ಯವನ್ನು ಹೀಗೆ ಅರ್ಥೈಸಿದರೆ ಅವರು ತಮ್ಮ ಮೂಲ ವಿಚಾರಧಾರೆಗೆ ವಿರುದ್ಧವಾಗಿ ಬರೆಯುತ್ತಿದ್ದಾರೆ ಅನ್ನಿಸುತ್ತದೆ. ಅವರ ಪ್ರಾಸ್ತಾವಿಕ ಮಾತುಗಳಲ್ಲಿ, ವ್ಯಾಸರಾವ್ ಬರೆದಿರುವ ಟಿಪ್ಪಣಿಗಳಲ್ಲಿ ತಿಳಿಯುವುದೇನೆಂದರೆ – ಆತ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರೂ, ಆ ವಿಚಾರಧಾರೆಯನ್ನು ಒಪ್ಪಿ ನಡೆದವರೂ ಎನ್ನುವ ವಿವರ. ಆದರೆ ಅವರ ಸೃಜನಶೀಲತೆಯಲ್ಲಿ ಆ ವಿಚಾರಧಾರೆಯ ಸಲೆ ಕಾಣುವುದಿಲ್ಲ. ನಿರಂಜನರ ಕಥೆಗಳನ್ನು ಓದಿದಾಗ ಅವರ ರಾಜಕೀಯದ ಒಲವು ನಮಗೆ ತಕ್ಷಣಕ್ಕೆ ತಿಳಿಯುತ್ತದಾದರೂ, ಶ್ರೀಕಾಂತರ ಕಥೆಗಳನ್ನು ಓದಿದಾಗ ಹಾಗನ್ನಿಸುವುದಿಲ್ಲ.

ಶ್ರೀಕಾಂತರು ಬರೆದ ಸಮಯದ ಚೌಕಟ್ಟಿನಲ್ಲಿ ಅವರ ಕಥೆಗಳನ್ನು ಓದಿದಾಗ ಕೆಲವು ವಿಚಾರಗಳು ನಮ್ಮನ್ನು ತಟ್ಟುತ್ತವೆ. ಅವರ ಸಾಹಿತ್ಯ ಗ್ರಾಮದ ಚೌಕಟ್ಟಿನಲ್ಲಿ ಮೂಡುವುದಿಲ್ಲ. ಜಾತಿ ಪದ್ಧತಿಯಲ್ಲಿ ಉದ್ಭವವಾಗುವುದಿಲ್ಲ. ಶೋಷಣೆಯ ಮಾತಾಗಲೀ, ಮಣ್ಣಿನ ಮಾತಾಗಲೀ ಕಾಣುವುದಿಲ್ಲ, ಒಂದು ಭೌಗೋಳಿಕ ಸಂದರ್ಭಕ್ಕೂ ಅವು ಸೇರುವುದಿಲ್ಲ. ಅನಂತಮೂರ್ತಿಯವರ ಸಂಸ್ಕಾರ, ದೇವನೂರರ ಕುಸುಮಬಾಲೆ, ಮಾಸ್ತಿ, ಲಂಕೇಶರ ಕಥೆಗಳಿಗೆ ಒಂದು ಭೌಗೋಳಿಕ, ಚಾರಿತ್ರಿಕ, ಸಾಂಸ್ಕೃತಿಕ, ಸಾಮಾಜಿಕ ಸಂದರ್ಭವಿತ್ತು. ಆದರೆ ಶ್ರೀಕಾಂತರ ಕಥೆಗಳಿಗೆ ಒಂದು ಸಾರ್ವತ್ರಿಕ ಗುಣವಿದೆ. ಆ ಸಾರ್ವತ್ರಿಕ ಗುಣವನ್ನು ನಾವು ಗುರುತಿಸಬೇಕಾದರೆ ಆ ಕಥೆಗಳನ್ನು ಹಿಂದಿ, ಮರಾಠಿ, ತೆಲುಗು, ತಮಿಳು, ಉರ್ದುವಿನ ಸಂದರ್ಭದಲ್ಲಿ ಊಹಿಸಿ ನೋಡಬೇಕು. ಆಗಲೂ ಅವರ ಕಥೆಗಳು ಪಾಸಾಗುತ್ತವೆ. ಅಂದರೆ ಅದನ್ನು ಗ್ರಾಮ್ಯ-ನಗರ, ಬ್ರಾಹ್ಮಣ-ದಲಿತ, ಆಧುನಿಕ-ಮಡಿವಂತ ಎಂದು ವರ್ಗೀಕರಿಸುವುದಕ್ಕೆ ಸಾಧ್ಯವಿಲ್ಲ. ಒಂದೇ ಕಾಲಕ್ಕೆ ಈ ಕಥೆಗಳು ನವ್ಯದಂತೆಯೂ, ಪ್ರಗತಿಶೀಲದಂತೆಯೂ ಕಾಣಿಸುತ್ತವೆ. ಹೀಗಾಗಿ ಶ್ರೀಕಾಂತರನ್ನು ಒಬ್ಬ ತೆರೆದ ಮನಸ್ಸಿನ ಆಧುನಿಕ ಕಥೆಗಾರ ಎಂದು ಮಾತ್ರ ಕರೆಯಲು ಸಾಧ್ಯ. ಅವರ ಕಥೆಗಳು ಎಲ್ಲೇ ನಡೆದರೂ ಅವಕ್ಕೆ ನಗರೀಕರಣದ, ಅನಾಮಿಕತ್ವದಿಂದ ಬರಬಹುದಾದ ವಿಶಾಲಮನಸ್ಸಿನ ಆಧುನಿಕ ಲೇಪವಿರುವುದನ್ನು ಕಾಣಬಹುದು.

ಶ್ರೀಕಾಂತರ ಕಥೆಗಳಲ್ಲಿ ಎರಡು ಮುಖ್ಯ ಧಾರೆಗಳಿವೆ. ಒಂದು: ಹೆಣ್ಣಿನ ಬಗೆಗಿನ ಅತ್ಯಂತ ಕೂತಹಲ – ಅದರಿಂದ ಬೆಳೆಯುವ ಪ್ರೀತಿ, ಪ್ರೀತಿಗೆ ಆದರ್ಶದ ಲೇಪ. ಆದರ್ಶಕ್ಕಾಗಿ ಸಾಮಾಜಿಕ ಕಟ್ಟುಪಾಡುಗಳನ್ನು-ಮಡಿವಂತಿಕೆಯನ್ನು ಉಲ್ಲಂಘಿಸುವ ಕಥೆಗಳು.  ಎರಡು: ಸಿಟ್ಟಿನ ಧಾರೆ. ಸಿಟ್ಟು ಸಮಾಜದ ಕಟ್ಟುಪಾಡುಗಳಿಗೆ ಸಂಬಂಧಿಸಿದ್ದಾಗಿರಬಹುದು, ಮೌಲ್ಯಗಳ ಬಂಧನದ ಬಗೆಗಿರಬಹುದು, ಮೌಲ್ಯಗಳ ಕುಸಿತದ ಬಗೆಗೂ ಇರಬಹುದು. ಈ ಸಿಟ್ಟನ್ನು ಶ್ರೀಕಾಂತರು ಎರಡು ರೀತಿಯಲ್ಲಿ ವ್ಯಕ್ತಪಡಿಸುತ್ತಾರೆ. ಒಂದು: ವ್ಯಂಗ್ಯ ಕುಹಕದ ದಾರಿ, ಎರಡು: ಅಸಹಾಯಕತೆಯ ದಾರಿ. ಭಾರತ್ ಮಾತಾಕೀ ಜೈ ಕುಹಕದ ಮಾದರಿಯಾದರೆ, ಕೀಚಕರು ಅಸಹಾಯಕತೆಯ-ಚಡಪಡಿಕೆಯ ಮಾದರಿಯಾಗಿದೆ.

ಸಣ್ಣ ಕಥೆಯೆಂದರೆ ಸಣ್ಣ ಕಥೆಯಷ್ಟೇ. ದೊಡ್ಡವಿಚಾರವನ್ನೂ, ಕಾದಂಬರಿಗಿರಬಹುದಾದ ಹರವನ್ನೂ ಮೂರ್ನಾಲ್ಕು ಪುಟಗಳಿಗೆ ಇಳಿಸುವ ಸಾಧ್ಯತೆಯನ್ನು ಶ್ರೀಕಾಂತರು ತೋರಿಸುತ್ತಾರೆ. ಆರ್ಜೆಂಟೀನಾದ ಲೇಖಕ ಹಾರ್ಹೆ ಲುಯಿ ಬೋರ್ಹೆಸ್ ಒಮ್ಮೆ ಹೇಳಿದ್ದನಂತೆ – ಕಾದಂಬರಿ ಬರೆಯಲು ಹತ್ತು ಪುಟಗಳಷ್ಟೇ ಸಾಕು ಮಿಕ್ಕದ್ದು ವಿವರಗಳ ಮಹಾಪೂರ. ತೆಲುಗಿನಲ್ಲಿ ಸತ್ಯಂ ಶಂಕರ ಮಂಚಿ ಯಾವದೇ ಕಥೆಯನ್ನು ಮೂರೇ ಪುಟಗಳಲ್ಲಿ ಬರೆಯುತ್ತಿದ್ದರು. ಆ ಕಥೆಗಳು ಸರಳವಾಗಿದ್ದರೂ ಅವುಗಳಿಗಿದ್ದ ಅನಂತ ಸಾಧ್ಯತೆಗಳು ಒಂದು ವಿಶಾಲವಾದ ಕ್ಯಾನ್ವಾಸನ್ನು ಒದಗಿಸುತ್ತಿತ್ತು. ಶ್ರೀಕಾಂತರ ಕಥನವೂ ಅದೇ ಚೌಕಟ್ಟಿಗೆ ಸೇರಿದ್ದು. ಸಣ್ಣ ವಾಕ್ಯಗಳು. ಅದಕ್ಕೇ ಇರುವ ಲಯ. ಲಯದಿಂದಲೇ ಉಂಟಾಗುವ ಒಟ್ಟಾರೆ ಅನುಭವ ಓದಿಗಿಂತ ಮಿಗಿಲಾದದ್ದೇನನ್ನೋ ನೀಡುತ್ತದೆ. ಉದಾಹರಣೆಗೆ ಈ ಸಾಲುಗಳನ್ನು ಕೇಳಿ: "ಲೇ ಅಂದರೆ ಅವಳೇ. ಪಾಪ ರಾಮಶೇಷು. ಪಾಪ ಮೂರನೇ ತಾಳಿ ಕಟ್ಟಿಸಿಕೊಂಡವಳು. ಪಾಪ ಅವಳಿಗೆ ಮೊದಲನೆಯದ್ದಾದರೂ ಯಜಮಾನ್ರು ಕಟ್ಟಿದ್ದು ಮೂರನೆಯದು. ಪಾಪ ಈ ಮನೆಗೆ ಬಂದಾಗಿನಿಂದಲೂ ಹೆರುವುದೇ ಕೆಲಸ.  ಪಾಪ ಒಂದಾದಮೇಲೊಂದು. ಪಾಪ ಒಂದಿನವಾದರೂ ಚಕಾರವೆತ್ತಿದವಳಲ್ಲ. ಪಾಪ...." (ಕಥೆ: ಕೊಡೆಯ ಕೆಳಗೆ, ಪುಟ:88). ಹೀಗೆ ರಾಮಶೇಷುವಿನ ವಿವರಣೆ ಮುಂದುವರೆಯುತ್ತದೆ. ಆ ವಿವರಣೆಯಲ್ಲಿ ಕಥೆ ಓದುತ್ತಿರುವ ನಿಶ್ಶಬ್ದ ವಾತಾವರಣದಲ್ಲಿ ಈ ಪಾಪ ಪದದ ಅನುರಣನ ಮೌನವನ್ನು ಭೇದಿಸುವ ಶಬ್ದವಾಗಿದೆ. ತಂತ್ರದ ದೃಷ್ಟಿಯಿಂದ ಇದು ಒಂದು ಅದ್ಭುತವೆಂದೇ ಹೇಳಬೇಕು. ಕಥೆಗಳನ್ನು ಕಣ್ಣಿಗೆ ಕಟ್ಟಿದ ಹಾಗೆ ನಿರೂಪಿಸುವುದನ್ನು ಕಂಡಿದ್ದೇವೆ. ಇವರ ಕಥೆಗಳು ಶ್ರಾವ್ಯರೂಪದಲ್ಲೂ ದಕ್ಕುತ್ತವೆ.

ಗಂಭೀರ ಶುಶ್ಕ ಕಥೆಗಳ ನಡುವೆ ಆಗಾಗ " ಸೊಸೆ ಮಾತಾಡಲಿಲ್ಲ"  ಎನ್ನುವಂತಹ ಲವಲವಿಕೆಯ ಕಥೆಗಳು ನುಸುಳಿ ಮನಸ್ಸಿಗೆ ಮುದ ನಿಡುತ್ತವೆ. ಬುದ್ಧಿಗೆ ಕಸರತ್ತು ನೀಡಿ ಮನಸ್ಸನ್ನು ವಿಚಲಿತಗೊಳಿಸುವ ಕಥೆಗಳ ನಡುವಿನಲ್ಲಿ ಆಗಾಗ ಇಂಥದೊಂದು ಕಥೆಯನ್ನು ನೀಡಿ ಶ್ರೀಕಾಂತರು ವೈವಿಧ್ಯವನ್ನೂ ನೀಡಿದ್ದಾರೆ.

ಆಧುನಿಕ ಕನ್ನಡ ಕಥೆಯ ಚರ್ಚೆಯಲ್ಲಿ ಶ್ರೀಕಾಂತರ ಭಿನ್ನ ಧ್ವನಿಯನ್ನು ನಾವು ಗುರುತಿಸಬೇಕಾದ ಅವಶ್ಯಕತೆ ಇದೆ. ಅವರು ಬರೆದ ಸಂದರ್ಭದಲ್ಲಿ ಆ ಕಥೆಗಳು ಎಷ್ಟು ಮುಖ್ಯವಾಗಿದ್ದುವೋ ಇಂದೂ ಅಷ್ಟೇ ಪ್ರಸ್ತುತವೆನ್ನಿಸುವಂತೆ ಇವೆ. 183ಪುಟಗಳ ಅವರ ಸಮಗ್ರ ಸಾಹಿತ್ವವನ್ನು ಪ್ರಸ್ತುತಪಡಿಸುತ್ತಾ ಕೆ.ನರಸಿಂಹಮೂರ್ತಿ, ಎಸ್.ದಿವಾಕರ್, ಪ್ರಧಾನ ಗುರುದತ್ತ, ರಾಮದಾಸ್, ಎಂ.ಎನ್.ವ್ಯಾಸರಾವ್, ಮಾಧವ ಕುಲಕರ್ಣಿಯಂತಹ ಮಹನೀಯರು ಬರೆದಿರುವ ಲೇಖನಗಳೂ ಶ್ರೀಕಾಂತರ ಸಾಹಿತ್ಯದ ಮಹತ್ವವನ್ನು ತೆರೆದಿಡುತ್ತವೆ. ಶ್ರೀಕಾಂತರ ಸಮಗ್ರ ಕಥೆಗಳು ಒಂದು ಮುಖ್ಯ ಪುಸ್ತಕವೆನ್ನುವುದರಲ್ಲಿ ಅನುಮಾನವಿಲ್ಲ. ಈ ಸಂದರ್ಭದಲ್ಲಿ ನಾವು ಆ ಮಹತ್ವವನ್ನು ಗುರುತಿಸಿ ಅವರ ದೇಣಿಗೆಯ ಮರುಮೌಲ್ಯಮಾಪನಮಾಡುವ ಅವಶ್ಯಕತೆ ಇದೆ.

ಭಾನುವಾರ, 05 ಆಗಸ್ಟ್ 2012


Wednesday, January 27, 2010

ಹೊಸ ಓದು: ಬಡ್ಡಿವ್ಯಾಪಾರಿಯ ಸಾವು - ಕಥನ ತಂತ್ರದ ಕೆಲವು ವಿಚಾರಗಳು

ಕಾದಂಬರಿ: Death of a Moneylender
ಲೇಖಕಿ - ಕೋಟ ನೀಲಿಮಾ

ಕೋಟ ನೀಲಿಮಾರ ಡೆಥ್ ಆಫ್ ಎ ಮನೀಲೆಂಡರ್ ಅನ್ನುವ ಇತ್ತೀಚಿನ ಪುಸ್ತಕ ಈಚೆಗೆ ಬರುತ್ತಿರುವ ಭಾರತೀಯರು ಬರೆಯುತ್ತಿರುವ ಇಂಗ್ಲೀಷ್ ಸಾಹಿತ್ಯದ ಸಂದರ್ಭದಲ್ಲಿ, ಒಂದು ಭಿನ್ನ ಲಹರಿಯನ್ನು ತರುತ್ತದೆ. ಇಂಗ್ಲೀಷಿನಲ್ಲಿ ಬರೆಯುವ ಭಾರತೀಯ ಬರಹಗಾರರು ಪಶ್ಚಿಮಾಭಿಮುಖವಾಗಿ ಯಾರನ್ನೋ ಮೆಚ್ಚಿಸಲು ಮಾತ್ರ ಬರೆಯುತ್ತಿದ್ದಾರೆ ಎನ್ನುವ ಆರೋಪ ಹೊರಿಸುವುದು ಅಸಮಂಜನವೇ ಸರಿ. ಆದರೆ ಇತ್ತೀಚಿನ ಬೆಳವಣಿಗೆಯನ್ನು ಕಂಡಾಗ, ಭಾರತ ಕೇಂದ್ರಿತವಾಗಿ ಬರುತ್ತಿರುವ ಬರವಣಿಗೆಯಲ್ಲಿ ನಮಗೆ ಐದು ಭಿನ್ನ ಎಳೆಗಳು ಕಾಣಿಸುತ್ತಿವೆ.

  • ಮೊದಲ ಎಳೆ ಭಾರತದ ಮೇಲ್ವರ್ಗವನ್ನು ಪ್ರತಿನಿಧಿಸುವ [ಆದರೆ ಸಾಹಿತ್ಯವನ್ನು ಪ್ರತಿನಿಧಿಸಲಾರದ] ಶೋಭಾ ಡೇ, ಚೇತನ್ ಭಗತ್ ಗಳು ಹರಿಯಬಿಡುತ್ತಿರುವ ಸಾಹಿತ್ಯ.
  • ಎರಡನೆಯ ಎಳೆ ಅರವಿಂದ ಅಡಿಗ, ಅರುಂಧತಿ ರಾಯ್ ಪ್ರತಿನಿಧಿಸುವ ಸಾಹಿತ್ಯ. ಇದರಲ್ಲಿ ಭಾರತದ ಮೂಲ ಎಳೆಗಳಿದ್ದರೂ, ಅವರುಗಳ ಮನಸ್ಸಿನಲ್ಲಿರು ಓದಗ ವೃಂದ ವಿಶ್ವವ್ಯಾಪಿಯಾದ್ದರಿಂದ ಅವರ ಬರವಣಿಗೆಯೂ ಸಾಕಷ್ಟು ಗ್ಲೋಬಲೈಸ್ಡ್ ಬರವಣಿಗೆಯಾಗಿರುತ್ತದೆ.
  • ನಿಜಕ್ಕೂ ವಿಶ್ವ ಸಾಹಿತ್ಯದ ವೇದಿಕೆಯ ಮೇಲೆ ಬರೆಯುತ್ತಾ ಭಾರತವನ್ನು ಆಗಾಗ ಸಂದರ್ಭ ಮಾಡಿಕೊಂಡು ಬರೆವ ಲೇಖಕರಾದ ವಿಕ್ರಂ ಸೇಠ್ ಮತ್ತು ಅಮಿತಾವ್ ಘೋಷ್ ಮೂರನೆಯ ಎಳೆಗೆ ಸೇರುತ್ತಾರೆ.
  • ನಾಲ್ಕನೆಯ ಎಳೆಯಲ್ಲಿ ಭಾರತೀಯ ಸಂಜಾತರಾಗಿ, ಇತರೆ ದೇಶದ ಪಾಸ್ ಪೋರ್ಟ್ ಹೊಂದಿರುವ, ಆಗಾಗ ಇಲ್ಲಿಗೆ ವಾಪಸ್ಸಾಗುವ, ತಮ್ಮ ನೆನಪಿನ ಗಣಿಯಿಂದ - ಅಥವಾ ಪ್ರವಾಸೀ ಬೆರಗಿನಿಂದ ಭಾರತವನ್ನು ನೋಡುವ ಆದರೂ ಸಮರ್ಥವಾಗಿ ಬರೆಯಬಲ್ಲ ಸಲ್ಮಾನ್ ರಶ್ದೀ, ಝುಂಪಾ ಲಹಿರಿಗಳದ್ದು.
  • ಐದನೆಯ ಎಳೆಯಲ್ಲಿ ರಾಜಾರಾವ್ ಶಶಿ ದೇಶಪಾಂಡೆ, ಕೆ.ಆರ್. ಉಷಾರಂತೆ ಸ್ಥಳೀಯ ಸಂವೇದನೆಯನ್ನು ಇಂಗ್ಲೀಷಿನಲ್ಲಿ ಸಮರ್ಥವಾಗಿ ಬಿಂಬಿಸುವ, ಸಾಧ್ಯವಾಗಿದ್ದರೆ ತಮ್ಮ ತಮ್ಮ ಭಾಷೆಗಳಲ್ಲಿಯೇ ಸಾಹಿತ್ಯ ರಚಿಸಬಹುದಾಗಿದ್ದ ಪರಂಪರೆಯ ಬರಹಗಾರರು. ಈ ಪರಂಪರೆಗೆ ಈಚಿನ ಸೇರ್ಪಡೆ ಕೋಟ ನೀಲಿಮಾ ಎನ್ನುವ ಲೇಖಕಿಯದ್ದು ಅನ್ನಿಸುತ್ತದೆ.

ಇತ್ತೀಚೆಗೆ ಬಂದ ಆಕೆಯ ಡೆಥ್ ಆಫ್ ಎ ಮನೀಲೆಂಡರ್ ಅನ್ನುವ ಕಾದಂಬರಿ ಅನೇಕ ಕಾರಣಗಳಿಗಾಗಿ ಹಚ್ಚಿನ ಚರ್ಚೆಗೊಳಪಡಬೇಕಿತ್ತು. ಆ ಪುಸ್ತಕದ ಬಗ್ಗೆ ಹೆಚ್ಚಿನ ವಿಮರ್ಶೆಗಳೂ ಬರಬೇಕಿತ್ತು. ಆದರೆ ಆ ಪುಸ್ತಕದ ಬಗ್ಗೆ ಹೆಚ್ಚೆನ ಚರ್ಚೆಯೇ ನನಗೆ ಕಂಡಿಲ್ಲ. ಅದಕ್ಕೆ ನಮ್ಮ ಮೀಡಿಯಾದ ಬ್ರೇಕಿಂಗ್ ನ್ಯೂಸ್ ಲೋಲುಪತೆಯೇ ಕಾರಣವಿರಬಹುದು. ಈ ಗಡಿಬಿಡಿಯ ಜೀವನದ ನಡುವಿನಲ್ಲಿ ಪತ್ರಕರ್ತರ ಕಾರ್ಯವೈಖರಿ, ಹಾಗೂ ನಗರಪ್ರದೇಶದಿಂದ ದೂರವಿರುವ "ಸೆಕ್ಸಿ" ಅಲ್ಲದ ವಿಷಯಗಳ ಬಗ್ಗೆ ತುಸು ತಾಳ್ಮೆಯಿಂದ- ಸಂಶೋಧನಾ ಮನೋಭಾವದಿಂದ ಬರೆಯಬಹುದಾದ ಪತ್ರಕರ್ತರಿಲ್ಲದ ಈ ಸಮಯದಲ್ಲಿ - ಅದೂ ಪ್ರಿಂಟ್ ಮೀಡಿಯಾದ ಸಂದರ್ಭದಲ್ಲಿ ಬರೆಯಲ್ಪಟ್ಟಿರುವ ಈ ಕಾದಂಬರಿ ನನ್ನ ಮಟ್ಟಿಗೆ ಬೆಚ್ಚನೆಯ ಬದಲಾವಣೆಯನ್ನು ಸೂಚಿಸಿದ್ದರಿಂದ ತುಂಬಾ ಹಿಡಿಸಿತು ಅನ್ನಿಸುತ್ತದೆ.

ನೀಲಿಮಾ ಅವರ ಕಾದಂಬರಿ ಪ್ರಾರಂಭವಾಗುವುದು ದೆಹಲಿಯ ಪತ್ರಿಕಾ ಕಾರ್ಯಾಲಯಕ್ಕೆ ಬರುವ ಸುದ್ದಿಯನ್ನು ಹೇಗೆ ವಿಶ್ಲೇಶಿಸಬೇಕು - ಅನ್ನುವ ಪ್ರಶ್ನೆಯನ್ನು ಹಿಡಿದು. ಯಾವುದೋ ದೂರದ ಗ್ರಾಮದಲ್ಲಿ ಒಂದು ಸಾವು ಉಂಟಾಗಿದೆ. ಸಾವು ಸಹಜವಾದ ಸಾವಲ್ಲ. ಸತ್ತಿರುವುದೂ ಸಾಧಾರಣ ವ್ಯಕ್ತಿಯಲ್ಲ. ಆಗಿರುವುದು ಒಬ್ಬ ಬಡ್ಡಿವ್ಯಾಪಾರಿಯ ದುರ್ಮರಣ. ಆತನ ಶವ ಊರ ನಡುವಿನ ದೀಪದ ಕಂಬದಿಂದ ನೇತಾಡುತ್ತಿದೆ. ಈ ರೀತಿಯ ಸುದ್ದಿ ಸಹಜವಾಗಿ ಒಂದು ರೀತಿಯ ರಂಜಕತೆಯನ್ನುಂಟು ಮಾಡುವುದು ನಿರೀಕ್ಷಿತವೇ. ಇದು ಓದುಗರ ಗಮನವನ್ನು ಆಕರ್ಷಿಸುವ ಮುಖ್ಯಸುದ್ದಿಯಾಗಬಹುದು. ಇದರ ಬಗ್ಗೆ ಹೆಚ್ಚಿನ ವಿವರಗಳನ್ನು ಸಂಗ್ರಹಿಸಿ - ಆ ಮರಣದ ಹಿನ್ನೆಲೆಯನ್ನು ವಿವರಿಸುವ ಕೆಲಸ, ಅದರಿಂದ ಅಲ್ಲಿನ ಪರಿಸ್ಥಿತಿಯ ಬಗ್ಗೆ ಒದುಗರಿಗೆ ಒಂದು ಸೂಚನೆ ಕೊಡುವ ಕಾರ್ಯಧರ್ಮ ಪತ್ರಕರ್ತರದ್ದು. ಅಲ್ಲಿಗೆ ಹೋಗುವ ತಾಳ್ಮೆ, ಅಲ್ಲಿಂದ ವಿವರಗಳನ್ನು ಸಂಗ್ರಹಿಸಿ, ವಿಶ್ಲೇಶಿಸಿ, ವರದಿಮಾಡುವ, ಅದೇ ಕಾಲಕ್ಕೆ ಒದುಗರ ಗಮನವನ್ನೂ ಹಿಡಿದಿಡುವ, ಹಾಗೂ ತನ್ನ ಮೇಲಿನವರಿಂದ ಮೆಚ್ಚುಗೆಯನ್ನೂ ಪಡೆವ ಕೆಲಸವನ್ನು ಆ ಬೀಟ್ ಪಡೆದ ಪತ್ರಕರ್ತ ಮಾಡಬೇಕಾಗುತ್ತದೆ.

ಹೀಗೆ ಪ್ರಾರಂಭವಾಗುವ ಕಾದಂಬರಿ, ಅನೇಕ ಸಮಕಾಲೀನ ವಿಷಯಗಳನ್ನು ಉದ್ವೇಗರಹಿತವಾಗಿ ಚರ್ಚಿಸುತ್ತದೆ. ಫಲಕ್ ಅನ್ನುವ ಪತ್ರಕರ್ತನಿಗೆ ಈ ಮರಣದ ಹಿನ್ನೆಲೆಯನ್ನು ಕಂಡುಹಿಡಿವ, ಆ ಬಗ್ಗೆ ವರದಿಮಾಡುವ ಕೆಲಸವನ್ನು ಒಪ್ಪಿಸಲಾಗುತ್ತದೆ. ಆತ ತನ್ನ ವೃತ್ತಿಯ ಏಣಿಯನ್ನು ತ್ವರಿತವಾಗಿ ಏರಬೇಕೆನ್ನುವ ತವಕದಲ್ಲಿರುವ ಮಹತ್ವಾಕಾಂಕ್ಷೀ ವರದಿಗಾರ. ಈಗಾಗಲೇ ಅವನು ತನ್ನ ಪತ್ರಿಕೆಯಲ್ಲಿ ಪಡೆಯಬೇಕಾದ ಬಡ್ತಿಯನ್ನು ಪಡೆದಿದ್ದಾನೆ. ಮುಂದಿನ ಬಡ್ತಿ ಪಡೆದು ಯಶಸ್ವೀ ಪತ್ರಕರ್ತನಾಗಲು ಆತ ಏನು ಮಾಡಲೂ ಸಿದ್ಧ. ಯಶಸ್ವೀ ಪತ್ರಕರ್ತನಿಗೂ ಉತ್ತಮ ಪತ್ರಕರ್ತನಿಗೂ ವ್ಯತ್ಯಾಸವಿರಬಹುದೆನ್ನುವ ಸಾಧ್ಯತೆಯನ್ನು ಆ ಕಾದಂಬರಿಯಲ್ಲಿ ಸೂಚಿಸುವವಳು ತನ್ನ ಮಾಜಿ ಗೆಳತಿ - ಹಾಗೂ ಮತ್ತೊಂದು ಪತ್ರಿಕೆಯಲ್ಲಿ ಕೆಲಸ ಮಾಡುತ್ತಿರುವ ಇನ್ನೊಬ್ಬಾಕೆ. ಒಂದು ರೀತಿಯಲ್ಲಿ ಆಕೆ ಕಾದಂಬರಿಯುದ್ದಕ್ಕೂ ಫಲಕ್ ನ ಆತ್ಮಸಾಕ್ಷಿಯ ಪ್ರತೀಕವಾಗಿ ಆಗಾಗ ತಲೆಹಾಕುತ್ತಾಳೆ. ಆಕೆಯ ದೃಷ್ಟಿಯಲ್ಲಿ ಪತನಗೊಳ್ಳದೆಯೇ ತಾನು ಹೇಗೆ ಯಶಸ್ವಿಯಾಗುವುದು - ಅರ್ಥಾತ್ ಆತ್ಮವನ್ನು ಮಾರಿಕೊಳ್ಳದೆಯೇ ಹೇಗೆ ವೃತ್ತಿಯಲ್ಲಿ ಮೇಲೇರುವುದು ಅನ್ನುವ ಪ್ರಶ್ನೆ ಫಲಕ್ ನನ್ನು ಕಾದಂಬರಿಯುದ್ದಕ್ಕೂ ಕಾಡುತ್ತದೆ. ಆಕೆಗೆ ಇದರಲ್ಲಿ ಯಾವ ದ್ವಂದ್ವವೂ ಕಾಣುವುದಿಲ್ಲವಾದರೂ, ಆತನಿಗೆ ಮಾತ್ರ ಯಶಸ್ಸಿನ ಚಡಪಡಿಕೆ ಇದ್ದೇ ಇರುತ್ತದೆ.

ಇಲ್ಲಿ ಒಬ್ಬ ಬಡ್ಡಿವ್ಯಾಪಾರಿಯ ಸಾವು ಅದರ ಹಿಂದಿನ ಕಾರಣಗಳನ್ನು ಹುಡುಕುವ ಪತ್ತೆದಾರಿಕೆಯು ಒದುಗರನ್ನು ಹಿಡಿದಿಡುವ ಒಂದು ಸೂತ್ರವಾಗಿದೆ. ಈ ಪತ್ತೆದಾರಿಕೆಯ ಕುತೂಹಲವನ್ನು ಬುನಾದಿಯಾಗಿಟ್ಟುಕೊಂಡು ಲೇಖಕಿ ಅನೇಕ ಕಷ್ಟದ ಪ್ರಶ್ನೆಗಳನ್ನು ಕೇಳುತ್ತಾರೆ. ಉದಾಹರಣೆಗೆ ನಾವುಗಳು ಬರೇ ರೈತರ ಆತ್ಮಹತ್ಯೆಗಳ ಬಗ್ಗೆ ಮಾತ್ರ ಕೇಳುತ್ತಿದ್ದೇವೆ. ಆದರೆ ಯಾವ ಬಡ್ಡಿ ವ್ಯಾಪಾರಿಯ ಆತ್ಮಹತ್ಯೆಯೂ ಕೇಳಿಬಂದಿಲ್ಲ? ಹಾಗೆ ಒಬ್ಬ ಬಡ್ಡಿವ್ಯಾಪಾರಿಯ ಮರಣವಾದಾಗ ಅದಕ್ಕೆ ಪತ್ರಿಕೆಗಳು ಎಷ್ಟು ಸ್ಥಳವನ್ನು ಕಾಯ್ದಿರಿಸಬೇಕು? ಒಬ್ಬ ಬಡ್ಡಿವ್ಯಾಪಾರಿಯ ಸಾವು ಅನೇಕ ರೈತರ ಆತ್ಮಹತ್ಯೆಗಿಂತ ಹೆಚ್ಚಿನ ಸುದ್ದಿಪುಟಗಳನ್ನ ಆಕ್ರಮಿಕೊಳ್ಳುವುದಕ್ಕೆ ಕಾರಣವೇನಿರಬಹುದು? ಇದರಲ್ಲಿರಬಹುದಾದ ಪತ್ರಿಕಾ ವ್ಯಾಪರದ "ಧರ್ಮ" ಏನು? ಈ ಎಲ್ಲ ಪ್ರಶ್ನೆಗಳನ್ನೂ ನೀಲಿಮಾ, ಕೇಳದೆಯೇ ಕೇಳುತ್ತಾರೆ.

ಹೀಗೆ ಒಬ್ಬ ಪತ್ರಕರ್ತನ ಆಂತರಿಕ ತಲ್ಲಣಗಳನ್ನು ಮನಸ್ಸಿನ ವಿರೋಧಾಭಾಸಗಳನ್ನು ಓದುಗರ ಮುಂದಿಡುತ್ತಲೇ, ಸಹಜವಾಗಿ ಕೃಷಿಯ ಲಾಭದಯಕತೆ, ಗ್ರಾಮಜೀವನದಲ್ಲಿನ ಇತರ ತಲ್ಲಣಗಳು, ಸ್ಥಳೀಯ ಸಾಮಾಜಿಕ ಪದ್ಧತಿಯ ಪದರಗಳನ್ನು ನೀಲಿಮಾ ಬಿಚ್ಚಿಡುತ್ತಾ ಹೋಗುತ್ತಾರೆ. ಪತ್ರಕರ್ತರಿಗೆ ತಮ್ಮ ವೃತ್ತಿಜೀವನದಲ್ಲಿ ಜೀವನದಲ್ಲಿ ಕಂಡೂ ಪತ್ರಿಕಾ ವೃತ್ತಿಯ ಮಿತಿಗಳಲ್ಲಿ ನಿರೂಪಿಸಲಾಗದ ಕಥೆಗಳನ್ನು ಒಂದೊಂದಾಗಿ ಈ ಕಾದಂಬರಿಯ ಮೂಲಕ ಆಕೆ ಬಿಚ್ಚುತ್ತಾ ಹೋಗುತ್ತಾರೆ.

ಮೂಲಭೂತವಾಗಿ ಬಡ್ಡಿವ್ಯಾಪಾರಿಗಳೆಂದರೆ ಸಿಕ್ಕಸಿಕ್ಕ ಜನರನ್ನೆಲ್ಲಾ ಶೋಷಣೆಗೊಳಪಡಿಸಿ, ಅವರ ರಕ್ತವನ್ನು ಹೀರಿ ಜೀವನ ಮಾಡುವವರು ಅನ್ನುವ ಭಿತ್ತಿಯನ್ನು ನಾವೆಲ್ಲಾ ಹೊತ್ತು ತಿರುಗುತ್ತಿರುತ್ತೇವೆ. ಹೀಗಾಗಿ, ಒಂದು ಗ್ರಾಮದಲ್ಲಿ ಊರಿನ ಮಧ್ಯೆ ಒಬ್ಬ ಬಡ್ಡಿವ್ಯಾಪಾರಿಯ ಶವ ದೀಪದ ಕಂಬದಿಂದ ನೇತಾಡುತ್ತಿದೆಯೆಂದರೆ ಅದರಲ್ಲಿ ಯಾವುದೋ ರೀತಿಯ ರಕ್ತಕ್ರಾಂತಿಯ ಮೊದಲ ಬೀಜಗಳು ಕಾಣಬಹುದು ಅನ್ನುವ ಭಾವನೆ ಸಹಜವೇ ಆಗಿದೆ. ಹೀಗಾಗಿ ಈ ರೀತಿಯ ಕಥೆ ಒದುಗರ ಆಸಕ್ತಿಯನ್ನು ಹಿಡಿದಿಡುತ್ತದೆ ಎನ್ನುವುದನ್ನು ಪರಿಗಣಿಸಿ, ಇದರ ಸುತ್ತಲೂ ಆಕೆ ತನ್ನ ಕಥನವನ್ನು ಹಣೆಯುತ್ತಾರೆ. ಹೀಗೆ, ಗ್ರಾಮ್ಯ ಜೀವನದಲ್ಲಿರುವ ಅನೇಕ ಪದರಗಳನ್ನು ಆಕೆ ಬಿಚ್ಚಿಡುವುದರಲ್ಲಿ ಸಫಲರಾಗುತ್ತಾರೆ. ಹೀಗಾಗಿಯೇ ನಗರ ಪ್ರದೇಶದಲ್ಲಿ ಬದುಕುವವರು ಕೃಷಿ ಮತ್ತು ಗ್ರಾಮ್ಯ ಜೀವನದ ಬಗ್ಗೆ ತಲೆಯಲ್ಲಿ ತುಂಬಿಕೊಂಡಿರಬಹುದಾದ ಸ್ಟೀರಿಯೋಟೈಪ್ ಗಳನ್ನೂ ಮರುಪರೀಕ್ಷಿಸುವುದು ಈ ಕಾದಂಬರಿಯಿಂದಾಗಿ ಸಾಧ್ಯವಾಗುತ್ತದೆ.

ಆದರೆ ನೀಲಿಮಾಗೆ ಕಥನದ ಹಿಡಿತವಿದ್ದರೂ, ಕಥೆ ಕಟ್ಟುವ ಕಲೆಯಿನ್ನೂ ಪೂರ್ತಿಯಾಗಿ ಒಗ್ಗಿ ಬಂದಿಲ್ಲವೇನೋ. ಆದ್ದರಿಂದಲೇ ಈ ಕಾದಂಬರಿ ಸೆಳೆಯಬೇಕಾದಷ್ಟು ಗಮನವನ್ನು ಸೆಳೆದಿಲ್ಲವೇನೋ. ಕಥನದ ಪ್ರಕ್ರಿಯೆಯಲ್ಲಿ - ಎತ್ತಿಕೊಂಡ ಪ್ರತಿ ವಿಷಯಕ್ಕೂ ಒಂದು ಅಂತ್ಯವಿರಬೇಕು, ಪ್ರತಿ ಪಾತ್ರವೂ ಒಂದು ಹಂತವನ್ನು ತಲುಪಿ ಪರಿಪೂರ್ಣವಾಗಬೇಕು ಅನ್ನುವ ನಂಬಿಕೆಯ ತುರ್ತು ಈ ಕಥನಕ್ಕೆ ಮುಳುವಾಗುತ್ತದೆ. ಸಹಜವಾಗಿಯೇ ಕಥೆ/ಕಾದಂಬರಿ ಬರೆಯುವವರಿಗೂ, ಪತ್ರಿಕಾ ವರದಿಯ ಶಿಸ್ತನಡಿಯಲ್ಲಿ ಬರವಣಿಗೆ ಮಾಡುತ್ತಿರುವವರಿಗೂ ಇರಬಹುದಾದ ವ್ಯತ್ಯಾಸ ನಮಗೆ ಇಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ಪತ್ರಿಕಾ ವರದಿಯಲ್ಲಿ ಸಾಮಾನ್ಯವಾಗಿ ಹುಡುಕುವ ತಕ್ಷಣ-ಸಮಾಧಾನ, ಈಕ್ಷಣದ ಉತ್ತರ, ಈಕ್ಷಣದ ಸತ್ಯದ ತುರ್ತು ಕಾದಂಬರಿಯ ಹರವಿಗಿರುವುದಿಲ್ಲ. ಹೀಗಾಗಿ ಕಾದಂಬರಿಯಲ್ಲಿ ಎಲ್ಲವಿಚಾರಗಳನ್ನು ಅರಗಿಸಿ, ಮಥಿಸಿ ಒಂದು ಗುಳಿಗೆಯಲ್ಲಿ ಎಲ್ಲವನ್ನೂ ಅಡಕ ಮಾಡುವ ತುರ್ತೂ ಲೇಖಕಿಗಿರುವುದಿಲ್ಲ. ಕಾದಂಬರಿಯ ಹರವಿನಲ್ಲಿ ಈ ಎಲ್ಲ ಮಥನದ ಯಾನವನ್ನು ಓದುಗನೊಂದಿಗೇ ಲೇಖಕಿ ಕೈಗೂಳ್ಳಬಹುದು. ಹೀಗಾಗಿ ಅಲ್ಲಿ ಬರುವ ಪಾತ್ರಗಳ ವ್ಯಕ್ತಿತ್ವದಲ್ಲಿರುವ ಅನೇಕ ಮಜಲುಗಳನ್ನು, ಗೊಂದಲಗಳನ್ನೂ, ವೈವಿಧ್ಯವನ್ನೂ ಬಿಡಿಸಿಡಲು ಕಾದಂಬರಿಯ ಹರವಿಗೆ ಸಾಧ್ಯವಿದೆ. ನೀಲಿಮಾ ಈ ರೀತಿಯ ಭಿನ್ನತೆಯನ್ನು ಫಲಕ್ ನ ಪಾತ್ರದಲ್ಲಿ ತರಲು ಸಫಲರಾದರೂ ಮಿಕ್ಕ ಪಾತ್ರಗಳನ್ನು ತುಂಬುವುದರಲ್ಲಿ ತುಸು ವಿಫಲರೇ ಆಗುತ್ತಾರೆ. ಉದಾಹರಣೆಗೆ ದೀಪದ ಕಂಬಕ್ಕೆ ಏರಿದ ಬಡ್ಡಿವ್ಯಾಪಾರಿ ದುಷ್ಟನಲ್ಲವೇ ಅಲ್ಲ, ಬದಲಿಗೆ ಮಿಕ್ಕ ಬಡ್ಡಿವ್ಯಾಪಾರಿಗಳ ಹಾಗಿರದೇ ಕರುಣಾಳುವಾಗಿದ್ದ ಎನ್ನುವ ವಿಚಾರ ಕಾದಂಬರಿಯ ಮೊದಲ ಭಾಗದಲ್ಲಿಯೇ ಬರುತ್ತದೆ. ಹಾಗಾದರೆ ಅವನಿಗೆ ಈ ದುರ್ಮರಣ ಬಂದದ್ದು ಯಾಕೆ - ಅದಕ್ಕೆ ಕಾದಂಬರಿಯ ಅಂತ್ಯದಲ್ಲಿ ವಿವರಣೆಯಿದೆಯಾದರೂ, ಆ ವಿವರಣೆ ತೀರಾ ಬಾಲಿಶ ಮತ್ತು ಒಳ್ಳೆಯತನದ ಮಹಾಪೂರದಿಂದ ಕೂಡಿದ್ದಾಗಿದೆ. ಹೀಗಾಗಿಯೇ ಆ ಸಾವಿನಿಂದ ಆಗಬಹುದಾದ ಲೇಖಕಿಯ ಉದ್ದೇಶಿತ ಪರಿಣಾಮ ನಿಜಕ್ಕೂ ಆಗಬಹುದೇ ಅನ್ನುವ ಅನುಮಾನ ಓದುಗನನ್ನು ಕಾಡುತ್ತದೆ. ಸತ್ತ ಬಡ್ಡಿವ್ಯಾಪಾರಿಯ ಪಾತ್ರದ ಹಲವು ಮಜಲುಗಳನ್ನು ಆಕೆ ಇತರರ ನೆನಪುಗಳ ಮೂಲಕ ತರಲು ಪ್ರಯತ್ನಸಿತ್ತಾರಾದರೂ ಆ ಪಾತ್ರದ ತಲ್ಲಣಗಳು ಕಾದಂಬರಿಯಲ್ಲಿ ಎಲ್ಲೂ ಹೊರಬರುವುದೇ ಇಲ್ಲ. ಹೀಗಾಗಿ ಆ ಪಾತ್ರ ಒಂದೇ ಆಯಾಮದ ಪಾತ್ರದಂತೆ ಕಂಡುಬಿಡುತ್ತದೆ.

ಒಳಿತು ಮಾಡುತ್ತಿದ್ದ ಈ ಮನುಷ್ಯ ಹೀಗೆ ದುರ್ಮರಣ ಹೊಂದಿದರೆ, ಕೆಡುಕು ಮಾಡುವವರಿಗೆ ಇನ್ನೂ ದಾರುಣವಾದ ಸಾವು ಕಾದಿರಬಹುದೆಂಬ ಬೆದರಿಕೆಯ ಸೂತ್ರ ಕಥೆಯುದ್ದಕ್ಕೂ ಇದೆಯಾದರೂ - ಅದೇ ಪತ್ರಿಕೆಯಲ್ಲಿ ಮುಖ್ಯ ಸುದ್ದಿಯಾಗಬಹುದೆಂದು ಅನ್ನಿಸಿದರೂ, ಅದರಿಂದ ಆಗಬಹುದಾದ ಮಿಕ್ಕ ಫಲಿತಗಳ ಬಗ್ಗೆ ನೀಲಿಮಾ - ಅಥವಾ ಅವರ ಪಾತ್ರಗಳು ಯೋಚಿಸುವುದೇ ಇಲ್ಲ. ಹೀಗಾಗಿ ಕಥೆಗೆ ಇರಬೇಕಾದ ಹಲವು ಮಗ್ಗಲುಗಳು ಒಂದು ಸತ್ಯ ಸುಳ್ಳಿನ ನಡುವಿನ - ಹೌದೋ ಇಲ್ಲವೋ ಅನ್ನುವ ಬೈನರಿಯಾಗಿ ನಿಂತುಬಿಡುತ್ತದೆ. ಜೀವನದ ಸಂಕೀರ್ಣತೆ ಒಳಿತು-ಕೆಡುಕಿನ ಹೌದು-ಇಲ್ಲದ ಈ ಬೈನರಿ ವಿಧಾನದಲ್ಲಿ ಗ್ರಾಹ್ಯವಾಗುವುದಿಲ್ಲವಾದ್ದರಿಂದಲೇ ಅದ್ಭುತವಾಗಬಹುದಾಗಿದ್ದ ಈ ಬೆಚ್ಚನೆಯ ಬರವಣಿಗೆ ಬರೇ ಉತ್ತಮ ಬರವಣಿಗೆ ಮಾತ್ರವಾಗಿ ಸೊರಗಿಬಿಡುತ್ತದೆ.

ನೀಲಿಮಾ ಕಾದಂಬರಿಯನ್ನು ಓದಿದಾಗ ಒಂದು ಉತ್ತಮ ಕಥೆಯನ್ನು ಸಾಧಾರಣವಾಗಸುವಲ್ಲಿ ಕಥನ ತಂತ್ರದ ಪಾತ್ರ ಮಹತ್ವದ ಬಗ್ಗೆ ಆಲೋಚನೆಗಳು ಸಹಜವಾಗಿಯೇ ಬಂದುವು. ಯಾವುದೇನೇ ಇದ್ದರೂ, ಈ ಬ್ರೇಕಿಂಗ್ ನ್ಯೂಸ್ ಯುಗದಲ್ಲಿ, ಕೋರ್ಟುಗಳಿಗಿಂತ ಮುನ್ನವೇ ವಿಷಯಗಳನ್ನು ಎತ್ತಿ ಜನರ ಕಣ್ಣೆದುರಿಗೆ ಐದು ಕಮರ್ಷಿಯಲ್ ಬ್ರೇಕುಗಳನಡುವೆ ನಾಲ್ಕು ಪ್ರಶ್ನೆಗಳನ್ನೊಗೆದು ತೀರ್ಪು ನೀಡುತ್ತಿರುವ ಈ ದೃಶ್ಯಮಾಧ್ಯಮದ ಧಾಳಿಯ ನಡುವೆ ಹೀಗೂ ವಿಚಾರಗಳನ್ನು ವಿಶ್ಲೇಷಿಸಬಹುದೆನ್ನುವ ಪತ್ರಿಕಾಧರ್ಮವನ್ನು ಒಂದು ರೀತಿಯಿಂದ ಎತ್ತಿ ಹಿಡಿಯುವ ಈ ಕಾದಂಬರಿ ಇನ್ನಷ್ಟು ಚರ್ಚಿತಗೊಳ್ಳಬೇಕಿತ್ತು ಅನ್ನಿಸುತ್ತದೆ. ಕಥನ ಸಂಭ್ರಮವಿಲ್ಲದಿದ್ದಾಗ್ಯೂ ಕಟ್ಟುವ ಕಲೆಯಲ್ಲಿ ನ್ಯೂನತೆಗಳಿದ್ದಾಗ್ಯೂ ಈ ಕಾದಂಬರಿ ನನ್ನ ದೃಷ್ಟಿಯಲ್ಲಿ ಮಹತ್ವದ್ದಾಗಿಯೇ ಉಳಿದಿದೆ. ಆದರೆ ಪತ್ರಕರ್ತೆ ನೀಲಿಮಾ ತನ್ನ ವೃತ್ತಿಯಲ್ಲಿ ಕಂಡುಕೊಂಡ ಲಿಮಿಟೇಷನ್ನನ್ನು ಕಾದಂಬರಿಯ ಕಥನ ತಂತ್ರದ ಮೂಲಕ ಭೇದಿಸಿದ ದಿನ ಹಚ್ಚಿನ ಚರ್ಚಿತರಾಗಬಹುದೆಂಬ ನಂಬಿಕೆ, ಹಾಗೂ ಆಕೆ ಉತ್ತಮ ಪತ್ರಕರ್ತೆಯಿಂದ ಉತ್ತಮ ಕಾದಂಬರಿಗಾರ್ತಿಯಾಗಿ ಬೆಳೆಯಲು ಸಾಧ್ಯ ಎನ್ನುವುದು ಅವರ ಬರವಣಿಗೆ ಸೂಚಿಸುತ್ತದೆ.


Monday, October 5, 2009

ಭೂಗತ ಜಗತ್ತಿನ ಒಳನೋಟಗಳು


ಸುಧೀರ್ ವೆಂಕಟೇಶ್ ಅವರ ಗ್ಯಾಂಗ್ ಲೀಡರ್ ಫರ್ ಎ ಡೇ ಒಂದು ಕುತೂಹಲಕಾರಿ ಪುಸ್ತಕ. ನಿಜಕ್ಕೂ ಈ ಪುಸ್ತಕ ಗಂಭೀರ ಬರವಣಿಗೆ ಮತ್ತು ಜನಪ್ರಿಯ ಬರವಣಿಗೆಯ ಮಧ್ಯೆ ತೂರಾಡುತ್ತಾ, ಕಡೆಗೆ ಅನೇಕ ಪ್ರಶ್ನೆಗಳನ್ನು ಎಬ್ಬಿಸಿ ಅವುಗಳನ್ನು ಉತ್ತರಿಸಲು ಪ್ರಯತ್ನಿಸದೆಯೇ ನಿಂತುಬಿಡುತ್ತದೆ. ಹೀಗೆ ಎಲ್ಲಕ್ಕೂ ಉತ್ತರವನ್ನು ನೀಡುವುದು ಸುಧೀರ್ ಅವರ ಉದ್ದೇಶವೂ ಅಲ್ಲ, ಅದು ಸಾಧ್ಯವೂ ಆಗುವುದಿಲ್ಲ ಎನ್ನುವ ಭಾವನೆ ನಮಗೆ ಬರುವುದರಲ್ಲಿ ಯಾವ ಸೋಜಿಗವೂ ಇಲ್ಲ. ಆದರೂ ಈ ಪುಸ್ತಕವನ್ನು ನಾವು ಓದಿ ಚರ್ಚಿಸಬೇಕಾದ ಅವಶ್ಯಕತೆಯಿದೆ.

ಸುಧೀರ್ ಶಿಕಾಗೋ ನಗರದಲ್ಲಿನ ಬಡತನವನ್ನು [ಅರ್ಬನ್ ಪಾವರ್ಟಿ] ಅರ್ಥಮಾಡಿಕೊಳ್ಳಲು ಅದರ ಬಗ್ಗೆ ಸಂಶೋಧನೆ ನಡೆಸಿ ಮಹಾಪ್ರಬಂಧ ಬರೆಯಲೆಂದು ಆ ನಗರದ ರಾಬರ್ಟ್ ಟೇಲರ್ ಹೋಮ್ಸ್ ಕಡೆಗೆ ಮೊದಲಿಗೆ ಹೊರಡುತ್ತಾರೆ. ಅವರು ಶುದ್ಧ ರಿಸರ್ಚ್ ವಿದ್ಯಾರ್ಥಿಯಾಗಿ ಕೈಯಲ್ಲಿ ಒಂದು ಪ್ರಶ್ನಾವಳಿಯನ್ನು ಹಿಡಿದು ಅದನ್ನು ಒಂದು ರಟ್ಟಿನ ಕ್ಲಿಪ್ಪಿನ ಕೆಳಗೆ ತೂರಿಸಿ, ಅಲ್ಲಿನ ಮನೆಗಳ ಪಟ್ಟಿಯಿಂದ ತಮ್ಮ ಸಂಶೋಧನಾ ನಿಯಮಾವಳಿಯನುಸಾರ ಯಾರನ್ನೆಲ್ಲಾ ಮಾತನಾಡಿಸಬೇಕೆಂಬ ಯಾದಿಯನ್ನು ತಯಾರು ಮಾಡಿ, ಆ ಜನವಸತಿಯನ್ನು ಪ್ರವೇಶಿಸುತ್ತಾರೆ. ಸಂಶೋಧನಾ ಪದ್ಧತಿಯ ದೃಷ್ಟಿಯಿಂದ ಅವರ ತಯಾರಿಯಲ್ಲಿ ಯಾವ ನ್ಯೂನತೆಯೂ ಇಲ್ಲವಾದರೂ ಈ ಪದ್ಧತಿಯ ಅರ್ಥಹೀನತೆಯನ್ನು ಸುಧೀರ್ ಶೀಘ್ರದಲ್ಲೇ ಗ್ರಹಿಸುತ್ತಾರೆ. ಇಲ್ಲ - ಸುಧೀರ್ ಪದ್ಧತಿಯ ಅರ್ಥಹೀನತೆಯನ್ನು ಹಿಡಿದು ಲೇವಡಿ ಮಾಡುವುದಿಲ್ಲ. ಸರ್ವೇ ಮೂಲಕ ಮಾಹಿತಿಯನ್ನು ಸಂಗ್ರಹಿಸುವ ರೀತಿಯನ್ನು ಅವರು ಟೀಕಿಸುವುದೂ ಇಲ್ಲ. ಆದರೆ ಹೀಗೆ ಸಂಗ್ರಹಿಸಿದ ಮಾಹಿತಿಯಿಂದ ಬರಬಹುದಾದ ಗ್ರಹಿಕೆ ಮತ್ತು ಈ ಗ್ರಹಿಕೆ ಸರಕಾರೀ ನೀತಿಯನ್ನು ಯಾವರೀತಿಯಿಂದ ರೂಪಿಸಬಹುದು ಹಾಗೂ ಅದರ ಮಿತಿಗಳೇನು ಅನ್ನುವುದನ್ನು ಅವರು ಸೂಕ್ಷ್ಮವಾಗಿ ನಮ್ಮ ಮುಂದಿಡುತ್ತಾರೆ. ಅದಕ್ಕೆ ಕಾರಣ: ನಾವು ಎದುರಿಸುತ್ತಿರುವ ಸಮಸ್ಯೆ ಅತೀ ಜಟಿಲವಾದದ್ದು, ಅನೇಕ ಪದರಗಳನ್ನೂ, ಒಳಕಥೆಗಳನ್ನೂ ಒಳಗೊಂಡದ್ದು. ಅದಕ್ಕೆ ನಾವು ಕಂಡುಕೊಳ್ಳುತ್ತಿರುವ ಉತ್ತರ ಸರಕಾರಿ ನೀತಿಗೆ ಅಡಕವಾಗಬೇಕಿದ್ದರೆ ಸರಳವಾಗಿಯೂ, ಅನೇಕ ಜಾಗಗಳಲ್ಲಿ ಅಮಲಾಗುವಷ್ಟು ಸಾಮಾನ್ಯವಾಗಿಯೂ ಇರಬೇಕು. ಹೀಗಾಗಿ ಸರಳೀಕರಿಸಿದ ಈ ಉತ್ತರಗಳ ಮಿತಿಯನ್ನು ಮತ್ತು ಅವುಗಳಿಂದ ಆಗುವ ಅಪಾಯ/ನಷ್ಟವನ್ನು ಸುಧೀರ್ ಎತ್ತಿ ತೋರಿಸುತ್ತಾರೆ. ಪುಸ್ತಕವನ್ನು ಅವರು ಅಂಕಿ-ಸಂಖ್ಯೆಯಾಧಾರದ ಮೇಲೆಯೇ ಸಂಶೊಧನೆ ನಡೆಸುವ "ಕ್ವಾಂಟಿಟೇಟಿವ್" ಜನರಿಗೂ, ಸಂಸ್ಕೃತಿಯ - ಸಂಬಂಧಗಳ ಚೌಕಟ್ಟಿನಲ್ಲಿ ಸಂಶೋಧನೆ ನಡೆಸುವ "ಎಥ್ನೋಗ್ರಾಫರ್ಸ್" ಗೂ ಇರುವ ವ್ಯತ್ಯಾಸವನ್ನು ಚರ್ಚಿಸುತ್ತಲೇ ಪ್ರಾರಂಭಿಸಿದರೂ ತಾವೇ ಮೊದಲಿಗೆ ಪ್ರಶ್ನಾವಳಿಯನ್ನು ಹಿಡಿದು ಸಂಖ್ಯಾಶಾಸ್ತ್ರದ ಮೂಲಕ ಆ ಬಡವರ ಕೇರಿಯನ್ನು ಪ್ರವೇಶಿಸಿದರು ಎನ್ನುವುದನ್ನು ಕೆಲ ಕ್ಷಣಗಳ ಮಟ್ಟಿಗೆ ಮರೆತುಬಿಡುತ್ತಾರೆ.

ಸುಧೀರ್ ಒಂದು ಪ್ರಶ್ನಾವಳಿಯನ್ನು ಹಿಡಿದು ರಾಬರ್ಟ್ ಟೇಲರ್ ಹೋಮ್ಸ್ ಕೇರಿಯನ್ನು ಪ್ರವೇಶಿಸಿದಾಗ ನಡೆದ ಘಟನೆಯನ್ನು ವಿವರಿಸುವ ರೀತಿಯನ್ನು ನಾವು ಗ್ರಹಿಸಿದರೆ ನಮಗೆ ಸುಧೀರ್ ನಿಜಕ್ಕೂ ಅಂಥ ಒಂದು ಮಳ್ಳ ಪ್ರಶ್ನಾವಳಿಯನ್ನು ಹಿಡಿದು ಹೊರಟಿದ್ದರೇ ಅಥವಾ ಅದನ್ನು ನಾಟಕೀಯವಾಗಿಸಿ ತಾವು ಅಧ್ಯಯನ ಮಾಡುತ್ತಿರುವ ವಿಷಯದ ಜಟಿಲತೆಯನ್ನು ನಮಗೆ ವಿವರಿಸುತ್ತಿದ್ದಾರೆಯೇ ಅನ್ನುವ ಅನುಮಾನ ಬರುತ್ತದೆ.

ನಾನು ಹೀಗೆ ಹೇಳುವುದಕ್ಕೆ ಕಾರಣ ಅವರು ಆ ಬಿಲ್ಡಿಂಗಿಗೆ ಪ್ರವೇಶಿಸಿ, ಅಲ್ಲಿ ವಾಸವಾಗಿರುವವರನ್ನು ಕೇಳಿದ್ದರೆನ್ನಲಾದ ಮೊದಲ ಪ್ರಶ್ನೆ: “How does it feel to be black and poor?” [ಬಡವರೂ, ಕಪ್ಪು ಬಣ್ಣದವರೂ ಆಗಿರುವಾಗಿರುವ ನಿಮಗೆ ಇದರಿಂದ ಏನನ್ನಿಸುತ್ತದೆ? [p.14] ಇದಕ್ಕೆ ಐದು ಉತ್ತರಗಳಲ್ಲಿ ಒಂದನ್ನು ಆ ವ್ಯಕ್ತಿ ಆರಿಸಬೇಕು: "ತುಂಬಾ ಹೀನ, ಕೆಟ್ಟದನ್ನಿಸುತ್ತದೆ, ಪರವಾಗಿಲ್ಲ, ಉತ್ತಮ, ಅತ್ಯುತ್ತಮ". ಬಡತನವನ್ನು ಅರ್ಥಮಾಡಿಕೊಳ್ಳಲು ಸುಧೀರ್ ನಿಜಕ್ಕೂ ಈ ರೀತಿಯ ಪ್ರಶ್ನೋತ್ತರಗಳಿದ್ದ ಪ್ರಶ್ನಾವಳಿಯನ್ನು ತೆಗೆದು ಹೋಗಿದ್ದರೆ ಅದರ ನಿರರ್ಥಕತೆ ನಮ್ಮ ಕಣ್ಣಿನೆದುರಿಗೇ ಎದ್ದು ನಿಲ್ಲುತ್ತದೆ. ಈ ರೀತಿಯ ಪ್ರಶ್ನೆಗೆ ಗ್ಯಾಂಗುಗಳಲ್ಲಿ ಕೆಲಸ ಮಾಡುವ ಕತ್ತಿ ಝಳಪಿಸುವ ರೌಡಿ "ಕೇಯಿಸಿಕೋ, ನಿನಗೆ ಇದೇನು ಕೇಯಿಸಿಕೊಳ್ಳುವ ಮಕ್ಕಳಾಟ ಅನ್ನಿಸುತ್ತಿದೆಯಾ? [“Fuck you!... You got to be Fucking kidding me…..”] ಅನ್ನುವ ಪ್ರಶ್ನೆಯನ್ನು ಕೇಳಿದರೆ, ಈ ಪ್ರಶ್ನಾವಳಿಯನ್ನು ನೋಡಿದ ಸಾರಸ್ವತ ಲೋಕ ರೌಡಿ ಉಪಯೋಗಿಸಿದ ಪದಗಳನ್ನು ಉಪಯೋಗಿಸಲಾರದಾದರೂ, ಅವರ ಭಾಷೇ ಶಿಷ್ಟವಾಗಿರುತ್ತದಾದರೂ, ಅವರುಗಳ ಪ್ರತಿಕ್ರಿಯೆಯ ಹಿಂದಿನ ಭಾವನೆಗಳು ಇದಕ್ಕಿಂತ ಭಿನ್ನವಾಗಿ ಏನೂ ಇರುವುದಿಲ್ಲ.
ಮುಂದೆ ಜೆ.ಟಿ ಎನ್ನುವ ವ್ಯಕ್ತಿಯ ಜೊತೆಗಿನ ಒಡನಾಟದಲ್ಲಿ ಅವರು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುವುದು ಈ ಪ್ರಶ್ನೆಯ ಹಿಂದಿನ ಜಟಿಲವಿಚಾರವನ್ನು ಅನ್ನುವುದು ನಮಗೆ ಕೂಡಲೇ ವೇದ್ಯವಾಗುತ್ತದೆ. ಆದರೂ ಒಬ್ಬ ಸಂಶೋಧಕ ಈ ರೀತಿಯ ಐದು ಅಂಶಗಳ ರೆನ್ಸಿಸ್ ಲಿಕರ್ಟ್ ಮಾಪನವನ್ನು ಹಿಡಿದು ಪ್ರಶ್ನಾವಳಿಯ ಜೊತೆಗೆ ಈ ಇಂಥ ಏರಿಯಾದಲ್ಲಿ ಓಡಾಡುತ್ತಿರುವುದನ್ನು ನೆನಸಿಕೊಂಡರೆ ನನಗೆ ನಡುಕ ಹುಟ್ಟುತ್ತದೆ!

ಬಹುಶಃ ಇದು ಸರ್ವೇ ವಿಧಾನದ ಬಗ್ಗೆ ಅವರು ಮಾಡುತ್ತಿರುವ ಅಣಕವಿರಬಹುದು. ಆದರೆ ಸುಧೀರ್ ಪ್ರವೇಶಿಸುವ ಜಟಿಲ ಜಗತ್ತಿಗೆ ಇದು ಒಂದು ಒಳ್ಳೆಯ ಪ್ರವೇಶ ಮಾರ್ಗ. ಪುಟ ೧೬ರರಲ್ಲಿ ಸುಧೀರನ್ನು ಗ್ಯಾಂಗುಗಳ ಪ್ರಪಂಚಕ್ಕೆ ಸೇರಿಸಲು ಸಹಾಯ ಮಾಡುವ ಜೆ.ಟಿ ಜೊತೆಗೆ ನಡೆಯುವ ಸಂಭಾಷಣೆ ಅವರ ಮನಸ್ತತ್ವವನ್ನು ಅರ್ಥ ಮಾಡಿಕೊಳ್ಳಲು ಸಹಾಯಕವಾಗಿದೆ.

"ಬಡವರೂ, ಕಪ್ಪು ಬಣ್ಣದವರೂ ಆಗಿರುವಾಗಿರುವ ನಿಮಗೆ ಇದರಿಂದ ಏನನ್ನಿಸುತ್ತದೆ?"

“ನಾನು ಕಪ್ಪುಬಣ್ಣದವನಲ್ಲ” ಆತ ಮಿಕ್ಕವರನ್ನು ನೋಡುತ್ತಾ ಎಲ್ಲ ಅರಿತವನಂತೆ ಉತ್ತರಿಸಿದ.

“ಹಾಗಾದರೆ ಆಫ್ರಿಕನ್ ಅಮೆರಿಕನ್ ಆಗಿ, ಬಡವರೂ ಆಗಿರುವುದು ನಿಮಗೆ ಹೇಗನ್ನಿಸುತ್ತದೆ?” ನಾನು ಬಣ್ಣದ ಮಾತಾಡಿ ಆತನನ್ನು ಬೇಸರಗೊಳಿಸಿದ್ದೆ ಅಂದುಕೊಳ್ಳುತ್ತಾ ಕ್ಷಮೆಯಾಚಿಸುವ ಧ್ವನಿಯಲ್ಲಿ ಕೇಳಿದೆ.

“ನಾನು ಆಫ್ರಿಕನ್ ಅಮೆರಿಕನ್ ಅಲ್ಲ.... ನಾನೊಬ್ಬ ನಿಗ್ಗರ್"

……..

“ಈ ಕಟ್ಟಡದಲ್ಲಿರುವವರು ನಿಗ್ಗರ್ ಗಳು” ಆತ ಕಡೆಗೂ ಹೇಳಿದ “ಆಫ್ರಿಕನ್ ಅಮೆರಿಕನ್ನರು ಬಡಾವಣೆಗಳಲ್ಲಿರುತ್ತಾರೆ. ಆಫ್ರಿಕನ್ ಅಮೆರಿಕನ್ನರು ಕೆಲಸಕ್ಕೆ ಟೈ ಕಟ್ಟಿ ಹೋಗುತ್ತಾರೆ. ನಿಗ್ಗರ್‌ಗಳಿಗೆ ಕೆಲಸವೇ ಸಿಗುವುದಿಲ್ಲ.”


ಸರ್ವೆ ಮಾಡುವಾಗಲೂ ಪ್ರಶ್ನೆಗಳನ್ನು ರೂಪಿಸುವುದು ಹಾಗೂ ಅದನ್ನು ಕೇಳುವುದು ಹೇಗೆನ್ನುವ ಪಾಠವನ್ನು ಸುಧೀರ್‌ಗೆ ಈ ಮೊದಲ ಭೇಟಿಯೇ ಕಲಿಸಿಕೊಡುತ್ತದೆ. ಹೀಗಾಗಿಯೇ ಸರ್ವೇ ವಿಧಾನವನ್ನು ಬಿಟ್ಟು ಮುಂದುವರೆಯಲು ಈ ಅನುಭವವೇ ಆತನಿಗೆ ಸಾಕಾಗಿರಬೇಕು. ಆ ದಿನ ಸುಧೀರನ್ನು ಕೊಲ್ಲಲೂ ಅವರು ತಯಾರಿದ್ದರು. ಒಂದು ರಾತ್ರೆಗೆ ಅವನನ್ನು ತಮ್ಮಲ್ಲಿ ಬಂಧಿಸಿದ್ದರು. ಹಾಗೂ "ಈ ರೀತಿಯ ಮಳ್ಳ ಪ್ರಶ್ನೆಗಳನ್ನು ಕೇಳುವುದಕ್ಕೆ ಬದಲು ಅವರ ಜೊತೆಯಲ್ಲಿ ಕಾಲ ಕಳೆಯುವುದರ ಮೂಲಕ ಹೆಚ್ಚು ಅರ್ಥಮಾಡಿಕೊಳ್ಳಬಹುದು" ಅನ್ನುವ ಉಪದೇಶವನ್ನೂ ನೀಡಿದ್ದರು. ಈ ಅನುಭವವನ್ನು ಪಡೆದ ಯಾವುದೇ ಸಂಶೋಧಕ ಅಲ್ಲಿಂದ ಓಡಿ ತನ್ನ ವಿಶ್ವವಿದ್ಯಾಲಯದ ಬೆಚ್ಚನೆಯ ವಾತಾವರಣದಲ್ಲಿ ಅಡಗಿ ತನ್ನ ಸಂಶೋಧನೆಯ ವಿಷಯವನ್ನು ಬದಲಿಸುವುದು ಸಹಜವೇ ಆಗಿತ್ತು.

ಆದರೆ ಮಾರನೆಯ ದಿನ ಸುಧೀರ್ ಮತ್ತೆ ಜೆಟಿಯ ಬಳಿ ಹೋಗಿ ಅವರ ಜೊತೆ ಕಾಲಹರಣಮಾಡಿ ಅವರುಗಳನ್ನು ಅರ್ಥಮಾಡಿಕೊಳ್ಳಲು ತಯಾರಾಗುತ್ತಾರೆ. ಹೀಗೆ ಸುಧೀರ್ ಬಗ್ಗೆ ಸ್ಟೀವನ್ ಡಬ್ನರ್ ಬರೆದ ಮಾತುಗಳನ್ನು ಸುಧೀರ್ ನಿಜವಾಗಿಸುತ್ತಾರೆ. ಪುಸ್ತಕದ ಮುನ್ನುಡಿಯಲ್ಲಿ ಡಬ್ನರ್ ಸುಧೀರ್ ಬಗ್ಗೆ ಈ ಮಾತುಗಳನ್ನು ಬರೆದಿದ್ದಾರೆ: “ಸುಧೀರ್ ವೆಂಕಟೇಶ್ ಎರಡು ನ್ಯೂನತೆಗಳನ್ನು ಹೊತ್ತು ಜನ್ಮ ಪಡೆದಿದ್ದಾರೆ: ಒಂದು ಅತೀ ವಿಕಸಿತವಾದ ಕುತೂಹಲ ಮತ್ತು ವಿಕಸನಗೊಳ್ಳದ ಭಯದ ಭಾವ.” - ಸುಧೀರ್ ಅನುಭವಿಸಿದ ಘಟನೆಗಳನ್ನು ಗಮನಿಸಿದಾಗ ಈ ಎರಡೂ ನಿಜವೇ ಎಂದು ಅನ್ನಿಸುವುದರಲ್ಲಿ ಆಶ್ಚರ್ಯವೇ ಇಲ್ಲ.

ಸುಧೀರ್ ಈ ವಸತಿಯನ್ನು ಮೊದಲ ಬಾರಿಗೆ ಪ್ರವೇಶಿಸುವುದು ೧೯೮೯ರಲ್ಲಿ. ಈ ಪುಸ್ತಕ ಅಲ್ಲಿಂದ ಆರಂಭವಾಗಿ ೧೯೯೬ರ ತನಕದ ಘಟನೆಗಳನ್ನು ವಿವರಿಸುತ್ತದೆ. ಸುಧೀರ್‌‍ಗೆ ಫುಲ್‌ಬ್ರೈಟ್ ಸ್ಕಾಲರ್‌ಶಿಪ್ ಬಂದು ಶಿಕಾಗೋದಿಂದ ಹೊರಬೀಳಬೇಕಾಗಿ ಬಂದಾಗ ಈ ವಸತಿಯ ಜನರೊಂದಿಗಿನ ಸಂಬಂಧಗಳಿಗೂ ಸಹಜವಾಗಿಯೇ ತೆರೆ ಬೀಳುತ್ತದೆ. ಗಮ್ಮತ್ತಿನ ವಿಷಯವೆಂದರೆ ಆ ಸಮಯಕ್ಕೇ ಶಿಕಾಗೋ ಹೌಸಿಂಗ್ ಅಥಾರಿಟಿಯವರು ಈ ಕಟ್ಟಡಗಳನ್ನು ನೆಲಸಮ ಮಾಡಬೇಕೆಂದು ನಿರ್ಧರಿಸುತ್ತಾರೆ. ಹೀಗೆ ಸುಧೀರ್ ಏಳು ವರ್ಷಗಳ ಕಾಲ ಒಡನಾಡಿದ ಜನಸಮೂಹವೂ ಅಲ್ಲಿಂದ ಹೊರಬಿದ್ದು ಬೇರೊಂದೆಡೆ ಕೆಲಸ, ಧಂಧೆ ಕಂಡುಕೊಂಡು ಹೊಸ ಸವಾಲುಗಳನ್ನೂ ಹೊಸ ಜೀವನೋಪಾಯವನ್ನೂ ಹುಡುಕಿ ಹೊರಡಬೇಕಾಗಿದೆ.

ಎಲ್ಲೆಡಯೂ ಬಡತನವಿದ್ದರೂ, ಹೀಗೆ ಮೂಲೆಗುಂಪಾಗಿರುವ ಜನಸಮೂಹ ಈ ರೀತಿಯ ಜೀವನ ಮತ್ತು ಈ ರೀತಿಯ ಕೆಲಸಕ್ಕೆ ಹೇಗೆ ಬರುತ್ತಾರೆ ಅನ್ನುವುದು ನಮಗೆ ಸ್ಪಷ್ಟವಾಗಿ ತಿಳಿಯುವುದಿಲ್ಲ. ಈ ಪ್ರಶ್ನೆಗಳನ್ನು ಉತ್ತರಿಸುವ ಯತ್ನವನ್ನೂ ಈ ಪುಸ್ತಕ ಮಾಡುವುದಿಲ್ಲ. ಈ ಸಮೂಹಗಳನ್ನು ನೋಡಿದಾಗ ನಮಗನ್ನಿಸುವುದು ಮಾದಕ ದ್ರವ್ಯಗಳನ್ನು ಮಾರುವುದೂ, ಸಣ್ಣ ಪುಟ್ಟ ಅಪರಾಧಗಳನ್ನು ಮಾಡುವುದೂ ಅವರಿಗೆ ಸಹಜವಾಗಿಯೇ ಕರಗತವಾಗಿದೆ ಎಂದು. ಇದು ತಪ್ಪೆಂದು ಅವರಿಗೆ ಅನ್ನಿಸುವುದೇ ಇಲ್ಲ. ಅವರಿಗೆ ಬೇರೆ ಉದ್ಯೋಗಾವಕಾಶ ಇಲ್ಲ ಅನ್ನುವುದೂ ನಿಜವಲ್ಲವೇನೋ. ಯಾಕೆಂದರೆ ಆ ಸಮೂಹದಲ್ಲೇ ಕಾರು ರಿಪೇರಿ ಮಾಡುವವರೂ, ಪುಟ್ಟ ವ್ಯಾಪಾರಿಗಳೂ, ಜಗಳಗಳನ್ನು ಪರಿಹರಿಸುವವರೂ, ಕಿರಾಣೆಯಂಗಡಿಯನ್ನು ನಡೆಸುವವರೂ ಹೀಗೆ "ಗ್ಯಾಂಗ್"ಗೆ ಸಣ್ಣಪುಟ್ಟ ಸೇವೆಗಳನ್ನು ಒದಗಿಸುವವರನ್ನು ನಾವು ಕಾಣಬಹುದು. ಈ ರೀತಿಯ “ಗ್ಯಾಂಗು”ಗಳ ಕಥೆಯನ್ನು ರೋಮಾಂಚಕವಾಗಿ ವಿವರಿಸುವ ಕಥೆ-ಕಾದಂಬರಿಗಳಿವೆಯಾದರೂ, ಸುಧೀರ್ ಅವರ ಪುಸ್ತಕ ಈ ಕಥೆಗಳು ಸತ್ಯದೂರವಲ್ಲ ಅನ್ನುವುದನ್ನು ಒಂದು ರೀತಿಯಲ್ಲಿ ವಿವರಿಸುತ್ತದೆ. ವ್ಯತ್ಯಾಸ: ಕಥೆಗಳಲ್ಲಿ ಬರುವ ಪಾತ್ರಗಳಷ್ಟು ವರ್ಣರಂಜಿತವಾಗಿ ನಿಜಜೀವನದ ಪಾತ್ರಗಳು ಇಲ್ಲ. ಅಷ್ಟೇ.

ಸುಧೀರ್ ಬರವಣಿಗೆಯಿಂದ ನಮಗೆ ವೇದ್ಯವಾಗುವುದೇನೆಂದರೆ ’ಬ್ಲಾಕ್ ಕಿಂಗ್ಸ್’ನಂತಹ ಗ್ಯಾಂಗುಗಳು ಸರಕಾರ ಮತ್ತು ಕಂಪನಿಯ ಮಿಶ್ರಣದ ನಿರ್ವಹಣಾ ತಂತ್ರವನ್ನು ಅಳವಡಿಸಿಕೊಂಡಿವೆ. ಒಂದು ಕೊನೆಯಲ್ಲಿ ಕಂಪನಿಯ ರೀತಿಯಲ್ಲಿ - ಮಾದಕ ಪದಾರ್ಥಗಳನ್ನು ಮಾರಾಟಮಾಡುವ ’ಸೇಲ್ಸ್ ಮನ್’ಗಳಿದ್ದರೆ ಅವರ ಅಫೀಸರುಗಳಂತೆ ಪದಾರ್ಥಗಳನ್ನು ಕೊಳ್ಳುವವರೂ ಹಾಗೂ ಕೆಳಗಿನಿಂದ ಮೇಲಕ್ಕೆ ಬಡ್ತಿ ಪಡೆಯುವ ಪ್ರಕ್ರಿಯೆಯೂ ಆ ಗ್ಯಾಂಗುಗಳಲ್ಲಿ ಉಂಟು. ಸುಧೀರ್ ಪರಿಚಯಿಸಿಕೊಂಡು ಗ್ಯಾಂಗಿನ ಜೊತೆ ಒಡನಾಟಕ್ಕೆ ಪರವಾನಗಿ ನೀಡಿದ ಜೆ.ಟಿ.ಗೂ ಈ ಅಧ್ಯಯನ ನಡುವೆ ಒಂದು ಬಡ್ತಿ ಸಿಕ್ಕಿಬಿಡುತ್ತದೆ. ಒಟ್ಟಾರೆ ಜೆ.ಟಿ. ಈ ಏಣಿಯ ನಡುವಿನಲ್ಲಿ ಇದ್ದಂತೆ ನಮಗೆ ಕಾಣುತ್ತದೆ. ಹೀಗಾಗಿ ಗ್ಯಾಂಗುಗಳ ಬಗೆಗಿನ ನಮ್ಮ ಗ್ರಹಿಕೆಯೂ ಆ ಮಟ್ಟದಿಂದ ಉಂಟಾಗುತ್ತದೆ. ಅಲ್ಲಿಂದ ಮುಂದಕ್ಕೆ ಗ್ಯಾಂಗುಗಳ ನಾಯಕತ್ವದ ಆಲೋಚನಾ ಸರಣಿ ಹೇಗಿರುತ್ತದೆ ಎನ್ನುವ ಒಳನೋಟ ಸುಧೀರ್‌ಗಾಗಲೀ ನಮಗಾಗಲೀ ಸಿಗುವುದಿಲ್ಲ. ನಾಯಕತ್ವವನ್ನು ಸುಧೀರ್ ಭೇಟಿಮಾಡುವುದು ’ಗ್ಯಂಗ್ ಪಾರ್ಟಿ’ಯಲ್ಲಿ ಒಮ್ಮೆ ಮಾತ್ರ. ಆದರೆ ಆ ಭಾಗದಲ್ಲಿ ನಮಗೆ ಯಾವ ಒಳನೋಟವೂ ದೊರೆಯುವುದಿಲ್ಲ.

ಆದರೆ ಜೆ.ಟಿಯ ಕೆಳಗಿನ ಸ್ಥರದಲ್ಲಿ ಕೆಲಸ ಮಾಡುವವರ ಬಗ್ಗೆ ನಮಗೆ ಒಳ್ಳೆಯ ಗ್ರಹಿಕೆ ಉಂಟಾಗುತ್ತದೆ. ಈ ಗುಂಪಿನಲ್ಲಿ ಗ್ಯಾಂಗಿಗೆ ಅನೇಕ ಸಹಾಯಕ ಸೇವೆಗಳನ್ನೊದಗಿಸುವ ಜನರ ಪರಿಚಯವೂ ನಮಗಾಗುತ್ತದೆ. ಇವರುಗಳ ನಡುವೆ ಕೆಲ ಪೋಲೀಸಿನವರೂ ಇದ್ದಾರೆ. ಅವರು ಇಲಾಖೆಯಲ್ಲಿದ್ದರೂ ಈ ಜನಸಮುದಾಯಕ್ಕೆ ಸೇರಿದವರಾಗಿರುತ್ತಾರೆ. ಈ ’ಸಮುದಾಯ’ವನ್ನು ಅರ್ಥಮಾಡಿಕೊಳ್ಳಲು ಬಹುಶಃ ನಾವು ಕೇಳಬೇಕಾದ ಪ್ರಶ್ನೆಯೆಂದರೆ: ಇಷ್ಟೊಂದು ಜನ ಈ ಕಾಯಕದಲ್ಲಿ ಶಾಮೀಲಾಗಲು ಕಾರಣವೇನು ಎನ್ನುವದಾಗಿದೆ. ಅಲ್ಲಿ ಅವರು ತಮ್ಮಿಷ್ಟಾನುಸಾರವಾಗಿ ಗ್ಯಾಂಗಿನಲ್ಲಿದ್ದಾರೆಯೇ? ಅವರುಗಳಿಗೆ ಆ ಕಾಯಕ ಬಿಟ್ಟುಹೋಗಬೇಕೆನ್ನುವ ಬಯಕೆಯಿದೆಯೇ? ಈ ಪ್ರಶ್ನೆಗಳಿಗೆ ಮಿಶ್ರ ಪ್ರತಿಕ್ರಿಯೆಗಳು ಬರುತ್ತವೆ. ಆದರೆ ಹೀಗೆ ಒಂದು ನಿಯಮಿತ ಸ್ಥಳದಲ್ಲಿ ಜೀವಿಸುವ ಜನರ ಜೀವನದಲ್ಲಿ ’ಬದಲಾವಣೆ’ಯನ್ನುಂಟುಮಾಡಲು ಹೊರಟ ’ಸಮುದಾಯ ಕೇಂದ್ರಿತ ಸಂಸ್ಥೆ’ಗಳನ್ನು ನಡೆಸುವವರಿಗೆ ಈ ಉತ್ತರವನ್ನು ಕಂಡುಕೊಳ್ಳುವುದು ಅತೀ ಮುಖ್ಯವಾಗುತ್ತದೆ. ಈ ಪುಸ್ತಕದಲ್ಲಿರುವ ಭಾಷೆ ಅದರ ಹಿಂದಿನ ಮನೋಧರ್ಮವನ್ನು ನಾವು ಗಮನಿಸಿದರೆ, ಈ ರೀತಿಯ ಬದಲಾವಣೆಯನ್ನುಂಟುಮಾಡುವ ಸ್ವಯಂ ಸೇವಾ ಸಂಸ್ಥೆಗಳ ಸಹಾಯವನ್ನು ಅದು ದೊರೆತಾಗ ಮತ್ತು ದೊರೆತಷ್ಟೂ ಕಾಲ ಅನುಭವಿಸುತ್ತಲೇ ತಮ್ಮ ಜೀವನವನ್ನು ಎಂದಿನಂತೆ ಮುಂದುವರೆಸಲು ಆ ಜನ ನಿರ್ಧರಿಸಿರುವಂತೆ ಅನ್ನಿಸುತ್ತದೆ. ಉದಾಹರಣೆಗೆ ಪುಸ್ತಕದ ಕೆಲಭಾಗಗಳಲ್ಲಿ "ಸಮುದಾಯ" ಈ ರೀತಿಯ ’ಬದಲಾವಣೆ’ಯಿಂದ ಖುಷಿಯಾಗೇನೂ ಇಲ್ಲವೆನ್ನುವುದು ವೇದ್ಯವಾಗುತ್ತದೆ. ಅವರನ್ನುತ್ತಾರೆ "ಈ ಕರಿಯರು ನಮ್ಮ ಜೀವನವನ್ನು ನರಕಸದೃಶ ಮಾಡಬಹುದು, ಆದರೂ ಅವರು ನಮ್ಮವರೇ ಅನ್ನುವುದನ್ನು ಮರೆಯಲು ಸಾಧ್ಯವೇ. ಹಾಗೂ ಯಾವ ಮನೆಯಲ್ಲಿ ನಾವು ಹುಟ್ಟುತ್ತೇವೆನ್ನುವುದನ್ನು ನಾವು ಆಯ್ದು ಬರಲು ಸಾಧ್ಯವೇ?" ಎನ್ನುವಂಥಹ ಪ್ರಶ್ನೆಗಳನ್ನು ಅವರು ಕೇಳುತ್ತಾರೆ [ಪು.89]

ಹೀಗೆ ಒಂದು ಸ್ಥರದಲ್ಲಿ ಸಿಕ್ಕಿಬಿದ್ದಿರುವ ಜನರ ದ್ವಂದ್ವಗಳನ್ನು ಸುಧೀರ್ ಚೆನ್ನಾಗಿ ಗ್ರಹಿಸುತ್ತಾರೆ. ಹಸಿವೆಯನ್ನು ತೊಡೆಯಲು ಹೊಟ್ಟೆಪಾಡಿಗೆ ದುಡಿಯಬೇಕೋ ಅಥವಾ ಶಾಲೆಗೆ ಹೋಗಿ ವಿದ್ಯೆಯನ್ನು ಆರ್ಜಿಸಬೇಕೋ ಅನ್ನುವ ದ್ವಂದ್ವ ಬಡವರನ್ನು ಯಾವಾಗಲೂ ಕಾಡುತ್ತಲೇ ಇರುತ್ತದೆ. ಈ ಬಗ್ಗೆ ಪ್ರಶ್ನೆಗಳ ಸರಣಿಯನ್ನು ಸುಧೀರ್ ಕೇಳುವುದಕ್ಕೆ ಬದಲಾಗಿ - ಆ ಸಮುದಾಯದ ಭಾಗವೇ ಆಗಿರುವ ಶ್ರೀಮತಿ ಬೇಯ್ಲಿ ಕೇಳಿ ಸುಧೀರನ್ನು ಉತ್ತರಿಸಲು ಹೇಳಿದಾಗ ಅದರಲ್ಲಿ ಕಡೆಗೆ ಬರುವ ತೀರ್ಪು ನಿರೀಕ್ಷಿತ ದಿಕ್ಕಿನಲ್ಲಿಯೇ ಹೋಗುತ್ತದೆ. ಹೀಗಾಗಿಯೇ ಸುಧೀರ್ ಒಗೆಯುವ "ಮಕ್ಕಳು ಹೈಸ್ಕೂಲು ಪಾಸಾದರೆ ಬಡತನದಿಂದ ಹೊರಬೀಳುವ ಸಾಧ್ಯತೆ ೨೫ ಪ್ರತಿಶತದಷ್ಟು ಹೆಚ್ಚುತ್ತದೆ" ಎನ್ನುವ ಸಂಶೋಧನೆಯ ಫಲಿತಗಳು ಅರ್ಥಹೀನವಾಗಿ ಕಾಣುವುದರಲ್ಲಿ ಯಾವ ಆಶ್ಚರ್ಯವೂ ಇಲ್ಲ.

ಯಾಕೆಂದರೆ ಈ ಟೈಲರ್ ಹೋಮ್ಸ್ ಅನ್ನುವ ಈ ವಸತಿಯಲ್ಲಿ ಕಷ್ಟಪಟ್ಟು ದಿನಕ್ಕೆರಡು ಊಟ ಹೇಗೋ ಸಂಪಾದಿಸುವ ಬಡವರಿದ್ದಾರೆ; ಅಲ್ಲಿಯೇ ಇದ್ದು ಆ ವಾತಾವರಣದಲ್ಲೇ ’ಬೆಳೆದು’ ಮ್ಯಾಲಿಬೂ ಕಾರುಗಳನ್ನು ಓಡಿಸುವ ಮಾಜಿ ಬಡವರಿದ್ದಾರೆ. ಆ ಕಾರುಗಳನ್ನು ಮತ್ಯಾರೋ ತೊಳೆಯುತ್ತಾರೆ. ಹಾಗೆ ತೊಳೆಯುವವರಿಗೆ ದುಡ್ಡು ಸಿಗುವುದಿಲ್ಲ. ಯಾಕೆಂದರೆ ಈ ಸೇವೆಗೆ ಬದಲಾಗಿ ಕಾರು ತೊಳೆದವನ ಮನೆಗೆ ಈತ ’ರಕ್ಷಣೆ’ ನೀಡುತ್ತಾನೆ. ಜನತೆಯ ಒಟ್ಟಾರೆ ಹಿತಕ್ಕಾಗಿ ನಾವು ತೆತ್ತುವ ತೆರಿಗೆಯಂತೆ ಇದೂ ಒಂದು ಸಮಾನಾಂತರ ಅರ್ಥವ್ಯವಸ್ಥೆಯಾಗಿ ನಡೆಯುತ್ತಿದೆ.

ಅಲ್ಲಿನ ಕಾರ್ಯವೈಖರಿಯಲ್ಲಿ ಸಮಸ್ಯೆಯನ್ನು ’ಹೇಗೆ’ ಪರಿಹರಿಸಬೇಕು ಅನ್ನುವ ಬಗ್ಗೆ ವಿಚಾರವಾಗುತ್ತದೆಯೇ ಹೊರತು - ಆ ಸಮಸ್ಯೆಯನ್ನು ಪರಿಹರಿಸಬೇಕೋ ಇಲ್ಲವೋ ಅನ್ನುವುದರ ಬಗ್ಗೆ ಚರ್ಚೆ ನಡೆಯುವುದಿಲ್ಲ [ಪು.164]. ನ್ಯಾಯ ಸಂಪಾದಿಸಲು ಪರಿಹಾರ ಕಂಡುಕೊಳ್ಳಲು ಅವರು ಉಪಯೋಗಿಸುವ ಮಾರ್ಗವನ್ನು ಕಂಡು ಸುಧೀರ್ ಚಡಪಡಿಕೆಯಿಂದ ಹೇಳುತ್ತಾರೆ: "ಇದು ಎಷ್ಟು ವಿಚಿತ್ರ ಜೀವನ - ಹೀಗೆ ಹೇಗೆ ಬದುಕುವುದು ಸಾಧ್ಯ?" ಆದರೆ ಸುಧೀರ್ ಕೇಳಿದ ಈ ಪ್ರಶ್ನೆಗೆ "ಬಹುಶಃ ನಿನಗೆ ಈಗ ಅರ್ಥವಾಗಲು ಪ್ರಾರಂಭವಾಗಿದೆ ಅನ್ನಿಸುತ್ತದೆ. ಬಹುಶಃ ನೀನು ಈ ಬಗ್ಗೆ ಕಲಿಯಲೂ ಪ್ರಾರಂಭಿಸಿರಬಹುದು" ಅನ್ನುವುದು ಬೇಯ್ಲಿಯ ಉತ್ತರ. ಆ ಕಲಿಕೆ ಕೇವಲ ಸುಧೀರ್‌ಗೆ ಮಾತ್ರವಲ್ಲದೇ ಓದುಗನಿಗೂ ಉಂಟಾಗುತ್ತದೆ.

ಸುಧೀರ್ ಬರವಣಿಗೆಯಲ್ಲಿ ಒಂದು ಥರದ ಸ್ಥಿತ ಪ್ರಜ್ಞತೆ ಹಾಗೂ ಒಳಗೊಳ್ಳದಿರುವ ಶೈಲಿಯಿದೆ. ಬಹುಶಃ ಈಗ ಆ ಎಲ್ಲದರಿಂದ ದೂರವಾಗಿ ತಮ್ಮ ವಿಶ್ವವಿದ್ಯಾನಿಲಯದ ಬೆಚ್ಚನೆಯ ವಾತಾವರಣದಲ್ಲಿ ಕೂತುಬರೆಯುತ್ತಿರುವುದರಿಂದ ನಮಗೆ ಹಾಗನ್ನಿಸಬಹುದೇನೋ. ಆತ ಹೆಚ್ಚಾದ ವಿಶ್ಲೇಷಣೆಯನ್ನು ನೀಡದೆಯೇ ಕೇವಲ ತಮ್ಮ ಅನುಭವವನ್ನು ದಾಖಲಿಸಿ, ಮಿಕ್ಕ ವಿಚಾರಗಳನ್ನು ಓದುಗರ ತೀರ್ಪಿಗೆ ಬಿಟ್ಟುಬಿಡುತ್ತಾರೆ. ಘಟಿಸಿದ ಘಟನಾವಳಿಯನ್ನು ತಮ್ಮ ಭಾವನೆಗಳನ್ನು ಒಳಪಡಿಸದೆಯೇ ದೂರದಿಂದ ನೋಡಿ ವರದಿ ಮಾಡುವ ಶೈಲಿಯನ್ನು ಸುಧೀರ್ ತಮ್ಮದಾಗಿಸಿಕೊಂಡಿದ್ದಾರೆ. ಹೀಗೆ ಸುಧೀರ್ ಚಿತ್ರಿಸುವ ಘಟನಾವಳಿಗಳ ಸರಣಿ ಅವರ ಒಟ್ಟಾರೆ ’ಕಥೆ’ಯನ್ನು ನಾವು ಅಂತರ್ಗತ ಮಾಡಿಕೊಳ್ಳಲು ಪೂರಕವಾಗಿದೆ.

ಈ ಪುಸ್ತಕದ ಮಹತ್ವ ಇರುವುದು ಒಂದು ಮುಖ್ಯವಾದ ಅಂಶದಲ್ಲಿ. ಸಂಶೋಧನೆಯಲ್ಲಿ ತೊಡಗುವ ಜನರಿಗೆ ಈ ರೀತಿಯ ಗ್ಯಾಂಗುಗಳೊಂದಿಗೆ ಇದ್ದು ಅಲ್ಲಿಂದ ತಮ್ಮ ಒಳನೋಟಗಳನ್ನು ಪಡೆಯುವ ಘನತೆ ಸಾಮಾನ್ಯವಾಗಿ ದೊರೆಯುವುದಿಲ್ಲ. ಅವರುಗಳು ಜೀವಿಸುವ ಜಾಗವನ್ನು ಸರಕಾರ "ಪ್ರಾಜೆಕ್ಟ್" ಎಂದು ಕರೆದರೂ ಅವರು ಅದನ್ನು ಸಮುದಾಯವೆಂದೇ ಕರೆಯುತ್ತಾರೆ. ಈ ಸಮುದಾಯದಲ್ಲಿ ಇರುವುದು ಮಾದಕ ವಸ್ತುಗಳನ್ನು ಮಾರಾಟ ಮಾಡುವ, ಚಿಲ್ಲರೆ ಅಪರಾಧಗಳನ್ನೆಸಗುವ, ಕಾನೂನು ಮುರಿಯುವ ಆದರೆ ಎಲ್ಲವೂ ತಮ್ಮದೇ ಕಾಯಿದೆಯ ಪ್ರಕಾರ ಮಾಡುವ ಜನ. ಆ ಸಮುದಾಯಕ್ಕೆ ಯಾವುದೇ ಕಾರ್ಪರೇಟ್ ಜಗತ್ತಿನಂತೆಯೇ ಅಧಿಕಾರದ ಮಜಲುಗಳೂ, ಬಡ್ತಿ ಕಾರ್ಯಕ್ರಮಗಳೂ, ಅಸೂಯೆಗಳೂ ಹಾಗೂ ಮಾರುಕಟ್ಟೆಯಲ್ಲಿರಬಹುದಾದ ಪೈಪೋಟಿಗಳೂ ಇವೆ!

ಸಂಶೋಧನೆಗೆಂದು ಹೊರಟಿರುವ ಜನರ ನಡವಳಿಕೆಯಲ್ಲಿರಬಹುದಾದ ದ್ವಂದ್ವಗಳನ್ನೂ ಆ ಸ್ಥಳವನ್ನಾಕ್ರಮಿಸಿದ ತಾತ್ವಿಕ ನೆಲೆಯನ್ನೂ ಪುಸ್ತಕ ಚರ್ಚಿಸುತ್ತದೆ. ಎಷ್ಟೋ ಬಾರಿ ಸಂಶೋಧಕನ ನಡವಳಿಕೆಯನ್ನು ಪರೀಕ್ಷೆಗೆ ಒಡ್ಡಲಾಗುತ್ತದೆ. ಈ ಪರೀಕ್ಷೆ ಒಮ್ಮೊಮ್ಮೆ ಪ್ರತ್ಯಕ್ಷವಾಗಿಯಾದರೆ, ಒಮ್ಮೊಮ್ಮೆ ಪರೋಕ್ಷವಾಗಿ ಸುಧೀರ್ ಅಂತಹ ಸಂಶೋಧಕರನ್ನು ಕಾಡುತ್ತದೆ. ಉದಾಹರಣೆಗೆ ವಿಶ್ವವಿದ್ಯಾನಿಲಯದಲ್ಲಿ ಜ್ಞಾನವರ್ಧನೆಯ ಕೆಲಸ ಮಾಡುವ ಸಂಶೋಧಕರು ಒಂದು ಸಮುದಾಯದ ಬಗ್ಗೆ ಅಧ್ಯಯನ ಮಾಡುತ್ತೇವೆ ಎಂದು ಹೊರಟಾಗ - ಹಾಗೊಂದು ’ವಿಷಯ’ವಿದೆ ಅನ್ನುವ ಅಹಂನೊಂದಿಗೆ ಹೋಗುತ್ತಾರೆ. ಆದರೆ ಸುಧೀರ್ ಅಥವಾ ಅವರಂತಹ ಸಂಶೋಧಕರನ್ನೇ ಈ ಸಮುದಾಯ ಹತ್ತಿರದಿಂದ ಅಧ್ಯಯನ ಮಾಡುತ್ತದಲ್ಲದೇ ಅವರನ್ನು ತಮ್ಮದೇ ಉದ್ದೇಶಗಳಿಗೆ ಉಪಯೋಗಿಸಿಕೊಳ್ಳಲೂ ಬಹುದು ಅನ್ನುವುದು ನಮಗೆ ಮನವರಿಕೆಯಾಗುತ್ತದೆ. ಸುಧೀರ್ ಇರುವ ಸಂದರ್ಭದಲ್ಲಿ ಅದರಲ್ಲೂ ಅಪರಾಧವನ್ನೇ ಜೀವನಮಾಡಿಕೊಂಡ ಈ ಸಮುದಾಯದ ಭಯಭೀತಿಗಳ ನಡುವಿನಲ್ಲಿ ತಾವು ಮತ್ತಷ್ಟು ಪರೀಕ್ಷೆಗೊಳಗಾಗುವುದನ್ನು ಕಂಡುಕೊಳ್ಳುತ್ತಾರೆ. ಆ ಪರೀಕ್ಷೆಯನ್ನು ನಡೆಸುವವರು ಸುಧೀರನ್ನು ಒಳಸೇರಿಸಿದ ಜನರು ಮಾತ್ರವಲ್ಲ ಬದಲಿಗೆ ಆತನ ಜೊತೆ ಮಾತನಾಡಿದ-ಒಡನಾಡಿದ ಪ್ರತಿಯೊಬ್ಬರೂ ಆತನನ್ನು ಪರೀಕ್ಷೆಗೆ ಒಡ್ಡುತ್ತಿದ್ದಾರೆ ಅನ್ನುವುದನ್ನು ನಾವು ಗಮನಿಸಬೇಕು. ಕೆಲವು ಬಾರಿ ತಮಗೆ ತಿಳಿಯದೆಯೇ ಸುಧೀರ್ ಒಂದು ಪಕ್ಷವನ್ನು ಬೆಂಬಲಿಸಿಬಿಡುತ್ತಾರೆ [ಅಥವಾ ಜೆ.ಟಿಯ ಏಜೆಂಟ್ ಅನ್ನುವ ಅಭಿಪ್ರಾಯ ಉಂಟಾಗುವುದರಿಂದ ಆತನ ಪಕ್ಷಪಾತ ಮಾಡುತ್ತಿರುವಂತೆ ಇತರರಿಗೆ ಕಂಡುಬರುತ್ತಾರೆ]. ಒಮ್ಮೆ ಜೆಟಿಯ ಸಹಚರರು ಆತನ ಬಗ್ಗೆ ದೂರಿದ್ದನ್ನು ತಮಗರಿವಿಲ್ಲದಂತೆಯೇ ಸಹಜ ಸಂಭಾಷಣೆಯಲ್ಲಿ ಜೆಟಿಯ ಜೊತೆ ಚರ್ಚಿಸಿ ಸಹಚರರ ಕೋಪ-ಶಾಪಕ್ಕೊಳಗಾಗುತ್ತಾರೆ. ಸುಧೀರ್‌ಗೆ ಮಾಹಿತಿ ನೀಡುತ್ತಿರುವವರೇ ಆತ ಬರೆದುಕೊಂಡ ಮಾಹಿತಿಯ ನೋಟ್ಸ್ ಕೂಲಂಕಶವಾಗಿ ಪರೀಕ್ಷಿಸುತ್ತಿದ್ದಾರೆ! ಹೀಗಾಗಿ ಆ ನೋಟ್ಸ್ ಅನುಸಾರವಾಗಿ ಹೊಸ ಮಾಹಿತಿಯನ್ನೂ ಅವರು ತಿರುಚಿ ನೀಡುವ ಸಾಧ್ಯತೆಯಿದೆ! ಹೀಗಾಗಿಯೇ ಭಾಗವಹಿಸಿ ಕಂಡುಕೊಳ್ಳುವ [participant observation] ವಿಧಾನದ ಅಧ್ಯಯನದ ಬಗ್ಗೆ ಕೆಲ ಪ್ರಶ್ನೆಗಳೂ ಉದ್ಭವವಾಗುತ್ತವೆ. ಭಾಗವಹಿಸುವ ಪ್ರಕ್ರಿಯೆ ಮುಗಿಯುವುದು, ಕಂಡುಕೊಳ್ಳುವ ಪ್ರಕ್ರಿಯ ಪ್ರಾರಂಭವಾಗುವುದೂ ಯಾವ ಬಿಂದುವಿನಲ್ಲಿ? ಅಥವಾ ಸಮುದಾಯದ ವತಿಯಿಂದ ನೋಡಿದರೆ ಮಾಹಿತಿ ನೀಡುವುದಕ್ಕೂ - ಒಂದು ರೀತಿಯಾಗಿ ಮಾಹಿತಿಯನ್ನು ಬರೆದುಕೊಳ್ಳಲೆಂದೇ ಭಿನ್ನರೀತಿಯ ಪ್ರವರ್ತನೆಯನ್ನು ಪ್ರದರ್ಶಿಸುವುದಕ್ಕೂ ಇರುವ ವ್ಯತ್ಯಾಸವನ್ನು ಕಂಡುಕೊಳ್ಳಲು ಸಾಧ್ಯವೇ? ಈ ಪ್ರಶ್ನೆಗಳು ಅಧ್ಯಯನದ ರೀತಿನೀತಿಯ ದೃಷ್ಟಿಯಿಂದ ಮುಖ್ಯವಾದ ಪ್ರಶ್ನೆಗಳಾಗುತ್ತವೆ.

ಈ ವಿಷಯಗಳನ್ನು ಸುಧೀರ್ ಚರ್ಚಿಸುವುದಿಲ್ಲವಾದರೂ, ನೇರ ಉತ್ತರಗಳಿಲ್ಲದ ಅನೇಕ ದ್ವಂದ್ವಗಳನ್ನು ಅವರು ಎತ್ತುತ್ತಾರೆ. ಈ ಗ್ಯಾಂಗುಗಳ ಅಧ್ಯಯನ ನಡೆಸುತ್ತಿರುವಾಗ ಪೋಲೀಸರು ತನ್ನನ್ನು ಕರೆದು ಪ್ರಶ್ನಿಸಿದರೆ ತಾನೇನು ಮಾಡಬೇಕು? ತನಗೆ ತಿಳಿದಿರುವ ವಿಚಾರವನ್ನು ಅವರಿಗೆ ಹೇಳಬೇಕೇ? ಈ ಗ್ಯಾಂಗಿನವರು ಒಂದು ಕೊಲೆ ಮಾಡಲು ಯೋಜನೆ ಹಾಕುತ್ತಿರುವುದು ತನಗೆ ತಿಳಿದುಬಂದಾಗ ತೆಗೆದುಕೊಳ್ಳಬೇಕಾದ ನಿಲುವೇನು? ತನ್ನ ಸಂಶೋಧನೆ ಮುಂದುವರೆಯಲು ತಮ್ಮ ಸಮಯವನ್ನೂ ಒಳನೋಟಗಳನ್ನೂ ನೀಡಿದ ಈ ಸಮುದಾಯದವರಿಗೆ ತಾನು ಕೃತಜ್ಞತೆ ತೋರುವುದು ಹೇಗೆ? ಅವರಿಗೆ ಹಣ ನೀಡಬೇಕೇ? ಅವರ ಜೀವನದಲ್ಲಿ ಏನಾದರೂ ಉತ್ತಮವಾಗುವಂತೆ ಕೆಲಸ ಮಾಡಬೇಕೇ? ತನಗೆ ತಿಳಿದಿರುವ ಸರ್ಕಾರಿ ಯೋಜನೆಗಳು ಇವರತ್ತ ಹರಿಯುವಂತೆ ಏನಾದರೂ ಮಾಡಬೇಕೇ? ಅಥವಾ ಈ ಸಮುದಾಯವನ್ನು ಕೇವಲ ’ಅಧ್ಯಯನದ ವಿಷಯ’ ಮತ್ತು ’ಉದಾಹರಣೆ’ಗಳೆಂದು ನೋಡಿ ತನ್ನ ಜೀವನವನ್ನು ಮುಂದುವರೆಸಬೇಕೇ? ಇವುಗಳಲ್ಲಿ ಕೆಲವು ಪ್ರಶ್ನೆಗಳು ಆ ನಾಡಿನ ಕಾನೂನಿಗೆ ಸಂಬಂಧಿಸಿದ್ದಾದರೆ, ಬಹಳಷ್ಟು ಪ್ರಶ್ನೆಗಳು ಸಂಶೋಧಕರಿಗಿರುವ ತಾತ್ವಿಕ ನಿಲುವಿನ ಕಷ್ಟದ ಪ್ರಶ್ನೆಗಳಾಗಿವೆ. ಅಧ್ಯಯನ ನಡೆಸುವವರಿಗೂ, ಅಧ್ಯಯನಕ್ಕೊಳಗಾಗುವವರಿಗೂ ನಡುವಿನ ಈ ಜಟಿಲ ಹಾಗೂ ಗಹನ ಸಂಬಂಧದೊಳಗೆ ಯಾವನಿಲುವು ’ಸರಿ’ ಯಾವುದು ’ತಪ್ಪು’ ಎಂದು ನಿರ್ಧರಿಸಲು ಆಗುವುದೇ ಇಲ್ಲ!

ಸುಧೀರ್ ಈ ಪುಸ್ತಕದಲ್ಲಿ ತಮ್ಮ ವಿಚಾರಗಳನ್ನೂ ಹೆಚ್ಚು ವ್ಯಕ್ತವಾಗಿ ಮಂಡಿಸಿದ್ದರೆ ಚೆನ್ನಾಗಿರುತ್ತಿತ್ತೇನೋ ಅಂತ ಒಮ್ಮೊಮ್ಮೆ ಅನ್ನಿಸುವುದು ಸಹಜ. ಆಗ ನಾವುಗಳು ಲೇಖಕರೊಂದಿಗೂ ಚರ್ಚೆಗಿಳಿಯಬಹುದಿತ್ತು. ಆದರೆ ಸುಧೀರ್ ಅವರ ವಿಚಾರಗಳು ವ್ಯಕ್ತವಾಗಿ ಇಲ್ಲದಿದ್ದರೂ ಪುಸ್ತಕದ ಮಹತ್ವವೇನೂ ಕುಂದುವುದಿಲ್ಲ. ಅವರ ಬರವಣಿಗೆಯ ಶೈಲಿ ನಮ್ಮನ್ನು ಈ ವಿಚಾರಗಳಲ್ಲಿ ಒಳಗೊಳ್ಳವ ರೀತಿಯಲ್ಲಿಯೇ ಇದೆ. ಆಗಾಗ ನಮ್ಮ ಮನಸ್ಸಿನಲ್ಲಿ ಪ್ರಶ್ನೆಗಳನ್ನೆಬ್ಬಿಸುವದರಲ್ಲೂ ಸುಧೀರ್ ಸಫಲರಾಗುತ್ತಾರೆ. ಗಂಭೀರ ಅಧ್ಯಯನವನ್ನು ಜನಸಾಮಾನ್ಯರು ಅರ್ಥಮಾಡಿಕೊಳ್ಳುವ ಜನಪ್ರಿಯ ಶೈಲಿಯಲ್ಲಿ ಬರೆಯುವುದರಲ್ಲಿ ಸುಧೀರ್ ಸಫಲರಾಗಿದ್ದಾರೆ. ಇದಕ್ಕಾಗಿ ಅವರನ್ನು ಅಭಿನಂದಿಸಲೇಬೇಕಾಗಿದೆ.




Thursday, September 24, 2009

ತಿರುಮಲೇಶರ ಕಾವ್ಯ


ಕನ್ನಡದಲ್ಲಿ ಕಾವ್ಯದಲ್ಲಿ ನನಗೆ ಪ್ರಿಯರಾದ ಕವಿ ತಿರುಮಲೇಶ. ಅದಕ್ಕೆ ಕಾರಣವಿಷ್ಟೇ - ತಿರುಮಲೇಶ ಯಾವಾಗಲೂ ಏನಾದರೂ ಹೊಸತನ್ನು ಹೇಳುತ್ತಾರೆ, ಹೊಸರೀತಿಯಲ್ಲಿ ಹೇಳುತ್ತಾರೆ. ’ಮುಖವಾಡಗಳು’ ಸಂಕಲನದಿಂದ ’ಅವಧ’ದ ವರೆಗೆ ಬಂದಿರುವ ಅವರ ಐದು ಕವನ ಸಂಗ್ರಹಗಳಲ್ಲಿ ವಿಶೇಷ ವೈವಿಧ್ಯತೆಯಿದೆ. ಅಡಿಗರ ಜಾಡಿನಲ್ಲಿಯೇ ಕವಿತೆಗಳನ್ನು ಬರೆಯಲು ಪ್ರಾರಂಭಿಸಿದ ತಿರುಮಲೇಶರು ನಂತರ ತಮ್ಮದೇ ಪ್ರತ್ಯೇಕತೆಯನ್ನು ಶೋಧಿಸುತ್ತಾ ತಮ್ಮದೇ ಮಾರ್ಗವನ್ನು ಕಂಡುಕೊಂಡು ಮುಂದೆ ಸಾಗಿದರು.

"ಕನ್ನಡ ಕಾವ್ಯಕ್ಷೇತ್ರದಲ್ಲೀಗ ಹೊಸ ಸಾಧ್ಯತೆಗಳನ್ನು ಕಂಡುಹಿಡಿಯುವುದು ಅಡಿಗೋತ್ತರರ ಕರ್ತವ್ಯವೆಂದು ನನ್ನ ನಂಬಿಕೆ" ಎಂದು ಮಹಾಪ್ರಸ್ಥಾನದ ಪ್ರಸ್ತಾವನೆಯಲ್ಲಿ ತಿರುಮಲೇಶರು ಬರೆದಿದ್ದರು. ಆ ಕಳಕಳಿ ಅವರಲ್ಲಿ ತಮ್ಮ ಮೊದಲ ಸಂಕಲನದಿಂದಲೇ ಇದ್ದುದನ್ನು ಕಾಣಬಹುದಾಗಿದೆ. ಮುಖವಾಡಗಳು ಸಂಕಲನದ ಕವಿತೆಯ ಈ ಸಾಲುಗಳನ್ನು ಗಮನಿಸಿ:

ಕೇರಳ
........
ಛೀ ಸಾಕು
ಈ ಹುಚ್ಚು ಸೆಕೆಂಡ್ ಹ್ಯಾಂಡ್ ಕಾವ್ಯ
ಯಾರ ಟೇಸ್ಟಿಗೋ ಮಾಡಿದ ಅಡಿಗೆಯಿದು
ಪಂಪ ಕುಮಾರವ್ಯಾಸ, ಮಿಲ್ಟನರ
ಕಿಸೆಗೆ ಕೈಹಾಕಿ
ಪದ ವಿಜೃಂಭಣೆಯ ಅಮಲಿನಲ್ಲಿ
ನಾನು ರಾಮಾಯಣ ಬರೆಯಲೊಲ್ಲೆ
ನನ್ನ ದರ್ಶನ ಬೇರೆ...
....

ತಿರುಮಲೇಶರ ಕಾವ್ಯವನ್ನು ಅಧ್ಯಯನ ಮಾಡಿದಾಗ ಅವರ ಬೆಳವಣಿಗೆಯನ್ನು ಸ್ಪಷ್ಟವಾಗಿ ಮೂರು ಘಟ್ಟಗಳಲ್ಲಿ ಗುರುತಿಸಬಹುದು. ’ಮುಖವಾಡಗಳು’, ’ವಠಾರ’ ಹಾಗೂ ಒಂದಂಶದವರೆಗೂ ’ಮಹಾಪ್ರಸ್ಥಾನ’ ಅಡಿಗರ ಜಾಡಿನಲ್ಲೇ ಬರೆದ, ಬೇರೊಂದು ಮಾರ್ಗಕ್ಕಾಗಿ ಶೋಧನೆ ನಡೆಸುತ್ತಿರುವ ಘಟ್ಟವಾದರೆ, ’ಮುಖಾಮುಖಿ’ ಅವರ ಹೊಸಮಾರ್ಗದ ಹುಡುಕಾಟಕ್ಕೆ ಒಂದು ಸ್ಪಷ್ಟ ದಿಕ್ಕನ್ನು ಕಲ್ಪಿಸಿದ ಸಂಕಲನ. ’ಅವಧ’ ಖಂಡಿತವಾಗಿಯೂ ಸಂಪೂರ್ಣ ತಿರುಮಲೇಶರದೇ ಎಂಬಂಥ ಶೈಲಿಯನ್ನು ಮೈಗೂಡಿಸಿಕೊಂಡಿದೆ. ’ವಠಾರ’ ’ಮುಖವಾಡಗಳು’ ಸಂಕಲನಗಳಲ್ಲಿರುವ ಕವಿತೆಗಳು ಬಹಳ ಎಕ್ಸ್ ಪ್ಲಿಸಿಟ್ ಸಂಕೇತಗಳೂ, ನೇರ ನಿರೂಪಣೆಯನ್ನೂ ಹೊಂದಿದ್ದರೆ, ಆನಂತರದ ಕವಿತೆಗಳು ಸಂಕೀರ್ಣವಾಗುತ್ತಾ ಹೋಗುವುದನ್ನ ಕಾಣಬಹುದು. ಅವರ ಬರವಣಿಗೆ, ಅತೀ ಸಣ್ಣವಿಚಾರವನ್ನೂ ಕಾವ್ಯಕ್ಕೆ ಅಳವಡಿಸುವ ಪ್ರಕ್ರಿಯೆಯಲ್ಲಿ ನಿರತವಾಗುತ್ತವೆ. ’ಒಂದು ಸ್ವತಂತ್ರ ಬಿಂದುವಿನಂತೆ ಪ್ರಣೀತವಾದ[ವಾದುದರಿಂದ] ಕವನವನ್ನು ಹೇಗೇ ವ್ಯಾಖ್ಯಾನಿಸಲೂ ಅನುಕೂಲವಾದ [ವಾಗಿದೆ]’ [ವಿಜಯಶಂಕರ್, ರುಜುವಾತು, ಸಂಚಿಕೆ ೯] ಕವಿತೆಗಳನ್ನು ತಿರುಮಲೇಶ್ ಬರೆದಿರುವುದರಲ್ಲಿ ಅವರ ಸ್ಪಷ್ಟ ಬೆಳವಣಿಗೆಯನ್ನು ಗಮನಿಸಬಹುದಾಗಿದೆ.

ತಿರುಮಲೇಶರ ಮೊದಲ ಸಂಕಲನಗಳ ಕವಿತೆಗಳು ’ನಿಯತ ಛಂದೋಗತಿಯಿಂದ ಮುಕ್ತವಾಗಿ, ಆದರೂ ಮುಕ್ತ ಪದ್ಯವಾಗದೆ, ಗದ್ಯದ ಗತಿಗೆ ಬಹು ಸಮೀಪ ಬಂದು ಆದರೂ ಗದ್ಯವಾಗದೆ ಸ್ವತಂತ್ರ ಕಾವ್ಯಕ್ಕೆ ತಕ್ಕ ಗತಿಯನ್ನು’ [ಗೋಪಾಲಕೃಷ್ಣ ಅಡಿಗ, ಮುಖವಾಡಗಳು ಮುನ್ನುಡಿ] ಒದಗಿಸಿದರೆ. ಈಚೀಚಿನ ಕವಿತೆಗಳು ಭಾವಗೀತಾತ್ಮಕ ಶೈಲಿಯಲ್ಲಿ ಬರೆದವುಗಳು ಎಂಬುದನ್ನು ಗಮನಿಸಬಹುದು.

’ಮುಖವಾಡಗಳು’ ಸಂಕಲನದಲ್ಲಿರುವ ಕವಿತೆಗಳು ಒಂದು ರೀತಿಯ ಹುಡುಕಾಟದಲ್ಲೇ ಓಡಾಡುತ್ತವೆ. ’ನನ್ನ ಕತೆ’ ಎಂಬ ಮೊದಲ ಕವಿತೆಯಲ್ಲಿ ಸೂಚ್ಯವಾಗಿ ತಿರುಮಲೇಶ್ ಅದನ್ನೇ ಹೇಳುತ್ತಾರೆ:

...
ಈ ಮನೀಷೆ
ಈ ಒಳತೋಟಿ
ಅನುಭವಿಸಿ, ಅನುಭವಿಸಿ ಸೋತು ಸುಸ್ತಾಗಿ
ಯಶೋಧರೆಯ ಮಗ್ಗುಲಲಿ
ಹೊರಳಿದ್ದು
ಎಲ್ಲೋ ಎನೋ ಕಳೆದುಹೋಗಿದೆಯೆಂದು
ಬೋಧಿವೃಕ್ಷದ ಕೆಳಗೆ
ಹುಡುಕಿದ್ದು
ಬುದ್ಧನಾದದ್ದು ಗೊಮ್ಮಟನಾದದ್ದು
ಕಲ್ಲಾಗಿ ಬಿದ್ದದ್ದು
ನನ್ನ ಕತೆ..
...

ಈ ಹುಡುಕಾಟದಲ್ಲಿ ಮುಖ್ಯವಾಗಿ ವಾಸ್ತವಿಕತೆ ಹಾಗೂ ಅನುಭವಕ್ಕೆ ವಿಪರೀತವಾದ ಒತ್ತು ಕೊಟ್ಟಿರುವುದನ್ನೂ ನೋಡಬಹುದು. ’ಸಮರ್ಥನೆ: ಸೈತಾನ’ ’ಸಮರ್ಥನೆ: ಗುಂಡಿಯಿಲ್ಲದ ಪ್ಯಾಂಟು ಧರಿಸಿದವ’ ಕವಿತೆಯ
...
ಹುಟ್ಟಿ ಬಂದಾಗ ಮಾತು ಕೊಟ್ಟಿದ್ದುಂಟೆ
ಪ್ಯಾಂಟ್ಸು ಹಾಕುತ್ತೇನೆ
ಬಟನ್ಸ್ ಇರಿಸುತ್ತೇನೆ ಎಂದೆಲ್ಲಾ?
ತಪ್ಪು ಮುತ್ತಜ್ಜ ಆದಮನದು
ಅಲ್ಲ ಮುತ್ತಜ್ಜಿಯದೋ
ಬಾ, ಯಾಕೆ ಈ ಮುಖವಾಡ?
ಒಂದಿಷ್ಟು ಬಂಧನ ರಹಿತರಾಗಿ ಓಡಾಡೋಣ
ಮನ ಬಯಸಿದಲ್ಲಿ ಬಯಸಿದ ಹಾಗೆ
..

ಎಂಬ ಸಾಲುಗಳು, ’ವಾಸ್ತವತೆ’ ಕವಿತೆಯ ಸಾಲುಗಳು, ಹಾಗೂ ’ಮುಖವಾಡಗಳು’, ’ಕೇರಳ’ ಈ ಎಲ್ಲ ಕವಿತೆಗಳದೂ ಒಂದೇ ಧ್ವನಿ. ಆಷಾಢಭೂತಿತನದ ಪೊರೆ ಕಳಚಿ ಸಹಜವಾಗಿ ವಾಸ್ತವದಲ್ಲಿ ಬಂದದ್ದು ಬಂದಂತೆ, ಇದ್ದದ್ದು ಇದ್ದಂತೆ, ಯಾವ ಒಪ್ಪಂದಗಳೂ ಇಲ್ಲದೇ ಇರುವಂತಹ ಬದುಕಿನ ಶೋಧನೆ.

’ವಠಾರ’ ಸಂಕಲನಕ್ಕೆ ಬರುವ ವೇಳೆಗೆ ತಿರುಮಲೇಶರು ಹುಡುಕಾಟದಿಂದ ಸ್ವಲ್ಪ ಹುಡುಗಾಟಿಕೆಯತ್ತ ವಾಲುತ್ತಾರೆ. ’ಮುಖವಾಡಗಳು’ವಿನಲ್ಲಿನ ಪೊರೆ ಕಳಚಿ ವಾಸ್ತವದ ಮುಖಾಮುಖಿಯಾಗಿ ನಿಲ್ಲುವ ಮೂಲತಂತುವನ್ನು ಈ ಸಂಕಲನದಲ್ಲೂ ಪೋಷಿಸಿಕೊಂಡು ಬಂದರೂ, ಕವಿತೆ ಬರೆಯುವ ಶೈಲಿ ಇಲ್ಲಿ ಬೇರೊಂದು ಮುಖವನ್ನೇ ಪಡೆಯುವುದನ್ನು ಗಮನಿಸಬಹುದು. ಇಲ್ಲಿ ಹೆಚ್ಚಿನ ಕವಿತೆಗಳು ಹುಡುಗಾಟದ ಕೂಗಾಟದ ಅಬ್ಬರದಿಂದ ತತ್ತರಿಸಿವೆ. ’ವಠಾರ’ದ ಪ್ರಸ್ತಾವನೆಯಲ್ಲಿಯೇ ತಿರುಮಲೇಶ್ ಹೇಳಿಬಿಡುತ್ತಾರೆ.. "’ಮುಖವಾಡಗಳು’ ಸ್ವಲ್ಪಮಟ್ಟಿಗೆ ಅನುಕರಣಶೀಲತೆಯನ್ನು ಹೊಂದಿರುವುದು ಅನಿವಾರ್ಯವಾಗಿತ್ತು. ಅದರಲ್ಲೂ ನನ್ನದೇ ಲಯಗಳನ್ನು ಗುರುತಿಸುವ ಯತ್ನ ಮಾಡಿದ್ದೆ. ’ವಠಾರ’ ಅಂತಹ ಇನ್ನೊಂದು ಪ್ರಯತ್ನ. ಇದೊಂದು ಮಹತ್ವಾಕಾಂಕ್ಷೆಯ ಕೃತಿಯೇನೂ ಅಲ್ಲ. ವಠಾರ ನನ್ನ ಓದುಗರಲ್ಲಿ ಒಂದಿಷ್ಟು ನಗರ ಪ್ರಜ್ಞೆಯನ್ನೂ ಪರಿಸರ ಬೋಧವನ್ನೂ ಉಂಟುಮಾಡಿದರೆ, ಅಲ್ಲಿಗೆ ಅದು ಅರ್ಥಪೂರ್ಣ.’ ಇಷ್ಟೇ ಸೀಮಿತವಾದ ಘೋಷಿತ ಉದ್ದೇಶಗಳಿರುವ ಈ ಕವಿತೆಗಳು ಒಂದು ಸೀಮಿತ ಚೌಕಟ್ಟಿನಲ್ಲಿ ಮಾತ್ರ ಪರಿಣಾಮ ಬೀರುತ್ತವೆ. ’ವಠಾರ’ದಲ್ಲಿರುವ ಕವಿತೆಗಳ ಶೈಲಿ ನೋಡಬೇಕೆಂದರೆ ಅದರ ಮೊದಲ ಕವಿತೆ ಕೀರ್ತನೆ ಪರಿಶೀಲಿಸಬಹುದು:


ಕೀರ್ತನೆ

ಯನ್ನ ತಲೆಯನ್ನ ಸೋರೆ ಮಾಡಿ
ಯನ್ನ ನರಗಳನ್ನ ತಂತಿ ಮಾಡಿ
ನಿನ್ನ ಸ್ವರೂಪವನ್ನ ಯನ್ನಿಂದ ಧ್ವನಿಸಿ
ಗೊಂಬೆಯಾಟವಯ್ಯಾ ಎಂದು ಕುಣಿಸಿ
ಮಣಿಸಿ ದಣಿಸಿ
ದಾಸರ ದಾಸ ಚಪ್ರಾಸಿ ಮಾಡ್ಕೋ
ತಲೆಮೇಲೆ ಕೂತ್ಕೋ
ಯನ್ನ ನೆತ್ತರು ಕುದಿಸಿ ದಾಮರು ಮಾಡ್ಕೋ
ರೋಡಿಗೆ ಹಾಕ್ಕೋ
ಓಡ್ಸು ಅದರ ಮೇಲೆ ನಿನ್ನ ಇಂಪಾಲಾ
ಯನ್ನ ಚರ್ಮವ ಚಪ್ಪಲಿ ಮಾಡ್ಕೋ
ಹಾಕಿಕೋ ತುಳ್ಕೋ
ಖಂಡವಿದೆಕೋ ಮಾಂಸವಿದಿಕೋ
ಬೇಕಾದ್ರೆ ಬೇಯಿಸ್ಕೋ
ಉಂಡು ತೇಗು ಕ್ಕೊಕ್ಕೋ
ತಗೋ ಯನ್ನ ಮೂಳೆ
ನಿನ್ನ ತ್ರಾಣಕ್ಕೆ ಒಳ್ಳೇದು
ಸೂಪು ಮಾಡಿ ಕುಡೀ.

ಈ ಕವಿತೆಯಲ್ಲಿ ನಾವು ಕಾಣುವುದು ವಿಜಯಶಂಕರ್ ಹೇಳಿದಂತೆ "ವ್ಯಂಗ್ಯ ತಿರಸ್ಕಾರಗಳಲ್ಲಿ ಬೆಳೆಯುವ ಸಿಟ್ಟು". ಇಲ್ಲಿ ಉಪಯೋಗಿಸಿರುವ ಅಣಕಮಾಡುವ ಶೈಲಿ ಮೊನಚು ವ್ಯಂಗ್ಯದತ್ತ ಬೊಟ್ಟು ಮಾಡಿ ತೋರಿಸುತ್ತದೆ. ತಿಳಿದೂ ಶೋಷಣೆಗೆ ಒಳಪಡುತ್ತಿರುವ ಪ್ರಕ್ರಿಯೆಯನ್ನು ಈ ಕವಿತೆ ಸಮರ್ಥವಾಗಿ ಚಿತ್ರಿಸಲು ಯತ್ನಿಸಿದರೂ, ಕೂಗಾಟದ ರೀತಿಯ ಅಬ್ಬರವಿರುವುದರಿಂದ ಬೀರಬಹುದಾದ ಸೂಕ್ಷ್ಮ ಪರಿಣಾಮಕ್ಕೆ ಧಕ್ಕೆಯಾದಂತೆನ್ನಿಸುತ್ತದೆ. ವಿಜಯಶಂಕರ ಇದನ್ನು "ಖಾರವಾಗಿ ತನ್ನ ಹಿಂದಿನದನ್ನು ಚುಚ್ಚುವ ಮನೋಭಾವ [ದುಂಡುಚಿ] ಕೇವಲ ಗೇಲಿ ಮಾಡುವ ಹುಡುಗಾಟದ ಖುಷಿ [ಕೂ.ಮಂ.ಭಟ್ಟರ ಕಾವ್ಯವಿಳಾಸ]" ಎನ್ನುತ್ತಾರೆ. ಇಂಥವು ಹಲವು ’ವಠಾರ’ದಲ್ಲಿ ನಮಗೆ ಕಾಣುತ್ತವೆ. ’ಅಸ್ವಸ್ಥರು’ ಕವಿತೆಯಲ್ಲೂ ವಿಡಂಬನೆಯ ಧ್ವನಿಯನ್ನು ಕಾಣಬಹುದು. ಆಷಾಢಭೂತಿತನದ ಪೊರೆ ಕಳಚುವ ಮತ್ತೊಂದು ಪ್ರಯತ್ನವೂ [ಮುಖವಾಡಗಳ ಕವಿಗೆ] ಈ ಸಂಕಲನದಲ್ಲಿದೆ.

ಮೊದಲೇ ಹೇಳಿದಂತೆ, ’ವಠಾರ’ದಲ್ಲಿ ಎಕ್ಸ್ ಪ್ಲಿಸಿಟ್ ಸಂಕೇತಗಳು ಸಾಕಷ್ಟು ಬಳಸಲ್ಪಟ್ಟಿವೆ. ’ಶ್ವಾನ ಮೀಮಾಂಸೆ’ಯಲ್ಲಿ ಈ ರೀತಿಯ ಬಹಿರಂಗ ಸಂಕೇತವನ್ನು ಉಪಯೋಗಿಸಿರುವುದನ್ನು ನಾವು ಕಾಣಬಹುದು:

...
ಕಚ್ಚುವ ನಾಯಿ
ಬೊಗಳುವ ನಾಯಿ ಹೀಗೆ
ಕೋಮು ಕಟ್ಟಲಿಲ್ಲವೇ ನೀವು
...

ಆದರೆ ಅದೇ ಕವಿತೆಯಲ್ಲಿ ಚಿರವಾಸ್ತವದ ಅಂಶವನ್ನೂ ಸೂಕ್ಷ್ಮವಾಗಿ ಸೇರಿಸುವ ಕಲೆಗಾರಿಕೆಯನ್ನೂ ತಿರುಮಲೇಶ ತೋರುತ್ತಾರೆ:

..
ಬದಲಾಗುತ್ತಿರುವೀ ಮೌಲ್ಯಗಳಲ್ಲೂ
ಕಪ್ಪು ನಾಯಿ ಬಿಳಿಯಾಗುವುದಿಲ್ಲ
ಡೊಂಕು ಬಾಲ ನೆಟ್ಟಗೆ ನಿಲ್ಲುವುದಿಲ್ಲ
ಎಂಬುದು ನಿಜವೆಂದು ಒಪ್ಪುವುದಿಲ್ಲವೇ ನೀವು
...

ಗೀತೆಯ, ಪರಂಪರೆಯ ಮುಸುಕಿನಲ್ಲಿ ಅಡಗಿ ಪಲಾಯನವಾದವನ್ನು ಪೋಷಿಸುವ ಸಂಪ್ರದಾಯಸ್ಥರನ್ನು ಸ್ವಲ್ಪ ಕಟು ಎನ್ನಿಸುವ ಭಾಷೆಯಲ್ಲಿಯೇ ತಿರುಮಲೇಶ್ ಟೀಕಿಸುತ್ತಾರೆ:

..
ಹಿಟ್ಟಿಗಿಂತ ಹೊಟ್ಟೆ ದೊಡ್ಡದು
ಹೊಟ್ಟೆಗಿಂತ ಮನುಷ್ಯ ದೊಡ್ಡದು
ಮನುಷ್ಯನಿಗಿಂತ ಆತ್ಮ ದೊಡ್ಡದು
ಆತ್ಮಕ್ಕಿಂತ ಪರಮಾತ್ಮ ದೊಡ್ಡದು
ಎಂಬ ಲೆಕ್ಕಾಚಾರದ ಹಿಂದೆ
ದೊಂಬರಾಟ ಹಾಕಿ
ಫಿಲಾಸಫಿಯ ಕೆಳಗಡೆ ಅಡಗಿ
ಲಾಜಿಕ್ಕಿನ ಸುತ್ತ ಖೊಕ್ಕೋ ಆಡಿ
ಸಿನಿಕನ ಕೆಮ್ಮು ಬೀಡಿಯ ದಮ್ಮು
ಮಿಸ್ಟಿಸಿಸಮಿನ ಮಾರ್ಫಿಯಾ ಎಂದು ಮಲಗಿ
ದುರ್ಯೋಧನ ಬಂದು ಈಚೆಗೆ ಜಗ್ಗಿ ಎಳೆದಾಗ
ಚರ್ಮ ಉಳಿಸುವುದಕ್ಕೆ ಎರಡು ಪೆಗ್ ಹಾಕಿ
ಎದ್ದು ಹೋರಾಡುವ ಧರ್ಮ
ಗೀತೆಯ ಮರ್ಮ - ಕೇಳದೇ ಹುಟ್ಟಿಬಂದವರು
ಬದುಕಿಗೆ ಅರ್ಥ ಕಾಣದೇ ಹೋಗುವರು
ಕರ್ಮಣ್ಯೇವಾಧಿಕಾರಸ್ತೇ
ಇಂದಿಗೆ ಸಾಕು ಗುಡ್ ನೈಟ್ ನಮಸ್ತೇ
...


’ಮಹಾಪ್ರಸ್ಥಾನ’ ಸಂಕಲನ ಬರುವ ವೇಳೆಗೆ ಒಂದು ರೀತಿಯ ಪ್ರೌಢಿಮೆ ತಿರುಮಲೇಶರ ಕಾವ್ಯದಲ್ಲಿ ಮೂಡಿಬಂದದ್ದನ್ನು ನಾವು ಕಾಣಬಹುದು. ’ವಠಾರ’ದಲ್ಲಿ ಕಂಡ ಆಂಗ್ರಿ ಯಂಗ್ ಮ್ಯಾನ್ ಈಗ ಬಹಳ ಎಚ್ಚರದಿಂದ ಮಾತನಾಡುತ್ತಾರೆ. ಸೂಕ್ಷ್ಮವಾಗಿ ಚುಚ್ಚುತ್ತಾರೆ. ’ಮಹಾಪ್ರಸ್ಥಾನ’ದ ಕವಿ ಅನಂತಮೂರ್ತಿಯವರು ಹೇಳಿದಂತೆ "ನಾವೆಲ್ಲರೂ ಅತ್ಯಂತ ಎಚ್ಚರದಿಂದ ಓದಬೇಕಾದ ಇನ್ನೊಬ್ಬ ಲೇಖಕ.. ಕಾವ್ಯದಲ್ಲಿ ನಿಜವಾದ ಹೊಸಮಾತು ಸದ್ಯಕ್ಕೆ ಆಡುತ್ತಿರುವವರು ಇವರು."

’ತಿರುವನಂತಪುರ ೭೧’ ಕವಿತೆಯಲ್ಲಿ ತಿರುಮಲೇಶರು ಮೂಡಿಸುವ ನಗರೀಕರಣದ ಏಕತಾನತೆ ಅದ್ಭುತವಾಗಿದೆ. ಕವಿತೆಯ ಪ್ರಾರಂಭದಲ್ಲೇ ನಾಯಕ ಇಳಿದುಕೊಳ್ಳುವುದಕ್ಕೆ ಒಂದು ತಾಣವನ್ನು ಹುಡುಕುತ್ತಾ ಸಾಗುತ್ತಾನೆ. ’ನುಗ್ಗಿ ಲಗ್ಗೇಜು ಹೆಗಲಿಗೇರಿಸಿಕೊಂಡು ಬಗ್ಗಿ ಸಾಗಿದೆ ಪ್ರವಾಹದಲ್ಲಿ’ ಎನ್ನುವಾಗ ಎಲ್ಲೋ ಜನಾರಣ್ಯದಲ್ಲಿ ಕಳೆದು ಹೋಗುತ್ತಿರುವ ಅಭಿಪ್ರಾಯ ಮೂಡುತ್ತದೆ. ಆದರೆ ಕವಿತೆಯ ಅಂತ್ಯ ಓದುತ್ತಿದ್ದಂತೆ.. ಇದೇ ಸಾಲು ಹೊಸ ಅರ್ಥವ್ಯಾಪ್ತಿಯನ್ನೂ ಪಡೆಯುತ್ತದೆ. ಆತ ಹೆಗಲಿಗೇರಿಸಿಕೊಂಡು ಹೋದದ್ದು ಆ ನಗರದ ನೆನಪುಗಳ ಲಗ್ಗೇಜನ್ನು ಎಂಬುದು ವೇದ್ಯವಾಗುತ್ತದೆ. ಅಲ್ಲೇ ನಾಯಕ ಈ ಹಿಂದೆ ಕಂಡಿದ್ದ ಅದೇ ನಗರದ ಪುನರಾನ್ವೇಷಣೆಯೂ ನಡೆಯುತ್ತದೆ:

...
ಇಳಿದುಕೊಳ್ಳುವುದಕ್ಕೆ ರೂಮು ಅನ್ವೇಷಿಸಿದೆ
ಅನ್ವೇಷಿಸುತ್ತಾ ನಡೆದೆ, ನಡೆಯುತ್ತಾ ಅನ್ವೇಷಿಸಿದೆ
ಶ್ರದ್ಧೆಯಿಂದ ಆತಂಕದಿಂದ ಬಳಲಿಕೆಯಿಂದ ಶ್ರದ್ಧೆಯಿಂದ
ನಡೆದೆ ಅನ್ವೇಷಿಸುತ್ತಾ ನಡೆಯುತ್ತಾ ನಡೆದೆ.
...

ಇಲ್ಲಿ ಹುಡುಕು ಎನ್ನುವ ಪದವನ್ನು ಅವರು ಉಪಯೋಗಿಸಿಲ್ಲವೆಂಬುದು ಬದಲಿಗೆ ಇನ್ನೂ ಹೆಚ್ಚಿನ ಅರ್ಥವ್ಯಾಪ್ತಿಯುಳ್ಳ ’ಅನ್ವೇಷಣೆ’ ಪದವನ್ನು ಉಪಯೋಗಿಸಿರುವುದನ್ನು ಗಮನಿಸಿ. ಈ ಅನ್ವೇಷಣೆ ನಡೆಯುವ ಸಮಯದಲ್ಲೇ ಹಲವು ವಾಸ್ತವಗಳೂ ತಿಳಿದು ಬರುತ್ತವೆ. ಮೊದಲನೆಯದೆಂದರೆ, ಹಳೆಯದೆಲ್ಲವನ್ನೂ ನಗರೀಕರಣ ನುಂಗಿ ಹಳೇ ನೆನಪುಗಳಿಗೆ ಸ್ಥಾನವೇ ಇಲ್ಲದಂತಾಗಿದೆ. ನಗರ ಏಕತಾನತೆಯಿಂದ ಒಡಗೂಡಿದೆ. ಈ ಏಕತಾನತೆಯನ್ನೂ ಕವಿ ಸೂಕ್ಷ್ಮವಾಗಿ ಚಿತ್ರಿಸಿರುವ ರೀತಿ ನೋಡಿ:
..
ಈ ತಿರುವ
ನಂತಪುರ, ನಂತಪುರ ನಂತಪುರನಗರ ನಂತಪುರ ನಗರ
ಧೀರ್ಘ ಉದ್ದಗಲ ವಾಲುತ್ತಾ
ನನ್ನೆಡೆಗೆ ಹರಿಯುತ್ತಿದೆ ಎಂದಾಗ
ಕಾಲು ಕುಸಿಯುತ್ತದೆ
..

ಇಲ್ಲಿ ಸಾಲುಗಳನ್ನು ಕತ್ತರಿಸಿರುವ ರೀತಿ ಅತ್ಯಂತ ಕಲಾತ್ಮಕವಾದದ್ದು. ನಂತರ ’ನಂತಪುರ’ ಎಂದು ಪದೇ ಪದೇ ಹೇಳುವುದು ಒಂದು ರೀತಿಯ ಏಕತಾನತೆಯನ್ನು ತೋರಿದರೆ ಪಕ್ಕದಲ್ಲಿಯೇ ’ನಗರ ನಗರ’ ಎಂದು ಅದರ ಕಾಣರವಾದ ನಗರೀಕರಣವನ್ನೂ ಮನಕ್ಕೆ ನಾಟುವಂತೆ ಹೇಳುತ್ತಾರೆ.

’ದ್ವಾರಕೆ ಮುಳುಗಿದಾಗ’ ’ಮಹಾಪ್ರಸ್ಥಾನ’ ’ತೀರ್ಪು’ ಇತ್ಯಾದಿ ಸಮರ್ಥ ಕವಿತೆಗಳು ಈ ಸಂಕಲನದಲ್ಲಿವೆ. ಹಾಗೇ ಈ ಸಂಕಲನದ ’ಕಿಟಕಿ’ ಕವಿತೆಯೂ ಬಂಧನದಿಂದ ಮುಕ್ತವಾಗಿ ಹೊರಹೋಗುವ ಪ್ರಯತ್ನ ಹೊಸತನದ ಅನ್ವೇಷಣೆಯ ಫ್ಯಾಂಟಸಿಯಲ್ಲಿ ಸಾಗಿ ಕಡೆಗೆ ಬಂಧನದ ಸರಳುಗಳಾಗಿ ನಿಲ್ಲುವ ಕಡುವಾಸ್ತವದ ಆಂಟಿಕ್ಲೈಮಾಕ್ಸ್ ನಲ್ಲಿ ಪರ್ಯಾವಸನವಾಗುವ ಕ್ರಿಯೆಯನ್ನು ಚಿತ್ರಿಸುತ್ತದೆ.

ತಿರುಮಲೇಶರ ಮುಂದಿನ ಸಂಕಲನ ’ಮುಖಾಮುಖಿ’ ಅತ್ಯಂತ ಗಮನಾರ್ಹವಾದ ಸಂಕಲನ. ಇದು ಎಲ್ಲ ಕಾವ್ಯಪ್ರೇಮಿಗಳೂ ಗಂಭೀರವಾಗಿ ಗಮನಿಸಲೇಬೇಕಾದ ಸಂಕಲನ ಎನ್ನಿಸುತ್ತದೆ. ’ಮಹಾಪ್ರಸ್ಥಾನ’ದ ಕವಿಗೂ, ’ಮುಖಾಮುಖಿ’ಯ ಕವಿಗೂ ನಾವು ಗಮನಾರ್ಹವಾದ ಬದಲಾವಣೆಯನ್ನು ಕಾಣಬಹುದು. ಈ ಬದಲಾವಣೆಯನ್ನು ವಿಜಯಶಂಕರ್ ಗುರುತಿಸಿದ್ದಾರೆ - "ಮಹಾಪ್ರಸ್ಥಾನದ ನಾಯಕ ’ಅನುಭವದ ಎಲ್ಲ ಅಂಶಗಳನ್ನೂ ಒಂದೇ ಫೋಕಸ್ಸಿಗೆ ತರುವ’ ಪ್ರಯತ್ನಮಾಡಿದರೆ ’ಮುಖಾಮುಖಿ’ಯಲ್ಲಿ ಒಂದು ಅನುಭವಕ್ಕೆ ಸ್ವತಂತ್ರವಸ್ತುವಿನಂತೆ ಕೊಡಲ್ಪಟ್ಟ ಅಸ್ತಿತ್ವದ ಅನುರಣನಗಳು ಕೇಂದಾಪಗಾಮಿಯಾಗಿ ಹರಡುತ್ತದೆ."

’ಮಹಾಪ್ರಸ್ಥಾನ’ದ ನಂತರದ ಕವಿತೆಗಳಲ್ಲಿ ಆಗುವ ಪರಿಸರದ ಬದಲಾವಣೆಯೂ ಒಂದು ಗಮನಾರ್ಹ ಅಂಶ. ತಿರುಮಲೇಶರು ಬದುಕುವ ಪರಿಸರದ ಸಾರವನ್ನು ತಮ್ಮ ಕವಿತೆಗಳಲ್ಲಿ ಸಮರ್ಥವಾಗಿ ಅಳವಡಿಸುತ್ತಾರೆ ಅನ್ನುವುದಕ್ಕೆ ’ಮುಖಾಮುಖಿ’ ಒಂದು ಉತ್ತಮ ಉದಾಹರಣೆ. ಈ ಬದಲಾವಣೆಯನ್ನು transitive ಆಗಿ ಈ ಸಂಗ್ರಹದ ಕವಿತೆಗಳಲ್ಲಿ ಕಾಣಬಹುದು.

’ಮುಖಾಮುಖಿ’ಯಲ್ಲಿ ಹೈದರಾಬಾದಿ ಸಂಸ್ಕೃತಿಯನ್ನು ಕವಿತಗಳಲ್ಲಿ ಅಳವಡಿಸಿರುವುದು, ಅದೇ ಸಂಕೇತಗಳನ್ನು ಉಪಯೋಗಿಸಿಕೊಂಡಿರುವುದು ಅವರ ಕವಿತೆಗಳಿಗೆ ವಿಶೇಷ ವೈವಿಧ್ಯತೆಯನ್ನು ನೀಡಿದೆ. ಒಂದು ಬದಲಾವಣೆಯ ಅನುಭವವನ್ನು, ಅದಕ್ಕೆ ಹೊಂದಿಕೊಳ್ಳುತ್ತಲೇ ಇರಬೇಕಾದ ಅನಿವಾರ್ಯತೆಯನ್ನು ಅವರು ತಮ್ಮ ಕವಿತೆಗಳಲ್ಲಿ ಅಳವಡಿಸುತ್ತಾರೆ - ’ಹೊಸಬರು’ ಕವಿತೆಯ ಕೆಲ ಸಾಲುಗಳನ್ನು ಉದಾಹರಣೆಯಾಗಿ ನೋಡಬಹುದು:


...
ಆಮೇಲೆ ನೀವೆಂದೂ
ಹೊಸಬರಾಗಿ ಉಳಿಯುವುದಿಲ್ಲ
ಇವರ ಮಧ್ಯ
ಹೇಗೆ ಉಳಿಯುವುದು ಸಾಧ್ಯ?
ಈ ಊರ
ಅನ್ನ ತಿಳಿಸಾರು, ಕಬ್ಬಿನ ಹಾಲು ಅಂಗಡಿ ವ್ಯವಹಾರ
ಸೋಡ ಬೀಡ, ಜಗಳ ಪ್ರೇಮ ಎಲ್ಲರಿಗೂ
ಒಂದೇ ಗುರುತು ಒತ್ತಿಬಿಡುತ್ತವೆ. ಕ್ರಮೇಣ
ನೀವು ಇಲ್ಲಿನ ಸಭೆಗಳಲ್ಲಿ ಮಾತನಾಡುತ್ತಿರುವುದನ್ನು ಕಂಡು
ನಿಮಗೇ ಆಶ್ಚರ್ಯವಾಗಬಹುದು. ಈ ಆಶ್ಚರ್ಯವೂ
ಹೋಗುವುದು. ಇನ್ನೆಂದೂ ನೀವು ಕಿರಿಕಿರಿಯ ಪ್ರಶ್ನೆಗಳನ್ನು
ಕೇಳುವುದಿಲ್ಲ. ಅದಲ್ಲದೇ ಹೊಸಬರಾಗಿಯೇ
ಉಳಿಯಬೇಕೆಂದು ಮಾಡಿದ್ದರೆ ನೀವು -
ನಿಮ್ಮ ಮುಂದಿನ ಬಸ್ಸು ಇನ್ನರ್ಧ ಗಂಟೆಯಲ್ಲಿ
...


’ವಠಾರ’ ’ಮುಖವಾಡಗಳು’ಗಳ ಕವಿಗೂ ’ಮುಖಾಮುಖಿ’ ಯ ಕವಿಗೂ ಮೂಲಭೂತ ವ್ಯತ್ಯಾಸ ಕಂಡುಕೊಳ್ಳಲು ಅಲ್ಲಿನ ಕಟು ವ್ಯಂಗ್ಯ [ಗೀತಾರಹಸ್ಯ, ದುಂಡುಚಿ, ಕೇಳು ಜನಮೇಜಯನೆ ಇತ್ಯಾದಿಗಳು] ಹಾಗೂ ’ಮುಖಾಮುಖಿ’ ಯ ಸೂಕ್ಷ್ಮ ವ್ಯಂಗ್ಯ ಬದಿಬದಿಯಲ್ಲಿಟ್ಟು ನೋಡಬಹುದು. ’ಮುಖಾಮುಖಿ’ಯ ’ಇಬ್ಬರು’ ಸೂಕ್ಷ್ಮ ವ್ಯಂಗ್ಯದ ಒಂದು ಉದಾಹರಣೆ:


ಇಬ್ಬರು

ಮೊದಲು ಒಬ್ಬನೇ ಇದ್ದ. ತನ್ನ ಅಡುಗೆಯನ್ನೂ
ನಿದ್ದೆಯನ್ನೂ ತಾನೇ ಮಾಡುತ್ತಿದ್ದ. ತನ್ನ ಶರ್ಟುಗಳನ್ನು
ವಿಚಾರಗಳನ್ನೂ ತಾನೇ ಒಗೆಯುತ್ತಿದ್ದ

ಒಂದು ದಿನ ಬೇಜಾರಲ್ಲಿ ಊಟಕ್ಕೆಂದು
ಸಮೀಪದ ಹೊಟೆಲ್ಲಿಗೆ ಹೋದ. ಅಲ್ಲಿ
ಆಕೆಯ ಭೇಟಿಯಾಯಿತು

ಅಂದಿನಿಂದ ಆಕೆ ಇವನ ಅಡುಗೆಯನ್ನೂ
ಈತ ಅವಳ ನಿದ್ದೆಯನ್ನೂ ಮಾಡುವುದಕ್ಕೆ
ಮತ್ತು ಆಕೆ ಇವನ ಶರ್ಟುಗಳನ್ನೂ
ಈತ ಅವಳ ವಿಚಾರಗಳನ್ನೂ ಒಗೆಯುವುದಕ್ಕೆ

ಸುರುವಾಯಿತು.

ಇದೇ ರೀತಿಯ ಸೂಕ್ಷ್ಮ ವಿಡಂಬನೆ ’ಈ ಪೇಟೆಗೊಂದು ಒಳಚರಂಡಿ’ ನಮ್ಮ ಮೂಲ ಪ್ರವೃತ್ತಿಯನ್ನು ಶೋಧಿಸುವಂತೆ ಮಾಡುವ.. ಎಲ್ಲವನ್ನೂ ಆಲೋಚನೆಯ ಸ್ಥರದಲ್ಲೇ ಕೈಬಿಡುವ ಸಾಂಕೇತಿಕತೆಯನ್ನು ವಿಡಂಬನಾತ್ಮಕ ಧ್ವನಿಯಲ್ಲಿ ಸಫಲವಾಗಿ ಹೇಳುವ ’ಇನ್ನೂ ಬರೆಯದ’ ಮತ್ತು ’ದೊಡ್ಡ ಜನರು’ ಕವಿತೆಗಳಲ್ಲಿವೆ.

’ಅಬೀಡ್ಸಿನಲ್ಲಿ ರಸ್ತೆ ದಾಟುವುದು’ ನಿರಂತರತೆಯ ಪ್ರತೀಕವಾಗಿ ನಿಲ್ಲುವ ಕವಿತೆ. ’ಅಬೀಡ್ಸಿನಿಲ್ಲಿ ರಸ್ತೆ ದಾಟುವುದೆಂದರೆ ಪ್ರಾಣವನ್ನು ಜೇಬಿನಲ್ಲಿ ಹಾಕಿಕೊಂಡಿರಬೇಕು’ ಎನ್ನುವ ಕವಿ ಅದರ ಅಲ್ಪಪರಿಣಾಮ ನಿರಂತರತೆಯ ಮೇಲೆ ಆದದ್ದನು ಚಿತ್ರಿಸುತ್ತಾರೆ:

..
ಅಂತೂ ದಾಟಿದ ಮೇಲೆ ಹೇಗನ್ನಿಸುತ್ತದೆ
ನಿಮಗೆ? ನಿರಂತರವಾದ ಈ ರಸ್ತೆಯನ್ನು ತುಂಡರಿಸಿಬಿಟ್ಟೆವು
ಎಂದೇ? ಆದರೆ ಎಷ್ಟು ಬೇಗ ಅದು ಮತ್ತೆ
ಒಂದಾಯಿತು ನೋಡಿ..
...

’ಆರ್ಟ್ಸ್ ಕಾಲೇಜಿನ ರಸ್ತೆಯಲ್ಲಿ’ ಕವಿತೆಯಲ್ಲಿ ನಗರೀಕರಣವನ್ನು ಚಿತ್ರಿಸುತ್ತಲೇ ಅದರಲ್ಲೇ ಸೌಂದರ್ಯವನ್ನರಸುವ ಕವಿ ಹೃದಯವನ್ನು ಕಾಣಬಹುದು.

ಪರಂಪರೆಯನ್ನು ಆಗಾಗ ನೆನಪಿಗೆ ತರುವ ’ಹಳೇ ಮಾರ್ಗಗಳು’ ’ಹಳೆಗನ್ನಡದ ಆಸೆ’ ಒಂದು ರೀತಿಯ obsession ಅನ್ನು ಚಿತ್ರಿಸುವ ’ಅವರವರ ಚಾಳಿ’ಯಂತಹ ಉತ್ತಮ ಕವಿತೆಗಳೂ ’ಮುಖಾಮುಖಿ’ ಸಂಕಲನದಲ್ಲಿವೆ. ಹಾಗೇ ವಿಶೇಷ ಅರ್ಥವಂತಿಕೆಗೆ ಅನೇಕ ರೀತಿಯ ಅರ್ಥೈಸುವಿಕೆಗೆ ಒಡ್ಡಿಕೊಂಡಿರುವ ಕವಿತೆಗಳನ್ನು ಈ ಸಂಕಲನದಿಂದೀಚೆಗೆ ಕಾಣಬಹುದು. ಇದು ತಿರುಮಲೇಶರ ನಿಜವಾದ ಬೆಳವಣಿಗೆ. ಇದಕ್ಕೆ ಉದಾಹರಣೆಯಾಗಿ ’ಒಂದು ಕಲ್ಲಂಗಡಿ ಹಣ್ಣನ್ನು ಕತ್ತರಿಸುವುದು’ ’ಒಂದು ಬೂದಗುಂಬಳಕಾಯಿಯ ಮೇಲೆ ನಿಂತು’ ’ಇಲಿಗಳನ್ನು ಕೊಲ್ಲುವುದು’ ’ಚಿಟ್ಟೆಗಳನ್ನು ಹಿಡಿಯುವುದು’ ಮುಂತಾದ ಕವಿತೆಗಳನ್ನು ಹೆಸರಿಸಬಹುದು. ವಿಜಯಶಂಕರ್ ಹೇಳಿದಂತೆ "ಯಾವುದೇ ಸಂದರ್ಭವಿಲ್ಲದೇ ಒಂದು ಸ್ವತಂತ್ರ ಬಿಂದುವಿನಂತೆ ಪ್ರಣೀತವಾದುದರಿಂದ ಕವನವನ್ನು ಹೇಗೆ ವ್ಯಾಖ್ಯಾನಿಸಲೂ ಅನುಕೂಲವಿದೆ."

ತಿರುಮಲೇಶರ ಮತ್ತೊಂದು ವಿಶೇಷತೆಯೆಂದರೆ ಅವರು ಆಗಾಗ ಮಾಡುವ ಆತ್ಮಾವಲೋಕನ. ಈ ಅನುಭವವನ್ನೂ ಅವರು ಕವಿತೆಗಳಾಗಿ ಪರಿವರ್ತಿಸುತ್ತಾರೆ. ’ಮಹಾಪ್ರಸ್ಥಾನವನ್ನು ಇನ್ನೂಮ್ಮೆ ಓದಿದಾಗ’ ಅವರ ಬದಲಾದ ದೃಷ್ಟಿಕೋನವನ್ನು ದಾಖಲಿಸುತ್ತದೆ. ’ಅವಧ’ ಸಂಕಲನದಲ್ಲಿರುವ ’ಮತ್ತೊಂದು ಮುಖಾಮುಖಿ’ ಸಹ ಇಂಥದೇ ಒಂದು ಪ್ರಯತ್ನವಾಗಿದೆ.

ಈ ಎಲ್ಲವನೂ ಮೀರಿ ಬೆಳೆದು ನಿಂತ ಅವರ ಇತ್ತೀಚಿನ ಕವನ ಸಂಗ್ರಹ ’ಅವಧ’. ನೂರ ಅರವತ್ತೈದು ಕವಿತೆಗಳ ಈ ಸಂಕಲನ ಅತ್ಯಂತ ಗಮನಾರ್ಹವಾದ ಕೃತಿ [ಅದಕ್ಕೆ ಕೇಂದ್ರ ಸಾಹಿತ್ಯ ಅಕಾದಮಿ ಪುರಸ್ಕಾರವೂ ಪ್ರಾಪ್ತವಾಯಿತು]. ಒಂದು ಸಣ್ಣ ಅನುಭವವನ್ನೂ ದಿನನಿತ್ಯದ ಸಣ್ಣ ವಿಚಾರವನ್ನೂ ಕಾವ್ಯಕ್ಕೆ ಅಳವಡಿಸುವ ಪ್ರಕ್ರಿಯೆಯನ್ನು ಈ ಸಂಕಲನ ಬಿಂಬಿಸುತ್ತದೆ. ’ಅವಧ’ದಲ್ಲಿ ತಿರುಮಲೇಶರ ಕವಿತೆಗಳ ಶೈಲಿಯೂ ಗಮನಾರ್ಹವಾಗಿ ಬದಲಾಗಿದೆ. ಮೂರನೇ ವಿಭಾಗದಲ್ಲಿರುವ ಕವಿತೆಗಳಂತೂ ಸಂಪೂರ್ಣ ಭಾವಗೀತೆಗಳ ಶೈಲಿಯಲ್ಲಿವೆ. ಇಲ್ಲಿನ ಕವಿತೆಗಳ ಸ್ವರೂಪವೇ ಬೇರೆ. ’ಮಹಾಪ್ರಸ್ಥಾನ’ದ ಪ್ರಸ್ತಾವನೆಯಲ್ಲಿ ಹೇಳಿದ "ಬರೆಯುವ ರೀತಿಯಿಂದ ಹೇಳುವುದಿದ್ದರೆ, ಒಂದು ಪದ್ಯದಲ್ಲಿ ಅತ್ಯಂತ ಪ್ರಾಮುಖ್ಯ ಪಡೆದ ವಿಷಯವೆಂದರೆ ಆ ಪದ್ಯವೇ ಆಗಿದೆ. ಆದ್ದರಿಂದ ಪದ್ಯದ ಸ್ವರೂಪದ ಬಗ್ಗೆ ನಾನು ಕಾಳಜಿವಹಿಸುತ್ತೇನೆ." ಎಂಬ ಮಾತನ್ನು ತಿರುಮಲೇಶರು ಇಂದಿಗೂ ಪಾಲಿಸುತ್ತಾ ಬಂದಿರುವುದು ನಮಗೆ ಕಾಣುತ್ತದೆ.

"ಬದ್ಧವಾಗಿ ಬರೆಯುವುದು ಸೃಜನಶೀಲತೆಗೆ ಧಕ್ಕೆ ತರುವಂಥದು" ಎಂದು ಇತ್ತೀಚಿನ ಸಂದರ್ಶನವೊಂದರಲ್ಲಿ ತಿರುಮಲೇಶ್ ಹೇಳಿದ್ದಾರೆ. ಬಹುಶಃ ಅವರ ಕವಿತೆಗಳಲ್ಲಿನ ವೈವಿಧ್ಯತೆಗೂ ಇದೇ ಕಾರಣವಿರಬಹುದು. ಆದರೆ ’ಅವಧ’ ಓದಿದಾಗ ಯಾರಿಗಾದರೂ ಮಿಶ್ರಭಾವನೆಗಳು ಹುಟ್ಟುತ್ತವೆ. ಇದರಲ್ಲಿ ತಿರುಮಲೇಶ್ ಸಾಧಿಸಿರುವ ’ಉನ್ನತಿ’ ಮತ್ತು ಅದೇ ಕ್ಷಣದಲ್ಲಿ ನೆಲಕಚ್ಚಿರುವ ರೀತಿ ಹಳೆಯ ಕವಿತೆಗಳಲ್ಲಿದ್ದ consistencyಗೆ ವಿರುದ್ಧವಾಗಿವೆ. ’ಸರಕಾರದ ವಿರುದ್ಧ ನಾಯಕ’ ’ಸರಕಾರದ ಪರವಾಗಿ ನಾಯಕ’ ’ವಿಮರ್ಶಕನಾಗಿ ನಾಯಕ’ ಈ ರೀತಿಯಾದ ಕವಿತೆಗಳು ಬರೇ ಪದಗಳೊಂದಿಗೆ ಆಟ ಹಾಗೂ ಪ್ರಾಸ-ಪ್ರಯಾಸವಾಗಿದೆ. ಬದ್ಧರಾಗಿ ಬರೆಯದಿರುವುದೂ ಸೃಜನಶೀಲತೆಗೆ ಧಕ್ಕೆ ತರಲಾರದೇ ಎಂದು ಈ ಕವಿತೆಗಳನ್ನು ನೋಡಿದಾಗ ಅನ್ನಿಸಬಹುದು. ಇದೇ ಸಂಕಲನದಲ್ಲಿರುವ ’ಅವಧ’ ’ಪರಕಾಯ ಪ್ರವೇಶ’ ’ವಿಧಿ’ ’ಅಖಿಟೊಪ’ ’ತುತಂಖಮನ್’ ’ಹೈಡ್‍ಪಾರ್ಕಿನಲ್ಲಿ ಭಯೋತ್ಪಾದಕರ ವಿರುದ್ಧ’ ’ಸೂರ್ಯನಿಗೆ’ ಥರದ ಕವಿತೆಗಳು ಉತ್ತಮವಾಗಿವೆ ಹಾಗೂ ತಿರುಮಲೇಶರು ಏರಬಲ್ಲ ಎತ್ತರದ ದ್ಯೋತಕವಾಗಿದೆ.

’ಅವಧ’ ನಿಸ್ಸಂದೇಹವಾಗಿ ಒಂದು ಉತ್ತಮ ಕವಿತೆ. ಈ ಕವಿತೆ ಹಿಂದಿನ ’ಔಧ್’ ರಾಜಮನೆತನಕ್ಕೆ ಸಂಬಂಧಿಸಿದ ಕವಿತೆಯೆಂದು ಈಚಿನ ಸಂದರ್ಶನದಲ್ಲಿ ಸ್ವತಃ ತಿರುಮಲೇಶರೇ ವಿವರಣೆ ಕೊಟ್ಟಿದ್ದಾರೆ. ಈ ಕವಿತೆಯಲ್ಲಿ, ಚರಿತ್ರೆ ವರ್ತಮಾನಗಳನ್ನು ಬೆಸೆದು ನೋಡುವ ಪ್ರಯತ್ನವಿದೆ. ಚರಿತ್ರೆಯ ಫ್ಯಾಂಟಸಿಯ ಲೋಕದಲ್ಲಿ ವಿಹರಿಸುತ್ತಿರುವಾಗಲೇ ವರ್ತಮಾನದ ಕಟುವಾಸ್ತವಕ್ಕೆ ಕರೆತರುವ ಸೂಕ್ಷ್ಮ ತಂತ್ರ ಪ್ರಿಯವೆನ್ನಿಸುತ್ತದೆ.


...
ಯಾರೀತ ಗಡ್ಡಕ್ಕೆ ಬಂಗಾರದ ಬಣ್ಣ ಹಚ್ಚಿದವನು
ಹಣೆಯಲ್ಲಿ ನಿತ್ಯವೂ ನಮಾಜಿನ ಹಚ್ಚೆಯುಳ್ಳವನು
ಬಡಾ ಇಮಾಮನೊ ಅಥವಾ ಛೋಟಾ ಇಮಾಮನೊ
ಅಥವ ಅರಬನಿಗೆ ಹೆಣ್ಣು ಕೊಡಲಿರುವ ಮಾಮನೊ
..

ಎನ್ನುವಲ್ಲಿ ಗಡ್ಡಕ್ಕೆ ಬಂಗಾರಬಣ್ಣ ಇತ್ಯಾದಿಗಳು ಚರಿತ್ರೆಯ ಪ್ರತೀಕವಾದಂತೆ, ಅರಬನಿಗೆ ಹೆಣ್ಣುಕೊಡುವ ಈಗಿನ ಕ್ಷೀಣಿಸಿದ ವಸ್ತು ಸ್ಥಿತಿಯನ್ನು ಚಿತ್ರಿಸಿದ ಸಾಫಲ್ಯತೆ ಈ ಕವಿತೆಗಿದೆ. ಹಾಗೇ

..
ಬಚ್ಚದಿರು ಮನವೆ ಕುದುರೆಗಳ ಖುರಪುಟವಕೇಳಿ
ಅದು ಕೇವಲ ಒಣಧೂಳೆಬ್ಬಿಸುವ ಬಿರುಗಾಳಿ
...

ಈ ಸಾಲುಗಳು ವಿಶೇಷ ಪರಿಣಾಮ ಬೀರುತ್ತವೆ.

’ಪರಕಾಯ ಪ್ರವೇಶ’ ಕವಿತೆಯಲ್ಲಿ ಸೂಕ್ಷ್ಮ ವಿಡಂಬನೆಯನ್ನು ಬಳಸಿ, ಬೇರೊಬ್ಬರ ಅನುಭವವನ್ನು ತನ್ನದಾಗಿಸಿಕೊಳ್ಳುವ ಪ್ರಯತ್ನವನ್ನು ನಾವು ಗಮನಿಸಬಹುದು. ಅತೀ ನೈಜತೆಯ, ಅನಿವಾರ್ಯತೆಯ, ಸಂಕೋಚದ ಪ್ರವರ್ತನೆ ಸಹ ಪ್ರಶಂಸೆಗೆ ಒಳಗಾಗುವ ವಿರೋಧಾಭಾಸ. ಫ್ಯಾಂಟಸಿಯನ್ನೇ ಒಂದು ಘಟ್ಟದಲ್ಲಿ ನಿಜವೆಂದು ನಂಬುವ ಕ್ರಿಯೆ. ಮುಖವಾಡ, ವಾಸ್ತವಗಳ ನಡುವೆ ದೊಡ್ಡ ಸಮರ ನಡೆಯುತ್ತಿದೆಯೆಂದು ಭಾವಿಸಿ ಕುಳಿತಾಗ, ತಾನೇತಾನಾಗಿ, ಏನೂ ಆಗಿಲ್ಲವೆಂಬಂತೆ ಪ್ರವರ್ತಿಸಿವ ಮಿಕ್ಕ ಜನ. ಈ ಎಲ್ಲದರ ಚಿತ್ರಣವನ್ನೂ ಕವಿತೆ ಏಕಕಾಲಕ್ಕೆ ನೀಡುತ್ತದೆ.

’ಮಹಾಪ್ರಸ್ಥಾನ’ದಲ್ಲಿ ನೀಡಿದ ನಗರೀಕರಣದ ಕವಿತೆಗಳಿಂದ ತಿರುಮಲೇಶ್ ಸಂಪೂರ್ಣವಾಗಿ ಹೊರಬಂದಿಲ್ಲ ಎನ್ನುವುದಕ್ಕೆ ’ರಾಜಮಾರ್ಗ ಒಳಮಾರ್ಗ’ ’ತಾರನಾಕದ ಚೌಕ’ ’ಗೋಮತಿಯ ತೀರದಲ್ಲಿ’ ’ಒಂದು ಗ್ರಾಮದ ಮುಖಗಳು’ ಕವಿತೆಗಳೇ ಸಾಕ್ಷಿ.

’ಗೋಮತಿಯ ತೀರದಲ್ಲಿ’ ಕವಿತೆಯು ನಿಸರ್ಗವೆಂದು ಸಾಮಾನ್ಯವಾಗಿ ಚಿತ್ರಿಸುವ ಯಾವ ಅಂಶಗಳೂ ಗೊಮತಿಯ ಕಡಲಲ್ಲಿ ಇಲ್ಲ - ಅಲ್ಲಿರುವುದು ಕಹಿಸತ್ಯಗಳೇ ಎಂಬುದರೊಂದಿಗೆ ಪ್ರಾರಂಭವಾಗುತ್ತದೆ. ಆದರೂ ಕವಿ ಆ ಸತ್ಯಗಳಿಂದ ಪಲಾಯನ ಮಾಡಲು ತಯಾರಿಲ್ಲ.
...
ಬಿಟ್ಟರೆ ಇದನ್ನೂ ಪಡೆಯಲಾರದವರಂತೆ
ಪಡೆದರೂ ಬಯಸದವರಂತೆ ಸಕಲ ಬಯಕೆಗಳನ್ನೂ
ಮೀರಿದ ಇಚ್ಛಾಮರಣಿಗಳಂತೆ ಇಲ್ಲಿ ಇಂದು
..

ಎಂಬ ಸಾಲುಗಳಲ್ಲಿ ಒಪ್ಪಂದ ಮಾಡಿಕೊಳ್ಳುವ ಅನಿವಾರ್ಯತೆ ಚಿತ್ರಿತವಾಗಿದೆ ಎನ್ನಿಸುತ್ತದೆ. ಸಕಲ ಬಯಕೆಗಳನ್ನೂ ಮೀರಿ, ಇಚ್ಛಾಮರಣಿಯಾದರೂ ಸಾಯಲು [ಪಲಾಯನ ಮಾಡಲು] ತಯಾರಿಲ್ಲದ, ಅದಕ್ಕೂ ಒಂದು ಪಕ್ವಕಾಲ ಬರಬೇಕೆಂಬ ಪ್ರಜ್ಞೆ ಇಲ್ಲಿ ಕವಿಯನ್ನು ಕಾಡುತ್ತಿರುವಂತೆ ಅನ್ನಿಸುತ್ತದೆ.

’ತಾರನಾಕದ ಚೌಕದಲ್ಲಿ’ ಕವಿತೆಯಲ್ಲೂ ಇದೇ ರೀತಿಯ ನಗರೀಕರಣದ ಸೂಕ್ಷ್ಮ ಚಿತ್ರಣವಿದೆ.
..
ಇಲ್ಲಿ ಹಾಡು ಹಗಲೇ ಇರುಳು
ತಾರೆಗಳ ಬದಲು ಮಿಣುಕುವ
ಕ್ಷೀಣಕಾಂತಿಯ ಬಲ್ಬುಗಳು
ಎಣಿಸುವುದಕ್ಕೆ ಸುಲಭ
..

ಎಂಬಂಥ ಅರ್ಥಗರ್ಭಿತ ಸಾಲುಗಳಿವೆ.

ಇಕಾಲಜಿಯ ಬಗೆಗಿನ ಕಾಳಜಿಯೂ ತಿರುಮಲೇಶರ ಅನೇಕ ಕವಿತೆಗಳಲ್ಲಿ ಕಂಡುಬರುತ್ತದೆ. ’ಒಂದು ಗ್ರಾಮದ ಮುಖಗಳು’ ಕವಿತೆಯಲ್ಲಿ ನಾಶವಾಗುತ್ತಿರುವ ಇಕಾಲಜಿಯ ಸಮತೋಲನದ ಬಗ್ಗೆ ಕಾಳಜಿ ಇದೆ.
...
ಕಾರಡ್ಕ ಮುಳ್ಳೇರಿಯ ಕಾನತ್ತೂರು ಕರಣಿ
ವಿಚಿತ್ರ ಹೆಸರುಗಳ ಸರಣಿ
ಹೊತ್ತ ಈ ಧರಣಿ ನಮ್ಮ ಪಡೆದಾಗ
ಇನ್ನೂ ತರುಣಿ
...
ಎಂಬ ಕವಿತೆಯ ಪ್ರಾರಂಭದ ಸಾಲುಗಳು ಮನುಷ್ಯ ಈ ಭೂಮಿಯ ತರುಣಾವಸ್ಥೆಯಲ್ಲಿ ಕಾಲಿಟ್ಟವನು ಎಷ್ಟು ಅಲ್ಪಾವಧಿಯಲ್ಲಿ ಅದರ ಇಕಾಲಜಿಯ ಸಮತೋಲನದ ಅವನತಿಗೆ ಕಾರಣನಾದ ಎನ್ನುವುದು [ಒಂದು ವರುಷಕ್ಕಷ್ಟೇ ಒಂದು ಶೆಕೆ] ಮುಂದಿನ ಸಾಲುಗಳಲ್ಲಿ ವ್ಯಕ್ತವಾಗುವುದು. ಗ್ರಾಮದ ಕೆಲ ಚಿತ್ರಗಳನ್ನು ನೀಡಿ, ನಿರೀಕ್ಷೆ ಹುಟ್ಟಿಸಿ, ಕಡೆಗೆ ನಗರೀಕರಣದ ಆಗಮನದ ಚಿತ್ರಣ ಕೊಟ್ಟು ಸಂಪೂರ್ಣ ಅವನತಿಯನ್ನು ಸಂಕೇತಿಸುವ ಸಾಲುಗಳನ್ನು ಅವರು ಬರೆದುಬಿಡುತ್ತಾರೆ
...
ಬರಲಿಲ್ಲ ಗಾಡಿ, ಬಂತು ಕೊರೆಯುವ ಮಾಗಿ
ಕಾದಿದ್ದಂತೆ ಎಲ್ಲವೂ ಸಂದಿಯಲಡಗಿ
ಬಂತು ಮನೆ ಮನೆ ಸೂರುಗಳಿಂದ ಇಬ್ಬನಿ ತೂಗಿ
ಒಂದು ಮೈ ನಡುಕದಿಂದ ಇನ್ನೊಂದಕ್ಕೆ ಸಾಗಿ
ಮುಟ್ಟಿದುವೆಲ್ಲ ಸೊರಗಿ ಸುಕ್ಕುಗಳಾಗಿ
ಬಂತು ಮತ್ತೊಮ್ಮೆ ತಿರುಗಿ
ಮಳೆಗೊಮ್ಮೆ ಪ್ರಳಯ ಬೇಸಿಗೆಗೆಷ್ಟೋ ಕ್ಷಾಮ
ಚಲಿಸುತ್ತಿತ್ತು ಹೀಗೆ ಕಾಲಕ್ರಮ
ತತ್ತರಿಸುತಲಿತ್ತು ಗ್ರಾಮ
..

ಈ ನಗರೀಕರಣದ ಕಾಳಜಿಯನ್ನಿರಿಸಿ ಅದನ್ನೇ ಮುಂದುವರೆಸಿ ಬರೆಯುತ್ತಿರುವ ತಿರುಮಲೇಶ್ ಸಾಕಷ್ಟು ವಿಭಿನ್ನವಾಗಿಯೂ ಬರೆಯುತ್ತಾರೆ. ಹಲವಾರು ಕವಿತೆಗಳು ಬೇರೆ ರೀತಿಯ ಮಿಶ್ರಪರಿಣಾಮವನ್ನುಂಟು ಮಾಡುತ್ತವೆ. ’ಫಿಲ್‍ನ ವಿಧಾನ’ ಒಂದು ರೀತಿಯ ಬೆಳವಣಿಗೆಯನ್ನು ಸೂಚಿಸಿದರೆ ’ಪಿಶಾಚಿ ದೈವಕ್ಕೆ ಹೇಳಿದ್ದು’ ’ಪಿಶಾಚಿಗೆ ದೈವದ ಉತ್ತರ’ ’ಮರಿ ಪಿಶಾಚಿ ಪದ್ಯ’ ಬೇರೊಂದು ರೀತಿಯ ಬೆಳವಣಿಗೆಯನ್ನು ಸೂಚಿಸುತ್ತವೆ.

ತಿರುಮಲೇಶರ ಸಂಕಲನದ ಬಗ್ಗೆ ಸ್ಥೂಲವಾಗಿ ಹೇಳಲು ನನಗಿಂತ ಅವರೇ ಸಮರ್ಥರು. ಅವರ ’ನನ್ನ ಸಂಕಲನ’ ಕವಿತೆ ಇಂತಿದೆ:

ನನ್ನ ಸಂಕಲನವೆಂದರೆ ನದಿ
ಅದರ ಕವಿತೆಗಳೆಂದರೆ ಉಪನದಿಗಳು
ಅವು ಎಲ್ಲಿಂದಲೂ ಯಾವ ಮೂಲದಿಂದಲೂ
ಹುಟ್ಟಿ ಬಂದಿವೆ - ಎಷ್ಟೋ ನೆಲದಲ್ಲಿ
ಎಷ್ಟೋ ಹೊಲದಲ್ಲಿ ಹರಿದು ಬಂದಿವೆ

ನನ್ನ ಸಂಕಲನವೆಂದರೆ ವೃಕ್ಷ
ಅದರ ಕವಿತೆಗಳೆಂದರೆ ಕೊಂಬೆ ರೆಂಬೆಗಳು
ಅವು ವಿವಿಧ ದಿಕ್ಕಿನಲ್ಲಿ ಬೆಳೆದಿವೆ
ಎಷ್ಟೋ ಎಲೆಗಳನು ಹೂ ಹಣ್ಣುಗಳನು ಬಿಟ್ಟಿವೆ
ಅಲ್ಲಿ ಎಷ್ಟೋ ಹಕ್ಕಿಗಳು ಕುಳಿತಿವೆ

ನನ್ನ ಸಂಕಲನವೆಂದರೆ ಅರಣ್ಯ
ಅದರ ಕವಿತೆಗಳೆಂದರೆ ಮರಗಿಡ ಬಳ್ಳಿಗಳು
ಅವು ಬೇರೆ ಬೇರೆ ಜಾತಿಯವು
ಸಿಕ್ಕಂತೆ ಬೆಳೆದಿವೆ ಬೆಳಕಿನ ಕಡೆಗೆ
ಮೈ ಚಾಚಿವೆ ನೆರಳನ್ನು ಚೆಲ್ಲಿವೆ.

ನನ್ನ ಸಂಕಲನವೆಂದರೆ ಸಂತೆ
ಅದರ ಕವಿತೆಗಳೆಂದರೆ ಅಂಗಡಿಯ ಸಾಲುಗಳು
ಅಲ್ಲಿ ಜನಜಂಗುಳಿ ಜಾತ್ರೆ ಪಾತ್ರೆಪಗಡಿಗಳು
ಮಣಿಸರದ ಮಾಲಗಳು ಬಿದ್ದರೆ ಒಡೆಯುತ್ತವೆ.
ಅಲ್ಲಿಯ ತನಕ ಬದುಕಿಕೊಳ್ಳುತ್ತವೆ.

ಒಟ್ಟಿನಲ್ಲಿ ನೋಡುವುದಾದರೆ ಪರಿಸರಕ್ಕೆ ಪ್ರತಿಸ್ಪಂದಿಸುವುದು ತಿರುಮಲೇಶರ ವೈಶಿಷ್ಟ್ಯ. ಹೊಸ ಪರಿಸರವನ್ನು ನಿರಂತರವಾಗಿ ಅನ್ವೇಷಿಸುತ್ತಾ, ಅವುಗಳ ಬಗೆಗೆ ಬರೆಯುತ್ತಾ, ಮುಂದುವರೆದಿರುವ ತಿರುಮಲೇಶರ ಮೂಲ ಪರಿಸರದಲ್ಲೇ ಇದೆಯೆನ್ನಿಸುತ್ತದೆ. ಅವರು ಹೈದರಾಬಾದಿನಲ್ಲಿದ್ದರೆ ಅಲ್ಲಿಯ ಪರಿಸರದ ರೀತಿನೀತಿಗಳ ಸಾರವನ್ನು ಅಭ್ಯಾಸ ಮಾಡಿಬರೆದ ಕವಿತೆಗಳು ಮೂಡುತ್ತವೆ. ಇಂಗ್ಲೆಂಡಿಗೆ ಹೋದರೆ ’ಥೇಮ್ಸ್ ನದಿಯ ಮೇಲೆ’ ಬರೆಯುತ್ತಾರೆ. ಜಗತ್ತಿನಲ್ಲಿ ನಡೆಯುವ ಘಟನೆಗಳಿಗೆ ಕವಿತೆಗಳ ರೀತಿಯಲ್ಲಿ ಪ್ರತಿಸ್ಪಂದಿಸುತ್ತಾರೆ. ಈ ರೀತಿಯ ಪ್ರತಿಸ್ಪಂದನ ಇಲ್ಲದಿದ್ದಲ್ಲಿ ’ಜಾನ್ ಮೆಕೆನ್ರೋ’ ’ತುತಂಖಮನ್’ ’ಕಿಂಗ್‍ಸ್ಲಿಯ ಗಾಂಧಿ’ ’ಮೂನ್ ಮೂನ್ ಸೇನಳಿಗೆ’ ’ಅತುಲತ್ ಮುದಲಿ’ಯಂತಹ ಕವಿತೆಗಳನ್ನು ಅವರಿಗೆ ಬರೆಯಲು ಸಾಧ್ಯವಾಗುತ್ತಿರಲಿಲ್ಲ.

ಈ ರೀತಿಯ ವಿಷಯ ವೈವಿಧ್ಯಗಳ ಹಿನ್ನೆಲೆಯಲ್ಲಿ ಬಂದ ಕವಿತೆಗಳನ್ನು ಓದಿದರೆ ಒಮ್ಮೊಮ್ಮೆ ಅರ್ಥವಾಗದೇ ಉಳಿದೀತು. ಏಕೆಂದರೆ ಒಂದು ಪರಿಸರ, ಹಿನ್ನೆಲೆ, ಉಪಯೋಗಿಸಿಕೊಂಡಾಗ ತಿರುಮಲೇಶ್ ಸಂಪೂರ್ಣವಾಗಿ ಅದರಲ್ಲೇ ತಲ್ಲೀನರಾಗಿ, ಅಷ್ಟೇ ಜ್ಞಾನವ್ಯಾಪ್ತಿಯ ಓದುಗನನ್ನೂ ಕಲ್ಪಿಸಿಕೊಂಡು ಬರೆಯುತ್ತಾರೆ. ಈಚೆಗೆ ಬರೆದ ಅವರ ಕವಿತೆಗಳನ್ನು ಅರ್ಥೈಸಲು ಕಠಿಣವಾಗಿದೆ ಎನ್ನುವ ವಿಮರ್ಶೆಗೆ ಇದೂ ಕಾರಣವಾಗಿರಬಹುದು. ತಿರುಮಲೇಶರಿಗೂ ಅದರ ಅರಿವಿದೆ. ’ಕವಿತೆಗಳನ್ನು ತಿಳಿದುಕೊಳ್ಳುವುದಕ್ಕೆ ಓದುಗ ಬೇರೆ ಸಲಕರಣೆಗಳನ್ನು ಬಳಸಿಕೊಂಡರೆ ತಪ್ಪೇನೂ ಇಲ್ಲ’ ಎನ್ನುವ ಅವರು ಆ ವಿಷಯವ್ಯಾಪ್ತಿಯನ್ನು ಓದುಗರೂ ಅಷ್ಟೇ ಆಳವಾಗಿ ಗ್ರಹಿಸಬೇಕೆಂದು ನಿರೀಕ್ಷಿಸುತ್ತಾರೆ.

ಈ ರೀತಿಯ ಸಂಶೋಧನಾ ಪ್ರಜ್ಞೆ ಬೆಳೆಸಿಕೊಳ್ಳಬೇಕೆಂಬ ಮಾತು ನಿಜವೇ. ಆದರೆ ಕವಿತೆ ಹೆಚ್ಚು ಹೆಚ್ಚು ಸಂಕೀರ್ಣವಾಗುತ್ತಾ ಹೋದಂತೆ ಅದು ದಕ್ಕುವುದು ಕೈಬೆರಳೆಣಿಕೆಯಷ್ಟೇ ಜನರಿಗೆ ಸೀಮಿತವಾದರೆ ಸ್ವಲ್ಪ ಚಡಪಡಿಕೆಯಾಗುತ್ತದೆ. ಇಲ್ಲಿ ಕವಿ ಸಂಕೀರ್ಣತೆಗೂ ವಿಷಯವ್ಯಾಪ್ತಿಗೂ ಮಧ್ಯೆ ಸಮತೋಲನ ಕಾಪಾಡಿಕೊಳ್ಳುವುದು ಅಗತ್ಯ ಅನ್ನಿಸುತ್ತದೆ. ಕವಿತೆಗೆ ಪ್ರತಿಸ್ಪಂದನ ಬರದಿದ್ದಾಗ ಅದು ಎಷ್ಟರ ಮಟ್ಟಿಗೆ ಸಫಲವಾಯಿತೆಂಬುದು ಒಂದು ಪ್ರಶ್ನಾರ್ಥಕ ಚಿನ್ಹೆಯಾಗುತ್ತದೆ. ಇಂಥ ಸಂದರ್ಭದಲ್ಲಿ ಅವನತಿ ಹೊಂದುತ್ತಿರುವ ನಮ್ಮ ಹಳೇ ನೆನಪುಗಳನ್ನು ರೋಚಕ ಅನುಭವಗಳಿಗೆ ಆಗುತ್ತಿರುವ ಯಾಂತ್ರಿಕತೆಯನ್ನು ಚಿತ್ರಿಸುವ ’ಎಲ್ಲಿ ಹೋದಳು ನಮ್ಮ ಅಡುಗೂಲಜ್ಜಿ’ಯಂತಹ ಕವಿತೆಗಳು ಬಾಲವಿಹಾದರಲ್ಲಿರಬೇಕಾದ ಕವಿಗೆಗಳೆನ್ನಿಸಿದರೂ ಅಶ್ಚರ್ಯವಿಲ್ಲ.

’ಅವಧ’ ಸಂಕಲನ ಓದಿದಾಗ ಒಮ್ಮೊಮ್ಮೆ ತಿರುಮಲೇಶರು ಎಟುಕದಷ್ಟು ಬೆಳೆದುಬಿಟ್ಟಿದ್ದಾರೆಯೆ ಎಂದು ಅನ್ನಿಸಬಹುದು. ಅವಧ, ಮುಖಾಮುಖಿಯ ಕೆಲವು ಕವಿತೆಗಳು ತುಂಬಾ ಪ್ರಿಯವಾಗಲು ನಾನು ಹೈದರಾಬಾದಿನಲ್ಲಿ ಕಳೆದ ಅನೇಕ ವರ್ಷಗಳು ಕಾರಣವಿರಬಹುದು. ಅವರ ’ಮಾಯಾವಿ’ ’ಹೈದರ್‌ಗೂಡಾದಲ್ಲೊಬ್ಬ ಹೈದ’ ’ಜಲಾಲುದ್ದೀನ್ ಜಲಾಲಿ’ ’ಅಖ್ತರ್ ಹುಸೇನ್’ ಕವಿತೆಗಳು ಈ ಕಾರಣವಾಗಿ ಪ್ರಿಯವಾಗುತ್ತವೆ. ಸೃಜನಶೀಲತೆಗೆ ಹೊಸತನ ಬೇಕೆಂಬ ಮಾತು ನಿಜ. ಆದರೆ ಎಷ್ಟರ ಮಟ್ಟಿಗೆ ನಾವು ಹೊಸಪರಿಸರವನ್ನು ಕವಿತೆಗೆ ಅಳವಡಿಸುತ್ತೇವೆ, ಎಲ್ಲಿಯವರೆಗೆ ಓದುಗರನ್ನು ನಮ್ಮೊಂದಿಗೆ ಕರೆದೊಯ್ಯುತ್ತೇವೆ ಎಂಬ ಪ್ರಶ್ನೆಗಳೂ ಉದ್ಭವವಾಗುತ್ತವೆ.

ಆದರೆ ಎಂದಿಗೂ ಜಡವಾಗದ, ನಿರಂತರವಾಗಿ ಬರೆಯುವ, ಸದಾ ಹೊಸತನದ ಶೋಧದಲ್ಲಿರುವ ತಿರುಮಲೇಶರ ಬಗ್ಗೆ ಯಾರೂ ಎಂದೂ ನಿರಾಶರಾಗುವ ಅವಶ್ಯಕತೆ ಇಲ್ಲ. ಏಕೆಂದರೆ ಈ ನಿರಂತರ ಕೃಷಿ, ಆತ್ಮಾವಲೋಕನ ಹಾಗೂ ಭಾಷಾಸಾಧ್ಯತೆಗಳ ಬಗೆಗಿನ ಪ್ರಯೋಗ ಏನಾದರೊಂದು ಹೊಸತನ್ನು ಅವರಿಂದ ಹೊಮ್ಮಿಸುತ್ತಲೇ ಇರುತ್ತದೆ. ಅಷ್ಟರ ಮಟ್ಟಿಗೆ ಕನ್ನಡ ಸಾಹಿತ್ಯ ಶ್ರೀಮಂತವಾಗುತ್ತದೆ.

ಡಿಸೆಂಬರ್ ೧೯೮೭


ಶ್ರೀರಾಮ್ ಎಂ.ಎಸ್ (1988). ತಿರುಮಲೇಶರ ಸೃಷ್ಟಿ, ಹೊಸತನದ ದೃಷ್ಟಿ. ಬುದ್ದಣ್ಣ ಹಿಂಗಮಿರೆ (ಸಂ.) ಸಾಹಿತ್ಯ ವಿಮರ್ಶೆ 1987. ಬೆಂಗಳೂರು. ಕರ್ನಾಟಕ ಸಾಹಿತ್ಯ ಅಕಾಡೆಮಿ. ಪುಟ-171-187.



Wednesday, June 3, 2009

ಎರಡು ವರ್ಷಗಳ ನಂತರ... ಮುಚ್ಚಿದ ಪ್ರೀಮಿಯರ್

ಇಪ್ಪತ್ತೈದು ವರ್ಷಗಳ ಹಿಂದೆ, ಬಿ.ಕಾಂ ವಿದ್ಯಾರ್ಥಿಯಾಗಿ ನಾನು ನನ್ನ ಜ್ಞಾನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲು ಸಹಾಯಕ ಕೋಚಿಂಗಿಗೆ ಹೋಗುತ್ತಿದ್ದಾಗ ಒಂದು ದಿನ ಅಲ್ಲಿ ಪಾಠ ಮಾಡುತ್ತಿದ್ದ ವಿಶ್ವನಾಥ್ ಹೇಳಿದ್ದರು: "ನಮ್ಮ ವಿತ್ತೀಯ ನಿರ್ಮತಿಯ ತಲ್ಲಣಗಳನ್ನು ಹೆಚ್ಚು ಅರ್ಥಮಾಡಿಕೊಳ್ಳಬೇಕಾದರೆ, ನೀನು ಶೂಮೇಕರನ ಸ್ಮಾಲ್ ಇಸ್ ಬ್ಯೂಟಿಫುಲ್ ಓದು. ನಾನು ಪ್ರೀಮಿಯರ್ ಬುಕ್ ಷಾಪಿನ ಶಾನ್‌ಭಾಗಿಗೆ ಹೇಳಿದ್ದೇನೆ. ನಮ್ಮವರಿಗೆ ಆತ ೧೫% ರಿಯಾಯಿತಿಯಲ್ಲಿ ಪುಸ್ತಕಗಳನ್ನು ಮಾರುತ್ತಾರೆ". ಹೀಗೆ ಸ್ಮಾಲ್ ಇಸ್ ಬ್ಯೂಟಿಫುಲ್ ಅನ್ನುವ ಪುಸ್ತಕವನ್ನು ಹುಡುಕಿ ಹೊರಟ ನನಗೆ ಆ ಪುಸ್ತಕದ ಟೈಟಲ್ಲಿನ ಅರ್ಥದ ಪದರ-ಮಜಲುಗಳು ಶಾನಭಾಗರ ಪ್ರೀಮಿಯರ್ ಬುಕ್ ಷಾಪ್ ನೋಡಿದಾಗ ತಟ್ಟಿತು. ಪುಟ್ಟ ಅಂಗಡಿಯಲ್ಲಿ ಎಷ್ಟೊಂದು ಭಂಡಾರವನ್ನು ಅಡಕಮಾಡಿ ಇಡಬಹುದು ಅನ್ನುವುದಕ್ಕೆ ಪ್ರೀಮಿಯರ್ ಸಂಕೇತವಾಯಿತು. ಆದರೆ ಅದನ್ನು ಬ್ಯೂಟಿಫುಲ್ ಎಂದು ಕರೆಯುವುದಕ್ಕೆ ಮಾತ್ರ ಸಾಧ್ಯವಾಗಿರಲಿಲ್ಲ. ಅದರ ಆತ್ಮ ಬ್ಯೂಟಿಫುಲ್ ಆದರೂ ಆ ಅಂಗಡಿಯಲ್ಲಿ ಪುಸ್ತಕಗಳನ್ನು ಆಯುವುದಕ್ಕೆ ಪಳಗಿದ ಕೈಗಳೇ ಬೇಕಾಗಿದ್ದುವು.

ಆ ಪುಸ್ತಕದಂಗಡಿಗೆ ಹೋದ ಕೂಡಲೇ ನನಗೆ ಅರಿವಾದದ್ದು ಒಂದು ವಿಷಯ: ನಮ್ಮ ವಿಶ್ವನಾಥ್ ಅವರ ಹೆಸರನ್ನು ಹೇಳದಿದ್ದರೂ ಆ ಪುಸ್ತಕದ ಮೇಲೆ ನನಗೆ ರಿಯಾಯಿತಿ ಸಿಗುತ್ತಿತ್ತು ಅನ್ನುವ ಸತ್ಯ. ಪ್ರೀಮಿಯರ್‍ ಗೆ ಹೋದವರಿಗೆಲ್ಲಾ ಕನಿಷ್ಟ ೧೦% ರಿಯಾಯಿತಿಯನ್ನು ಶಾನಭಾಗ್ ಕೊಡುತ್ತಿದ್ದರು... ಮತ್ತು ನಮ್ಮಂತಹ ರೆಗ್ಯುಲರ್ ಗಳಿಗೆ ನಮ್ಮ ಒಟ್ಟಾರೆ ಬಿಲ್ಲು ಮತ್ತು ಅವರ ಮೂಡಿನನುಸಾರ ೧೫-೨೦ ಪ್ರತಿಶತ ರಿಯಾಯಿತಿ ಸಿಗುತ್ತಿತ್ತು. ಪ್ರೀಮಿಯರ್‍ ನಲ್ಲಿ ಇದ್ದ ಪುಸ್ತಕಗಳ ವಿಸ್ತಾರಕ್ಕೆ ಅವರು ಯಾವ ರಿಯಾಯಿತಿಯನ್ನೂ ಕೊಡದೆಯೇ ಅಂಗಡಿಯನ್ನು ನಡೆಸಬಹುದಿತ್ತು. ಹೀಗಾಗಿ ನಾನು ಪ್ರೀಮಿಯರ್ ಬುಕ್ ಷಾಪಿಗೆ ರಿಯಾಯಿತಿಗೆಂದೇ ಹೋದದ್ದು ನೆನಪಿಲ್ಲ. ಅಲ್ಲಿಗೆ ಹೋಗುವುದೇ ಒಂದು ಅನುಭವ. ಬೆಂಗಳೂರು ಬಿಟ್ಟು ಬಹಳಕಾಲದಿಂದ ಹೊರನಾಡಿಗನಾಗಿರುವ ನನಗೆ ಬೆಂಗಳೂರಿಗೆ ಬಂದಾಗಲೆಲ್ಲಾ ಪ್ರೀಮಿಯರ್ ಬುಕ್ ಷಾಪಿನ ಯಾತ್ರೆ ಅನಿವಾರ್ಯವಾಗಿಬಿಟ್ಟಿತ್ತು. ಮಿಕ್ಕ ಎಷ್ಟೋ ಪುಸ್ತಕದಂಗಡಿಗಳಿಗೆ ನಾನು ನನ್ನನ್ನು ಹೊಂದಿಸಿಕೊಳ್ಳಲು ಪ್ರಯತ್ನಿಸಿದರೂ, ಪ್ರೀಮಿಯರ್ ನ ಅನುಭವವೇ ವಿಚಿತ್ರ ವೈಶಿಷ್ಟ್ಯತೆಯನ್ನು ನೀಡುತ್ತಿತ್ತು.

ಮುಂಬಯಿನ ಸ್ಟ್ರಾಂಡ್ ಬುಕ್ ಸ್ಟಾಲ್ ನಡೆಸುವ ಹಿರಿಯ ಶಾನಭಾಗರ ಪುಸ್ತಕಜ್ಞಾನ ಅದ್ಭುತವಾದದ್ದು. ಅಲ್ಲಿಗೆ ಹೋದರೆ ಎರಡು ಪುಸ್ತಕಗಳನ್ನು ನೀವು ಆಯ್ದರೆ, ನಿಮ್ಮ ಅಭಿರುಚಿಯನ್ನು ಗ್ರಹಿಸಿ, ಅದಕ್ಕೆ ನಾಲ್ಕು ಪುಸ್ತಕಗಳನ್ನು ಜೋಡಿಸುವ, ಅಕಸ್ಮಾತ್ ನಿಮಗೆ ಯಾವುದೇ ಪುಸ್ತಕ ದೊರೆಯದಿದ್ದರೆ ಆ ವಿವರಗಳನ್ನು ಸಂಗ್ರಹಿಸಿ, ನಿಮಗಾಗಿ ಆ ಪುಸ್ತಕವನ್ನು ತರಿಸುವುದಲ್ಲದೇ ಆ ಬಗ್ಗೆ ನಿಮಗೆ ಸುದ್ದಿಯನ್ನೂ ಕೊಡುವ ಪರಿಪಾಠ ಹಿರಿಯ ಶಾನಭಾಗರಿಗಿತ್ತು. ಬಹುಶಃ ಪದ್ಮಶ್ರೀ ಪಡೆದ ಏಕೈಕ ಪುಸ್ತಕ ವ್ಯಾಪಾರಿ ಆತ ಇರಬಹುದು. 

ಇತ್ತೀಚೆಗೆ ಸ್ಟ್ರಾಂಡ್‍ನಲ್ಲಿದ್ದ ಹಿರಿಯ ಶಾನಭಾಗರ ವೈಶಿಷ್ಟ್ಯತೆ ನಮಗೆ ಸಿಗುತ್ತಿಲ್ಲ ಅನ್ನಿಸುತ್ತದೆ. ಏನೇ ಆದರೂ ಮುಂಬಯಿನ ಸ್ಟ್ರಾಂಡಿನಲ್ಲಿ ವ್ಯಾಪಾರವನ್ನು ಹೆಚ್ಚಿಸುವ ಮಹತ್ವಾಕಾಂಕ್ಷೆ ನಮಗೆ ಕಾಣಿಸುತ್ತಿತ್ತು. ಹೀಗಾಗಿಯೇ ಪುಸ್ತಕ ಜ್ಞಾನದ ಜೊತೆಗೆ ಹಿರಿಯ ಶಾನಭಾಗರದ್ದು ಒಪ್ಪ ಓರಣ. ನಮ್ಮ ಶಾನಭಾಗ್ ಮಿಕ್ಕ ಪುಸ್ತಕ ವ್ಯಾಪಾರಿಗಳಿಗಿಂತ ತುಂಬಾ ಭಿನ್ನ ಎಂದು ಹೇಳಬಹುದು. ನೀವು ಯಾವುದಾದರೂ ಪುಸ್ತಕ ಕೇಳಿದರೆ ತಕ್ಷಣಕ್ಕೆ ತರಿಸುತ್ತಾರೆ, ಆದರೆ ಅದು ಬಂದಿದೆ ಎಂದು ಫೋನ್ ಮಾಡುವ ಪರಿಪಾಠ ಆತನಿಗಿದ್ದಂತಿರಲಿಲ್ಲ. ಮುಂದಿನ ಬಾರಿ ಹೋದಾಗ ಆ ಪುಸ್ತಕ ನಿಮಗೆ ದೊರೆತರೆ ಅದು ನಿಮ್ಮ ಅದೃಷ್ಟ.

ಪ್ರೀಮಿಯರ್ ನಲ್ಲಿ ಮೂರ್ನಾಲ್ಕು ಪದರದ ಪುಸ್ತಕಗಳ ರಾಶಿಯ ಷೆಲ್ಫುಗಳ ನಡುವೆ ತೆಳುವಾಗಿ ಅಡ್ಡಡ್ಡವಾಗಿ ನಡೆದುಕೊಂಡು ಹೋಗಬೇಕಾದಂತಹ ಪುಟ್ಟ ಜಾಗ - ಮೊಣಕೈ ತಾಕಿದರೆ ಒಂದು ರಾಶಿ ಪುಸ್ತಕಗಳು ದೊಪ್ಪೆಂದು ಕೆಳಕ್ಕೆ ಬೀಳುವ ಗ್ಯಾರೆಂಟಿ, ಆದರೆ ಕೇಳಿದ ಪುಸ್ತಕವನ್ನು ಯಾವುದೋ ಕಂಡರಿಯದ ಮೂಲೆಯಿಂದ ಹೆಕ್ಕಿ ಕೊಡಬಲ್ಲ ವಿಶಿಷ್ಟ ಕಲೆಯನ್ನು ಶಾನಭಾಗ್ ಮತ್ತು ಅವರ ಸಹಾಯಕರು ಕರವಶಮಾಡಿಕೊಂಡಿದ್ದರು. "ಓ ಅಲ್ಲಿ ಉಂಟು ನೋಡು, ಆಕ್ಸ್ ಫರ್ಡ್‍ನಿಂದ ಬಂದ ಹೈದರಾಬಾದಿನ ಪುಸ್ತಕ" ಎಂದು ಆತ ಹೇಳಿದ್ದೇ, ಜಾದೂವಿನಂತೆ ನಮಗೆ ಬೇಕಾದ ಪುಸ್ತಕ ಪ್ರತ್ಯಕ್ಷವಾಗುತ್ತಿತ್ತು. ಅಂಗಡಿಯಲ್ಲಿ ಒಂದು ಸುತ್ತು ಹಾಕಿ ಬಂದರೆ ಪುಸ್ತಕದ ರಾಶಿಯಿರುವ ಮೇಜಿನ ಹಿಂದೆ ಕಂಡೂ ಕಾಣದಂತೆ ಶಾನಭಾಗ್ ಕೂತಿರುತ್ತಿದ್ದರು. ಎಲ್ಲಿಂದಲೋ ಬಿಲ್ ಪುಸ್ತಕವನ್ನು ಹೆಕ್ಕಿ ತಮ್ಮ ಕಾಗೆಬರಹದಲ್ಲಿ ಗೀಚಿ ನಿಮ್ಮ ಕೈಗೆ ಒಂದು ಹಳದಿ ಚೀಟಿಯನ್ನು ಹಚ್ಚುತ್ತಿದ್ದರು. ಅದರಲ್ಲಿ ಪುಸ್ತಕದ ಹೆಸರು ಯಾವುದು ರಿಯಾಯಿತಿ ಯಾವುದಕ್ಕೆ - ದೇವರೇ ಬಲ್ಲ. ನಾನು ಮೊದಲ ಬಾರಿಗೆ ಹೋದಾಗಿನಿಂದಲೂ ಬಿಲ್ಲಿನ ಬಣ್ಣ ಮತ್ತು ಶಾನಭಾಗರ ಕೈಬರಹ ಒಂದಿನಿತೂ ಬದಲಾಗಿರಲಿಲ್ಲ.

ಹಾಗೆ ನೋಡಿದರೆ ಶಾನಭಾಗರ ಬಗ್ಗೆ ನನಗೆ ಹೆಚ್ಚೇನೂ ಗೊತ್ತೇ ಇಲ್ಲ. ಹೆಚ್ಚು ಮಾತೇ ಆಡದ ಆತನ ಜೊತೆ ಬಲವಂತವಾಗಿ ನಾಲ್ಕಾರು ಮಾತಾಡಿದರೂ ಅವರು ಸಂಭಾಷಣೆಯನ್ನು ತಾವಾಗಿಯೇ ಎಂದೂ ಮುಂದುವರೆಸುತ್ತಿರಲಿಲ್ಲ. ಆದರೆ ಅವರ ಅಂಗಡಿಯಲ್ಲಿ ಕನ್ನಡ ಪುಸ್ತಕಗಳನ್ನು ಮಾರಿಸಿದ ಹೆಮ್ಮೆ ನನಗಿದೆ ಎಂದು ನಾನು ಎದೆ ತಟ್ಟಿ ಹೇಳಿಕೊಳ್ಳಬೇಕು... ಜಯಂತ ಕಾಯ್ಕಿಣಿಯ ದಗಡೂ ಪರಬನ ಅಶ್ವಮೇಧ ಪುಸ್ತಕವನ್ನು ನಾವು ಗೆಳೆಯರು ಪ್ರಕಟಿಸಿದಾಗ ಅದರ ಹತ್ತು ಪ್ರತಿಗಳನ್ನೂ ನನ್ನ ಮಾಯಾದರ್ಪಣದ ಐದು ಪ್ರತಿಗಳನ್ನೂ ಶಾನಭಾಗ್ ತಮ್ಮ ಅಂಗಡಿಯಲ್ಲಿ ಮಾರಿದ್ದರು! ಅದನ್ನು ಇಂಗ್ಲೀಷ್ ಪುಸ್ತಕಗಳ ರಾಶಿಯ ನಡುವೆ ಅಡಕವಾಗಿಟ್ಟರೂ, ಯಾರೋ ಅದನ್ನು ಕೊಂಡಿದ್ದರು ಎನ್ನುವುದು ನನಗೆ ಹೆಮ್ಮೆಯ ವಿಷಯವಾಗಿತ್ತು.

ಶಾನಭಾಗ್ ಮಿಕ್ಕ ಪುಸ್ತಕ ವ್ಯಾಪಾರಿಗಳಿಗಿಂತ ತುಂಬಾ ಭಿನ್ನರಾಗಿದ್ದರು. ಅವರಿಗೆ ವ್ಯಾಪಾರದಿಂದ ದುಡ್ಡು ಮಾಡಬೇಕು ಅನ್ನುವ ಇರಾದೆಗಿಂತ, ಪುಸ್ತಕಗಳ ನಡುವೆ ಕೂತು, ಮನೆಗಾಗುವಷ್ಟು ಹಣ ಸಂಪಾದಿಸಿದರೆ ಸಾಕು ಅನ್ನುವ ಮನಸ್ಥಿತಿ ಇದ್ದಂತಿತ್ತು. ಹೀಗಾಗಿ, ಅವರ ಖರ್ಚಿಗೆ ಬೇಕಾದಷ್ಟು ಹಣವನ್ನು ಅವರು ತೆಗೆದುಕೊಂಡು, ಮಿಕ್ಕ ಲಾಭವನ್ನೆಲ್ಲಾ, ಪುಸ್ತಕದಂಗಡಿಯಲ್ಲಿ ಹೆಚ್ಚು ಪುಸ್ತಕಗಳನ್ನು ಸೇರಿಸಿಡುವುದರಲ್ಲಿ ತೊಡಗಿಸುತ್ತಿದ್ದರು ಅಂತ ನನಗನ್ನಿಸುತ್ತದೆ. ಅವರ ಹಿರಿಯ ಸ್ಟ್ರಾಂಡ್ ಶಾನಭಾಗರಿಂದ ಅವರು ಕಲಿಯದಿದ್ದ ಮತ್ತೊಂದು ಪಾಠವೆಂದರೆ "ಸೇಲ್"ಗಳನ್ನು ಏರ್ಪಾಡು ಮಾಡುವುದು.

ನಾನು ಕಂಡಿರುವ ಇತರ ಪುಸ್ತಕವ್ಯಾಪಾರಿಗಳಲ್ಲಿರುವ ತೀವ್ರತೆಯನ್ನು ನಾನು ಶಾನಭಾಗರಲ್ಲಿ ಕಂಡೇ ಇಲ್ಲ. ಎಲ್ಲವನ್ನೂ ಒಂದೇ ರೀತಿಯಲ್ಲಿ ಸ್ವೀಕರಿಸುವ ಬುದ್ಧನಂತೆ ಯಾವಾಗಲೂ ಹಸನ್ಮುಖಿಯಾಗಿ ಮೌನವಾಗಿ ಆತ ಕೂತಿರುತ್ತಿದ್ದರು. 

ದೆಹಲಿಯ ಕನಾಟ್ ಪ್ಲೇಸಿನಲ್ಲಿರುವ ಬುಕ್ ವರ್ಮ್ ಪುಸ್ತಕದಂಗಡಿಯ ಮಾಲೀಕ ನೀವು ಕೇಳಿದ ಪುಸ್ತಕವನ್ನು ಎತ್ತಿ ಕೊಡುವುದಲ್ಲದೇ ಇಲ್ಲದಿರಬಹುದಾದ ಪುಸ್ತಕಗಳನ್ನು ತರಿಸಿಕೊಡುವುದರಲ್ಲಿ ನಿಷ್ಣಾತ. ಜೊತೆಗೇ, ಕೆಲವು ಹಳೆಯ ಪುಸ್ತಕಗಳನ್ನು ನೀವು ಕೇಳಿದರೆ "ಓ ಅದಾ, ೧೯೮೩ರ ಪುಸ್ತಕ, ಅದ್ಭುತವಾದದ್ದು. ನಾನು ಓದಿದ್ದೇನೆ, ಈಗ ಔಟ್ ಆಫ್ ಪ್ರಿಂಟ್, ನನ್ನ ಮನೆಯಲ್ಲಿ ಒಂದು ಕಾಪಿಯಿದೆ, ನಿಮಗೆ ಸಿಗುವುದಿಲ್ಲ" ಎಂದು ಹೇಳಿ ಹೊಟ್ಟೆಉರಿಯುಂಟು ಮಾಡಬಹುದಾದ ನಿಷ್ಣಾತ. 

ಖಾನ್ ಮಾರ್ಕೆಟ್ಟಿನಲ್ಲಿರುವ ಬಾಹರಿ ಸನ್ಸ್ ನಿಮ್ಮನ್ನು ಬೇಕಾದ ಹಾಗೆ ಓಡಾಡಲು ಬಿಟ್ಟು ನಿಮ್ಮ ಪ್ರಶ್ನೆಗಳಿಗೆ ಯೋಚಿಸಿ, ಫೋನು ಫಿರಾಯಿಸಿ ಜವಾಬು ಕೊಡುವ ಚಾಣಾಕ್ಷ. 

ಬೆಂಗಳೂರಿನ ಶಂಕರ್‍ ಪುಸ್ತಕಗಳನ್ನು ಓರಣವಾಗಿಟ್ಟು ಕೇಳಿದ್ದನ್ನು ಮಾತ್ರ ತೆಗೆದುಕೊಡುವ, ಎಷ್ಟುಬೇಕೋ ಅಷ್ಟು ಮಾತನಾಡುವ ಮಿತಭಾಷಿ. 

ಚೆನ್ನೈ-ಬೆಂಗಳೂರುಗಳ ಲ್ಯಾಂಡ್‍ಮಾರ್ಕ್ ಅಂಗಡಿಗಳು ರಾಶಿರಾಶಿ ಪುಸ್ತಕಗಳನ್ನು ಪೇರಿಸಿರುವ, ಆದರೆ ಆ ಪುಸ್ತಕಗಳ ಮೌಲ್ಯವೇನೆಂದು ತಿಳಿಯದ ಅನಾಮಿಕ ಸೇಲ್ಸ್ ಮನ್‍ಗಳ ಮೂಲಕ ನಡೆಯುತ್ತಿರುವ ಮಳಿಗೆಗಳು. 

ಕ್ರಾಸ್‍ವರ್ಡ್ ಅಂಗಡಿಗಳು ವ್ಯಾಪಾರೀ ಮನೋಭಾವದ ಉತ್ತುಂಗ ತೋರುವ ಮಳಿಗೆ-ಮಾಲೆ, ಹೀಗಾಗಿ ಅಲ್ಲಿ ಅನೇಕ ಬೆಸ್ಸ್ಟ್ ಸೆಲ್ಲರುಗಳು [ಫಿಕ್ಷನ್, ನಾನ್ ಫಿಕ್ಷನ್, ಮಕ್ಕಳ ಪುಸ್ತಕಗಳು, ಸೆಲ್ಫ್ ಹೆಲ್ಪ್.. ಇತ್ಯಾದಿ ಯಾದಿಗಳ ಜಾಗ] - ಜೊತೆಗೆ ಬಹಳಕಾಲದ ವರೆಗೂ ’ಆರ್.ಶ್ರೀರಾಮ್ ರೆಕಮಂಡ್ಸ್’ ಅನ್ನುವ ಮಳಿಗೆಯ ಮುಖ್ಯಾಧಿಕಾರಿಯ ಶಿಫಾರಸ್ಸಿನ ಅಂಟುಚೀಟಿ ಹೊತ್ತ ಕೆಲವು ಪುಸ್ತಕಗಳು. ಈ ಆರ್.ಶ್ರೀರಾಮ್ ಅನ್ನುವ ಮಹಾತ್ಮನ ಶಿಫಾರಸ್ಸಿನ ಹಮ್ಮು ವ್ಯಾಪಾರೀಕರಣದ ಉತ್ತುಂಗ ಅಂತ ನನಗನ್ನಿಸಿತ್ತು. ಅವರ ಶಿಫಾರಸ್ಸಿನ ಪುಸ್ತಕಗಳ ಯಾದಿ ನೋಡಿದರೆ ಅವರಿಗೊಂದು ವ್ಯಕ್ತಿತ್ವ ಮತ್ತು ಸ್ವಂತ ಅಭಿಪ್ರಾಯವಿದೆ ಅನ್ನುವ ಭಾವನೆಯೇ ನಮಗೆ ಬರುತ್ತಿರಲಿಲ್ಲ.

ಇನ್ನು ಸೆಲೆಕ್ಟ್ ಬುಕ್ ಷಾಪಿನ ಮೂರ್ತಿಯಂತೂ ತಮ್ಮ ಗ್ರಾಹಕರನ್ನು ಅರ್ಥಮಾಡಿಕೊಳ್ಳಬೇಕೆನ್ನುವ, ಅವರೊಂದಿಗೆ ಚರ್ಚಿಸಿ ಅವರ ಅಭಿರುಚಿಗನುಸಾರ ನಿಧಾನವಾಗಿ ಒಳಗಿನಿಂದ ಸುಪ್ತ ಖಜಾನೆಯನ್ನು ತೆಗೆದುಕೊಡುವಂತ ಹಂತ ಹಂತವಾಗಿ ಗ್ರಾಹಕರನ್ನು ಕೈವಶ ಮಾಡಿಕೊಳ್ಳುವ ಗಾರುಡಿಗ. ಮೂರ್ತಿಯವರು ಎಷ್ಟು ಬಾರಿ ತಮ್ಮ ಮೇಜಿನ ಕೆಳಕ್ಕೆ ಕೈ ಹಾಕಿ ಜಾದೂವಿನಂತೆ ನನಗೆ ಬೇಕಾದ ಪುಸ್ತಕವನ್ನು ನನ್ನ ಮುಂದೆ ತುಂಟತನದಿಂದ ಹಿಡಿದಿದ್ದಾರೋ ಲೆಕ್ಕವಿಲ್ಲ.

ಹೈದರಾಬಾದಿನ ವಾಲ್ಡೆನ್ ನಲ್ಲಿ ಪರಿಚಾರಕರು ಹೆಚ್ಚಿಲ್ಲ. ಆದರೂ ಆ ಅಂಗಡಿಗೆ ಅದರದೇ ವ್ಯಕ್ತಿತ್ವವಿದೆ. ಹೀಗಾಗಿ ಅಲ್ಲಿ ಅಡ್ಡಾಡುವುದೂ ಒಂದು ಖುಷಿಯ ವಿಷಯವೇ. ರಾತ್ರೆ ಎಂಟಕ್ಕೆ ಮುಂದಿನ ಬಾಗಿಲನ್ನು ಮುಚ್ಚಿ ಐದು ನಿಮಿಷಕ್ಕೊಮ್ಮೆ ಒಂದಷ್ಟು ದೀಪಗಳನ್ನು ಆರಿಸಿ ಸಂಜೆಯ ಗ್ರಾಹಕರನ್ನು ಹೊರಹಾಕುವ ವಾಲ್ಡೆನ್ ನ ಪರಿ ಅದ್ಭುತವಾದದ್ದು. 

ಅಬೀಡ್ಸಿನಲ್ಲಿನ ಎ.ಎ.ಹುಸೇನ್ ಹಳೆಯ ಕಾಲದ ಎಲ್ಲ ಪುಸ್ತಕಗಳನ್ನೂ ಗಾಜಿನ ಕಪಾಟಿನಲ್ಲಿಟ್ಟು ಮಾರಾಟ ಮಾಡುವ ಜಾಗರೂಕತೆ ತೋರುತ್ತಿದ್ದರೂ ಹೈದರಾಬಾದ್ ಸಂಬಂಧಿತ ಪುಸ್ತಕಗಳಿಗೆ ಒಂದು ಅದ್ಭುತ ಜಾಗ. 

ಅದೇ ಊರಿನ ಓರಿಯಂಟ್ ಲಾಂಗ್ಮನ್ ನಡೆಸುವ ಬುಕ್ ಪಾಯಿಂಟ್ ಕೂಡಾ ಸ್ವ-ಸಹಾಯ ಮಾಡಿಕೊಳ್ಳುವವರಿಗೆ ಒಂದು ಖಜಾನೆಯೇ. ಹಾಗೂ ಭಾನುವಾರಗಳಂದು ಅಬೀಡ್ಸ್ ಮತ್ತು ನಾಂಪಲ್ಲಿರಸ್ತೆಯ ಗುಂಟ ಹಬ್ಬಿಹರಡಿರುವ ಹಳೆಯ ಪುಸ್ತಕಗಳಲ್ಲಿ ಕೆಲ ಅಪರೂಪದ ಪುಸ್ತಕಗಳನ್ನು ನಾನು ಹೆಕ್ಕಿ ತಂದಿದ್ದೇನೆ. ೮೦ರ ದಶಕದಲ್ಲಿ ನಾನು ಹೈದರಾಬಾದಿನಲ್ಲಿದ್ದಾಗ ಬೆಳಿಗ್ಗೆ ಎದ್ದು ಅಬೀಡ್ಸಿನಲ್ಲಿ ಪುಸ್ತಕ ವ್ಯಾಪಾರ, ಇರಾಣಿ ಚಹಾ ಮತ್ತು ಸಂತೋಷ್/ಸಪ್ನಾ ಚಿತ್ರಮಂದಿರಗಳಲ್ಲಿ ಸಿನೇಮಾದ ಪರಿಪಾಠವಿತ್ತು.

ವಾಷಿಂಗ್ಟನ್ನಿನಲ್ಲಿ ನಾನು ಕ್ರೇಮರ್ ಬುಕ್ಸ್ ಆಂಡ್ ಆಫ್ಟರ್ ವರ್ಡ್ಸ್ ಅನ್ನುವ ಅಂಗಡಿಗೆ ಭೇಟಿ ನೀಡಿದ್ದೆ. ಅಂಗಡಿಯಲ್ಲಿ ಪುಸ್ತಕಗಳನ್ನು ತೆಗೆದು ಓದಬಹುದು. ಪುಸ್ತಕದಂಗಡಿಯಲ್ಲೇ ಒಂದು ಕಾಫಿ, ತಿಂಡಿ, ಬಿಯರು ಸಿಗುವ ಜಾಗವಿದೆ. ಎಲ್ಲಿಂದ ಎಲ್ಲಿಗೆ ಬೇಕಾದರೂ ಓಡಾಡುತ್ತಾ ಪುಸ್ತಕ ತಿರುವಿಹಾಕುತ್ತಾ ಒಂದು ಬಿಯರನ್ನೂ ಹೀರಬಹುದು. ನನ್ನಬಳಿ ವಿಪರೀತ ದುಡ್ಡು ಬಂದು ಮಾಡಲೇನೂ ತೋಚದಿದ್ದರೆ, ಇಂಥದೊಂದು ಅಂಗಡಿಯನ್ನು ತೆರೆಯಬೇಕು ಅನ್ನುವುದು ನನ್ನ ಆಸೆ. 

ಈ ಎಲ್ಲ ಪುಸ್ತಕದಂಗಡಿಗಳೂ, ಕಲಕತ್ತಾದ ಆಕ್ಸ್ ಫರ್ಡ್ ಬುಕ್ ಸ್ಟೋರು, ಮದರಾಸಿನ ಫೌಂಟನ್‍ಹೆಡ್ ಎಲ್ಲವನ್ನೂ ಅವಲೋಕಿಸಿದರೂ ಪ್ರೀಮಿಯರ್ ಬುಕ್ ಷಾಪಿನ ಆತ್ಮೀಯತೆ ಮತ್ತು ವೈಶಿಷ್ಟ್ಯತೆ ನನಗೆ ಎಲ್ಲೂ ಕಂಡಿಲ್ಲ. ಮಿಕ್ಕ ಪುಸ್ತಕದಂಗಡಿಯವರಂತೆ ಶಾನಭಾಗರು ಎಂದೂ ತಮ್ಮ ಜ್ಞಾನವನ್ನು ಪದರ್ಶಿಸಿದವರಲ್ಲ. ಎಷ್ಟೋ ಬಾರಿ ನಾನು ಪುಸ್ತಕಗಳ ಬಗ್ಗೆ ಅವರ ಅಭಿಪ್ರಾಯವನ್ನು ಕೇಳಿದ್ದಿದೆ. "ಚೆನ್ನಾಗಿ ಮಾರಾಟವಾಗುತ್ತಿದೆ" ಅನ್ನುವ ಮಾತನ್ನು ಹೇಳುತ್ತಿದ್ದರೇ ವಿನಃ ತಮ್ಮ ಅಭಿಪ್ರಾಯವನ್ನು ಎಂದೂ ನೀಡಿದವರಲ್ಲ. ಆದರೆ ಮಿಕ್ಕ ಪುಸ್ತಕ ವ್ಯಾಪಾರಿಗಳಿಗೆ ಹೀಗೆ ಮುಫತ್ತಿನ ರೆಕಮಂಡೇಷನ್ ಕೊಡುವ ತೆವಲು ಇದ್ದೇ ಇರುತ್ತದೆ. ಶಾನಭಾಗರಿಗೆ ತಮ್ಮ ವ್ಯಾಪಾರವನ್ನು ಬೆಳೆಸಬೇಕೆಂಬ ಆಕಾಂಕ್ಷೆಯೂ ಇರಲಿಲ್ಲ. ಮಿಕ್ಕ ಪುಸ್ತಕದಂಗಡಿಗಳು ಬೆಳೆಯುತ್ತಾ ಹೋದರೂ ಅವರು ತಮ್ಮ ಮೂಲೆಯಲ್ಲೇ ಅವಿತು ಕೂತಿದ್ದರು. ಕಡೆಗೆ ಶಾನಭಾಗರಿಗೆ ಅಂಗಡಿ ಮುಚ್ಚುವುದರಲ್ಲೂ ದುಃಖ ಆದಂತಿಲ್ಲ. ತಾವು ತಮ್ಮ ಕೆಲಸ ಮುಗಿಸಿ ಮುಂದುವರೆಯುತ್ತಿರುವಂತೆ ಸ್ಥಿತಪ್ರಜ್ಞರಾಗಿ ಅವರು ತಮ್ಮ ಟ್ರೇಡ್ ಮಾರ್ಕ್ ಕಿರುನಗೆಯನ್ನು ಬೀರಿ ಸುಮ್ಮನಾಗುವರು. ಪ್ರೀಮಿಯರ್ ಮುಚ್ಚಿಹೋಗುತ್ತಿರುವುದಕ್ಕೆ ಅವರಿಗಿಂತ ಹೆಚ್ಚಿನ ದುಃಖ ಅವರ ಗ್ರಾಹಕರಿಗಾಗುತ್ತಿರಬಹುದು. ಸಾಮಾನ್ಯವಾಗಿ ವ್ಯಾಪಾರಗಳು ಕೈ ದಾಟುತ್ತವೆ, ಕ್ಷೀಣಿಸುತ್ತವೆ, ಏಟುತಿನ್ನುತ್ತವೆ, ಬೆಳೆಯುತ್ತವೆ. ಆದರೆ ಮೊದಲ ಬಾರಿಗೆ ಒಂದು ಪುಸ್ತಕದಂಗಡಿ ರಿಟೈರಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಕ್ರಿಕೆಟ್ಟಿನಲ್ಲಿ ಹೇಳುವಂತೆ, ಶಾನಭಾಗ್ ವೈ [ಯಾಕೆ?] ಎನ್ನುವ ಪ್ರಶ್ನೆ ಕೇಳುತ್ತಿರುವಾಗಲೇ ರಿಟೈರಾಗಿ ವೈನಾಟ್ [ಯಾಕಾಗಬಾರದು] ಅನ್ನುವ ಪ್ರಶ್ನೆಗೆ ಅವಕಾಶವಿಲ್ಲದಂತೆ ಮಾಡುತ್ತಿದ್ದಾರೆ. 

ಕಳೆದ ವಾರ ಶಾನಭಾಗರನ್ನು ಭೇಟಿ ಮಾಡಲೆಂದು ಪ್ರೀಮಿಯರ್ ಗೆ ಹೋದೆ, ಆತ ಕಣ್ಣಿನ ಆಪರೇಶನ್ ಮಾಡಿಸಿಕೊಳ್ಳಲು ಹೋಗಿದ್ದಾರೆ, ಈ ವಾರ ಇಲ್ಲ ಎಂದು ಅಂಗಡಿಯಿಂದ ತಿಳಿಯಿತು. ಮತ್ತೆ ಬೆಂಗಳೂರಿಗೆ ಬರುವ ವೇಳೆಗೆ ಶಾನಭಾಗ್ ಅಂತರ್ಧಾನರಾಗಿರುತ್ತಾರೆ. ಹೀಗೆ ಇಪ್ಪತ್ತೈದು ವರ್ಷಗಳ ಪರಿಚಯದ ಶಾನಭಾಗ ಒಂದು ಫೋನ್ ನಂಬರು, ವಿಳಾಸ, ಯಾವುದೂ ಇಲ್ಲದೇ ನನ್ನ ಸಂಪರ್ಕದಿಂದ ಕೈಜಾರುತ್ತಿದ್ದಾರೆ. ಅವರು ತಮ್ಮ ಮಕ್ಕಳ ಜೊತೆಗೆ ಆಸ್ಟ್ರೇಲಿಯಾದಲ್ಲಿ ಶೇಷಜೀವನವನ್ನು ಕಳೆಯುತ್ತಾರಂತೆ. ಅವರ ಅಂಗಡಿಯ ಪುಸ್ತಕದ ರಾಶಿಯನಡುವೆ ಕಾಣೆಯಾಗಿಯೇ ಇದ್ದ ಶಾನಭಾಗ ಮತ್ತು ಪ್ರೀಮಿಯರ್ ಬೆಂಗಳೂರಿನ ಚರಿತ್ರೆಯ ಒಂದು ಭಾಗವಾಗಿ ಕಾಣೆಯಾಗುತ್ತಿದ್ದಾರೆ. ಗುಡ್ ಬೈ ಶಾನಭಾಗ್. ಟೇಕ್ ಕೇರ್.